ಕೇಂದ್ರ ಕೃಷಿ ಸಚಿವಾಲಯಕ್ಕೆ ಗುಟುರು ಹಾಕಿದ ಪಂಜಾಬ್ ರೈತರು
ನಾನು 'ಸತ್ತಂಗೆ ಮಾಡ್ತೀನಿ-ನೀನು ಅತ್ತಂಗೆ ಮಾಡು' ಎಂಬ ಸವಕಲು ಮಾತೊಂದಿದೆ. ಕಣ್ಣೊರೆಸುವ ತಂತ್ರಗಳಿಗೆ ಹೀಗೆ ಹೇಳವುದು ರೂಢಿ. ಇದೀಗ ನಿನ್ನೆ ಅಂಥದ್ದೇ ಒಂದು ಘಟನೆ ಕೇಂದ್ರ ಕೃಷಿ ಇಲಾಖೆ ಹಾಗೂ ಪಂಜಾಬ್ ರೈತರ ನಡುವೆ ನಡೆದಿದೆ.
ಹೊಸದಾಗಿ ಕೃಷಿ ಕ್ಷೇತ್ರದಲ್ಲಿ ತಂದಿರುವ ಕಾನೂನುಗಳ ವಿರುದ್ಧ ಕಳೆದ 12 ದಿನಗಳಿಂದ ನವದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ಪಂಜಾಬ್ ರೈತ ಸಂಘಟನೆಗಳ ಮುಖಂಡರನ್ನು ಕೇಂದ್ರ ಕೃಷಿ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಅಗರ್ ವಾಲ್ ನಿನ್ನೆ ಚರ್ಚೆಗೆ ಕರೆದಿದ್ದ ಹಿನ್ನೆಲೆಯಲ್ಲಿ, ನಿನ್ನೆ ರೈತ ಮುಖಂಡರು ಆ ಸಭೆಯಲ್ಲಿ ಭಾಗವಹಿಸಿದ್ದರಾದರೂ ಸಭೆಯನ್ನು ಬಹಿಷ್ಕರಿಸಿ ವಾಪಸ್ ಬಂದಿರುವ ಘಟನೆ ನಡೆದಿದೆ.
ಇದಕ್ಕೆ ಕಾರಣ ಸರ್ಕಾರದ ಕಾರ್ಯದರ್ಶಿ ತಾವು ರೈತರ ಸಮಸ್ಯೆಗಳನ್ನು ಪರಿಹಸುವ ನಿಟ್ಟಿನಲ್ಲಿ ಮುಂದುವರೆದಿದ್ದೇವೆ ಎಂದು ಸುಖಾಸುಮ್ಮನೆ ರೈತರಿಗೇ ತಿರುಚಿ ಹೇಳುವ ಪ್ರಯತ್ನ ಮಾಡಿದ ಕಾರಣ ರೈತ ಮುಖಂಡರು ಸಭೆಯಿಂದ ಹೊರನಡೆದಿದ್ದಾರೆ.

ಇತ್ತ ಕೃಷಿ ಇಲಾಖೆ ಕಾರ್ಯದರ್ಶಿ ನಮ್ಮನ್ನುದ್ದೇಶಿಸಿ ದೆಹಲಿಯ ಕೃಷಿ ಭವನದಲ್ಲಿ ಮಾತನಾಡುತ್ತಿದ್ದರೆ ಅತ್ತ ಪಂಜಾಬ್ ನಲ್ಲಿ ಕೇಂದ್ರದ ಕೃಷಿ ಸಚಿವರೂ ಸೇರಿದಂತೆ ಒಂಬತ್ತು ಸಚಿವರನ್ನೊಳಗೊಂಡ ತಂಡ ಜಿಲ್ಲಾವಾರು ಸಭೆಗಳನ್ನು ನಡೆಸಿ ತಾವು ಹೊಸದಾಗಿ ತಂದಿರುವ ಕಾಯಿದೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂಬುದಾಗಿ ರೈತರ ಮನವೊಲಿಸುವ ಪ್ರಯತ್ನದಲ್ಲಿ ತೊಡಗಿದ್ದರು.
ಹಾಗಾದರೆ ನಮ್ಮನ್ನು ಕೃಷಿ ಇಲಾಖೆ ಕಾರ್ಯದರ್ಶಿಗಳು ಕರೆದು ಮಾತನಾಡಲು ಮುಂದಾದ ಉದ್ದೇಶ ಏನು ಎಂದು ಬಲಬೀರ್ ಸಿಂಗ್ ರಾಜೇವಾಲ್ ಪ್ರಶ್ನಿಸಿದ್ದಾರೆ.

ಆಲ್ ಇಂಡಿಯಾ ಕಿಸಾನ್ ಸಂಘರ್ಷ್ ಕೋ-ಆರ್ಡಿನೇಷನ್ ಕಮಿಟಿ, ದೇಶದ ಸುಮಾರು 200 ರೈತ ಸಂಘಗಗಳನ್ನೊಳಗೊಂಡ ಒಕ್ಕೂಟ- ಈ ಮೂರೂ ರೈತ ವಿರೋಧಿ ಕಾನೂನುಗಳ ವಿರುದ್ಧ ಹೋರಾಟವನ್ನು ತೀವ್ರಗೊಳಿಸುವುದಾಗಿ ಹೇಳಿದೆ.
ಕೇಂದ್ರ ಕೃಷಿ ಇಲಾಖೆ ಕಾರ್ಯದರ್ಶಿ ನಮ್ಮನ್ನುದ್ದೇಶಿಸಿ ಮಾತನಾಡಲು ಕರೆಸಿರುವುದು ಪತ್ರಿಕೆಗಳಲ್ಲಿ ಸುದ್ದಿ ಮಾಡಿಸಲೇ ಹೊರತು, ನಮ್ಮ ಸಮಸ್ಯೆಗಳನ್ನು ಬಗೆಹರಿಸುವುದಿಕ್ಕೆ ಅಲ್ಲ ಎಂದು ಗುಡುಗಿದೆ. ಜೊತೆಗೆ "ಈ ಕೂಡಲೇ ಮೂರು ಕಾನೂನುಗಳನ್ನು ಮರುಪರಿಶೀಲಿಸಬೇಕು ಮತ್ತು ರೈತರ ಬೆಳೆಗಳಿಗೆ ನೀಡುವ ಬೆಂಬಲ ಬೆಲೆಗೆ ಕಾನೂನಾತ್ಮಕ ಬೆಂಬಲ ಬೇಕು" ಎಂದು ಒತ್ತಾಯಿಸಿವೆ.
ಈ ಸರ್ಕಾರಕ್ಕೆ ರೈತರ ಹಿತಾಸಕ್ತಿ ನಿಜವಾಗಲೂ ಇದ್ದಲ್ಲಿ ಕೇಂದ್ರ ಕೃಷಿ ಸಚಿವರು ದೇಶದ ರೈತರ (ರೈತ ಸಂಘಟನೆಗಳ) ಸಭೆ ಕರೆದು ಮಾತನಾಡಲಿ ಎಂದು ಒಕ್ಕೂಟ ಆಗ್ರಹಿಸಿದೆ.











Click it and Unblock the Notifications