ಒತ್ತಡದ ಭಾರಕ್ಕೆ ಕುಸಿಯುತ್ತಿರುವ ಕುಮಾರಸ್ವಾಮಿ, ವಿರೋಧಿಗಳಿಗೆ ಕೈಯಾರೆ ಕೋಲು ಕೊಟ್ಟರೆ!

ಮೈತ್ರಿ ಸರಕಾರದ ನೇತೃತ್ವ ವಹಿಸಿದರೆ ಏನಾಗಬಹುದು ಎಂದು ಕಾಂಗ್ರೆಸ್ ಅಂದಾಜಿಸಿತ್ತೋ ಕರ್ನಾಟಕದಲ್ಲಿ ಅದೇ ರೀತಿ ಸನ್ನಿವೇಶ ಸೃಷ್ಟಿ ಆಗುತ್ತಿದೆ. ಐದಾರು ತಿಂಗಳ ಅವಧಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವರ್ಚಸ್ಸು ಕುಂದುತ್ತಿರುವಂತೆ ಗೋಚರ ಆಗುತ್ತಿದೆ. ಇದನ್ನೇ ಬೇಕಾದರೆ ಕುಮಾರಸ್ವಾಮಿ ಅವರ ಸಹನೆ-ಸಂಯಮ ಮುಗಿಯುತ್ತಿದೆ ಅಂತಲೂ ಹೇಳಬಹುದು.

ಇಂದಿನ ರೈತರ ಪ್ರತಿಭಟನೆಯು ಅದೇ ಎಪಿಸೋಡಿನ ಮುಂದುವರಿದ ಭಾಗ. "ನಾನು ಈಗಿನ್ನೂ ಅಧಿಕಾರಕ್ಕೆ ಬಂದು ಐದು ತಿಂಗಳಾಗಿದೆ. ಅಷ್ಟರಲ್ಲಿ ನಾಲಾಯಕ್ ಮುಖ್ಯಮಂತ್ರಿ, ಸಮಸ್ಯೆ ಪರಿಹರಿಸಲಿಲ್ಲ ಅಂತಿದ್ದಾರೆ. ಹಾಗಿದ್ದರೆ ಇದಕ್ಕೂ ಮುನ್ನ ನಾಲ್ಕು ವರ್ಷ ಎಲ್ಲಿ ಮಲಗಿದ್ದರು?" ಎಂಬ ಅವರ ಹೇಳಿಕೆ ಭವಿಷ್ಯದಲ್ಲೂ ಉಲ್ಟಾ ಹೊಡೆಯುವುದರಲ್ಲಿ ಅನುಮಾನ ಇಲ್ಲ.

ಅದು ಬಸ್ ನಲ್ಲಿ ನಿಮ್ಮ ಸ್ಟಾಪ್ ಬಂದ ನಂತರವೂ ಇಳಿಯದೆ ಇದ್ದು, ಆ ನಂತರ ಕಂಡಕ್ಟರ್ ಬಳಿ ಹೋಗಿ, ಅಯ್ಯೋ ನಾನು ಅಲ್ಲೇ ಇಳಿಯಬೇಕಿತ್ತು ಅಂತ ಹೇಳಿದರೆ, ತೀರಾ ಸಿಟ್ಟಿನ ಭರದಲ್ಲಿ, ಇಷ್ಟು ಕಾಲ ಎಲ್ಲಿ ಮಲಗಿದ್ದೆ ಅಂತ ಕೇಳುತ್ತಾರೆ. ಏನು ಮಲಗಿದ್ದರಾ ಎಂಬ ಪ್ರಶ್ನೆಯೇ ಬಹುತೇಕ ಸನ್ನಿವೇಶದಲ್ಲಿ ಬರುತ್ತದೆ.

ಕುಮಾರಸ್ವಾಮಿ ವಿಷಯದಲ್ಲೂ ಹಾಗೇ ಆಗಿದೆ. ಅವರೇನೋ ಸಿಟ್ಟಿನ ಭರದಲ್ಲಿ ಎಲ್ಲರಂತೆಯೇ, ಇಷ್ಟು ವರ್ಷ ಎಲ್ಲಿ ಮಲಗಿದ್ದಿರಿ ಎಂದಿದ್ದಾರೆ. ಆದರೆ ಅವರು ಪ್ರಶ್ನೆ ಮಾಡಿದ್ದು, ರೈತರನ್ನು. ಅದರಲ್ಲೂ ಮಹಿಳೆಯನ್ನು. ಮಿಸ್ ಫೈರ್ ಆಗಿದ್ದು ಇಲ್ಲೇ. ಆದ್ದರಿಂದ ವಿವಿಧ ವಲಯಗಳಿಂದ ಭಾರೀ ವಿರೋಧ-ಆಕ್ಷೇಪ ವ್ಯಕ್ತವಾಗುತ್ತಿದೆ.

ನಾವಂತೂ ಹಾಗಲ್ಲ ಎಂಬ ಉತ್ತರ ನೀಡಿದರು ಪರಂ

ನಾವಂತೂ ಹಾಗಲ್ಲ ಎಂಬ ಉತ್ತರ ನೀಡಿದರು ಪರಂ

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಈ ವಿವಾದಕ್ಕೆ ಸಂಬಂಧಿಸಿದಂತೆ ಬಹಳ ಆಸಕ್ತಿಕರವಾದ ಉತ್ತರ ನೀಡಿದ್ದಾರೆ. ರೈತರ ಪ್ರತಿಭಟನೆ ಎಂಬುದು ಬಿಜೆಪಿಯವರ ಚಿತಾವಣೆ. ಕಾಂಗ್ರೆಸ್ ಪಕ್ಷ ಯಾವತ್ತೂ ರೈತರ ಬಗ್ಗೆ ನಿರ್ಲಕ್ಷ್ಯವಾಗಿ ವರ್ತಿಸಲ್ಲ ಎಂದಿದ್ದಾರೆ. ಅಲ್ಲಿಗೆ ಜೆಡಿಎಸ್ ಗೂ ನಮಗೂ ಸಂಬಂಧವಿಲ್ಲ. ಮೈತ್ರಿ ಸರಕಾರದಲ್ಲೇ ಇದ್ದರೂ ಕುಮಾರಸ್ವಾಮಿ ಅವರಿಗೆ ಸರ್ಟಿಫಿಕೇಟ್ ನೀಡಿ, ಬೆನ್ನಿಗೆ ನಿಲ್ಲಲು ಸಾಧ್ಯವಿಲ್ಲ ಎಂಬ ಧೋರಣೆ ಇದು. ಈ ಬೆಳವಣಿಗೆಯಿಂದ ಮೈತ್ರಿ ಸರಕಾರಕ್ಕೆ ಮುಜುಗರ ಆಗಿದೆ ಎಂದು ವ್ಯಾಖ್ಯಾನ ಮಾಡಿದರೂ ದೊಡ್ಡ ಮಟ್ಟದಲ್ಲಿ ಹಾನಿ ಆಗಿರುವುದು ಜೆಡಿಎಸ್ ಗೆ ಹಾಗೂ ಕುಮಾರಸ್ವಾಮಿಗೆ ಅನ್ನೋದರಲ್ಲಿ ಅನುಮಾನವಿಲ್ಲ. ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ರೈತಪರ ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿದ್ದ ಅವರಿಗೆ ಒಂದಿಷ್ಟು ರೈತ ವರ್ಗದ ಬೆಂಬಲ ಸಿಕ್ಕಿತ್ತು. ಆದರೆ ಸಾಲ ಮನ್ನಾದ ವಿಚಾರದಲ್ಲಿನ ಗೊಂದಲ ಹಾಗೂ ಇತ್ತೀಚಿನ ಬೆಳವಣಿಗೆಗಳು ಉಲ್ಟಾ ಹೊಡೆದಿವೆ.

ದೇವೇಗೌಡರು, ರೇವಣ್ಣ ಅವರಿಂದಲೂ ಅಂಥದ್ದೇ ಹೇಳಿಕೆ

ದೇವೇಗೌಡರು, ರೇವಣ್ಣ ಅವರಿಂದಲೂ ಅಂಥದ್ದೇ ಹೇಳಿಕೆ

ಇನ್ನು ದೇವೇಗೌಡರು ಭಾನುವಾರದಂದು ಹುಬ್ಬಳ್ಳಿ ಮಾತನಾಡಿ, ಸಕ್ಕರೆ ಕಾರ್ಖಾನೆ ಮಾಲೀಕರನ್ನು ಶಾಸಕರನ್ನಾಗಿ ನೀವೇ ಆರಿಸಿದ್ದೀರಿ. ಅವರನ್ನು ಆರಿಸಿದ ತಪ್ಪಿಗೆ ಈ ಶಿಕ್ಷೆ ಅನುಭವಿಸಬೇಕಾಗಿದೆ ಎಂದು ಹೇಳಿದ್ದಾರೆ. ಅದಕ್ಕೂ ಒಂದು ದಿನ ಮೊದಲು, 'ಮನೆಯಂಗಳದಲ್ಲಿ ಮಾತುಕತೆ' ತಿಂಗಳ ಕಾರ್ಯಕ್ರಮದಲ್ಲಿ ಮಾತನಾಡಿದ್ದ ದೇವೇಗೌಡರು, ರೈತರ ಸಾಲ ಮನ್ನಾ ಮಾಡುವುದರಿಂದ ಏನು ಪ್ರಯೋಜನ ಇಲ್ಲ ಎಂದಿದ್ದರು. ಮುಖ್ಯಮಂತ್ರಿಗಳ ಸೋದರ- ಸಚಿವರಾದ ಎಚ್.ಡಿ.ರೇವಣ್ಣ, ಎಲ್ಲದಕ್ಕೂ ಕುಮಾರಸ್ವಾಮಿ ಅವರನ್ನು ಹಿಡಿದುಕೊಂಡರೆ ಹೇಗೆ? ಅವರ ಹತ್ತಿರ ನೋಟು ಪ್ರಿಂಟ್ ಮಾಡುವ ಮಷಿನ್ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಅಲ್ಲಿಗೆ ಭಾನುವಾರ ಒಂದೇ ದಿನ ಕುಟುಂಬದ ಮೂರೂ ಮಂದಿಯ ಆಕ್ರೋಶ ಹೊರಬಂದಿದೆ. ಅಷ್ಟರ ಮಟ್ಟಿಗೆ ಜೆಡಿಎಸ್ ಗೆ ಹಾನಿ ಆಗಿರುವುದು ಸಹ ನಿಜ. ಏಕೆಂದರೆ, ಇತರ ಪಕ್ಷಗಳು ಒಳಗೊಳಗೇ ಖುಷಿ ಪಡುತ್ತಿವೆ. ಏನು ಪರಿಸ್ಥಿತಿ ಎಂಬುದು ಈಗ ಗೊತ್ತಾಯಿತಾ ಎಂದು ಆಡಿಕೊಳ್ಳುವಂತಾಗಿದೆ.

ಹಲವು ಸವಾಲುಗಳು ತೂಗುಗತ್ತಿಯಂತೆ ಇವೆ

ಹಲವು ಸವಾಲುಗಳು ತೂಗುಗತ್ತಿಯಂತೆ ಇವೆ

ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ಮುಂದುವರಿಸಬೇಕಾದ ಅನಿವಾರ್ಯ, ಜತೆಗೆ ಜೆಡಿಎಸ್ ನೀಡಿದ್ದ ಭರವಸೆಗಳು ಕೂಡ ಈಡೇರಿಸಬೇಕು ಎಂಬ ಸವಾಲು, ಸಾಲ ಮನ್ನಾಗೆ ಬೇಕಾದ ಹಣವನ್ನು ಒಗ್ಗೂಡಿಸಲು ಹೆಣಗಾಟ, ಕೇಂದ್ರದಿಂದ ಯಾವ ಕಾರಣಕ್ಕೂ ದೊರೆಯದ ದೊಡ್ಡ ಮಟ್ಟದ ಸಹಾಯ, ದೊಡ್ಡ ಸಂಖ್ಯೆಯಲ್ಲಿರುವ ಪ್ರತಿಪಕ್ಷದಿಂದ ಕಾಲೆಳೆಯಲು ನಿತ್ಯ ಹವಣಿಕೆ, ಮೇಲಿಂದ ಮೇಲೆ ಚುನಾವಣೆಗಳು ಇವೆಲ್ಲದರಿಂದ ಕುಮಾರಸ್ವಾಮಿ ಖಂಡಿತಾ ಬೇಸತ್ತಂತೆ ಕಾಣುತ್ತಿದ್ದಾರೆ. ಯಾವ ಭಾವುಕತೆಯ ಮಾತುಗಳು ಪ್ಲಸ್ ನಂತೆ ಆಗಿದ್ದವೋ ಅವೇ ಈಗ ಸಮಸ್ಯೆಗಳನ್ನು ತರುತ್ತಿವೆ. ಇದರ ಜತೆಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಆದಷ್ಟು ಶೀಘ್ರವಾಗಿ ಸಂಪುಟ ವಿಸ್ತರಣೆ ಮಾಡಬೇಕಾಗಿದೆ. ಇಷ್ಟೆಲ್ಲ ಸವಾಲುಗಳು ಅವರಿಗೆ ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ ಖಂಡಿತಾ ಇರಲಿಲ್ಲ.

ಎಸ್ಸೆಂ ಕೃಷ್ಣರ ಮಾತು, ಧರಂ ಸಿಂಗ್ ರ ಸಂಯಮ ಬೇಕಿದೆ

ಎಸ್ಸೆಂ ಕೃಷ್ಣರ ಮಾತು, ಧರಂ ಸಿಂಗ್ ರ ಸಂಯಮ ಬೇಕಿದೆ

ಕುಮಾರಸ್ವಾಮಿ ಅವರು ಮೊದಲಿಗೆ ಡ್ಯಾಮೇಜ್ ಕಂಟ್ರೋಲ್ ಮಾಡಬೇಕಿದೆ. ರೈತರ ಸಾಲಮನ್ನಾ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಎಷ್ಟು ನಾಜೂಕಾಗಿ ನಿರ್ವಹಿಸುತ್ತಾರೋ ಅಷ್ಟೇ ಎಚ್ಚರಿಕೆಯಿಂದ ತಮ್ಮ ವರ್ಚಸ್ಸನ್ನು ಸಹ ಕಾಪಾಡಿಕೊಳ್ಳಬೇಕಿದೆ. ಇನ್ನೇನು ಲೋಕಸಭೆ ಚುನಾವಣೆ ಕಣ್ಣೆದುರಿಗೆ ಇದೆ. ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡು ಮುಂದುವರಿದಲ್ಲಿ ಅದಕ್ಕೆ ಒಂದು ರೀತಿಯ ರಣತಂತ್ರ ಅಥವಾ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದಲ್ಲಿ ಇನ್ನೊಂದು ಬಗೆಯಲ್ಲಿ ಹೋರಾಟಕ್ಕೆ ಅಣಿಗೊಳ್ಳಬೇಕು. ಜತೆಗೆ ಮೈತ್ರಿ ಸರಕಾರವನ್ನು ಮುನ್ನಡೆಸಿಕೊಂಡು ಹೋಗಬೇಕು. ಯಾವಾಗ ಬೇಕಾದರೂ ಮೈತ್ರಿ ಸರಕಾರದ ಅಂಟು ಬೇರ್ಪಡಿಸಿ, ಗದ್ದುಗೆ ಏರಲು ಎದುರು ನೋಡುತ್ತಿರುವ ವಿರೋಧ ಪಕ್ಷ ಬಿಜೆಪಿಯ ಮೇಲೂ ಸದಾ ಕಣ್ಣಿಟ್ಟಿರಬೇಕು. ಜತೆಗೆ ಮಾತಿನ ಬಗ್ಗೆ ಕೂಡ ನಿಗಾ ವಹಿಸಬೇಕಾಗಿದೆ. ಆದ್ದರಿಂದ ಈ ಸನ್ನಿವೇಶದಲ್ಲಿ ಎಸ್ಸೆಂ ಕೃಷ್ಣ ಅವರಂತೆ ಮಾತಿನ ಮೇಲೆ ಹಿಡಿತ ಹಾಗೂ ಧರಂ ಸಿಂಗ್ ರಂತೆ ಮೈತ್ರಿ ಸರಕಾರ ನಡೆಸಿಕೊಂಡು ಹೋಗುವ ತಾಳ್ಮೆ ಎರಡೂ ಮುಖ್ಯ. ಇನ್ನು ಈಗ ಕಾವು ಪಡೆದುಕೊಂಡಿರುವ ಚರ್ಚೆಯು ಅನಗತ್ಯವಾಗಿ ಪಡೆದುಕೊಂಡಿರುವ ಮಹತ್ವ ಅಂತ ಕುಮಾರಸ್ವಾಮಿ ಅವರು ಸಾಬೀತು ಮಾಡಬಹುದೇನೋ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+