ಮತ್ತೆ ಮಳೆ, ಕೆಂಪು ಮೆಣಸಿನಕಾಯಿ ಬೆಳೆ ನಿರ್ವಹಣಾ ಕ್ರಮಗಳು
ಬಳ್ಳಾರಿ, ಡಿಸೆಂಬರ್ 07; ಕೆಂಪು ಮೆಣಸಿನಕಾಯಿ ಬೆಳೆ ಬಿತ್ತನೆಯಾಗಿದೆ. ಆದರೆ ಮೋಡ ಕವಿದ ವಾತಾವರಣವಿದ್ದಲ್ಲಿ ಬೂದಿ ರೋಗ, ಹಣ್ಣು ಕೊಳೆ ರೋಗ, ಚಿಬ್ಬು ರೋಗ ಹರಡುವ ಸಾಧ್ಯತೆ ಇರುತ್ತದೆ.
ಬಳ್ಳಾರಿಯ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ಎಸ್. ಪಿ. ಭೋಗಿ ಕೆಂಪು ಮೆಣಸಿನಕಾಯಿ ಬೆಳೆ ನಿರ್ವಹಣಾ ಕ್ರಮಗಳನ್ನು ಸೂಚಿಸಿದ್ದಾರೆ. 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೆಂಪು ಮೆಣಸಿನಕಾಯಿ ಬೆಳೆ ಬಿತ್ತನೆಯಾಗಿದೆ.
ಹವಮಾನ ಇಲಾಖೆಯ ಮುನ್ಸೂಚನೆಯಂತೆ ಡಿ.10ರಿಂದ ಸತತ ಐದು ದಿನಗಳ ಕಾಲ ಸಾಧಾರಣದಿಂದ ಭಾರೀ ಮಳೆಯಾಗುವ ಸಂಭವವಿದೆ. ಆದ್ದರಿಂದ ಕೆಂಪು ಮೆಣಸಿನಕಾಯಿ ಬೆಳೆಯುವ ರೈತರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಲಾಗಿದೆ.

ಯಾವ ಕ್ರಮ ಕೈಗೊಳ್ಳಬೇಕು; ಕೆಂಪು ಮೆಣಸಿನಕಾಯಿ ಬೆಳೆಯನ್ನು ಈಗಾಗಲೇ ಕಟಾವು ಮಾಡಿದ್ದಲ್ಲಿ ಸೂಕ್ತ ರೀತಿಯಲ್ಲಿ ಸಂಗ್ರಹಿಸಿ ಮಳೆ ಮತ್ತು ಗಾಳಿಗೆ ಹಾನಿಯಾಗದಂತೆ ಅಗತ್ಯ ಶೇಖರಣಾ ವ್ಯವಸ್ಥೆಗಳನ್ನು ಕಲ್ಪಿಸಿಕೊಳ್ಳಬೇಕು.
ಬೂದಿ ರೋಗದ ಬಾಧೆ ಕಂಡುಬಂದಲ್ಲಿ 1 ಗ್ರಾಂ ಕಾರ್ಬಂಡ್ರೈಜಿಮ್ ಅಥವಾ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕ 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ರೋಗದ ಲಕ್ಷಣಗಳು ಕಡಿಮೆಯಾಗದಿದ್ದಲ್ಲಿ ಇದೇ ಸಿಂಪರಣೆಯನ್ನು 15 ದಿವಸಗಳ ಅಂತರದಲ್ಲಿ ಇನ್ನೆರಡು ಬಾರಿ ಮಾಡಬೇಕು ಎಂದು ಸಲಹೆ ನೀಡಲಾಗಿದೆ.
ಹೆಕ್ಟೇರ್ಗೆ 450-540 ಲೀ ಸಿಂಪರಣಾ ದ್ರಾವಣ ಬಳಸಬೇಕು. ಹಣ್ಣು ಕೊಳೆ ರೋಗ ಬಾಧೆ ಕಂಡಬಂದಲ್ಲಿ 1 ಗ್ರಾಂ ಕಾರ್ಬಂಡೈಜಿಮ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ 15 ದಿನಗಳ ಅಂತರದಲ್ಲಿ ನಾಲ್ಕು ಸಾರಿ ಸಿಂಪಡಿಸಬೇಕು.

ಆಲ್ಟಾರನೇರಿಯಾ ಎಲೆ ಚುಕ್ಕೆ ರೋಗ ಹಾಗೂ ಚಿಬ್ಬು ರೋಗ ಕಂಡುಬಂದಲ್ಲಿ 2 ಗ್ರಾಂ ಮ್ಯಾಂಕೋಜೆಬ್ 75 ಡಬ್ಲ್ಯೂ.ಪಿ ಅಥವಾ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು ಎಂದು ರೈತರಿಗೆ ಸಲಹೆ ನೀಡಲಾಗಿದೆ.
ಇದೇ ಸಿಂಪಡಣೆಯನ್ನು 15 ದಿವಸಗಳ ನಂತರ ಪುನಃ ಮಾಡಬೇಕು. ಹೆಕ್ಟೇರಿಗೆ 450-540 ಲೀಟರ್ ಸಿಂಪರಣಾ ದ್ರಾವಣ ಬಳಸಬೇಕು. ಬೆಳೆಗೆ ಚಿಬ್ಬು ರೋಗದ ಬಾಧೆ ಕಂಡುಬಂದಲ್ಲಿ 1 ಮಿ.ಲೀ. ಡೈಪಿನ್ ಕೊನಾಜೋಲ್ 10 ಡಬ್ಲ್ಯೂ.ಪಿ.ಯನ್ನು ಪ್ರತಿ ಲೀಟರ್ ನೀರಿಗೆ 15 ದಿನಕ್ಕೊಮ್ಮೆ 3 ಸಲ ಸಿಂಪಡಿಸಬೇಕು.
ಬೆಳೆಗಳ ಕೊಯ್ಲು ಬೇಗ ಮುಗಿಸಿಕೊಳ್ಳಿ; ಬಳ್ಳಾರಿ ಜಿಲ್ಲೆಯಲ್ಲಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಭತ್ತ, ಮೆಣಸಿನಕಾಯಿ ಹಾಗೂ ಇನ್ನಿತರ ಬೆಳೆಗಳ ಕೊಯ್ಲು ಅಥವಾ ಕಟಾವು ಕಾರ್ಯಚಟುವಟಿಕೆಗಳನ್ನು ಬೇಗ ಮುಗಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಭತ್ತದ ಬೆಳೆಯು 91041 ಹೆಕ್ಟೇರ್ನಷ್ಟು ಬಿತ್ತನೆಯಾಗಿದ್ದು, ಕಟಾವು ಹಂತದಲ್ಲಿರುತ್ತದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಿರುವುದರಿಂದ ಚಂಡಮಾರುತ ಉಂಟಾಗಿದ್ದು, ಡಿಸೆಂಬರ್ 9ರಿಂದ 14ರವರೆಗೆ ಜಿಲ್ಲೆಯಾದ್ಯಂತ ಮಳೆಯಾಗುವ ಮುನ್ಸೂಚನೆ ಇದೆ.
ಬಳ್ಳಾರಿ ಜಿಲ್ಲೆಯ ರೈತ ಬಾಂಧವರು ತಮ್ಮ ಜಮೀನಿನಲ್ಲಿರುವ ಕೃಷಿ ಬೆಳೆಯಾದ ಭತ್ತ, ತೋಟಗಾರಿಕೆ ಬೆಳೆಯಾದ ಮೆಣಸಿನಕಾಯಿ ಹಾಗೂ ಇನ್ನಿತ್ತರ ಬೆಳೆಗಳ ಕೊಯ್ಲು ಅಥವಾ ಕಟಾವು ಕಾರ್ಯಚಟುವಟಿಕೆಗಳನ್ನು ಮುಂಜಾಗ್ರತವಾಗಿ ಮಾಡಬೇಕು ಎಂದು ಮನವಿ ಮಾಡಲಾಗಿದೆ.
ಕಟಾವು ಮಾಡಿದ ಬೆಳೆಗಳ ಉತ್ಪನ್ನದ ದಾಸ್ತಾನುಗಳಾದ ಮೇವು, ಬಣವೆಗಳನ್ನು ಹೊದಿಕೆ (ತಾಡ್ಪಾಲ್) ಮುಖಾಂತರ ಅಥವಾ ಸುರಕ್ಷಿತ ಜಾಗದಲ್ಲಿ ಮುಂಜಾಗ್ರತವಾಗಿ ಸಂರಕ್ಷಣೆ ಮಾಡಬೇಕು ಎಂದು ಸಲಹೆ ನೀಡಲಾಗಿದೆ.












Click it and Unblock the Notifications