ಹೆಸರು ಹಾಗೂ ಉದ್ದು ಬೆಳೆ ಸಂರಕ್ಷಣೆಗೆ ರೈತರಿಗೆ ಸಲಹೆಗಳು
ಕಲಬುರಗಿ, ಜುಲೈ 26 : ಕಲಬುರಗಿ ಜಿಲ್ಲೆಯಲ್ಲಿ ಸತತವಾಗಿ ಒಂದು ವಾರದಿಂದ ಮಳೆ, ತಂಪು ವಾತಾವರಣವಿದೆ. ಇದರಿಂದಾಗಿ ಹೆಸರು ಮತ್ತು ಉದ್ದು ಬೆಳೆಯಲ್ಲಿ ರೋಗ ಮತ್ತು ಕೀಟಗಳು ಬರುವ ಸಾಧ್ಯತೆಗಳಿವೆ ಎಂದು ರೈತರಿಗೆ ಎಚ್ಚರಿಕೆ ನೀಡಲಾಗಿದೆ.
ಕೃಷಿ ಇಲಾಖೆ ಹೆಸರು ಹಾಗೂ ಉದ್ದು ಬೆಳೆಯುವ ರೈತರು ಅವಶ್ಯಕ ಸಂಸ್ಯ ಸಂರಕ್ಷಣಾ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ. ರೈತರು ಜಮೀನಿನಲ್ಲಿ ನೀರು ನಿಲ್ಲದ ಹಾಗೆ ಬಸಿಗಾಲುವೆ ಮಾಡಿ ನೀರು ಹೊರ ಹಾಕಬೇಕು ಎಂದು ಸೂಚನೆ ನೀಡಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ನೀರಿನಲ್ಲಿ ಕರಗುವ 19:19:19 ಗೊಬ್ಬರವನ್ನು (3 ಗ್ರಾಂ. ಪ್ರತಿ ಲೀ. ನೀರಿಗೆ) ಹಾಗೂ ಕಾರ್ಬನ್ಡೈಜಿಮ್ನ್ನು (3 ಗ್ರಾಂ. ಪ್ರತಿ ಲೀ. ನೀರಿಗೆ) ಬೆಳೆಗಳಿಗೆ ಸಿಂಪರಣೆ ಮಾಡಬೇಕು ಎಂದು ರೈತರಿಗೆ ಸಲಹೆ ನೀಡಲಾಗಿದೆ.

ಹಳದಿ ಎಲೆ ನಂಜಾಣು ರೋಗದ ಮೊದಲ ಲಕ್ಷಣ ಎಂಬಂತೆ ಎಲೆಯ ಮೇಲೆ ಹಳದಿ ಬಣ್ಣದ ಚುಕ್ಕೆ ಆಕಾರದ ಚಿಹ್ನೆಗಳು ಕಂಡು ಬರುತ್ತವೆ. ನಂತರದಲ್ಲಿ ಒಂದಕ್ಕೊಂದು ಚುಕ್ಕೆಗಳು ಕೂಡಿ ಸಂಪೂರ್ಣ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ತದನಂತರ ಸಂಪೂರ್ಣವಾಗಿ ಕಂದು ಬಣ್ಣಕ್ಕೆ ತಿರುಗಿ ಒಣಗುತ್ತವೆ. ಈ ನಂಜಾಣು ಬಿಳಿ ನೊಣದಿಂದ ಪ್ರಸರಣಗೊಳ್ಳುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಹತೋಟಿ ಕ್ರಮಗಳು : ರೈತರು ಪ್ರತಿ ಎಕರೆಗೆ 8-10 ಹಳದಿ ಅಂಟು ಬಲೆಗಳನ್ನು ಅಳವಡಿಸುವುದು. ಒಂದು ಮಿ.ಲೀ ಬೇವಿನ ಎಣ್ಣೆಯನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು. ರೈತರು ಯಾವುದೇ ರಾಸಾಯನಿಕ ಕೀಟನಾಶಕದೊಂದಿಗೆ ಬೇವಿನ ಎಣ್ಣೆಯನ್ನು ಮಿಶ್ರಣ ಮಾಡಬಾರದು. ಇಮಿಡಾಕ್ಲೋಪ್ರಿಡ್ 0.5 ಮಿ. ಲೀ. ಯನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ತಿಳಿಸಿದ್ದಾರೆ.
ನುಸಿಗಳ ನಿರ್ವಹಣೆಗಾಗಿ ಮಳೆ ಬಂದ ಎರಡು ಮೂರು ದಿನಗಳ ನಂತರ ಥ್ರೀಪ್ಸ ಹಾಗೂ ಬೋರಾನ್ ಕೊರತೆಯಿಂದ ಹೆಸರು ಮತ್ತು ಉದ್ದು ಬೆಳೆಯಲ್ಲಿ ಗಿಡದ ತುತ್ತ ತುದಿ (ನೆತ್ತಿ) ಸುಡುವುದು ಕಂಡು ಬಂದರೆ ರೈತರು ಥಿಯೋಮಿಥಾಕ್ಸಮ್ 0.5 ಗ್ರಾಂ. ಮತ್ತು ಬೋರಾನ್ 1 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಸೂಚನೆ ನೀಡಲಾಗಿದೆ.












Click it and Unblock the Notifications