ರೈತರಿಗೆ ನಿಜವಾದ ಸ್ವಾತಂತ್ರ್ಯ: ಖಾತ್ರಿಯಾದ ಮಾರುಕಟ್ಟೆ ಮತ್ತು ಖಾತ್ರಿಯಾದ ಬೆಂಬಲ ಬೆಲೆ
ಅಂತಾರಾಷ್ಟ್ರೀಯ ಖ್ಯಾತಿಯ ಆಹಾರ ಮತ್ತು ಕೃಷಿ ನೀತಿಗಳ ತಜ್ಞರಾದ ಡಾ.ದೇವಿಂದರ್ ಶರ್ಮಾ ಕೃಷಿ ಕಾಯಿದೆಗಳ ಬಗ್ಗೆ ಬರೆದ ಲೇಖನಗಳು, ಮಂಡಿಸಿದ ವಾದಗಳು, ತಮ್ಮ ಬ್ಲಾಗ್ನಲ್ಲಿ ಪ್ರಕಟಿಸಿದ ಸಂಗತಿಗಳು ಹಾಗೂ ಸಂದರ್ಶನಗಳಲ್ಲಿ ಮಾತನಾಡಿದ ಪ್ರಮುಖ ಅಂಶಗಳನ್ನು ಒನ್ಇಂಡಿಯಾ ಕನ್ನಡ ಓದುಗರಿಗಾಗಿ ಇಲ್ಲಿ ನೀಡಲಾಗಿದೆ...
ಹನ್ನೆರಡು ವರ್ಷಗಳ ಹಿಂದಿನ ಮಾತು. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಎದೆ ನಡುಗಿಸುವಂತಃ ಸುದ್ದಿಯೊಂದನ್ನು ಓದಿದ್ದೆ. ಅಮೆರಿಕಾದ ಒಬ್ಬ ಸಣ್ಣ ರೈತ ಹಾಲಿನ ಬೆಲೆ ಕುಸಿದ ಕಾರಣ ತನ್ನ 51 ಹಸುಗಳಿಗೆ ಗುಂಡಿಕ್ಕಿ ಕೊಂದು ಕಡೆಯದಾಗಿ ತಾನೂ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಅಮೆರಿಕಾದಲ್ಲಿ ಬಹುದೊಡ್ಡ ಕೃಷಿ ಬಿಕ್ಕಟ್ಟಿನ ರೌದ್ರ ಪ್ರಕಟಣೆಯದು. ಅಲ್ಲಿನ ನಗರ ಪ್ರದೇಶಗಳಿಗೆ ಹೋಲಿಸಿದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಆತ್ಮಹತ್ಯೆಗಳ ಸಂಖ್ಯೆ ಶೇಕಡಾ 45 ರಷ್ಟು ಹೆಚ್ಚಿದೆ. ಇದೀಗ ಅಮೆರಿಕಾದ ರೈತರು ಸುಮಾರು 425 ಬಿಲಿಯನ್ ಡಾಲರ್ ಮೊತ್ತ ನಷ್ಟ ಅನುಭವಿಸಿ ದಿವಾಳಿಯಾಗಿದ್ದಾರೆ.
ಶೇ.6 ರಷ್ಟು ರೈತರು ಮಾತ್ರ ಕನಿಷ್ಟ ಬೆಂಬಲ ಬೆಲೆ
ಈಗ ಭಾರತಕ್ಕೆ ಬರೋಣ. ಶಾಂತಕುಮಾರ್ ವರದಿಯ ಪ್ರಕಾರ ಭಾರತದಲ್ಲಿ ಶೇ.6 ರಷ್ಟು ರೈತರು ಮಾತ್ರ ಕನಿಷ್ಟ ಬೆಂಬಲ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ಯಶ ಕಂಡಿದ್ದಾರೆ, ಇನ್ನುಳಿದ ಶೇಕಡಾ 94 ರೈತರು ಇತರೆ ಮಾರುಕಟ್ಟೆಗಳ ಮೇಲೆಯೇ ಅವಲಂಬಿತರಾಗಿದ್ದಾರೆ. ಅಧ್ಯಯನಗಳ ಪ್ರಕಾರ ಶೇ.36 ರಷ್ಟು ರೈತರು ಮಾತ್ರ ತಮ್ಮ ಉತ್ಪನ್ನಗಳನ್ನು ಮಂಡಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಇನ್ನುಳಿದವರು ಖಾಸಗಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇಲ್ಲೊಂದು ಪ್ರಶ್ನೆ ಉದ್ಬವವಾಗುತ್ತದೆ. ಭಾರತದಲ್ಲಿ ಮಾರುಕಟ್ಟೆಯ ವ್ಯವಸ್ಥೆ ಸಮರ್ಥವಾಗಿದ್ದಲ್ಲಿ ಕೃಷಿ ಬಿಕ್ಕಟ್ಟು ಎದುರಾಗುತ್ತಲೇ ಇರಲಿಲ್ಲ. ಇನ್ನೂ ಬಿಡಿಸಿ ಹೇಳಬೇಕೆಂದರೆ ಅಮೆರಿಕಾದಂತೆ ಭಾರತದಲ್ಲೂ ಕೃಷಿ ಆದಾಯ ಸಮರ್ಪಕವಾಗಿಲ್ಲ.
ಸಣ್ಣ ರೈತರು ಬೀದಿ ಪಾಲಾಗುವ ಸಾಧ್ಯತೆ
ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರಲು ಮತ್ತು ರೈತರ ಆದಾಯ ಹೆಚ್ಚಿಸಲು ಹೊಸದಾಗಿ ಕಾನೂನುಗಳನ್ನು ರೂಪಿಸಿರುವ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಯನ್ನು ಆಹ್ವಾನಿಸಿದೆ. ಆದರೆ ಇಡೀ ದೇಶದಾದ್ಯಂತ ರೈತರು ಈ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇದರಿಂದ ಸಣ್ಣ ರೈತರು ಬೀದಿ ಪಾಲಾಗುವ ಸಾಧ್ಯತೆಯನ್ನು ಅವರು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಸಂಕಲ್ಪದಲ್ಲಿ ಬೀದಿಗಿಳಿದಿದ್ದಾರೆ. ಯಾವುದೇ ನಿರ್ಬಂಧಗಳಿಲ್ಲದೆ, ರೈತರ ಹಕ್ಕುಗಳಿಗೆ ರಕ್ಷಣೆ ಒದಗಿಸದೆ ಮಾಡಿರುವ ಈ ಕಾನೂನುಗಳು ಖಾಸಗಿ ಕಂಪನಿಗಳಿಗೆ ಸಂಪೂರ್ಣ ಸ್ವತಂತ್ರ ಕೊಟ್ಟಿವೆ. ಇಂತಿಪ್ಪ ಸಂದಿಗ್ಧದಲ್ಲಿಯೂ ಸರ್ಕಾರ ಕನಿಷ್ಟ ಬೆಂಬಲ ಬೆಲೆಯನ್ನು ಉಳಿಸಿಕೊಳ್ಳುವುದಾಗಿಯೂ, ಖಾಸಗಿ ವ್ಯಾಪಾರಿಗಳಿಗೆ/ಕಂಪನಿಗಳಿಗೆ ಎ.ಪಿ.ಎಂ.ಸಿ ವ್ಯಾಪ್ತಿಯಾಚೆ ಕೊಳ್ಳಲು ಅವಕಾಶ ಕಲ್ಪಿಸುವುದರ ಜೊತೆಗೆ ಎ.ಪಿ.ಎಂ.ಸಿಗಳನ್ನೂ ಉಳಿಸಿಕೊಳ್ಳುವುದಾಗಿಯೂ ಹೇಳುತ್ತಿದೆ.
ಮಂಡಿ ಮಾಲೀಕರಿಗೆ ಶೇ.6 ರಷ್ಟು ಸುಂಕ
ಇದನ್ನು ಕೊಂಚ ಬಿಡಿಸಿ ನೋಡುವುದಾದರೆ ಭಾರತದಲ್ಲಿ ಅತ್ಯಂತ ದೊಡ್ಡ ಎ.ಪಿ.ಎಂ.ಸಿ ಮಂಡಿಗಳಿರುವ ಪಂಜಾಬ್ ರಾಜ್ಯದಲ್ಲಿ ಮಂಡಿ ಮಾಲೀಕರಿಗೆ ಶೇ.6 ರಷ್ಟು ಸುಂಕ ವಿಧಿಸಲಾಗುತ್ತಿದೆ. (ಗ್ರಾಮೀಣಾಭಿವೃದ್ಧಿ ಶುಲ್ಕ ಸೇರಿ), ಆದರೆ ಮಂಡಿಗಳಿಂದಾಚೆ ಏರ್ಪಾಡಾಗಿರುವ ವ್ಯವಸ್ಥೆಯಲ್ಲಿ ಪ್ಯಾನ್ ಕಾರ್ಡ್ ಇರುವ ಯಾವುದೇ ವ್ಯಕ್ತಿ ಕಿಲುಬು ಕಾಸೂ ಟ್ಯಾಕ್ಸ್ ಕಟ್ಟದೆ ರೈತರಿಂದ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಹೀಗಿರುವಾಗ ಮುಂಬರುವ ದಿನಗಳಲ್ಲಿ ಎ.ಪಿ.ಎಂ.ಸಿಗಳು ಇದ್ದೂ, ಇಲ್ಲದಂತಾಗುವುದಲ್ಲದೆ. ಕನಿಷ್ಟ ಬೆಂಬಲ ಬೆಲೆಯೂ ಹಾಗೆಯೇ ನಶಿಸುತ್ತದೆ ಎಂಬುದು ರೈತರ ಆತಂಕವಾಗಿದೆ.
ಒಂದು ದೇಶ ಒಂದು ಮಾರುಕಟ್ಟೆ
"ಒಂದು ದೇಶ ಒಂದು ಮಾರುಕಟ್ಟೆ" ಎಂಬ ಘೋಶವಾಕ್ಯವು ವಾಸ್ತವದಲ್ಲಿ ಒಂದು ದೇಶ ಎರಡು ಮಾರುಕಟ್ಟೆಯಾಗಿದೆ. ಖಾಸಗಿ ಮಾರುಕಟ್ಟೆಯಲ್ಲಿ ರೈತರ ಉತ್ಪನ್ನಗಳಿಗೆ ಹೆಚ್ಚಿನ ಹಣ ಸಿಗದಿದ್ದಲ್ಲಿ ರೈತರು ಮಂಡಿಗಳಿಗೆ ಬಂದು ಕನಿಷ್ಟ ಬೆಂಬಲ ಬೆಲೆಗೆ ಮಾರಾಟ ಮಾಡಬಹುದೆಂಬ ಲೆಕ್ಕಾಚಾರ ರೈತರನ್ನು ಸ್ಪರ್ಧೆಗಿಳಿಸಿದಂತಾಗಿದೆ."
ಕಡಿಮೆ ಬೆಲೆಗೆ ರೈತರ ಉತ್ಪನ್ನಗಳು ಮಾರಾಟ
ಸರ್ಕಾರ ಕೇವಲ 23 ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಘೋಷಿಸುತ್ತದೆ. ಅದರಲ್ಲೂ ಭತ್ತ, ಗೋಧಿ ಮತ್ತು ಸ್ವಲ್ಪ ಪ್ರಮಾಣದ ಹತ್ತಿ, ಸೋಯಾಬೀನ್, ಧಾನ್ಯಗಳು ಹಾಗೂ ಸಾಸಿವೆ ಮುಂತಾದವನ್ನಷ್ಟೇ ಕೊಳ್ಳುತ್ತಿದೆ. ಈವರೆಗೆ ಈ 23 ಬೆಳೆಗಳಿಗೆ ಘೋಷಿಸಲಾದ ಕನಿಷ್ಟ ಬೆಂಬಲ ಬೆಲೆಗಿಂತಾ ಕಡಿಮೆ ಬೆಲೆಗೆ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದು ಎಲ್ಲ ರಾಜ್ಯಗಳ ರೈತರ ಅನುಭವವಾಗಿದೆ. ಉದಾಹರಣೆಗೆ ಮೆಕ್ಕೆ ಜೋಳಕ್ಕೆ ನಿಗದಿಯಾಗಿರುವ ಕನಿಷ್ಟ ಬೆಂಬಲ ಬೆಲೆ 1,850 ರೂಪಾಯಿಗಳಾದರೆ, ಮಾರುಕಟ್ಟೆಯಲ್ಲಿ ಕೇವಲ 800 ರಿಂದ 1000 ರೂಪಾಯಿಗಳಿಗೆ ರೈತರು ತಮ್ಮ ಮೆಕ್ಕೆಜೋಳವನ್ನು ಮಾರುವ ಪರಿಸ್ಥಿತಿ ಇದೆ.
ಸಂಸ್ಥೆಗಳನ್ನು ಕೆಡವುದು, ಕಟ್ಟುವುದಕ್ಕಿಂತಲೂ ಸುಲಭ
ಈ ಹಿಂದೆ ಬಿಹಾರ ರಾಜ್ಯದಲ್ಲಿ ಖಾಸಗಿ ವ್ಯಾಪಾರಸ್ಥರಿಗೆ ಕೊಳ್ಳುವ ಅವಕಾಶ ನೀಡಿದ್ದಾಗ್ಯೂ, ರೈತರಿಗೆ ಉತ್ತಮ ಬೆಲೆ ಸಿಗದೆ ಹೋದ ಉದಾಹರಣೆ ಕಣ್ಣ ಮುಂದೆಯೇ ಇದೆ. 2006 ರಲ್ಲಿ ಬಿಹಾರ ರಾಜ್ಯದಲ್ಲಿ ಎ.ಪಿ.ಎಂ.ಸಿ ಕಾಯಿದೆಗೆ ತಿದ್ದುಪಡಿ ತಂದಾಗ ಎಲ್ಲರೂ ಕುತೂಹಲದಿಂದ ಬಿಹಾರದತ್ತ ಕಣ್ಣು ನೆಟ್ಟಿದ್ದರು. ಅನೇಕ ತಜ್ಞರು ಬಿಹಾರ-ದೇಶದ ಕೃಷಿ ಮಾರುಕಟ್ಟೆಯ ದಿಕ್ಸೂಚಿಯಾಗಲಿದೆ ಎಂಬುದಾಗಿ ಅಭಿಪ್ರಾಯಪಟ್ಟಿದ್ದರು. ಹದಿನಾಲ್ಕು ವರ್ಷಗಳೇ ಉರುಳಿದರೂ ಅಂತಹ ಘನವಾದದ್ದೂ ಏನೂ ಘಟಿಸಲೇ ಇಲ್ಲ. 2019 ರಲ್ಲಿ ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ 2006 ರಲ್ಲಿ ಬಿಹಾರ ರಾಜ್ಯ ಎ.ಪಿ.ಎಂ.ಸಿ ಕಾಯಿದೆಯನ್ನು ರದ್ದು ಮಾಡಿದ ಸಂಬಂಧ ಬರೆದ ಷರಾ ಇಂತಿದೆ. "ಸಂಸ್ಥೆಗಳನ್ನು ಕೆಡವುದು-ಅವುಗಳನ್ನು ಕಟ್ಟುವುದಕ್ಕಿಂತಲೂ ಸುಲಭ. ಇದರಿಂದ ಕೃಷಿ ಕ್ಷೇತ್ರ ಹಾಗೂ ರೈತ ಸಮುದಾಯದ ಮೇಲಾಗುವ ದುಷ್ಪರಿಣಾಮ ಬಹಳ ಗಂಭೀರ ಸ್ವರೂಪದ್ದಾಗಿರುತ್ತದೆ".
ದೇಶದಲ್ಲಿ ಸುಮಾರು 7000 ಮಂಡಿಗಳು
ಇಷ್ಟು ವರ್ಷಗಳಲ್ಲಿ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಬಹಳ ಗಂಭೀರ ಸ್ವರೂಪದ ವ್ಯತ್ಯಾಸಗಳು ಕಂಡುಬಂದಿವೆ. ವಿಷವರ್ತುಲಗಳು ಸುಳಿಯಲ್ಲಿ ರೈತರು ಸಿಕ್ಕಿಕೊಂಡಿದ್ದಾರೆ. ಮಾಫಿಯಾಗಳೊಂದಿಗೆ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಇಂಥ ಮಂಡಿಗಳಲ್ಲಿ ರಾಜಕೀಯ ಬೆರೆಸದೆ, ಉತ್ತಮ ಆಡಳಿತ ವ್ಯವಸ್ಥೆ ಮತ್ತು ರೈತ ಸ್ನೇಹಿ ನಿಯಮಗಳನ್ನು ರಚಿಸಿ ಮುನ್ನಡೆಸಬೇಕಿದೆ. ದೇಶದಲ್ಲಿ ಸುಮಾರು 7000 ಮಂಡಿಗಳಿದ್ದಾಗ್ಯೂ, ಪ್ರತಿ ಐದು ಕಿಲೋಮೀಟರ್ ಗೆ ಒಂದರಂತೆ ಮಂಡಿ ಮಾಡುವುದಾದಲ್ಲಿ 42,000 ಎ.ಪಿ.ಎಂ.ಸಿಗಳ ಅವಶ್ಯಕತೆ ಇದೆ. ಖಾಸಗಿ ಮಂಡಿಗಳನ್ನು ತೆರೆಯುವುದಾದಲ್ಲಿಯೂ ಅನೇಕ ನಿರ್ಭಂದಗಳನ್ನು ವಿಧಿಸಬೇಕು.
ಅದಕ್ಕೊಂದು ಸುಗ್ರೀವಾಜ್ಞೆ ಹೊರಡಿಸಬೇಕು
ರೈತರಿಗೆ ನಿಜವಾದ ಸ್ವಾತಂತ್ರ್ಯ ಏನೆಂದರೆ ಅವರಿಗೆ ತಾವು ಬೆಳೆದ ಬೆಳೆ ಎಲ್ಲಿ ಮಾರಾಟ ಮಾಡುತ್ತೇವೆ, ಎಷ್ಟು ಬೆಲೆಗೆ ಅದು ಬಿಕರಿಯಾಗುತ್ತದೆ ಎಂಬ ಸ್ಪಷ್ಟ ಅರಿವಿರಬೇಕು. ಅದು ದಿಲ್ಲಿಯಲ್ಲೋ, ಬೆಂಗಳೂರಿನಲ್ಲೋ ಆ ವಿಷಯ ಬೇರೆ. ಹಾಗಾಗಿ ಕನಿಷ್ಟ ಬೆಂಬಲ ಬೆಲೆಗಿಂತಲೂ ಕಡಿಮೆ ಮೊತ್ತಕ್ಕೆ ವ್ಯಾಪಾರ ನಡೆಯಕೂಡದೆಂಬ ಕಾನೂನು ತರಬೇಕು. ಅದಕ್ಕೊಂದು ಸುಗ್ರೀವಾಜ್ಞೆ ಹೊರಡಿಸಬೇಕು.