ಮಾಗಡಿ ತಾಲೂಕಿನ ರಾತ್ರಿಕಳ್ಳರಿಗೆ ಸಕತ್ ಗೂಸಾ
ರಾಮನಗರ-ನ.24-ಸಾಲಸೋಲ ಮಾಡಿ ಹಗಲು ರಾತ್ರಿ ಬೇಸಾಯ ಮಾಡಿದ್ದರ ಫಲವಾಗಿ ಉತ್ತಮ ಫಸಲು ಬಂದ ಖುಷಿಯಲ್ಲಿ ನಮ್ಮ ರೈತರಿದ್ದರು. ಅದೂ ಮಾರುಕಟ್ಟೆ ಸದ್ಯಕ್ಕಂತೂ ಬಾಳೆಗೆ ಹೆಚ್ಚಿನ ಬೆಲೆ ಇದೆ. ಆದರೆ, ಕಟಾವಿಗೆ ಬಂದ ಬಾಳೆ ಬೆಳೆಯನ್ನ ರಾತ್ರೋ ರಾತ್ರಿ ಖದೀಮರು ಕದ್ದೋಯ್ದು ಮಾರಾಟ ಮಾಡುತ್ತಿದ್ದರು. ಜತೆಗೆ ಕುರಿ ಮೇಕೆಗಳು ಕೂಡ ಮಾಯವಾಗುತ್ತಿದ್ದವು. ಈ ರಾತ್ರಿ ಕಳ್ಳರನ್ನು ಕೊನೆಗೂ ಮಾಗಡಿ ತಾಲೂಕಿನಲ್ಲಿ ಹಿಡಿಯಲಾಗಿದೆ.
'ನೂರು ದಿನ ಕಳ್ಳತನ ಮಾಡಿದ ಕಳ್ಳ ನೂರೊಂದನೇ ದಿನಕ್ಕಾದರೂ ಸಿಕ್ಕಿ ಬೀಳ್ತಾನೆ' ಎಂಬ ಮಾತಿದೆ. ಅದೇ ರೀತಿ ಕಳ್ಳತನ ಮಾಡುತ್ತಿದ್ದ ಖದೀಮರು ಶನಿವಾರ ಮಧ್ಯರಾತ್ರಿಯಲ್ಲೂ ಕೂಡ ಬಾಳೆಗೊನೆಯನ್ನ ಕದ್ಯೊಯ್ಯಲು ಬಂದಾಗ ಸಿಕ್ಕಿಬಿದ್ದಿದ್ದಾರೆ. ಸಿಕ್ಕ ಖದೀಮರನ್ನ ರೈತರೆಲ್ಲರೂ ಸೇರಿ ಕಂಬಕ್ಕೆ ಕಟ್ಟಿ ತೀವ್ರವಾಗಿ ತೀವ್ರವಾಗಿ ಥಳಿಸಿ ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ.
ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಗೆಜ್ಜಗಾರಗುಪ್ಪೆ ಸುತ್ತಮುತ್ತ ಗ್ರಾಮಗಳ ವ್ಯಾಪ್ತಿಯಲ್ಲಿ ಹಲವಾರು ದಿನಗಳಿಂದ ರಾತ್ರೋ ರಾತ್ರಿ ಬಾಳೆಗೊನೆಗಳನ್ನ ಕಳ್ಳತನ ಮಾಡುತ್ತಿದ್ದರು. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇರುವುದರಿಂದ ಕದ್ದು ಸುಲಭವಾಗಿ ಸಂಪಾದನೆ ಮಾಡುತ್ತಿದ್ದರು. ಬಾಳೆಗೊನೆ ಕದ್ದರೆ ಯಾವುದೇ ಸಾಕ್ಷ್ಯಾಧಾರಗಳು ದೊರೆಯುವುದಿಲ್ಲವೆಂದು ಅರಿತುಕೊಂಡಿದ್ದ ಖದೀಮರು ಬಾಳೆಗೊನೆಗಳನ್ನ ಕತ್ತರಿಸಿ ಆಟೋದಲ್ಲಿ ಸಾಗಿಸಿ ಮಾರಾಟ ಮಾಡುತ್ತಿದ್ದರು.

ಇದೇ ರೀತಿ ಹಲವಾರು ದಿನಗಳಿಂದಲೂ ಮಾಡುತ್ತಲೇ ಇದ್ದರೆಂದು ಹೇಳಲಾಗುತ್ತಿದೆ. ನಿನ್ನೆ ರಾತ್ರಿ ಕೂಡ ಗೆಜ್ಜಗಾರಗುಪ್ಪೆಯ ನರಸಿಂಹಯ್ಯ ಎಂಬುವವರ ತೋಟದಲ್ಲಿ ಬಾಳೆಗೊನೆ ಕದ್ದು ಸಾಗಿಸಬೇಕಾದ ಸಂಧರ್ಭದೆಲ್ಲಿ ಸಿಕ್ಕಿಬಿದ್ದಿದ್ದರಿಂದ ಕಂಬಕ್ಕೆ ಕಟ್ಟಿ ಹಾಕಿ ರೈತರೆಲ್ಲರೂ ಖದೀಮರಿಗೆ ಧರ್ಮದೇಟು ನೀಡಿದ್ದಾರೆ. ಖರ್ಚಿಗೆ ಕಾಸು ಮಾಡಿಕೊಳ್ಳಲು ರೈತರ ಫಸಲನ್ನ ಕದಿಯುತ್ತಿದ್ದೆವೆಂದು ಸಿಕ್ಕಿಬಿದ್ದಿರುವ ನಂಜುಂಡಸ್ವಾಮಿ ಮತ್ತು ರಾಜು ಎಲ್ಲರೆದು ತಪ್ಪೊಪ್ಪಿಕೊಂಡಿದ್ದಾರೆ.
ನಿನ್ನೆ ರಾತ್ರಿ ರಾಜು, ನಂಜುಂಡಸ್ವಾಮಿ ಮತ್ತು ಸುನೀಲ ಎಂಬುವವರ ಆಟೋದಲ್ಲಿ ಸಾಗಿಸುತ್ತಿದ್ದ ಸಂಧರ್ಭದಲ್ಲಿ ಊರಿನವರು ಇಬ್ಬರನ್ನ ಹಿಡಿದಿದ್ದಾರೆ. ಆದರೆ ಸುನೀಲ ಎಂಬುವ ಕಾಲ್ಕಿತ್ತಿದ್ದಾನೆ. ಹಲವಾರು ದಿನಗಳಿಂದ ಕಳ್ಳತನ ಮಾಡುತ್ತಿದ್ದರಿಂದ ಬೇಸತ್ತಿದ್ದ ಮಂದಿ ಸಖತ್ತಾಗಿಯೇ ಖದೀಮರಿಗೆ ಗೂಸಾ ಕೊಟ್ಟಿದ್ದಾರೆ. ಸಾಗಾಣಿಕೆ ಮಾಡಲು ತಂದಿದ್ದ ಆಟೋ ಕೂಡ ರೈತರ ಆಕ್ರೋಶಕ್ಕೆ ಗುರಿಯಾಗಿ ಸಂಪೂರ್ಣ ಜಖಂ ಆಗಿದೆ.
ಕಳ್ಳತನ ಮಾಡಿ ಸಿಕ್ಕಿಬಿದ್ದ ರಾಜುವಿನ ಸಹೋದರರೂ ಕೂಡ ಆಗಮಿಸಿ ರಾಜು ಮತ್ತು ನಂಜುಂಡಸ್ವಾಮಿಗೆ ಏಟು ಕೊಟ್ಟು ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದರು. ಕೂಲಿ ನಾಲಿ ಮಾಡಿ ನಾವು ಬದುಕು ಮಾಡ್ತೀವಿ. ಕುಡಿದು ತಿಂದು ಮೋಜು ಮಾಡೋದಿಕ್ಕೆ ಸ್ನೇಹಿತರೊಂದಿಗೆ ಸೇರಿಕೊಂಡು ಈ ರೀತಿ ಕಳ್ಳತನ ಮಾಡಿ ಸಿಕ್ಕಿಬಿದ್ದು ನಮ್ಮ ಮಾನಮರ್ಯಾದೆ ಕಳೆದಿದ್ದಾರೆಂದು ಹೇಳಿದರು.

ತಾಯಿ ಫೋಟೋ ಜೇಬಿನಲ್ಲಿ : ಸೆರೆಸಿಕ್ಕ ರಾಮೋಹಳ್ಳಿ ನಂಜುಂಡಸ್ವಾಮಿ ತನ್ನ ಜೇಬಿನಲ್ಲಿ ತನ್ನ ತಾಯಿಯ ಫೋಟೋವನ್ನ ಇಟ್ಟುಕೊಂಡಿದ್ದ. ನಾನು ಎದ್ದಾಕ್ಷಣ ನಮ್ಮಮ್ಮನ ಫೋಟೋ ನೋಡೋದು ರೂಢಿ ಅದಕ್ಕೆ ಫೋಟೊ ಇಟ್ಟುಕೊಂಡಿದ್ದೇನೆ. ನಮ್ಮಮ್ಮನಿಗೆ ನಾನು ಕಳ್ಳತನ ಮಾಡಿರುವ ವಿಚಾರ ಗೊತ್ತಾದರೆ ಅವರು ಬದುಕುವುದಿಲ್ಲ. ದಯವಿಟ್ಟು ನನ್ನನ್ನ ಬಿಟ್ಟುಬಿಡಿ ಇನ್ಮುಂದೆ ತಪ್ಪು ಮಾಡಲ್ಲ ಎಂದು ಅಂಗಲಾಚುತ್ತಿದ್ದ.
ಸಖತ್ತಾಗಿಯೇ ಗೂಸಾ ತಿಂದಿದ್ದ ಖದೀಮರನ್ನ ಮಾಗಡಿ ಪಿಎಸೈ ಧರ್ಮೇಗೌಡ ಭೇಟಿ ನೀಡಿ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ರೈತರ ಬೆಳೆ ಕದ್ದು ಜೇಬು ತುಂಬಿಸಿಕೊಂಡು ಮೋಜು ಮಸ್ತಿ ಮಾಡುತ್ತಿದ್ದ ಖದೀಮರಿಗೆ ತಕ್ಕ ಶಿಕ್ಷೆಯಾಗಬೇಕೆಂದು ರೈತರು ಆಗ್ರಹಿಸಿದ್ದಾರೆ.












Click it and Unblock the Notifications