ಖಾಸಗಿ ಸಂಸ್ಥೆಗೆ ಗುಡ್ಬೈ ಹೇಳಿ ರೈತನಾದ ಕೂಡ್ಲಿಗಿಯ ಬಿ.ಎಸ್ಸಿ ಪದವೀಧರ
ವಿಜಯನಗರ, ಮಾರ್ಚ್ 19: ಈಗಿನ ಕಾಲದಲ್ಲಿ ಪಿಯುಸಿ, ಪದವಿ ಮುಗಿದರೆ ಸಾಕು ಯುವಕರು ಉದ್ಯೋಗ ಅರಸಿಕೊಂಡು ಪಟ್ಟಣಕ್ಕೆ ಹೋಗುತ್ತಾರೆ. ಈಗಿನ ಯುವಕರು ಕೃಷಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವುದನ್ನು ನಾವು ನೋಡಬಹುದು.
ಯುವಕರು ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಕಳೆದುಕೊಳ್ಳಲು ಹಲವು ಕಾರಣಗಳಿರಬಹುದು. ಆರ್ಥಿಕ ತೊಂದರೆ, ಕೃಷಿಯ ಬಗ್ಗೆ ಒಲವು ಇಲ್ಲದಿರುವುದು, ಬೆಲೆ ಸಮಸ್ಯೆ, ಬೀಜ-ಗೊಬ್ಬರ ಬೆಲೆ ಹೆಚ್ಚಳ, ನೀರಿನ ಸಮಸ್ಯೆ ಸೇರಿದಂತೆ ಯುವಕರಿಗೆ ನಗರದ ಕಡೆ ಒಲವು ಹೆಚ್ಚಾಗಿದ್ದರಿಂದ ಕೃಷಿಯ ಬಗ್ಗೆ ಗಮನ ಕೊಡುತ್ತಿಲ್ಲ. 10ರಿಂದ 15 ಸಾವಿರ ರೂ. ಸಂಬಳ ಸಿಕ್ಕರೆ ಸಾಕು ನಗರದಲ್ಲಿದ್ದುಬಿಡೋಣ ಎನ್ನುವ ಮನಸ್ಥಿತಿ ಈಗಿನ ಯುವಕರದ್ದು.
ಆನೆ ಹಾವಳಿ ತಡೆಗೆ ಜೇನು ಸಾಕಣೆ; ದೇಶದಲ್ಲೇ ಮೊದಲ ಪ್ರಯೋಗ
ಆದರೆ, ಇದಕ್ಕೆ ಅಪವಾದವೆನ್ನುವಂತೆ ಬಿ.ಎಸ್ಸಿ ಪದವೀಧರನೊಬ್ಬ ತಾನು ಕೆಲಸ ಮಾಡುತ್ತಿದ್ದ ಖಾಸಗಿ ಸಂಸ್ಥೆಗೆ ಗುಡ್ಬೈ ಹೇಳಿ ಈಗ ರೈತನಾಗಿದ್ದಾನೆ. ಹೌದು, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜಂಗಮಸೋವಿನಹಳ್ಳಿಯ ರೈತ ನಾಗರಾಜ ಗೌಡ ಕೃಷಿಯಲ್ಲಿ ತೊಡಗಿಕೊಂಡಿದ್ದಾನೆ.
ಸ್ವಯಂ ಸದ್ದು ಮಾಡುವ ಸೌರಯಂತ್ರ
ರೈತರ ಬೆಳೆ ಹಾನಿ ಮಾಡುವ ಪ್ರಾಣಿಗಳಿಂದ ರಕ್ಷಣೆ ಮಾಡಿಕೊಳ್ಳುವ ವಿನೂತನ ತಂತ್ರಜ್ಞಾನವನ್ನು ನಾಗರಾಜ ಗೌಡ ಕಂಡುಕೊಂಡಿದ್ದಾರೆ. ರೈತ ತಾನು ಬೆಳಿದ ಬೆಳೆಗೆ ಪ್ರಾಣಿಗಳ ಕಾಟ ತಪ್ಪಿದ್ದಲ್ಲ, ಅವುಗಳನ್ನು ರಕ್ಷಣೆ ಮಾಡಿಕೊಳ್ಳಲು ರೈತರು ಹರಸಾಹಸ ಪಡುವಂತಾಗಿದೆ.
ಇದನ್ನರಿತ ನಾಗರಾಜ ಗೌಡ ಅವರು, ಸತತ ಆರು ತಿಂಗಳ ಕಾಲ ಸ್ವಯಂ ಸದ್ದು ಮಾಡುವ ಸೌರಯಂತ್ರ ಕಂಡುಹಿಡಿಯುವುದಕ್ಕೆ ಕಾಲವಕಾಶವನ್ನು ತೆಗೆದುಕೊಂಡಿದ್ದಾರೆ. ಸತತ ಪ್ರಯತ್ನಗಳ ನಂತರ ಸ್ವಯಂ ಸದ್ದು ಮಾಡುವ ಸೌರಯಂತ್ರ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ರೈತರು ಬೆಳೆಗಳನ್ನು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಈ ಯಂತ್ರ ಬಳಕೆ ಮಾಡಕೊಂಡರೆ ತಾವು ಬೆಳೆದ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಬಹುದು ಎನ್ನುತ್ತಾರೆ ನಾಗರಾಜ ಗೌಡ.
ಎಲ್ಇಡಿ ಲೈಟ್ ಅಳವಡಿಸಲಾಗಿದೆ
ಈ ಯಂತ್ರವು ಪ್ರತಿ 10 ನಿಮಿಷಗಳಿಗೊಮ್ಮೆ 1 ನಿಮಿಷಗಳ ಕಾಲ ಪ್ರಾಣಿಗಳ ಸದ್ದು ಮಾಡಲಿದೆ. ಇದರ ಜತೆಯಲ್ಲಿ ಎಲ್ಇಡಿ ಲೈಟ್ ಅಳವಡಿಸಲಾಗಿದೆ. ಈ ಲೈಟ್ ತಾನಾಗಿಯೇ ಹೊತ್ತಿಕೊಳ್ಳುತ್ತದೆ. ಇದರಿಂದ ಪ್ರಾಣಿ ಮತ್ತು ಪಕ್ಷಿಗಳು ಹೆದರಿ ಹೊಲಗಳತ್ತ ಸುಳಿಯುವುದಿಲ್ಲ. ರಾತ್ರಿ ಮತ್ತು ಹಗಲು ವೇಳೆಯಲ್ಲಿಯೂ ಈ ಯಂತ್ರವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಒಂದು ಯಂತ್ರವು 8 ರಿಂದ 10 ಎಕರೆ ವಿಸ್ತೀರ್ಣ ವ್ಯಾಪ್ತಿವರೆಗೆ ಕಾರ್ಯನಿರ್ವಹಿಸಲಿದೆ.
ತೋಟಕ್ಕೆ ಬೆಂಕಿ; ಬೆಳೆದು ನಿಂತಿದ್ದ 5 ಎಕರೆ ಬಾಳೆ ಸುಟ್ಟು ಬೂದಿ
ಪ್ರಾಣಿಗಳ ಹಾವಳಿ ಕಡಿಮೆಯಾಗಿದೆ
ಬೆಳೆ ರಕ್ಷಿಸಲು ರಾತ್ರಿ ವೇಳೆ ರೈತರು ನಿದ್ದೆಗೆಟ್ಟು ಬೆಳೆಗೆ ಕಾವಲು ಇರಬೇಕಿತ್ತು, ಆದರೆ ಇದೀಗ ಈ ಯಂತ್ರ ಸಹಾಯಕವಾಗಲಿದೆ. ಹೊಲದಲ್ಲಿ ಈ ಯಂತ್ರ ಇಟ್ಟ ಬಳಿಕ ಪ್ರಾಣಿಗಳ ಹಾವಳಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಸೌರ ಯಂತ್ರಕ್ಕೆ ಉತ್ತಮ ಬೇಡಿಕೆ ಬಂದಿದೆ. ರಾಜ್ಯದ ರೈತರು ಮಾತ್ರವಲ್ಲ, ಹೊರ ರಾಜ್ಯದ ರೈತರೂ ಸಹ ಈ ಯಂತ್ರದ ಮೊರೆ ಹೋಗುತ್ತಿದ್ದಾರೆ. ರೈತ ನಾಗರಾಜ್ ಅವರನ್ನು ನೇರವಾಗಿ ಸಂಪರ್ಕಿಸಿ ಯಂತ್ರ ಪಡೆಯಬಹುದು.
ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳುವುದಕ್ಕೆ ಯಂತ್ರ
"ಪ್ರಾಣಿಗಳಿಗೆ ಯಾವ ಶಬ್ದ ಕೇಳಿದರೆ ಭಯ ಬೀಳುತ್ತದೆ ಅನ್ನುವ ಖಚಿತ ಪಡಿಸಿಕೊಂಡು ಆ ಶಬ್ದವನ್ನು ಸದ್ದು ಮಾಡುವ ಯಂತ್ರವನ್ನು ಹಾಕಿದ್ದೇನೆ. ಈ ಶಬ್ದಗಳಿಂದ ಪ್ರಾಣಿಗಳು ಹತ್ತಿರ ಸುಳಿಯುವುದಿಲ್ಲ, ನನ್ನ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳುವುದಕ್ಕೆ ಯಂತ್ರವನ್ನು ಕಂಡುಕೊಂಡಿದ್ದೇನೆ, ಇದನ್ನು ನೋಡಿದ ರೈತರು ತಾವು ಅಳವಡಿಸಿಕೊಳ್ಳುವುದಕ್ಕೆ ಮುಂದೆ ಬರುತ್ತಿದ್ದಾರೆ'' ಎಂದು ನಾಗರಾಜ ಗೌಡ ಹೇಳಿದ್ದಾರೆ.