ಬೀದರ್; ಅಕಾಲಿಕ ಮಳೆಗೆ ಬೆಳೆ ಹಾನಿ, ಪರಿಹಾರಕ್ಕೆ ಶಾಸಕರ ಒತ್ತಾಯ
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಿವಿಧೆಡೆ ಅಕಾಲಿಕ ಮಳೆ, ಬಿರುಗಾಳಿಗೆ ಗಿಡ ಮರಗಳು ಧರೆಗಿಳಿದು ಅಪಾರ ಹಾನಿ ಸಂಭವಿಸಿದೆ.
ಬೀದರ್, ಮಾರ್ಚ್ 20; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಾರ್ಚ್ 17ರಿಂದ ಸುರಿಯುತ್ತಿರುವ ಅಕಾಲಿಕ ಮಳೆ ರೈತರಿಗೆ ಸಂಕಷ್ಟ ಉಂಟು ಮಾಡಿದೆ. ಅಕಾಲಿಕ ಮಳೆ, ಬಿರುಗಾಳಿ, ಆಲಿಕಲ್ಲು ಬಿದ್ದು ಬೆಳೆಗಳಿಗೆ ಹಾನಿಯಾಗಿದೆ. ಚುನಾವಣೆಯ ಸಿದ್ಧತೆಯಲ್ಲಿರುವ ಸರ್ಕಾರ ರೈತರ ಕಡೆ ಗಮನ ಹರಿಸಿ ಪರಿಹಾರ ನೀಡಲಿದೆಯೇ? ಎಂದು ಕಾದು ನೋಡಬೇಕಿದೆ.
ಭಾಲ್ಕಿ ಶಾಸಕ ಈಶ್ವರ ಖಂಡ್ರೆ ತಾಲೂಕಿನ ವಿವಿಧೆಡೆ ಅಕಾಲಿಕ ಮಳೆ, ಬಿರುಗಾಳಿಗೆ ಗಿಡ ಮರಗಳು ಧರೆಗಿಳಿದು ಅಪಾರ ಹಾನಿ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿದರು. ಕೂಡ್ಲಿ, ನಾಗರಾಳ, ನಿಟ್ಟೂರು (ಬಿ) ಸೇರಿದಂತೆ ವಿವಿಧ ಗ್ರಾಮ ಮತ್ತು ಹೊಲಗಳಿಗೆ ಭೇಟಿ ನೀಡಿ ಬೆಳೆಹಾನಿಯನ್ನು ವೀಕ್ಷಣೆ ಮಾಡಿದರು. ತಾಲೂಕಿನಲ್ಲಿ ಕಳೆದು ಎರಡು ದಿನಗಳಿಂದ ಸುರಿದ ಅಕಾಲಿಕ ಮಳೆಯಿಂದಾಗಿ ಜೋಳ, ಕಡಲೆ, ಕುಸುಬೆ ಸೇರಿದಂತೆ ವಿವಿಧ ಹಿಂಗಾರು ಬೆಳೆಗಳು ಹಾನಿಗೊಂಡಿವೆ.

ಕೂಡ್ಲಿ ಗ್ರಾಮದಲ್ಲಿ ಬಿರುಗಾಳಿ ಮಳೆಗೆ ಮದನರಾವ ಪಾಟೀಲ್ಗೆ ಸೇರಿದ ಕೋಳಿ ಫಾರಂ ಶೆಡ್ ಕಿತ್ತುಹೋಗಿದೆ. ಸಾವಿರಾರೂ ಕೋಳಿಗಳು ಮೃತಪಟ್ಟಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕೆಲ ಗುಡಿಸಲುಗಳು, ತಗಡಿನ ಮನೆಗಳಿಗೆ ಹಾರಿ ಹೋಗಿವೆ. ಹಲವೆಡೆ ವಿದ್ಯುತ್ ಕಡಿತಗೊಂಡಿದೆ. ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗಿದ್ದು ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.
ಈಶ್ವರ ಖಂಡ್ರೆ ಮಾತನಾಡಿ, "ಪ್ರತಿಸಲ ಅತಿವೃಷ್ಠಿ, ಅನಾವೃಷ್ಠಿಯಿಂದ ರೈತರು ಸಂಕಷ್ಟ ಅನುಭವಿಸುತ್ತಲೇ ಇದ್ದಾರೆ. ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು. ಚುನಾವಣೆ ನೆಪವಾಗಿಟ್ಟಿಕೊಂಡು ಸರ್ಕಾರ ಸುಮ್ಮನೆ ಕೂರುವುದು ಬೇಡ. ಅಧಿಕಾರಿಗಳಿಗೆ ಸೂಚಿಸಿ ಸಮರ್ಪಕವಾಗಿ ಸಮೀಕ್ಷೆ ನಡೆಸಿ ತಕ್ಷಣ ಹಾನಿ ಸಂಭವಿಸಿದ ಸಂತ್ರಸ್ತರಿಗೆ ತಕ್ಷಣ ಪರಿಹಾರ ಕಲ್ಪಿಸಬೇಕು" ಎಂದು ಒತ್ತಾಯಿಸಿದರು.

ಬೀದರ್ ಜಿಲ್ಲೆಯಲ್ಲಿ ಜೋಳ, ಕಡಲೆ, ಕುಸುಬೆ ಸೇರಿದಂತೆ ವಿವಿಧ ಹಿಂಗಾರು ಬೆಳೆಗಳು ಹಾನಿಯಾಗಿವೆ. ಕೃಷಿ ಇಲಾಖೆ ಅಧಿಕಾರಿಗಳ ಜೊತೆ ಸಹ ಈಶ್ವರ ಖಂಡ್ರೆ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದರು. ಅಧಿಕಾರಿಗಳು ತಕ್ಷಣ ಆಗಿರುವ ಹಾನಿಯ ಅಂದಾಜು ನಡೆಸಿ ರೈತರಿಗೆ ಪರಿಹಾರವನ್ನು ನೀಡುವ ಮೂಲಕ ಅವರ ಸಂಕಷ್ಟ ದೂರ ಮಾಡಬೇಕು ಎಂದು ಆಗ್ರಹಿಸಲಾಗುತ್ತಿದೆ.
ಅಪಾರವಾದ ಬೆಳೆ ನಾಶ; ಬೀದರ್ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ನಿಟ್ಟೂರು, ಕೂಡ್ಲಿ, ನಾಗೂರು ಗ್ರಾಮದ ಸುಮಾರು 500 ಎಕರೆಗೂ ಅಧಿಕ ಜೋಳದ ಬೆಳೆ ನೆಲಕಚ್ಚಿದೆ. ಮಳೆಯೊಂದಿಗೆ ಗಾಳಿಯ ಬೀಸಿದ ಪರಿಣಾಮ ಬೆಳೆ ಹಾನಿಯಾಗಿ ಅಪಾರ ನಷ್ಟವಾಗಿದೆ ಎಂದು ರೈತರು ಹೇಳುತ್ತಿದ್ದಾರೆ. ಆಲಿಕಲ್ಲು ಸಹಿತ ಗಾಳಿ, ಮಳೆ ಪರಿಣಾಮ ರೈತರು ಸಂಕಷ್ಟ ಅನುಭವಿಸುವಂತಾಗಿದೆ, ಬೆಳೆದು ನಿಂತಿದ್ದ ಬೆಳೆ ಕೈಗೆ ಬರುವುದರಲ್ಲಿಯೇ ಅನಾಹುತ ಸಂಭವಿಸಿದೆ.
ಕಳೆದ ಮೂರು ವರ್ಷಗಳಿಂದ ಬೀದರ್ ಜಿಲ್ಲೆಯಲ್ಲಿ ಮುಂಗಾರು ಮಳೆ ರೈತರಿಗೆ ಸಂಕಷ್ಟ ತರುತ್ತಿದೆ. ವಿವಿಧ ಬೆಳೆಗಳು ಜಲಾವೃತವಾಗಿ ರೈತರು ಅಪಾರ ನಷ್ಟ ಅನುಭವಿಸಿದ್ದರು. ಜಿಲ್ಲೆಯಲ್ಲಿ ಹಲವು ವರ್ಷಗಳ ಬಳಿಕ ಮಾರ್ಚ್ ತಿಂಗಳಿನಲ್ಲಿ ಗುಡುಗು, ಆಲಿಕಲ್ಲು ಸಹಿತ ಗಾಳಿ, ಮಳೆ ಸುರಿದಿದ್ದು, ಬೆಳೆ ನಷ್ಟ ಅನುಭವಿಸುವಂತೆ ಆಗಿದೆ. ಆದರೆ ಇದಕ್ಕೆ ಪರಿಹಾರ ಸಿಗಲಿದೆಯೇ? ಎಂದು ಕಾದು ನೋಡಬೇಕಿದೆ.
ಜೋಳದ ಕಾಳುಗಳು ನೀರಿನಲ್ಲಿ ಒದ್ದೆಯಾಗಿವೆ. ಆದ್ದರಿಂದ ಅದು ಮೊಳಕೆಯೊಡೆಯುವ ಆತಂಕದಲ್ಲಿ ರೈತರಿದ್ದಾರೆ. ಮಳೆ ನೀರಿನಲ್ಲಿ ನೆನೆದ ಬೆಳೆ ಸಂಪೂರ್ಣ ಕಪ್ಪಾಗಲಿದೆ. ಕೆಲವು ರೈತರು 3 ರಿಂದ 4 ಸಾವಿರ ರೂ. ಖರ್ಚು ಮಾಡಿ ಬಿತ್ತಿದ್ದ ಬೀಜಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿವೆ. ಹೊಸದಾಗಿ ಮತ್ತೆ ಭೂಮಿಯನ್ನು ಹದ ಮಾಡಿ ಬೇಸಾಯ ಆರಂಭಿಸಬೇಕಾದ ಅನಿವಾರ್ಯತೆ ಎದುರಾಗಿದೆ.












Click it and Unblock the Notifications