ಗರಿಷ್ಠ ಸಂಯಮ ಕಾಪಾಡಿ: ವಿಶ್ವಸಂಸ್ಥೆ ಮಾನವಹಕ್ಕುಗಳ ಆಯೋಗ ಮನವಿ
ನವದೆಹಲಿ, ಫೆಬ್ರವರಿ 6: ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವುದರ ನಡುವೆ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನ್ ಭಾರತ ಸರ್ಕಾರ ಮತ್ತು ಪ್ರತಿಭಟನಾಕಾರರು ಗರಿಷ್ಠ ಸಂಯಮ ಪ್ರದರ್ಶಿಸುವಂತೆ ಮನವಿ ಮಾಡಿದೆ.
'ಪ್ರಸ್ತುತ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಗರಿಷ್ಠ ಮಟ್ಟದಲ್ಲಿ ಸಂಯಮ ಕಾಯ್ದುಕೊಳ್ಳುವಂತೆ ನಾವು ಸರ್ಕಾರ ಹಾಗೂ ಪ್ರತಿಭಟನಾಕಾರರಿಗೆ ಕರೆ ನೀಡುತ್ತೇವೆ. ಶಾಂತಿಯುತವಾಗಿ ಸೇರುವುದು ಮತ್ತು ಅಭಿವ್ಯಕ್ತಗೊಳಿಸುವ ಹಕ್ಕುಗಳನ್ನು ಆಫ್ಲೈನ್ ಮತ್ತು ಆನ್ಲೈನ್ ಎರಡರಲ್ಲಿಯೂ ರಕ್ಷಿಸಬೇಕು. ಎಲ್ಲರಿಗೂ ಮಾನವಹಕ್ಕುಗಳು ಮುಖ್ಯವಾಗಿದ್ದು, ಅವುಗಳನ್ನು ಗೌರವಿಸಲು ನ್ಯಾಯಸಮ್ಮತ ಪರಿಹಾರ ಕಂಡುಕೊಳ್ಳುವುದು ಮಹತ್ವದ್ದಾಗಿದೆ' ಎಂದು ಒಎಚ್ಸಿಎಚ್ಆರ್ ಟ್ವೀಟ್ ಮಾಡಿದೆ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗಳು ಶಾಂತಿಯುತವಾಗಿಯೇ ನಡೆಯುತ್ತಿತ್ತು. ಆದರೆ ದೆಹಲಿ ಗಡಿ ಭಾಗದಲ್ಲಿ ಒಳನುಗ್ಗುವ ಪ್ರಯತ್ನವನ್ನು ತಡೆಯುವ ಕ್ರಮಗಳಿಂದ ಹಿಂಸಾಚಾರ ಶುರುವಾಗಿತ್ತು. ಮುಖ್ಯವಾಗಿ ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ಮೆರವಣಿಗೆ ವೇಳೆ ಉಂಟಾದ ಸಂಘರ್ಷ ಪ್ರತಿಭಟನೆಯ ಸ್ವರೂಪವನ್ನು ಬದಲಿಸಿದೆ.

ರೈತರು ಒಳಬರದಂತೆ ತಡೆಯಲು ರಸ್ತೆಗಳಿಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕುವುದರ ಜತೆಗೆ ಮುಳ್ಳುತಂತಿಗಳು ಮತ್ತು ಮೊಳೆಗಳನ್ನು ಅಳವಡಿಸುವ ಮೂಲಕ ಸರ್ಕಾರ ಕ್ರೌರ್ಯ ಮೆರೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.












Click it and Unblock the Notifications