ಹಸಿವಿನ ಮೇಲೆ ವ್ಯಾಪಾರ ಮಾಡಲು ಬಿಡುವುದಿಲ್ಲ: ಮೋದಿಗೆ ಟಿಕಾಯತ್ ತಿರುಗೇಟು
ನವದೆಹಲಿ, ಫೆಬ್ರವರಿ 8: ಕನಿಷ್ಠ ಬೆಂಬಲ ಬೆಲೆ ಮುಂದೆಯೂ ಇರುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಘೋಷಣೆಗೆ ಪ್ರತಿಕ್ರಿಯೆ ನೀಡಿರುವ ರೈತ ಮುಖಂಡ ರಾಕೇಶ್ ಟಿಕಾಯತ್, ಹಸಿವಿನ ಮೇಲೆ ವ್ಯವಹಾರ ನಡೆಸುವುದಕ್ಕೆ ದೇಶದಲ್ಲಿ ಅವಕಾಶ ನೀಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿದ್ದಾರೆ.
ಮೂರು ಕೃಷಿ ಮಸೂದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು, ಎಂಎಸ್ಪಿ ಕುರಿತು ಕಾನೂನು ತರುವಂತೆ ಮಾಡುತ್ತಿರುವ ಒತ್ತಾಯವನ್ನು ಕೈಬಿಡುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 'ಎಂಎಸ್ಪಿ ಹಿಂದೆ ಇತ್ತು, ಎಂಎಸ್ಪಿ ಈಗ ಇದೆ, ಎಂಎಸ್ಪಿ ಮುಂದುವರಿಯಲಿದೆ' ಎಂದು ಸರ್ಕಾರದ ನಿಲುವನ್ನು ಪುನರುಚ್ಚರಿಸಿದ್ದರು.

"ಕನಿಷ್ಠ ಬೆಂಬಲ ಬೆಲೆ ಈ ಹಿಂದೆ ಇತ್ತು. ಈಗಲೂ ಇದೆ ಮತ್ತು ಮುಂದೆಯೂ ಇರುತ್ತದೆ, ಬಡವರಿಗೆ ಕೈಗೆಟುಕುವ ದರದಲ್ಲಿ ರೇಷನ್ ಸಿಗುವುದು ಮುಂದುವರೆಯುತ್ತದೆ. ಮಂಡಿಗಳನ್ನು ಆಧುನೀಕರಣಗೊಳಿಸಲಾಗುತ್ತದೆ" ಎಂದು ಮೋದಿ ಹೇಳಿದ್ದರು.
'ದೇಶದಲ್ಲಿ ಹಸಿವಿನ ಮೇಲೆ ವ್ಯಾಪಾರ ನಡೆಸುವುದಕ್ಕೆ ಬಿಡುವುದಿಲ್ಲ. ಹಸಿವು ಜಾಸ್ತಿಯಾದರೆ ಅದಕ್ಕೆ ಅನುಗುಣವಾಗಿ ಬೆಳೆಗಳ ಬೆಲೆಯನ್ನು ನಿರ್ಧರಿಸಲಾಗುತ್ತದೆ. ಹಸಿವಿನ ಮೇಲೆ ವ್ಯಾಪಾರ ನಡೆಸಲು ಬಯಸುವವರನ್ನು ದೇಶದಿಂದ ಹೊರಗೆ ಓಡಿಸಲಾಗುತ್ತದೆ' ಎಂದು ಟಿಕಾಯತ್ ಹೇಳಿದ್ದಾರೆ.
'ದಿನಕ್ಕೆ ನಾಲ್ಕು ಬಾರಿ ವಿಮಾನ ಟಿಕೆಟ್ ದರ ಏರಿಳಿತವಾಗುವ ರೀತಿಯಲ್ಲಿ ಬೆಳೆಗಳ ಬೆಲೆಯನ್ನೂ ನಿರ್ಧರಿಸಲಾಗದು' ಎಂದು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ತೊಡಗಿರುವವರಲ್ಲಿ 'ಹೊಸ ಸಮುದಾಯ' ಸೃಷ್ಟಿಯಾಗಿದೆ ಎಂಬ ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿದ ಟಿಕಾಯತ್, 'ಹೌದು, ಈ ಬಾರಿ ರೈತರ ಸಮುದಾಯ ಸೃಷ್ಟಿಯಾಗಿದೆ. ಮತ್ತು ಜನರು ರೈತರಿಗೆ ಬೆಂಬಲ ನೀಡುತ್ತಿದ್ದಾರೆ' ಎಂದಿದ್ದಾರೆ.












Click it and Unblock the Notifications