ಸಕ್ಕರೆನಾಡು ಮಂಡ್ಯದಲ್ಲಿ ಅದೃಷ್ಟದಂತಿದ್ದ ರೇಷ್ಮೆ ಕೃಷಿ ನೇಪಥ್ಯಕ್ಕೆ ಸರಿಯಲು ಕಾರಣವೇನು?
ಮಂಡ್ಯ, ಆಗಸ್ಟ್ 20: ಕಾಲ ಕಾಲಕ್ಕೆ ತಕ್ಕಂತೆ ಕೃಷಿ ಕ್ಷೇತ್ರಗಳಲ್ಲಿ ಬದಲಾವಣೆಗಳಾಗುವುದು ಸಹಜವೇ.. ಅದರಲ್ಲೂ ಇತ್ತೀಚೆಗಿನ ವರ್ಷಗಳಲ್ಲಿ ಕೃಷಿ ಮಾಡುವುದು ರೈತರಿಗೆ ಸುಲಭವಾಗಿ ಉಳಿದಿಲ್ಲ. ರಾಸಾಯನಿಕ ಗೊಬ್ಬರಗಳ ಬೆಲೆ ಏರಿಕೆ, ಕೂಲಿ ಕಾರ್ಮಿಕರ ಸಮಸ್ಯೆ, ರೋಗಬಾಧೆ, ವಾತಾವರಣದಲ್ಲಿನ ಏರುಪೇರು ಹೀಗೆ ಹತ್ತಾರು ಸಮಸ್ಯೆಗಳು ಇನ್ನಿಲ್ಲದಂತೆ ಕಾಡುತ್ತಿದೆ. ಹೀಗಾಗಿ ಬಹಳಷ್ಟು ರೈತರು ತರಕಾರಿ, ಆಹಾರ ಬೆಳೆಗಳಿಂದ ದೂರವಾಗಿ ವಾಣಿಜ್ಯ ಕೃಷಿಯತ್ತ ಗಮನಹರಿಸುತ್ತಿರುವುದು ಕಂಡು ಬರುತ್ತಿದೆ. ಆದರೆ ಅದು ಕೂಡ ಕೆಲವೊಮ್ಮೆ ರೈತರ ಕೈಹಿಡಿಯದೆ ಸಾಲಗಾರರನ್ನಾಗಿ ಮಾಡುತ್ತಿದೆ. ಹೀಗಾಗಿ ಬಹಳಷ್ಟು ರೈತರು ಹೊಸಬೆಳೆಗಳ ಅನ್ವೇಷಣೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕಾಣಿಸುತ್ತಿದೆ.
ಮಂಡ್ಯದಲ್ಲಿ ಒಂದು ಕಾಲದಲ್ಲಿ ಕೃಷಿಕರಿಗೆ ಆದಾಯ ತಂದುಕೊಡುತ್ತಿದ್ದ ರೇಷ್ಮೆ ಕೃಷಿ ನಿಧಾನವಾಗಿ ಜಿಲ್ಲೆಯಿಂದ ದೂರ ಸರಿಯುತ್ತಿರುವುದು ಇದೀಗ ಕಾಣಿಸುತ್ತಿದೆ. ಇಲ್ಲಿನ ರೈತರು ಭತ್ತ, ಕಬ್ಬು ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುತ್ತಿದ್ದರಲ್ಲದೆ ಅದರ ಜತೆಗೆ ರೇಷ್ಮೆ ಕೃಷಿ ಮಾಡಿ ಬದುಕು ಕಂಡು ಕೊಂಡಿದ್ದರು. ಇದರಿಂದ ಒಂದಷ್ಟು ಆದಾಯ ಪಡುತ್ತಿದ್ದರಾದರೂ ಇತ್ತೀಚೆಗಿನ ವರ್ಷಗಳಲ್ಲಿ ರೇಷ್ಮೆ ಕೃಷಿ ಮಾಡುವುದು ಬೆಳೆಗಾರರಿಗೆ ಕಷ್ಟವಾಗುತ್ತಿದೆ. ನಿರೀಕ್ಷಿತ ಆದಾಯವೂ ಬರುತ್ತಿಲ್ಲವಾದ್ದರಿಂದ ಅನಿವಾರ್ಯವಾಗಿ ಬೇರೆ ಬೆಳೆಯತ್ತ ಮನಸ್ಸು ಮಾಡಿರುವುದು ಗೋಚರಿಸಿದೆ.

ಹಾಗೆನೋಡಿದರೆ, ಮಂಡ್ಯ ಜಿಲ್ಲೆಯ ಪೈಕಿ ಕೆ.ಆರ್.ಪೇಟೆ ತಾಲೂಕು ರೇಷ್ಮೆ ಕೃಷಿಗೆ ಹೊಂದಿಕೊಳ್ಳುತ್ತಿದ್ದರಿಂದ ಮತ್ತು ಈ ತಾಲೂಕಿನ ಜನ ರೇಷ್ಮೆ ಕೃಷಿಯತ್ತ ಹೆಚ್ಚು ಒಲವು ಹೊಂದಿ ರೇಷ್ಮೆಯನ್ನು ಬೆಳೆಯುತ್ತಿದ್ದರು. ಹೀಗಾಗಿ ರೇಷ್ಮೆ ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಕೆ.ಆರ್.ಪೇಟೆಯಲ್ಲಿ ರೇಷ್ಮೆ ಬೆಳೆಯ ಬೇಸಾಯದ ಬಗ್ಗೆ ಸೂಕ್ತ ಮಾಹಿತಿ ಹಾಗೂ ತರಬೇತಿಯನ್ನು ನೀಡಲು ರೇಷ್ಮೆ ತರಬೇತಿ ಕಾಲೇಜು, ರೇಷ್ಮೆ ಚಾಕಿ ಚಾಕಾಣಿಕೆ ಕೇಂದ್ರ ಹಾಗೂ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಸ್ಥಾಪಿಸಲಾಗಿತ್ತು. ಅಷ್ಟೇ ಅಲ್ಲದೆ, ರೇಷ್ಮೆ ಬೇಸಾಯಕ್ಕೆ ಹಾಗೂ ರೇಷ್ಮೆ ಸಾಕಾಣಿಕೆ ಮಾಡುವ ಬೈವೋಲ್ಟೀನ್ ಬಿತ್ತನೆ ಗೂಡಿಗೆ ದಕ್ಷಿಣ ಭಾರತದಲ್ಲಿಯೇ ಕೆ.ಆರ್.ಪೇಟೆ ಹೆಸರುವಾಸಿಯಾಗಿತ್ತು.
ರೈತರು ರೇಷ್ಮೆಗೆ ಸಲಾಮ್ ಹೇಳಿದ್ದೇಕೆ?
ಅವತ್ತಿನ ದಿನಗಳಲ್ಲಿ ರೇಷ್ಮೆ ಗೂಡಿಗೆ ಹೆಚ್ಚಿನ ಬೇಡಿಕೆಯಿದ್ದುದರಿಂದ ಮತ್ತು ಉತ್ತಮ ದರ ದೊರೆಯುತ್ತಿದ್ದರಿಂದ ರೇಷ್ಮೆ ಕೃಷಿ ಮಾಡುತಿದ್ದ ರೈತರು ನೆಮ್ಮದಿಯಾಗಿಯೇ ಇದ್ದರು. ಆದರೆ ರೇಷ್ಮೆ ದರ ಕುಸಿತ ಬೆಳೆಗಾರರನ್ನು ಕಂಗೆಡಿಸಿತು. ಆದಾಯಕ್ಕಿಂತ ಖರ್ಚು ಹೆಚ್ಚಾಗ ತೊಡಗಿತು. ಜತೆಗೆ ರೇಷ್ಮೆಗೆ ಕಾಯಿಲೆಗಳು ತಗಲಾರಂಭಿಸಿತು. ಇದರೊಂದಿಗೆ ಹೆಣಗಾಡುವುದು ರೈತರಿಗೆ ಕಷ್ಟವಾಯಿತು. ಹೀಗಾಗಿಯೇ ಹೆಚ್ಚಿನ ರೈತರು ರೇಷ್ಮೆ ಕೃಷಿಗೆ ಸಲಾಮ್ ಹೊಡೆದು ಬೇರೆ ಬೆಳೆಯತ್ತ ಒಲವು ತೋರಿದ್ದರ ಪರಿಣಾಮವಾಗಿ ನೇಪಥ್ಯಕ್ಕೆ ಸರಿಯುವಂತಾಗಿದೆ.
ಕೆ.ಆರ್.ಪೇಟೆ ಕ್ಷೇತ್ರದ ಶಾಸಕರಾಗಿದ್ದ ವೇಳೆ ಮಾಜಿ ಸ್ಪೀಕರ್ ದಿವಂಗತ ಕೃಷ್ಣ ಅವರು ಅಂದಿನ ಮುಖ್ಯಮಂತ್ರಿಗಳಾದ ಎಸ್.ಆರ್.ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ರೇಷ್ಮೆ ಮತ್ತು ಪಶುಸಂಗೋಪನಾ ಖಾತೆಗಳ ಸಚಿವರಾಗಿದ್ದಾಗ ತಾಲೂಕಿನ ರೈತರಿಗೆ ಅನುಕೂಲವಾಗಲೆಂದು ಕೃಷ್ಣರಾಜಪೇಟೆ ಪಟ್ಟಣದ ಹೊರವಲಯದ ಚನ್ನರಾಯಪಟ್ಟಣ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಚಿಕ್ಕೋನಹಳ್ಳಿ ಬಳಿ ರೇಷ್ಮೆ ತರಬೇತಿ ಶಾಲೆಯನ್ನು ಸ್ಥಾಪಿಸಿದ್ದರು. ಆದರೆ ಇದು ಉಪಯೋಗಕ್ಕೆ ಬಾರದಂತಾಗಿದೆ.

ರೇಷ್ಮೆ ಮರು ಸ್ಥಾಪನೆ ಸಾಧ್ಯನಾ?
ಇನ್ನು ರೇಷ್ಮೆ ಬೆಳೆಯತ್ತ ರೈತರು ಹಿಂದೇಟು ಹಾಕಲು ಹತ್ತು ಹಲವು ಕಾರಣವಿದೆ ಅದು ಏನೆಂದರೆ ಕೆ.ಆರ್.ಪೇಟೆ ಪಟ್ಟಣದ ಮೈಸೂರು ರಸ್ತೆಯಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆಯಿದ್ದರೂ ಇಲ್ಲಿ ಯಾವುದೇ ರೀತಿಯ ಮಾರಾಟ, ವ್ಯವಹಾರ ನಡೆಯದ ಕಾರಣ ತಾವು ಬೆಳೆದ ರೇಷ್ಮೆಗೂಡನ್ನು ರೈತರು ಮಾರಾಟ ಮಾಡಲು ರಾಮನಗರಕ್ಕೆ ಹೋಗಬೇಕಾಗಿತ್ತು. ಅಲ್ಲಿ ದಳ್ಳಾಳಿ ಮತ್ತು ಮಧ್ಯವರ್ತಿಗಳ ಹಾವಳಿ ಹಾಗೂ ತೂಕದಲ್ಲಿ ಮೋಸ, ಉತ್ತಮ ದರ ನೀಡದೆ ವಂಚನೆ ಹೀಗೆ ಹತ್ತಾರು ಸಮಸ್ಯೆಗಳು ಅವರನ್ನು ಕಾಡುತ್ತಿದ್ದರಿಂದ ರೇಷ್ಮೆ ಕೃಷಿಯ ಸಹವಾಸವೇ ಬೇಡ ಎಂಬ ತೀರ್ಮಾನಕ್ಕೆ ಬಂದ ಹಲವು ರೈತರು ಮತ್ತೆ ಎಂದಿನಂತೆ ಭತ್ತ, ಕಬ್ಬು ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲಾರಂಭಿಸಿದರು.
ಸದ್ಯ ಜಿಲ್ಲೆಯಾದ್ಯಂತ ಅಡ್ಡಾಡಿದರೆ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡವರ ಸಂಖ್ಯೆ ವಿರಳವಾಗಿರುವುದು ಕಂಡು ಬರುತ್ತಿದೆ. ರಾಮನಗರಕ್ಕೆ ಹೊಂದಿಕೊಂಡಂತೆ ಇದ್ದರೂ ರೇಷ್ಮೆ ಕೃಷಿಯತ್ತ ಇತ್ತೀಚೆಗೆ ರೈತರು ಮುಂದಾಗುತ್ತಿರುವುದು ಕಾಣಿಸುತ್ತಿಲ್ಲ. ಇದಕ್ಕೆ ಕಾರಣಗಳು ಹಲವು ಇದ್ದರೂ ಅದನ್ನು ಸರಿಪಡಿಸಿ ರೈತರು ಮತ್ತೆ ರೇಷ್ಮೆ ಕೃಷಿಯತ್ತ ಆಸಕ್ತಿ ತಾಳುವಂತೆ ಮಾಡಬೇಕಿದೆ. ಆದರೆ ಅದು ಸಾಧ್ಯನಾ? ಎಂಬುದೇ ಪ್ರಶ್ನೆಯಾಗಿ ಉಳಿದಿದೆ.












Click it and Unblock the Notifications