ಆಗ್ರಾ, ಮಾರ್ಚ್ 4: ತಾಜ್ ಮಹಲ್ನಲ್ಲಿ ಬಾಂಬ್ ಇಟ್ಟಿರುವುದಾಗಿ ಗುರುವಾರ ಬೆಳಿಗ್ಗೆ ಪೊಲೀಸರಿಗೆ ಬೆದರಿಕೆ ಕರೆ ಬಂದಿದ್ದು, ತಕ್ಷಣವೇ ಅಲ್ಲಿಗೆ ದೌಡಾಯಿಸಿದ ಪೊಲೀಸರು ಪ್ರವಾಸಿಗರನ್ನು ತೆರವುಗೊಳಿಸಿದ ಸಂಗತಿ ನಡೆದಿದೆ.
ತಾಜ್ ಮಹಲ್ನಲ್ಲಿ ತಾನು ಬಾಂಬ್ ಇಟ್ಟಿರುವುದಾಗಿ ವ್ಯಕ್ತಿಯೊಬ್ಬ ಪೊಲೀಸರಿಗೆ ಕರೆ ಮಾಡಿದ್ದಾನೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತಾಜ್ ಮಹಲ್ ನೋಡಲು ಬಂದಿದ್ದ ಸಾವಿರಾರು ಪ್ರವಾಸಿಗರನ್ನು ಹೊರಗೆ ಕಳುಹಿಸಿದ್ದಾರೆ. ನಂತರ ಅಧಿಕಾರಿಗಳು ತಾಜ್ ಮಹಲ್ ಸುತ್ತ ತಪಾಸಣೆ ನಡೆಸಿದ್ದಾರೆ. ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ.
ವ್ಯಕ್ತಿಯೊಬ್ಬ ಕರೆ ಮಾಡಿ, ಮಿಲಿಟರಿ ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದೆ. ನಾನು ಅರ್ಹನಾಗಿದ್ದರೂ ನನ್ನನ್ನು ನೇಮಿಸಿಕೊಂಡಿಲ್ಲ. ಹೀಗಾಗಿ ತಾಜ್ ಮಹಲ್ನಲ್ಲಿ ಬಾಂಬ್ ಇಟ್ಟಿದ್ದೇನೆ. ಕೆಲವೇ ನಿಮಿಷಗಳಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಹೇಳಿದ್ದ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದೆವು. ಸ್ಥಳದಲ್ಲಿ ಸ್ಫೋಟಕ ಪತ್ತೆಯಾಗಿಲ್ಲ. ಇದು ಹುಸಿ ಬಾಂಬ್ ಕರೆ ಎಂದು ಎಸ್ಪಿ ಶಿವರಾಮ್ ಯಾದವ್ ತಿಳಿಸಿದ್ದಾರೆ.