ಕುಲಾಂತರಿ ಸಾಸಿವೆಯನ್ನು ಬಹಿಷ್ಕರಿಸುವುದಾಗಿ ಹೇಳಿದ ರೈತ ಮುಖಂಡ
ಲಕ್ನೋ, ನ.07: ಕೇಂದ್ರ ಸರ್ಕಾರವು ಪ್ರಸ್ತಾಪಿಸಿರುವ ತಳೀಯವಾಗಿ ಮಾರ್ಪಡಿಸಿದ ಕುಲಾಂತರಿ ಸಾಸಿವೆಯನ್ನು ಬೆಳೆಯುವ ಪ್ರಯೋಗಗಳನ್ನು ಅನುಮತಿಸುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗರಾಜ್ನ ಝಲ್ವಾದ ಘುಂಗ್ರೂ ಬಳಿ ನಡೆದ ಕಿಸಾನ್ ಮಹಾಪಂಚಾಯತ್ ಉದ್ದೇಶಿಸಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಮಾತನಾಡಿದ್ದಾರೆ.
"ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಜಿಎಂ ಸಾಸಿವೆ ಪ್ರಯೋಗಕ್ಕೆ ಅನುಮತಿ ನೀಡಿದೆ. ಉತ್ತರ ಪ್ರದೇಶದ ಶಹಜಹಾನ್ಪುರ ಮತ್ತು ರಾಜಸ್ಥಾನದ ಭರತ್ಪುರ ಎಂಬ ಎರಡು ಸ್ಥಳಗಳಲ್ಲಿ ಪ್ರಯೋಗ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ನಾವು ಉತ್ತರ ಪ್ರದೇಶ ಅಥವಾ ರಾಜಸ್ಥಾನದಲ್ಲಿ ಖಡಾಖಂಡಿತವಾಗಿ ಇದರ ಪ್ರಯೋಗಕ್ಕೆ ಅವಕಾಶ ನೀಡುವುದಿಲ್ಲ" ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಹಲವಾರು ದೇಶಗಳ ವಿಜ್ಞಾನಿಗಳು ಜಿಎಂ ಸಾಸಿವೆಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದ ನಂತರವೂ ಜಿಎಂ ಸಾಸಿವೆಯ ಪ್ರಯೋಗಗಳನ್ನು ದೇಶದಲ್ಲಿ ಏಕೆ ಅನುಮತಿಸಬೇಕು..? ಎಂದು ಬಿಕೆಯು ನಾಯಕ ರಾಕೇಶ್ ಟಿಕಾಯತ್ ಪ್ರಶ್ನಿಸಿದ್ದಾರೆ.

ದೇಶದಲ್ಲಿ ಸಾಸಿವೆ ಕೊರತೆ ಇದೆಯೇ?: ಟಿಕಾಯತ್ ಪ್ರಶ್ನೆ
ಜೊತೆಗೆ "ದೇಶದಲ್ಲಿ ಸಾಸಿವೆ ಕೊರತೆ ಇದೆಯೇ?" ಎಂದು ಪ್ರಶ್ನಿಸಿರುವ ಅವರು, ಸರ್ಕಾರ ರೈತರ ಉತ್ಪನ್ನಗಳಿಗೆ ಸರಿಯಾದ ಬೆಲೆ ನೀಡಿದರೆ ಬೆಳೆಗಳಿಗೆ ಕೊರತೆಯಾಗುವುದಿಲ್ಲ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ರಾಕೇಶ್ ಟಿಕಾಯತ್ ಕಿಡಿಕಾರಿದ್ದಾರೆ.
ಅಕ್ಟೋಬರ್ 18 ರಂದು ಜೆನೆಟಿಕ್ ಇಂಜಿನಿಯರಿಂಗ್ ಅಪ್ರೈಸಲ್ ಕಮಿಟಿ ಸಭೆಯಲ್ಲಿ ಪ್ರಯೋಗಗಳು, ಪ್ರಾತ್ಯಕ್ಷಿಕೆಗಳು ಮತ್ತು ಬೀಜ ಉತ್ಪಾದನೆಗೆ ಬೀಜವನ್ನು ಪ್ರಯೋಗಕ್ಕೆ ಬಿಡುಗಡೆ ಮಾಡಲು ಶಿಫಾರಸು ಮಾಡಿದ ನಂತರ ಕೇಂದ್ರ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿತ್ತು.

ಬೀಜಗಳ ಕಾನೂನು ಜಾರಿಗೆ ಸರ್ಕಾರದ ಸಂಚು: ಟಿಕಾಯತ್
"ನೀವು ಸರಿಯಾದ ಬೆಲೆಯನ್ನು ಕೊಡಿ, ರೈತ ಬೆಳೆಯನ್ನು ಉತ್ಪಾದಿಸಿ ಕೊಡುತ್ತಾನೆ. ಮುಂದಿನ ದಿನಗಳಲ್ಲಿ, ಬೀಜಗಳ ಕಾನೂನು ದೇಶದಲ್ಲಿಯೂ ಜಾರಿಗೆ ಬರಲಿದೆ. ಬೀಜ ತಯಾರಿಸುವ ಹಕ್ಕನ್ನು ಹೊರಗಿನ ಕಂಪನಿಗಳಿಗೆ ನೀಡಲು ಸಿದ್ಧತೆ ನಡೆದಿದೆ. ದೇಶದಲ್ಲಿ ಬೀಜ ಕೇಂದ್ರಗಳನ್ನು ತೆರೆಯಲಾಗುವುದು ಮತ್ತು ಅಕ್ರಮವಾಗಿ ಕಂಪನಿಗಳ ಬೀಜಗಳನ್ನು ಬಿತ್ತುವ ರೈತರಿಗೆ ದಂಡ ಮತ್ತು ಶಿಕ್ಷೆ ವಿಧಿಸಲಾಗುವುದು. ಈ ಎಲ್ಲ ವಿಷಯಗಳ ವಿರುದ್ಧ ನಮ್ಮ ಪ್ರತಿಭಟನೆ ಮುಂದುವರಿಯಲಿದೆ" ಎಂದಿದ್ದಾರೆ.
ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಅವರು ಸ್ವಾಮಿನಾಥ್ ಅವರ ಶಿಫಾರಸನ್ನು ಜಾರಿಗೊಳಿಸುವ ಬಗ್ಗೆ ಮಾತನಾಡಿದ್ದರು. ಆದರೆ, ಅದು ಎಂದಿಗೂ ಜಾರಿಯಾಗಲಿಲ್ಲ ಎಂದು ಟೀಕಿಸಿದ್ದಾರೆ.

ಕಬ್ಬು ಬೆಳೆಗಾರರಿಗೆ ಇನ್ನೂ ಹಣ ಪಾವತಿಯಾಗಿಲ್ಲ
ಕಬ್ಬು ಹಂಗಾಮಿನ ಆರಂಭಕ್ಕೂ ಮುನ್ನ ರೈತರ ಬಾಕಿ ಉಳಿಸುವ ಭರವಸೆಯನ್ನು ಉತ್ತರ ಪ್ರದೇಶ ಸರ್ಕಾರ ಈಡೇರಿಸಿಲ್ಲ ಎಂದು ಆರೋಪಿಸಿದರು. ಜೊತೆಗೆ ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭ ಮಾಡಿದರೂ ರೈತರಿಗೆ ಹಣ ಪಾವತಿಯಾಗಿಲ್ಲ ಎಂದು ರೈತ ಮುಖಂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ "ರೈತ ವಿರೋಧಿ ನೀತಿಗಳ" ವಿರುದ್ಧ ನವೆಂಬರ್ 26 ರಂದು ಲಕ್ನೋದಲ್ಲಿ ಪ್ರತಿಭಟನೆ ನಡೆಸುವುದಾಗಿ ಟಿಕಾಯತ್ ಕರೆ ನೀಡಿದ್ದು, ರಾಜ್ಯದಾದ್ಯಂತದ ರೈತರು ಆಂದೋಲನದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದ್ದಾರೆ.
ಅಲಹಾಬಾದ್ ವಿಶ್ವವಿದ್ಯಾನಿಲಯದಲ್ಲಿ ಶುಲ್ಕ ಹೆಚ್ಚಳದ ವಿರುದ್ಧ 61 ದಿನಗಳ ಕಾಲ ನಡೆದ ಆಂದೋಲನವನ್ನು ಬೆಂಬಲಿಸಿದ ಅವರು, ಲಕ್ನೋ ಪ್ರತಿಭಟನೆಯ ನಂತರ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ ಚಳವಳಿಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.

ಮೋಸದಿಂದ ಬಿಜೆಪಿ ಚುನಾವಣೆಯಲ್ಲಿ ಗೆಲುತ್ತಿದೆ
ಸಾಮೂಹಿಕ ಆಂದೋಲನದ ಮೂಲಕ ಮಾತ್ರ ದೇಶವನ್ನು ಉಳಿಸಬಹುದು. ಆದರೆ, ದುರ್ಬಲವಾಗಿರುವ ವಿರೋಧ ಪಕ್ಷಗಳು ಅದಕ್ಕೆ ಸಿದ್ಧವಾಗಿಲ್ಲ ಎಂದು ಟಿಕಾಯತ್ ನಿರಾಸೆ ವ್ಯಕ್ತಪಡಿಸಿದ್ದಾರೆ. ಜನವಿರೋಧಿ ನೀತಿಗಳ ನಡುವೆಯೂ ಆಡಳಿತ ಪಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದು, ಇದು ಮೋಸದಿಂದ ಮಾತ್ರ ಸಾಧ್ಯ ಎಂದು ಆರೋಪಿಸಿದ್ದಾರೆ.
ರೈತರಿಗೆ ಅರಿವು ಮೂಡಿಸಲು ಪೂರ್ವಾಂಚಲ (ಪೂರ್ವ ಉತ್ತರ ಪ್ರದೇಶ) ಜಿಲ್ಲೆಗಳಲ್ಲಿ 10 ದಿನಗಳ ಕಿಸಾನ್ ಮಹಾಪಂಚಾಯತ್ ಕೂಡ ನಡೆಯಲಿದೆ ಎಂದು ರಾಕೇಶ್ ಟಿಕಾಯತ್ ಮಾಹಿತಿ ನೀಡಿದ್ದಾರೆ.
ಕಿಸಾನ್ ಮಹಾಪಂಚಾಯತ್ನಲ್ಲಿ ಬಿಕೆಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜವೀರ್ ಸಿಂಗ್ ಜದೌನ್ ಮತ್ತು ಅದರ ರಾಷ್ಟ್ರೀಯ ಉಪಾಧ್ಯಕ್ಷ ಬಲರಾಮ್ ಸಿಂಗ್ ಕೂಡ ರೈತರನ್ನು ಉದ್ದೇಶಿಸಿ ಮಾತನಾಡಿದರು.
ಇನ್ನು, ರಾಕೇಶ್ ಟಿಕಾಯತ್ ಅವರ ರೋಡ್ ಶೋಗೆ ಅಪಾರ ಜನ ಸೇರಿದ್ದರು. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟಿಕಾಯತ್ ಬೆಂಬಲಿಗರು ಅವರ ಮೇಲೆ ಹೂಮಳೆ ಸುರಿದು ಸ್ವಾಗತಿಸಿದ್ದಾರೆ.
ಕುಲಾಂತರಿ ಸಾಸಿವೆ ಪ್ರಯೋಗಗಳನ್ನು ಅನುಮತಿಸುವ ಜೆನೆಟಿಕ್ ಇಂಜಿನಿಯರಿಂಗ್ ಅಪ್ರೈಸಲ್ ಕಮಿಟಿ (ಜಿಇಎಸಿ) ನಿರ್ಧಾರಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ್ದು, ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 10 ರಂದು ನಿಗದಿಪಡಿಸಿದೆ.












Click it and Unblock the Notifications