Budget 2023: ಸಿರಿಧಾನ್ಯ ಉತ್ಪಾದನೆಗೆ ಪಣ, ಹೈದರಾಬಾದ್ನಲ್ಲಿ ಸಂಶೋಧನಾ ಸಂಸ್ಥೆ
ಬುಧವಾರ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾರತವನ್ನು ಸಿರಿಧಾನ್ಯಗಳ ತವರಾಗಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.
ನವದೆಹಲಿ, ಫೆಬ್ರವರಿ. 01: 2023 ರ ಕೇಂದ್ರ ಬಜೆಟ್ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೃಷಿ ಕ್ಷೇತ್ರಕ್ಕೆ ಭಾರಿ ಕೊಡುಗೆ ನೀಡಿದ್ದಾರೆ. ಅದರಲ್ಲೂ ಸಿರಿಧಾನ್ಯಗಳ ಉತ್ಪಾದನೆಗೆ ಪ್ರಾಮುಖ್ಯತೆ ನೀಡಿದ್ದಾರೆ.
ಭಾರತವನ್ನು ಸಿರಿಧಾನ್ಯಗಳ ತವರನ್ನಾಗಿಸಲು ಪ್ರಯತ್ನಿಸುವುದಾಗಿ ತಿಳಿಸಿರುವ ಅವರು, ಸಿರಿಧಾನ್ಯಗಳನ್ನು ಶ್ರೀ ಅನ್ನ ಎಂದು ಕರೆದಿದ್ದಾರೆ. ಭಾರತವು ಸಿರಿಧಾನ್ಯಗಳನ್ನು ಜನಪ್ರಿಯಗೊಳಿಸುವಲ್ಲಿ ಮುಂಚೂಣಿಯಲ್ಲಿದೆ. ಇದರ ಸೇವನೆಯು ಆಹಾರ ಭದ್ರತೆ ಮತ್ತು ರೈತರ ಯೋಗಕ್ಷೇಮವನ್ನು ಸುಧಾರಿಸುತ್ತದೆ ಎಂದು ಹೇಳಿದ್ದಾರೆ.
ಬಜೆಟ್ 2023: ರಾಜಧಾನಿ, ಶತಾಬ್ದಿ, ದುರಂತೋ ಪ್ರಯಾಣಿಕರಿಗೆ ಶುಭ ಸುದ್ದಿ
"ನಾವು ಹಲವಾರು ವಿಧದ ಶ್ರೀ ಅನ್ನಗಳನ್ನು ಬೆಳೆಯುತ್ತೇವೆ, ಉದಾಹರಣೆಗೆ ಜೋಳ, ರಾಗಿ, ಬಜ್ರಾ, ರಾಮದಾನ ಮತ್ತು ಸಾಮೆ. ಇವುಗಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಶತಮಾನಗಳಿಂದ ನಮ್ಮ ಆಹಾರದ ಅವಿಭಾಜ್ಯ ಅಂಗವಾಗಿವೆ" ಎಂದಿದ್ದಾರೆ.
ರಾಗಿಯನ್ನು "ಶ್ರೀ ಅನ್ನ" ಎಂದು ಕರೆಯುವ ನಿರ್ಮಲಾ ಸೀತಾರಾಮನ್, ಪೌಷ್ಠಿಕ ಧಾನ್ಯಗಳನ್ನು ಜನಪ್ರಿಯಗೊಳಿಸುವಲ್ಲಿ ಭಾರತವು ಮುಂಚೂಣಿಯಲ್ಲಿದೆ. ನಾವು ವಿಶ್ವದಲ್ಲಿ 'ಶ್ರೀ ಅನ್ನ'ದ ಅತಿದೊಡ್ಡ ಉತ್ಪಾದಕ ಮತ್ತು ಎರಡನೇ ಅತಿ ದೊಡ್ಡ ರಫ್ತುದಾರರಾಗಿದ್ದೇವೆ ಎಂದು ಹೆಮ್ಮೆಪಟ್ಟಿದ್ದಾರೆ.
ಇನ್ನು ಸಿರಿಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಲು ಹೈದರಾಬಾದ್ನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಿಲೈಟ್ ರಿಸರ್ಚ್ ಅನ್ನು ಸ್ಥಾಪಿಸುವುದಾಗಿ ತಿಳಿಸಿದೆ. ಈ ಸಂಶೋಧನಾ ಕೇಂದ್ರವನ್ನು ಅಂತಾರಾಷ್ಟ್ರೀಯ ತಂತ್ರಜ್ಞಾನ ಮಾನದಂಡಗಳ ಶ್ರೇಷ್ಠತೆಯ ಕೇಂದ್ರವಾಗಿ ಬಡ್ತಿ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಈ 'ಶ್ರೀ ಅನ್ನ'ವನ್ನು ಬೆಳೆಯುವ ಮೂಲಕ ದೇಶದ ನಾಗರಿಕರ ಆರೋಗ್ಯಕ್ಕೆ ಕೊಡುಗೆ ನೀಡುವಲ್ಲಿ ಸಣ್ಣ ರೈತರು ಮಾಡಿದ ದೊಡ್ಡ ಸೇವೆಯನ್ನು ನಾನು ಹೆಮ್ಮೆಯಿಂದ ಒಪ್ಪಿಕೊಳ್ಳುತ್ತೇನೆ ಎಂದು ಕೃಷಿಕರಿಗೆ ಗೌರವ ಸಲ್ಲಿಸಿದ್ದಾರೆ.
ರೈತರು ತಮ್ಮ ಸಮಸ್ಯೆಗಳಿಗೆ ಹೊಸ ಮತ್ತು ಕೈಗೆಟುಕುವ ಪರಿಹಾರಗಳನ್ನು ಪಡೆಯಲು ಸಹಾಯ ಮಾಡಲು ಕೃಷಿ ಸ್ಟಾರ್ಟ್ಅಪ್ಗಳು ಮತ್ತು ಗ್ರಾಮೀಣ ಪ್ರದೇಶದ ಯುವ ಉದ್ಯಮಿಗಳನ್ನು ಉತ್ತೇಜಿಸಲು ಕೃಷಿ ವೇಗವರ್ಧಕ ನಿಧಿಯನ್ನು (ಎಎಎಫ್) ಸ್ಥಾಪಿಸಲಾಗುವುದು. ಇದು ಉತ್ಪಾದಕತೆ ಮತ್ತು ಲಾಭದಾಯಕತೆಯನ್ನು ಹೆಚ್ಚಿಸಲು ಆಧುನಿಕ ತಂತ್ರಜ್ಞಾನವನ್ನು ತರುತ್ತದೆ ಎಂದು ಹೇಳಿದ್ದಾರೆ.
ಹೈನುಗಾರಿಕೆ, ಮೀನುಗಾರಿಕೆ ಮತ್ತು ಪಶುಸಂಗೋಪನೆಯನ್ನು ಗಮನದಲ್ಲಿಟ್ಟುಕೊಂಡು ಪ್ರಸಕ್ತ ಹಣಕಾಸು ವರ್ಷದಲ್ಲಿ 18.5 ಲಕ್ಷ ಕೋಟಿಗಳಿಂದ 2023-24ರಲ್ಲಿ ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ.
ರೈತರು ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಲು ಮತ್ತು ಉತ್ತಮ ಬೆಲೆ ಪಡೆಯಲು ಸೂಕ್ತ ಸಮಯದಲ್ಲಿ ಮಾರಾಟ ಮಾಡಲು ಸಹಕಾರಿ ವಲಯದಲ್ಲಿ ಯೋಜನೆಯ ಮೂಲಕ ಬೃಹತ್ ವಿಕೇಂದ್ರೀಕೃತ ಶೇಖರಣಾ ಸಾಮರ್ಥ್ಯವನ್ನು ಸ್ಥಾಪಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.