ಬಿಎಸ್ವೈ, ಸಿದ್ದು ನಡುವೆ ಸದನದಲ್ಲಿ ಮಾತಿನ ಕದನ!
ಬೆಳಗಾವಿ, ನ. 27 : ಕಬ್ಬಿನ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಪತ್ರಿಭಟನೆ ನಡೆಸುತ್ತಿದ್ದ ರೈತ ಸಾವನ್ನಪ್ಪಿರುವ ಪ್ರಕರಣ ಸದನದಲ್ಲಿ ಭಾರೀ ಕೋಲಾಹಲಕ್ಕೆ ಕಾರವಾಯಿತು. ಆಡಳಿತ ಮತ್ತು ಪ್ರತಿಕ್ಷಗಳ ನಡುವಿನ ಕಿತ್ತಾಟದಿಂದ ಮೂರನೇ ದಿನದ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಬಿ.ಎಸ್.ಯಡಿಯೂರಪ್ಪ ನಡುವೆ ಸದನದಲ್ಲಿ ರೈತನ ಸಾವಿನ ಬಗ್ಗೆ ವಾಗ್ಯುದ್ಧ ನಡೆಯಿತು.
ಕೆಎಲ್ಇ ಆಸ್ಪತ್ರೆಗೆ ಭೇಟಿ ನೀಡಿ ನಂತರ ಸದನಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಘಟನೆಯ ವರದಿಯನ್ನು ಸನದಕ್ಕೆ ನೀಡಲು ಮುಂದಾದರು. ಆ ಸಮಯದಲ್ಲಿ ಪ್ರತಿಪಕ್ಷಗಳ ಸದಸ್ಯರು ಸಿಎಂಗೆ ಧಿಕ್ಕಾರ ಕೂಗಿದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿದರು. ಸಿದ್ದರಾಮಯ್ಯ ಅವರ ಸ್ಥಳಕ್ಕೆ ಧಾವಿಸಿದ ಅವರು, ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ. ತಮ್ಮ ಪಕ್ಷ ಮತ್ತು ಪ್ರತಿಪಕ್ಷದ ಯಾವ ಸಲಹೆಗಳನ್ನು ಕೇಳುತ್ತಿಲ್ಲ. ರೈತನ ಸಾವಿಗೆ ನೀವೇ ನೇರವಾದ ಹೊಣೆ ಎಂದು ಯಡಿಯೂರಪ್ಪ ಆರೋಪಿಸಿದರು. ಇದರಿಂದ ಕೆರಳಿದ ಸಿದ್ದರಾಮಯ್ಯ ನೀವು ಆಡಳಿತ ನಡೆಸಿದಾಗ ಮಾಡಿದ್ದು, ಏನೆಂದು ನಾವು ನೋಡಿದ್ದೇವೆ ಎಂದು ತಿರುಗೇಟು ನೀಡಿದರು. (ರೈತ ಆತ್ಮಹತ್ಯೆ : ಸರ್ಕಾರಕ್ಕೆ ಪ್ರತಿಪಕ್ಷಗಳ ಗುದ್ದು)
ರೈತರಿಗೆ ಸರಿಯಾದ ಬಿತ್ತನೆ ಬೀಜ ಮತ್ತು ಗೊಬ್ಬರ ಕೊಡಲಾಗದೆ, ಗೋಲಿಬಾರ್ ಮಾಡಿಸಿ ರೈತನನ್ನು ನೀವು ಕೊಂದು ಹಾಕಿದಿರಿ ಎಂದು ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದರು. ಇದರಿಂದ ಮಾಜಿ ಮತ್ತು ಹಾಲಿ ಸಿಎಂಗಳ ನಡುವಿನ ಸಮರ ತಾರಕಕ್ಕೇರಿತು. ಸಿದ್ದರಾಮಯ್ಯ ಬೆಂಬಲಕ್ಕೆ ಬಂದು ನಿಂತ ಸಚಿವರು, ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಲು ಆರಂಭಿಸಿದರು. (ಮೂರನೇ ದಿನದ ಕಲಾಪದ ಸ್ವಾರಸ್ಯಗಳು)
ಈ ಸಂದರ್ಭದಲ್ಲಿ ಸದನದಲ್ಲಿ ಶಾಂತಿ ಕಾಪಾಡಲು ಸ್ಪೀಕರ್ ಕಾಗೋಡು ತಿಮ್ಮಪ್ಪ ಮೃತ ರೈತನ ಆತ್ಮಕ್ಕೆ ಶಾಂತಿ ಕೋರಿ ಎಲ್ಲರೂ ಒಂದು ನಿಮಿಷ ಮೌನಾಚರಣೆ ಮಾಡೋಣ ಎಂಬ ಸೂಚನೆ ನೀಡಿದರು. ಮೌನಾಚರಣೆ ಮುಗಿಯುತ್ತಿದ್ದಂತೆ ಗಲಾಟೆ ಹೆಚ್ಚಾಗಿದ್ದರಿಂದ ಸದನವನ್ನು ಗುರುವಾರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಯಿತು.
ಹತ್ತು ಲಕ್ಷ ಪರಿಹಾರ : ಗಲಾಟೆ ನಡುವೆಯೇ ಸದನದಲ್ಲಿ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ ಮೃತ ರೈತನ ಕುಟುಂಬಕ್ಕೆ ಹತ್ತು ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದರು.












Click it and Unblock the Notifications