ರೈತ ಚಳವಳಿಗಾಗಿ, ಕಾಳಜಿಯ ಮತ್ತು ಸೆಕ್ರೆಟೇರಿಯಲ್ ಜಾಬ್ ಮಾಡೋವ್ರೇ ಲೀಡರ್ಗಳಂತೆ!
ಯಾವುದೇ ಪ್ರಬಲವಾದ ಚಳವಳಿಗಳಲ್ಲಿ, ಮುಖಂಡರ ನೆರವಿಗೆ ಒಂದು ತಿಂಕ್ ಟ್ಯಾಂಕ್ ಇರುತ್ತದೆ. ಅಂಥೆಯೇ ನಾಯಕರ ಚಟುವಟಿಕೆಗಳಿಗೆ ನೆರವಾಗಲು ಒಂದು ಸೆಕ್ರೆಟೇರಿಯೇಟ್ ಕೂಡಾ. THINK TANK & ಸೆಕ್ರೆಟೇರಿಯೆಟ್ ಕೆಲಸ ಬಹಳ ಮುಖ್ಯ ಮತ್ತು ಜವಾಬ್ದಾರಿಯುತವಾದುದು. ಬಹಳ ಸೂಕ್ಷ್ಮವಾಗಿ ಕೆಲಸಗಳನ್ನು ನಿಭಾಯಿಸಬೇಕು. ಈ ಕೆಲಸಗಳಿಗೆ ಸಾಮಾನ್ಯವಾಗಿ ಸ್ವಯಂಸೇವಕರು ಮತ್ತು ವಿವಿಧ ಕ್ಷೇತ್ರಗಳ ಪ್ರಮುಖರು ತಮ್ಮ ಸೇವೆ ಒದಗಿಸುತ್ತಿರುತ್ತಾರೆ.
ಹಿಂದೆ ಕರ್ನಾಟಕ ರಾಜ್ಯ ರೈತ ಸಂಘದೊಟ್ಟಿಗೆ ಅನೇಕ ಮಹನೀಯರು ಈ ಕೆಲಸಗಳನ್ನು ಮಾಡುತ್ತಿದ್ದರು. ಖ್ಯಾತ ವಕೀಲರು ಚಿಂತಕರಾದ ಪ್ರೊ.ರವಿವರ್ಮಕುಮಾರ್, ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಕೆ.ಟಿ.ಶಿವಪ್ರಸಾದ್, ಚಿಂತಕ ಬರಹಗಾರರಾದ ಅಗ್ರಹಾರ ಕೃಷ್ಣಮೂರ್ತಿ, ಸಮಾಜಸೇವಕರಾದ ಡಾ.ಲಕ್ಷ್ಮೀಪತಿ ಬಾಬು ಹೀಗೆ ಹತ್ತಾರು ಮಂದಿ ರೈತ ಚಳವಳಿಯ ಭಾಗವಾಗಿಯೇ ತಮ್ಮ ಕೈಲಾದ ಸೇವೆ ಮಾಡಿದವರು.
ರೈತ ಮುಖಂಡರ ಆತ್ಮಾವಲೋಕನಕ್ಕೆ ಸಕಾಲ...
ಇವರು ಯಾರೂ ಎಂದಿಗೂ "ತಾನೇ ಚಳವಳಿ", "ತನ್ನಿಂದಲೇ ಚಳವಳಿ" ಎಂದು ಹೇಳಿಕೊಳ್ಳಲಿಲ್ಲ. ಬಿಡಿಬಿಡಿಯಾದ ಅವರ ಮಾತುಗಳಲ್ಲಿಯೂ ರೈತ ಚಳುವಳಿಯ ಬಗ್ಗೆ ಅಭಿಮಾನದ ಮತ್ತು ಚಿಕಿತ್ಸಕ ಮನೋಭಾವದಲ್ಲಿ ವಿಷಯಗಳನ್ನು ಹಂಚಿಕೊಂಡಿದ್ದಾರೆಯೇ ಹೊರತು ಎಂದೂ ತಾವೇ ರೈತ ನಾಯಕರೆಂದು ಹೇಳಿಕೊಂಡವರಲ್ಲ.
ಈಗೇಕೆ ಇದೆಲ್ಲಾ ಎಂಬ ಪ್ರಶ್ನೆ ಎಂದು ನಿಮಗನಿಸಬಹುದು. ಈಗ ಮಾತನಾಡಲೇಬೇಕಿದೆ. ಪ್ರಸ್ತುತ ರೈತ ಚಳವಳಿಯೊಟ್ಟಿಗೆ ಈ ಸೆಕ್ರೆಟೇರಿಯಲ್ ಕೆಲಸ ಮಾಡುವವರು ತಾವೇ ನಾಯಕರೆಂಬಂತೆ ಫೋಸು ಕೊಡುತ್ತಿದ್ದಾರೆ. ಮಾಧ್ಯಮಗಳಿಗೆ ಇದನ್ನು ಸೂಕ್ಷ್ಮವಾಗಿ ಗಮನಿಸುವಷ್ಟು ಪುರುಸೊತ್ತಿಲ್ಲ. ಅಥವಾ ಮೀಡಿಯಾಗಳಿಗೆ ಇದು ಈ ಕ್ಷಣಕ್ಕೆ ಮುಖ್ಯವಲ್ಲದ ವಿಷಯವಾಗಿರಬಹುದು. ಆದರೆ ಮುಂದಿನ ದಿನಗಳಲ್ಲಿ ಇದೊಂದು ಅಪಾಯಕಾರಿ ಬೆಳವಣಿಗೆ ಎಂಬುದನ್ನು ಊಹಿಸಿಕೊಳ್ಳುವ ವಿವೇಕ ಇರಲೇಬೇಕಾಗುತ್ತದೆ.
ಚಳವಳಿಗಳಲ್ಲಿ ಸೆಕ್ರೆಟೇರಿಯಲ್ ಕೆಲಸ ಎಂದರೇನು?
- ಚಳವಳಿಯ ಮುಖಂಡರ ಮಾತುಗಳಲ್ಲೇ ಸ್ಲೋಗನ್ ಆಯ್ದು ಪೋಸ್ಟರ್ ಮಾಡುವುದು.
- ಮೀಡಿಯಾಗಳಿಗೆ ಸುದ್ದಿ ತಲುಪಿಸುವುದು,
- ಬ್ಯಾನರ್, ಬ್ಯಾಕ್ ಡ್ರಾಪ್, ಪೋಸ್ಟರ್ಸ್, ಪ್ಲೆಕಾರ್ಟ್ಸ್, ಲೀಫ್ಲೆಟ್, ಬ್ರೋಚರ್ ಮುಂತಾಗಿ ಪ್ರಚಾರ ಸಾಮಗ್ರಿಗಳನ್ನು ತಯಾರಿಸುವುದು.
- ಸಮಾವೇಶಗಳಿಗೆ ಬೇಕಾದ ಅರೇಂಜ್ಮೆಂಟ್ಸ್ ನೋಡಿಕೊಳ್ಳುವುದು,
- ನಾಯಕರುಗಳನ್ನು ಆಹ್ವಾನಿಸುವುದು,
- ಅದಕ್ಕೆ ಬೇಕಾದ ಲಾಜಿಸ್ಟಿಕ್ಸ್ ಏರ್ಪಾಡು ಮಾಡುವುದು,
- ಚಳವಳಿಯ ಕಾರ್ಯಕರ್ತರಿಗೆ ಅಗತ್ಯವಿರುವ ತಾಂತ್ರಿಕ ಮಾಹಿತಿಯನ್ನು ಸುಲಭದಲ್ಲಿ ಅರ್ಥವಾಗುವ ರೀತಿಯಲ್ಲಿ ವಿವರಿಸುವುದು.
- ಅಗತ್ಯವೆಂದರೆ ಇಂಟರ್ನಲ್ ಸಭೆಗಳನ್ನುದ್ದೇಶಿಸಿ ಮಾತನಾಡಿ ಕೆಲವೊಂದು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಳ್ಳುವುದು. (ವಸ್ತು ವಿಷಯದ ಬಗ್ಗೆ ಪೂರ್ಣ ಅಧ್ಯಯನ ಮಾಡಿದ ನಂತರ).
ಹೀಗೆ ತೆರೆಯ ಹಿಂದೆ ಮಾಡಬಹುದಾದ ಕೆಲಸಗಳ ಜವಾಬ್ದಾರಿ ಈ ಸೆಕ್ರೆಟೇರಿಯೆಟ್ ಮಾಡಬೇಕು. ಆದರೆ ಪ್ರಸ್ತುತ ರೈತ ಚಳವಳಿಗೆ ಪೂರಕವಾಗಿ ಸೆಕ್ರೆಟೇರಿಯಲ್ ಕೆಲಸ ಮಾಡುವವರು ತಾವೇ ನಾಯಕರೆಂಬಂತೆ ಚರ್ಚಾ ಗೋಷ್ಟಿಗಳಲ್ಲಿ ಭಾಗವಹಿಸುವುದು, ಲೇಫ್ಲೆಟ್ ಬ್ರೋಚರ್ ಗಳಲ್ಲಿ ಹೆಸರು ಅಚ್ಚಾಕಿಸಿಕೊಳ್ಳುವುದು. ಚಳವಳಿಯ ಮುಖಂಡರುಗಳಿಗೇ ಗೈಡ್ (ಸಲಹೆ) ಮಾಡುವ ಮಾದರಿಯಲ್ಲಿ ಸಂದೇಶಗಳನ್ನು ರವಾನಿಸುವುದು, ತಾವಿಲ್ಲದಿದ್ದರೆ ರೈತ ಚಳವಳಿಯೇ ಇರುತ್ತಿರಲಿಲ್ಲ ಎಂದು ಕಿಚಾಯಿಸಿ ಮಾತನಾಡುವ ಕೆಲಸ ನಡೆಯುತ್ತಿದೆ.
ಇದರಿಂದ ರೈತ ಚಳುವಳಿಯ ಮುಖಂಡರು ಅರ್ಥ ಮಾಡಿಕೊಳ್ಳಬೇಕಾಗಿದ್ದಿಷ್ಟೇ. ಸೆಕ್ರೆಟೇರಿಯೆಟ್ ಮಾದರಿಯಲ್ಲಿ ಚಳವಳಿಗೆ ನೆರವಾಗುವ ಮಂದಿಯೇ ಮುಂದೆ ಬಂದು ನಿಂತಿರಬೇಕಾದರೆ ಅವರ ಉದ್ದೇಶವೇನು ಎಂಬುದನ್ನು ಅರಿಯಬೇಕು. ಇವರೇನು ಮಾಡಲು ಹೊರಟಿದ್ದಾರೆ ಎಂಬುದನ್ನು ಗ್ರಹಿಸಬೇಕು. ಇಲ್ಲದಿದ್ದಲ್ಲಿ ಮುಂದೊಂದು ದಿನ ರೈತ ಚಳವಳಿ ದೊಡ್ಡ ಬೆಲೆ ತೆರಬೇಕಾದೀತು, ಜೋಕೆ.