ಕೃಷಿ ಸುಧಾರಣೆ ಅವಶ್ಯಕ; ಕಾಯ್ದೆಗಳು ರೈತರಿಗೆ ಆಯ್ಕೆಯಾಗಲಿವೆ; ಮೋದಿ
ನವದೆಹಲಿ, ಫೆಬ್ರುವರಿ 10: ಕೃಷಿ ಸುಧಾರಣೆ ದೇಶಕ್ಕೆ ಅತ್ಯವಶ್ಯಕ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಈ ಹೊಸ ಕೃಷಿ ಕಾಯ್ದೆಗಳು ರೈತರಿಗೆ ಹೊಸ ಸವಾಲುಗಳನ್ನು ಎದುರಿಸಲು ಆಯ್ಕೆಯಾಗಲಿವೆ ಎಂದು ಕೃಷಿ ಕಾಯ್ದೆಗಳನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.
ಬುಧವಾರ ಲೋಕಸಭೆಯಲ್ಲಿ ಕೃಷಿ ಕಾಯ್ದೆಗಳ ಕುರಿತು ಪ್ರಸ್ತಾಪ ಮಾಡಿದ ಮೋದಿ, "ಕಾಯ್ದೆಗಳನ್ನು ಜಾರಿಗೊಳಿಸಿದ ನಂತರ ಮಂಡಿಗಳನ್ನು ಮುಚ್ಚುವುದಿಲ್ಲ ಹಾಗೂ ಕನಿಷ್ಠ ಬೆಂಬಲ ಬೆಲೆ ಮೇಲೂ ಯಾವುದೇ ಪರಿಣಾಮವಾಗುವುದಿಲ್ಲ. ಈ ಮೂರು ಕಾಯ್ದೆಗಳು ದೇಶದ ಕೃಷಿ ಕ್ಷೇತ್ರ ಸುಧಾರಣೆಗೆ ಸರ್ಕಾರದ ಪ್ರಾಮಾಣಿಕ ಪ್ರಯತ್ನವಾಗಿವೆ" ಎಂದು ಭರವಸೆ ನೀಡಿದ್ದಾರೆ.
ಕೃಷಿ ಕ್ಷೇತ್ರ ಬದಲಾಗುತ್ತಿದೆ. ಹೊಸ ಸವಾಲುಗಳೂ ಎದುರಾಗುತ್ತಿವೆ. ಈ ಸವಾಲುಗಳನ್ನು ಎದುರಿಸಲು ಪ್ರಯತ್ನ ಮಾಡಬೇಕಿದೆ. ಆದರೆ ವಿರೋಧ ಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿವೆ ಎಂದು ಆರೋಪಿಸಿದ್ದಾರೆ. ಹೋರಾಟನಿರತ ರೈತರ ಭಾವನೆಗಳನ್ನು ಸರ್ಕಾರ ಗೌರವಿಸುತ್ತದೆ. ಆದ್ದರಿಂದಲೇ ಕೃಷಿ ಸಚಿವರು ರೈತರೊಂದಿಗೆ ಸರಣಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ ಕೃಷಿ ಕಾಯ್ದೆಗಳ ಕುರಿತು ಮೋದಿ ಮಾತು ಶುರು ಮಾಡುತ್ತಿದ್ದಂತೆಯೇ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದ ಪ್ರಸಂಗವೂ ನಡೆಯಿತು. ಪದೇ ಪದೇ ಮೋದಿ ಮಾತಿಗೆ ಅಡ್ಡಿಪಡಿಸುತ್ತಿದ್ದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕುರಿತು ಮಾತನಾಡಿ, "ಅಧೀರ್ ರಂಜನ್ ಜೀ, ಇದು ಹೆಚ್ಚೆನಿಸುತ್ತಿದೆ. ನಾನು ನಿಮ್ಮನ್ನು ಗೌರವಿಸುತ್ತೇನೆ. ಬಂಗಾಳದಲ್ಲಿ ನಿಮಗೆ ಟಿಎಂಸಿಗಿಂತ ಹೆಚ್ಚಿನ ಪ್ರಚಾರ ಸಿಗುತ್ತದೆ ಯೋಚಿಸಬೇಡಿ. ಏಕೆ ಹೀಗೆ ಮಾಡುತ್ತಿದ್ದೀರ" ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.












Click it and Unblock the Notifications