ತುಂಗಭದ್ರಾ ಡ್ಯಾಂ: ರೈತರ ಕಾಳಜಿ ಬಗ್ಗೆ ಧ್ವನಿ ಎತ್ತುವವರು ಯಾರು?
ಬಳ್ಳಾರಿ, ಆಗಸ್ಟ್ 12: ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ಗೇಟ್ ಚೈನ್ ಲಿಂಕ್ ಮುರಿದು ಅಪಾರ ಪ್ರಮಾಣದ ನೀರು ನದಿಗೆ ಹೋಗುತ್ತಿದೆ. ಈ ವರ್ಷದ ಮುಂಗಾರು ಮಳೆ ಅಬ್ಬರಕ್ಕೆ ಡ್ಯಾಂ ಭರ್ತಿಯಾಗಿದೆ ಎಂದು ಸಂತಸಗೊಂಡಿದ್ದ ರೈತರು ಈಗ ಗೇಟ್ ಮುರಿದಿರುವುದರಿಂದ ಆತಂಕಗೊಂಡಿದ್ದಾರೆ. ಕೆಎಸ್ಎನ್ಎಂಡಿಸಿ ಸೋಮವಾರ ನೀಡಿದ ಮಾಹಿತಿಯಂತೆ ಸದ್ಯ ಡ್ಯಾಂಗೆ ಒಳಹರಿವು 25,571 ಕ್ಯುಸೆಕ್, ಹೊರಹರಿವು 99,985 ಕ್ಯುಸೆಕ್ ಆಗಿದೆ.
ಉಪ ಮುಖ್ಯಮಂತ್ರಿ, ಜಲಸಂಪನ್ಮೂಲ ಖಾತೆ ಸಚಿವ ಡಿ. ಕೆ. ಶಿವಕುಮಾರ್ ಭಾನುವಾರ, ತುಂಗಭದ್ರಾ ಡ್ಯಾಂಗೆ ಭೇಟಿ ನೀಡಿದರು. 19ನೇ ಗೇಟ್ ಚೈನ್ ಲಿಂಕ್ ಮುರಿದಿರುವ ಕುರಿತು ಮಾಹಿತಿ ಪಡೆದರು. ಸಣ್ಣ ನೀರಾವರಿ ಸಚಿವ ಎನ್. ಎಸ್. ಬೋಸರಾಜು, ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಸಂಸದ ಈ. ತುಕಾರಾಮ್ ಮುಂತಾದವರು ಉಪಸ್ಥಿತರಿದ್ದರು.

ಡಿ. ಕೆ. ಶಿವಕುಮಾರ್ ಮಾತನಾಡಿ, "ಡ್ಯಾಂ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಗೇಟುಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತದೆ. ರೈತರ ಬಗ್ಗೆ ನಮಗೆ ಕಾಳಜಿ ಇದೆ. ರೈತರ ಸಲಹೆಗಳನ್ನು ನಾವು ಗೌರವಿಸುತ್ತೇವೆ. ಅಂತಿಮವಾಗಿ ತಜ್ಞರ ವರದಿ ಆಧರಿಸಿ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಹೇಳಿದರು.
ರಾಜಕೀಯ ಬಿಡಿ, ರೈತರ ಬಗ್ಗೆ ಮಾತನಾಡಿ: ತುಂಗಭದ್ರಾ ಡ್ಯಾಂನ ಕ್ರಸ್ಟ್ಗೇಟ್ಗಳನ್ನು ರಾಜ್ಯ ಸರ್ಕಾರ ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದು ಆರೋಪ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ರಾಜಕೀಯವನ್ನು ಬಿಟ್ಟು ರೈತರ ಕಾಳಜಿ ಬಗ್ಗೆ ಮಾತನಾಡಬೇಕಿದೆ.
ಡಿ. ಕೆ. ಶಿವಕುಮಾರ್ ಪ್ರಕಾರ, 'ಡ್ಯಾಂ 16 ಗೇಟುಗಳನ್ನು ಕೇಂದ್ರೀಯ ಜಲ ಆಯೋಗ (ಸಿಡಬ್ಲ್ಯುಸಿ) ನಿರ್ವಹಣೆ ಮಾಡುತ್ತದೆ. ಇನ್ನುಳಿದ ಗೇಟ್ಗಳ ನಿರ್ವಹಣೆಯನ್ನು ಕರ್ನಾಟಕ ಸರ್ಕಾರ ಮಾಡುತ್ತದೆ. ಈಗ 19ನೇ ಗೇಟ್ ಚೈನ್ ಲಿಂಕ್ ಮುರಿದಿರುವುದರಿಂದ ನೀರು ರಭಸವಾಗಿ ನದಿಗೆ ಹರಿಯುತ್ತಿದೆ" ಎಂದು ಹೇಳಿದ್ದಾರೆ.
"ಆಗಸ್ಟ್ 10ರ ರಾತ್ರಿ ಸಮಯದಿಂದಲೇ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ಪಡೆಯಲಾಗುತ್ತಿದೆ. ಮೂರು ರಾಜ್ಯಗಳಿಗೆ ಸೇರಿರುವ ನೀರನ್ನು ಉಳಿಸಿಕೊಂಡು ಅಣೆಕಟ್ಟಿನ ಗೇಟ್ ಅನ್ನು ದುರಸ್ತಿ ಮಾಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ" ಎಂದು ಡಿ. ಕೆ. ಶಿವಕುಮಾರ್ ತಿಳಿಸಿದರು.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, "ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗಿ ಬಾಗಿನ ಸಮರ್ಪಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ದುರಾದೃಷ್ಟವಶಾತ್ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ ಆಗಿ ತೊಂದರೆಯಾಗಿದೆ. ತುಂಗಭದ್ರಾ ಜಲಾಶಯದಲ್ಲಿ ಒಟ್ಟು 105 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. ಹೊಸ ಗೇಟ್ ಅಳವಡಿಸುವುದಕ್ಕೆ ಬಹಳಷ್ಟು ಪ್ರಮಾಣದ ನೀರನ್ನು ನದಿಗೆ ಹರಿಸಬೇಕಾದ ಪರಿಸ್ಥಿತಿ ಎದುರಾಗಿರುವುದು ಬೇಸರ ತಂದಿದೆ" ಎಂದರು.
ತುಂಗಭದ್ರಾ ಡ್ಯಾಂ ಕರ್ನಾಟಕದ ವಿವಿಧ ಜಿಲ್ಲೆ, ಆಂಧ್ರ ಪ್ರದೇಶ, ತೆಲಂಗಾಣ ಸೇರಿ ಮೂರು ರಾಜ್ಯಗಳಿಗೆ ಆಸರೆಯಾಗಿದೆ. 2023ರ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಕಾರಣ ಡ್ಯಾಂ ಭರ್ತಿಯಾಗಿರಲಿಲ್ಲ. ಆದ್ದರಿಂದ ಕುಡಿಯುವ ನೀರಿಗೆ ಆದ್ಯತೆ ನೀಡಲಾಗಿದ್ದು, ಕಾಲುವೆ ಮುಖಾಂತರ ಬೆಳೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ತಿಳಿಸಲಾಗಿತ್ತು.
ಆದ್ದರಿಂದ ರೈತರು ಭತ್ತ, ಮೆಣಸು ಬದಲು ಅಲ್ಪ ನೀರಾವರಿ ಬೆಳೆಗಳನ್ನು ಬೆಳೆಯಬೇಕು ಎಂದು ಕರೆ ನೀಡಲಾಗಿತ್ತು. ಆದರೆ 2024ರಲ್ಲಿ ಪರಿಸ್ಥಿತಿ ಬದಲಾಗಿದೆ. ನೈಋತ್ಯ ಮುಂಗಾರು ಮಳೆಯ ಆರ್ಭಟಕ್ಕೆ ತುಂಗಭದ್ರಾ ಡ್ಯಾಂ ಜುಲೈನಲ್ಲಿಯೇ ಭರ್ತಿಯಾಗಿದೆ. ಇದರಿಂದಾಗಿ ರೈತರು ಸಂತಸಗೊಂಡಿದ್ದರು.
ಮಾಹಿತಿಗಳ ಪ್ರಕಾರ ಡ್ಯಾಂನಲ್ಲಿ ಈಗಾಗಲೇ ಸುಮಾರು 3 ಟಿಎಂಸಿ ಅಡಿ ನೀರು ನದಿಗೆ ಹರಿದು ಹೋಗಿದೆ. ತಜ್ಞರ ಮಾಹಿತಿ ಪ್ರಕಾರ ಇನ್ನಷ್ಟು ನೀರು ಖಾಲಿ ಮಾಡಿದರೆ ಮಾತ್ರ ಗೇಟ್ ದುರಸ್ತಿ ಕಾರ್ಯ ಕೈಗೊಳ್ಳಲು ಅನುಕೂಲವಾಗಲಿದೆ. ಆದ್ದರಿಂದ ಡ್ಯಾಂನ ನೀರಿನ ಮಟ್ಟ ಇನ್ನಷ್ಟು ಕುಸಿತಗೊಳ್ಳುವುದು ಖಾತ್ರಿಯಾಗಿದೆ.












Click it and Unblock the Notifications