ಕಲ್ಲು ಭೂಮಿಯಲ್ಲಿ ಅಂಜದೆ ಅಂಜೂರ ಬೆಳೆದ ಕೊಪ್ಪಳ ರೈತ!
ಕೊಪ್ಪಳ, ಮೇ 30 : ಕೊಪ್ಪಳ ಜಿಲ್ಲೆ 'ಭತ್ತದ ಕಣಜ' ಎಂದೇ ಖ್ಯಾತಿಗಳಿಸಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ರೈತರು ಲಾಭವನ್ನು ಗಳಿಸುತ್ತಿದ್ದಾರೆ. ಬಂಜರು ಜಮೀನಿನಲ್ಲಿ ಅಂಜೂರ ಬೆಳೆದು ಪದವೀಧರ ಕೃಷಿಕರೊಬ್ಬರು ಇತರರಿಗೆ ಮಾದರಿಯಾಗಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಭತ್ತದ ಕೃಷಿ ಲಾಭದಾಯಕವಾಗಿಲ್ಲ ಎಂಬುದು ರೈತರ ಅಭಿಪ್ರಾಯ. ಭತ್ತ ಬೆಳೆಯುತ್ತಿದ್ದ ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಆರಂಭಿಸಿ ಲಾಭದ ಜೊತೆಗೆ ನೆಮ್ಮದಿ ಪಡೆಯುತ್ತಿದ್ದಾರೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಮಾವನ್ನು ಬೆಳೆಯಲಾಗುತ್ತಿದೆ. ಕನಕಗಿರಿ ಹೋಬಳಿಯಲ್ಲಿ ಮಾವು, ಪೇರಲೆ ಬೆಳೆಯಲಾಗಿದೆ. ಬರದ ನಾಡಿನ ಹಣ್ಣು ಎಂದೇ ಪ್ರಸಿದ್ಧಿಯಾದ ಅಂಜೂರ ಬೆಳೆಯನ್ನು ಜಿಲ್ಲೆಯಲ್ಲಿ ಬೆಳೆಯಲಾಗಿದೆ.
ಕನಕಗಿರಿ ಹೋಬಳಿಯ ಬಂಕಾಪೂರ ಗ್ರಾಮದ ಕೃಷಿಕ ರಾಜಶೇಖರ ಪಾಟೀಲ್ ಹೊಸಳ್ಳಿ ಅಂಜೂರ ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ. ಇವರು ಒಬ್ಬ ಪದವೀಧರರಾಗಿದ್ದು ಕೃಷಿಯ ಜೊತೆ ವ್ಯಾಪಾರದಲ್ಲಿಯೂ ತೊಡಗಿಕೊಂಡಿದ್ದಾರೆ.

ಕಲ್ಲು ಭೂಮಿಯಲ್ಲಿ ಅಂಜೂರ
ರಾಜಶೇಖರ ಪಾಟೀಲ್ ಹೊಸಳ್ಳಿ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಲಬ ಹೊಂದಿದ್ದರು. ಫಲವತ್ತಾದ ಭೂಮಿ ಇಲ್ಲದಿದ್ದರೂ ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಭೇಟಿ ಮಾಡಿ ಸಲಹೆ ಕೇಳಿದರು. ಬಂಜರು ಭೂಮಿಗೆ ಅಂಜೂರ, ಪೇರಲೆ ಸೂಕ್ತ ಎಂದು ಸಲಹೆ ನೀಡಿದರು. ರಾಜಶೇಖರ ಮತ್ತು ಅವರ ಮಗ ಶಂಕರ ಕಲ್ಲು ಬಂಡೆಗಳನ್ನು ತೆರವುಗೊಳಿಸಿ ಕೊಳವೆ ಬಾವಿ ಕೊರೆಸಿ ನೀರಿನ ಸೌಲಭ್ಯ ಮಾಡಿದರು.

ವೈಜ್ಞಾನಿಕ ಕ್ರಮದಲ್ಲಿ ಬೇಸಾಯ
ತೋಟಗಾರಿಕೆ ಇಲಾಖೆಯಿಂದ ವೈಜ್ಞಾನಿಕವಾಗಿ ಅಂಜೂರ ಬೆಳೆಯಲು ಮಾರ್ಗದರ್ಶನ ಪಡೆದರು. ಜೂನ್ 2019ರಲ್ಲಿ ಡಯಾನ ಅಂಜೂರ ತಳಿ ತರಿಸಿ 6*6 ಅಂತರದಲ್ಲಿ ನಾಟಿ ಮಾಡಿ ಸಾಕಷ್ಟು ಕೊಟ್ಟಿಗೆ ಗೊಬ್ಬರ, ಜೈವಿಕ ಗೊಬ್ಬರಗಳನ್ನು ಬಳಸಿ ಹನಿ ನೀರಾವರಿ ಅಳವಡಿಸಿದರು. ಗಿಡಗಳನ್ನು ಉತ್ತಮವಾಗಿ ಪೋಷಿಸಿದರು. ಫೆಬ್ರವರಿ 2020ದಲ್ಲಿ ಹಣ್ಣುಗಳ ಇಳುವರಿ ಆರಂಭವಾಯಿತು. ಆರಂಭದಲ್ಲಿ 1 ರಿಂದ 2 ಕ್ವಿಂಟಾಲ್ ಇಳುವರಿ ಬಂತು.

ಸ್ಥಳೀಯ ಮಾರುಕಟ್ಟೆಯಲ್ಲಿ ವ್ಯಾಪಾರ
ಮೊದಲು ಸ್ಥಳೀಯ ಮಾರುಕಟ್ಟೆಯಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದರು. ಈಗ ಇಲಾಖೆಯ ಅಧಿಕಾರಿಗಳ ಸಹಾಯದಿಂದ ಕೊಪ್ಪಳ, ರಾಯಚೂರು, ಗದಗ ಜಿಲ್ಲೆವರೆಗೂ ಹಣ್ಣುಗಳನ್ನು ತಲುಪಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರು, ಹೈದರಾಬಾದ್ ತನಕ ಕಳುಹಿಸುವ ಆಲೋಚನೆಯನ್ನು ಹೊಂದಿದ್ದಾರೆ. 10 ಎಕರೆ ಜಾಗದಲ್ಲಿ ಗೋಡಂಬಿ ಬೆಳೆಯುವ ಆಲೋಚನೆಯನ್ನು ಹಾಕಿಕೊಂಡಿದ್ದಾರೆ.

ಕಲ್ಲು ಭೂಮಿಯಲ್ಲಿ ಒಳ್ಳೆ ಬೆಳೆ
'ಕಲ್ಲಿನಿಂದ ಕೂಡಿದ್ದ ಬಂಜರು ಭೂಮಿಯಲ್ಲಿ ಅಂಜೂರ ಬೆಳೆದು ಉತ್ತಮ ಫಸಲು ಪಡೆದಿದ್ದಾರೆ. ರೈತ ರಾಜಶೇಖರ ಪಾಟೀಲ್ ಹೊಸಳ್ಳಿ ಇತರರಿಗೂ ಮಾದರಿ" ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಿವಯೋಗಪ್ಪ ಹೇಳಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕೃಷಿಕ ರಾಜಶೇಖರ ಪಾಟೀಲ್ 9448373695, ಗಂಗಾವತಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು 9743518608ರನ್ನು ಸಂಪರ್ಕಿಸಬಹುದು.












Click it and Unblock the Notifications