ಸಾಂಕ್ರಾಮಿಕದ ನಡುವೆಯೂ ಕೃಷಿ ಉತ್ಪನ್ನಗಳ ರಫ್ತು ಹೆಚ್ಚಳ
ದೇಶದಲ್ಲಿ ಕೋವಿಡ್ ಸಾಂಕ್ರಾಮಿಕದ ಸಂಕಷ್ಟವಿದೆ. ದಿಲ್ಲಿಯಲ್ಲಿ ರೈತರು ಕಳೆದ 148 ದಿನಗಳಿಂದ ಚಳವಳಿಯಲ್ಲಿ ನಿರತರಾಗಿದ್ದಾರೆ. ಏತನ್ಮಧ್ಯೆ ರೈತರು ತಮ್ಮ ಕೃಷಿ ಕಾಯಕವನ್ನು ಕಿಂಚಿತ್ತೂ ಕೈಬಿಟ್ಟಿಲ್ಲ. ಬದಲಿಗೆ ಇನ್ನೂ ಹೆಚ್ಚಿನ ಕಾಳಜಿಯಿಂದ ಉತ್ಪಾದನೆ ಮಾಡಿದ್ದಾರೆ ಎಂಬುದಕ್ಕೆ ಈ ವರ್ಷ ಕೃಷಿ ಉತ್ಪನ್ನಗಳ ರಫ್ತಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿರುವುದೇ ಸಾಕ್ಷಿ.
ನಿನ್ನೆಯಷ್ಟೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳನ್ನೊಮ್ಮೆ ಗಮನಿಸಿದಾಗ "ರಾಜ್ಯಗಳಳಿಯಲಿ ರಾಜ್ಯಗಳುದಿಸಲಿ ಬಿತ್ತುಳುವುದವನವ ಬಿಡುವುದೇ ಇಲ್ಲ" ಎಂಬ ಕವಿ ಸಾಲು ನೆನಪಿಗೆ ಬಾರದಿರದು.
ಕಳೆದ ಅನೇಕ ವರ್ಷಗಳಿಂದ ಭಾರತ ಕೃಷಿ ಉತ್ಪನ್ನಗಳನ್ನು ಹೆಚ್ಚುವರಿಯಾಗಿ ಉತ್ಪಾದಿಸುತ್ತಿದೆ. 2019-20ರ ಅವಧಿಯಲ್ಲಿ ಭಾರತದ ಕೃಷಿ ಉತ್ಪನ್ನಗಳ ರಫ್ತು ಮೊತ್ತ 2.52 ಲಕ್ಷ ಕೋಟಿ ರೂಪಾಯಿಗಳ ಮೊತ್ತದಷ್ಟು. ಆಮದು ಮೊತ್ತ 1.47 ಲಕ್ಷ ಕೋಟಿ ರೂಗಳಷ್ಟಿತ್ತು. ಆದರೆ ಈ ಬಾರಿ ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿಯೂ ವಿಶ್ವದ ಆಹಾರ ಸರಪಳಿಗೆ ಕಿಂಚಿತ್ತೂ ಬಾಧೆಯಾಗದಂತೆ ರೈತರು ಉತ್ಪಾದಿಸಿದ್ದಾರೆ. ಏಪ್ರಿಲ್ 2020 ರಿಂದ ಫೆಬ್ರವರಿ 2021ರ ಅವಧಿಯಲ್ಲಿ 2.74 ಲಕ್ಷ ಕೋಟಿ ರೂಪಾಯಿ ಮೊತ್ತದ ರಫ್ತು ಮಾಡಿರುವ ಭಾರತ ಕಳೆದ ವರ್ಷ ಇದೇ ಅವಧಿಯಲ್ಲಿ 2.31 ಲಕ್ಷ ಕೋಟಿ ಮೊತ್ತದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿತ್ತು. ಈ ಬಾರಿ ಶೇಕಡಾ 18.49 ರಷ್ಟು ಹೆಚ್ಚುವರಿ ರಫ್ತು ಮಾಡಲಾಗಿದೆ.

ಈ ಬಾರಿ ಹೆಚ್ಚಿನ ರಫ್ತಾಗಿದ್ದು ಗೋಧಿ, ಇತರೆ ಧಾನ್ಯಗಳು, ಅಕ್ಕಿ (ಬಾಸುಮತಿ ಹೊರತುಪಡಿಸಿ), ಸೋಯಾ, ಸಾಂಬಾರು ಪದಾರ್ಥಗಳು, ಸಕ್ಕರೆ, ಹತ್ತಿ, ತಾಜಾ ತರಕಾರಿಗಳು, ಸಂಸ್ಕರಿತ ತರಕಾರಿಗಳು ಮತ್ತು ಆಲ್ಕೋಹಾಲಿಕ್ ಬಿವರೇಜಸ್ ಮುಂತಾದವು.
ಗೋಧಿ ಮತ್ತು ಧಾನ್ಯಗಳ ರಫ್ತು ಗಣನೀಯವಾಗಿ ಹೆಚ್ಚಳವಾಗಿದೆ. ಗೋಧಿ 425 ಕೋಟಿಯಿಂದ 3283 ಕೋಟಿ ರೂ ಹೆಚ್ಚಳವಾಗಿದ್ದರೆ ಇತರೆ ಧಾನ್ಯಗಳು 1318 ಕೋಟಿಯಿಂದ 4542 ಕೋಟಿ ಹೆಚ್ಚಳವಾಗಿದೆ. ಒಟ್ಟಾರೆ ಗೋಧಿ ರಫ್ತಿನಲ್ಲಿ ಭಾರತವು ಶೇಕಡಾ 727ರಷ್ಟು ಹೆಚ್ಚಿನ ರಫ್ತು ದಾಖಲೆ ಬರೆದಿದೆ.

ಅದೇ ರೀತಿ ಬಾಸುಮತಿ ಹೊರತುಪಡಿಸಿ ಇತರೆ ಅಕ್ಕಿಯ ರಫ್ತು ಶೇಕಡಾ 132 ರಷ್ಟು ಹೆಚ್ಚಳ ಕಂಡಿದೆ. 2019-20ರಲ್ಲಿ 13,030 ಕೋಟಿ ರೂಗಳಷ್ಟಿದ್ದದ್ದು 2020-21ರ ಅವಧಿಯಲ್ಲಿ 30,277 ರೂಗಳಷ್ಟು ಪ್ರಮಾಣದ ಹೆಚ್ಚಳವಾಗಿದೆ.
ಜೈಹೋ... ರೈತ...












Click it and Unblock the Notifications