ನಂಜನಗೂಡು: ಸಕ್ಕರೆ ಕಾರ್ಖಾನೆ ವಿರುದ್ಧ ರೈತರು ಕೆಂಡಮಂಡಲ
ಮೈಸೂರು, ಜನವರಿ,13: ಸಕ್ಕರೆ ಕಾರ್ಖಾನೆಗಳ ವಿರುದ್ಧ ಸಿಡಿದೆದ್ದಿರುವ ಕಬ್ಬು ಬೆಳೆಗಾರರು ನಂಜನಗೂಡು ತಾಲೂಕಿನ ಅಳಗಂಚಿ ಗ್ರಾಮದಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ಕಬ್ಬು ಬೆಳೆಗಾರರ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವ ವಹಿಸಿದ್ದರು.
ಸರ್ಕಾರ ಕಬ್ಬು ಸರಬರಾಜು ಮಾಡಿದ ರೈತರಿಗೆ ಟನ್ ಗೆ 2469 ರೂ.ಗಳನ್ನು ನೀಡಬೇಕೆಂದು ಸರ್ಕಾರ ನಿಗದಿ ಮಾಡಿತ್ತು. ಆದರೆ ಸರ್ಕಾರದ ಆದೇಶವಿದ್ದರೂ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ರೈತರಿಗೆ ಕೇವಲ 2 ಸಾವಿರ ರೂ ನೀಡಿ ಬಾಕಿ ಹಣ ನೀಡದೇ ವಂಚನೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಕೈಗೊಂಡಿದ್ದರು.[ಕರ್ನಾಟಕದಲ್ಲಿ ರೈತರ ಸಾವಿಗೆ ಕಾರಣವೇನು? ಇಲ್ಲಿದೆ ಉತ್ತರ]

ರಾಜ್ಯ ಕಬ್ಬು ಬೆಳೆಗಾರರ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, 'ಸಕ್ಕರೆ ಕಾರ್ಖಾನೆ ಕೇವಲ ಸಕ್ಕರೆಯನ್ನು ಮಾತ್ರ ಉತ್ಪಾದನೆ ಮಾಡುತ್ತಿಲ್ಲ. ಜತೆಗೆ ಕಬ್ಬಿನ ಸಿಪ್ಪೆ, ಮೊಲಾಸಿಸ್, ಎಥಿನಾಲ್, ಮಡ್ಡಿ ಉತ್ಪಾದನೆಯಾಗಿ ಅದಕ್ಕೂ ಬೆಲೆ ದೊರೆಯುತ್ತಿದೆ. ಆದರೆ ರೈತರಿಗೆ ಮಾತ್ರ ಟನ್ ಕಬ್ಬಿಗೆ ಕೇವಲ 2 ಸಾವಿರ ನೀಡುತ್ತಿದ್ದಾರೆ' ಎಂದು ಆರೋಪಿಸಿದರು.
ರೈತರಿಗೆ ಬ್ಯಾಂಕ್ನಲ್ಲಿ ಅಸಲು ಹಣಕ್ಕೆ ಬಡ್ಡಿ ರೂಪದಲ್ಲಿ ಮನೆ, ಜಮೀನು, ಮುಂತಾದವುದನ್ನು ಜಪ್ತಿಮಾಡಬೇಕು. ಈ ಸಕ್ಕರೆ ಕಾರ್ಖಾನೆ ಮಾಲೀಕರಿಗೂ ರೈತರಿಗೆ ಬರಬೇಕಾದ ಹಣಕ್ಕೆ ಸಕ್ಕರೆ ದಾಸ್ತಾನು ಜಪ್ತಿ ಮಾಡಿ, ಸರ್ಕಾರ ಕಾನೂನು ಕ್ರಮ ಜರುಗಿಸಬೇಕು. ಮಟ್ಟುಗೋಲು ಹಾಕಿ, ಕ್ರಿಮಿನಲ್ ಮೊಖದ್ದಮೆ, ದಾಖಲಿಸಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಈ ಭಾಗದ ಶಾಸಕರು, ಸಚಿವರು ತಮಗೇನು ಸಂಬಂಧವಿಲ್ಲದಂತೆ ತಟಸ್ಥರಾಗಿರುವುದು ರೈತರಿಗೆ ಮಾಡುತ್ತಿರುವ ವಂಚನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.[ಇಳಿವಯಸ್ಸೇ ತಲೆತಗ್ಗಿಸುತ್ತೆ ಕಬ್ಬಿನ ಜೂಸ್ ಮಾಮನ ಎದುರು]
ಸ್ಥಳಕ್ಕೆ ಆಗಮಿಸಿದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಆಡಳಿತಾಧಿಕಾರಿ ವೇಲುಸ್ವಾಮಿ ನನಗೆ ಕೇವಲ 2 ವಾರ ಕಾಲಾವಕಾಶ ನೀಡಿ, ನಿಮಗೆ ದೊರಕಿಸಿ ಕೊಡುವುದಾಗಿ ಲಿಖಿತ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಗಿದೆ.











Click it and Unblock the Notifications