ಮೆಣಸಿನಕಾಯಿ ಬೆಳೆಗೆ ಸೊರಗು ರೋಗ, ಹತೋಟಿಗೆ ಸಲಹೆಗಳು
ಬಳ್ಳಾರಿ, ಸೆಪ್ಟೆಂಬರ್ 29; ಮೆಣಸಿನಕಾಯಿ ಬೆಳೆಗೆ ಸೊರಗು ರೋಗ ಮತ್ತು ಕರಿಹೇನಿನ ಹಾವಳಿ ಜಾಸ್ತಿಯಾಗುತ್ತಿದೆ. ರೈತರು ರೋಗ ಹತೋಟಿಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಸಲಹೆ ನೀಡಿದೆ.
ಬಳ್ಳಾರಿಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ರತ್ನಪ್ರಿಯಾ ಯರೆಂಗಲ್ ಸೊರಗು, ಕರಿಹೇನಿನ ಹಾವಳಿ ನಿಯಂತ್ರಣಕ್ಕೆ ಸಲಹೆಯನ್ನು ನೀಡಿದ್ದಾರೆ. ರೈತರು ಹತೋಟಿ ಕ್ರಮಗಳ ಮೂಲಕ ಬೆಳೆಗಳನ್ನು ಉಳಿಸಿಕೊಳ್ಳಬಹುದಾಗಿದೆ.

ಸೊರಗು ರೋಗದ ನಿರ್ವಹಣೆ ಕ್ರಮಗಳು: ಹೊಲಗಳಲ್ಲಿ ನೀರು ನಿಲ್ಲದಂತೆ ಬಸಿ ಕಾಲುವೆಗಳನ್ನು ತೆಗೆದು ಸಂಪೂರ್ಣ ನೀರು ಹೊರ ಹೋಗುವಂತೆ ಮಾಡಬೇಕು.
ಸೋಡೋಮೋನಸ್ ಪ್ಲೋರೋಸೆಸ್ಸ್ ಪ್ಲೋರೆಸೆಸ್ಸ್ (ಜೈವಿಕ ಬ್ಯಾಕ್ಟೀರಿಯಾ) 5 ಮಿ. ಲೀ/ ಗ್ರಾಂ ಪ್ರತಿ ಲೀಟರ್ ನೀರಿಗೆ ಸಿಂಪಡಣೆ ಮಾಡುವುದು ಮತ್ತು ಗಿಡಗಳ ಬುಡಕ್ಕೆ ಬಿಡುವುದು.
ಟಾಟಾ ಮಾಸ್ಟರ್ (ಮೆಟಲ್ಯಾಕ್ಸಿಲ್ ಶೇ.8 ಜೊತೆಗೆ ಮ್ಯಾಂಕೋಜೆಬ್ ಶೇ.64) 2 ಗ್ರಾಂ ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪಡಣೆ ಮಾಡುವುದು ಮತ್ತು ಗಿಡಗಳ ಬುಡಕ್ಕೆ ಬಿಡಬೇಕು.
19:19:19 (ಎನ್ಪಿಕೆ) 5 ಗ್ರಾಂ ಪ್ರತಿ ಲೀಟರ್ ನೀರಿಗೆ ಜೊತೆಗೆ ಲಿಬರಲ್ (ಲಘು ಪೋಷಕಾಂಶಗಳ ಮಿಶ್ರಿತ) 1 ಗ್ರಾಂ ಪ್ರತಿ ಲೀಟರ್ ನೀರಿಗೆ ಹಾಕಿ ಸಿಂಪಡಣೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಕರಿಹೇನು ನಿರ್ವಹಣೆ ಕ್ರಮ: ರೈತರು ಗಿಡದಿಂದ ಗಿಡಕ್ಕೆ ಸೂಕ್ತ ಅಂತರ ಕಾಪಾಡುವುದು ಅತ್ಯಗತ್ಯವಾಗಿದೆ. ಬೇವೆರಿಯ ಬೇಸಿಯಾನ ಜೈವಿಕ ಕೀಟನಾಶಕವನ್ನು 5ರಿಂದ 10ಗ್ರಾಂ ಪ್ರತಿ ಲೀಟರ್ ನೀರಿಗೆ ಬೇರೆಸಿ ಸಿಂಪಡಿಸುವುದು. ಬದುಗಳ ಸುತ್ತ ಜೋಳ ಅಥವಾ ಸಜ್ಜೆಯಂತಹ ಬೆಳೆಗಳನ್ನು ಬೆಳೆಯುವುದರಿಂದ ಕೀಟ ಪಸರಿಸುವುದನ್ನು ತಡೆಗಟ್ಟಬಹುದು.
ಮುವೆಂಟೊ ಓಡಿ 2ಮಿ.ಲೀ ಮತ್ತು ಅಲಂಟೋ 1.5 ಮಿ.ಲೀ ಮತ್ತು ಬೇವಿನ ಹೆಣ್ಣೆ 5ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡುವುದು. ನಾಲ್ಕು ದಿನದ ನಂತರ ಸ್ಪೈನೋಸಾಡ್ 0.3 ಮಿ.ಲೀ ಮತ್ತು ಸಿವಾಂಟೋ 2 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡುವುದು.
ಒಂದು ವಾರದ ನಂತರ ಮುವೆಂಟೊ ಓಡಿ 2 ಮಿ.ಲೀ ಮತ್ತು ಸಿವಾಂಟೋ 2ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡುವುದು ಅಥವಾ ಡೈನೋಟೆಫ್ಯೂರಾನ್ (ಟೋಕಾನ್) 0.4 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡುವುದು.
ಸ್ಪೈನೋಸಾಡ್ (ಟ್ರೇಸರ್) 0.3ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡುವುದು. ಸ್ಪೈನೋಟೋರಾಮ್ (ಡಿಲಿಗೇಟ್) 0.5ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡುವುದು.
ರೈತರ ತಾಕುಗಳಲ್ಲಿ ಹೆಚ್ಚಿನ ಕರಿಹೇನು ಕೀಟ (ಬ್ಲಾಕ್ ಥ್ರೀಪ್ಸ್) ಬಾಧೆ ಕಂಡುಬಂದಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬೇಕು ಎಂದು ಮನವಿ ಮಾಡಲಾಗಿದೆ.












Click it and Unblock the Notifications