ದೆಹಲಿ ಪ್ರವೇಶಿಸಲು ರೈತರಿಗೆ ಕೊನೆಗೂ ಅನುಮತಿ
ನವದೆಹಲಿ, ನವೆಂಬರ್ 27: ತೀವ್ರ ಸಂಘರ್ಷ, ಪ್ರತಿರೋಧಗಳ ಬಳಿಕ ಕೊನೆಗೂ ಪ್ರತಿಭಟನಾ ನಿರತ ರೈತರನ್ನು ದೆಹಲಿ ಒಳಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಜತೆಗೆ ಅವರು ಪ್ರತಿಭಟನೆ ನಡೆಸಲು ಸ್ಥಳವನ್ನು ಕೂಡ ಗುರುತಿಸಲಾಗಿದೆ.
'ಪ್ರತಿಭಟನಾನಿರತ ರೈತರು ರಾಜಧಾನಿ ಪ್ರವೇಶಿಸಲು ಅವಕಾಶ ನೀಡಲಾಗುವುದು. ಅವರು ಬುರಾರಿ ಪ್ರದೇಶದ ನಿರಂಕಾರಿ ಸಮಾಗಮ ಮೈದಾನದಲ್ಲಿ ಕುಳಿತು ಪ್ರತಿಭಟನೆ ನಡೆಸಲು ಅನುಮತಿ ನೀಡಲಾಗಿದೆ. ಅವರು ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು ಮತ್ತು ಶಾಂತಯುತವಾಗಿ ಪ್ರದರ್ಶನ ನಡೆಸಬೇಕು' ಎಂದು ದೆಹಲಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವರ್ಮಾ ಹೇಳಿದ್ದಾರೆ.
'ನಮಗೆ ಸುರಕ್ಷಿತ ಮಾರ್ಗದಲ್ಲಿ ದೆಹಲಿಗೆ ಪ್ರವೇಶ ನೀಡಲಾಯಿತು' ಎಂದು ಕ್ರಾಂತಿಕಾರಿ ಕಿಸಾನ್ ಒಕ್ಕೂಟದ ಅಧ್ಯಕ್ಷ ದರ್ಶನ್ ಪಾಲ್ ತಿಳಿಸಿದ್ದಾರೆ.

ಆದರೆ ದೆಹಲಿ-ಸಂಘು ಗಡಿಯಲ್ಲಿ ಕಲ್ಲು ತೂರಾಟ ಮುಂದುವರಿದಿದ್ದು, ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸಲು ಪೊಲೀಸರು ಅಶ್ರುವಾಯು ಶೆಲ್ಗಳನ್ನು ಎಸೆದಿದ್ದಾರೆ. ಜತೆಗೆ ಜಲಫಿರಂಗಿಯನ್ನೂ ಬಳಸಿದ್ದಾರೆ. ಇದರಿಂದ ಅನೇಕ ರೈತರು ಗಾಯಗೊಂಡಿದ್ದು, ಅವರನ್ನು ಸಿಂಘು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಈ ನಿರ್ಧಾರವನ್ನು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸ್ವಾಗತಿಸಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ರೈತರ ಸಮಸ್ಯೆಗಳನ್ನು ಬಗೆಹರಿಸಲು ಮಾತುಕತೆಯನ್ನು ಆರಂಭಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
'ರೈತರು ಪ್ರತಿಭಟನೆಯ ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಲು ದೆಹಲಿಗೆ ಪ್ರವೇಶಿಸಲು ಅವಕಾಶ ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಅವರು ಕೂಡಲೇ ರೈತರ ಸಮಸ್ಯೆಗಳನ್ನು ಆಲಿಸಲು ಮಾತುಕತೆಯನ್ನು ಆರಂಭಿಸಬೇಕು. ಕೃಷಿ ಕಾಯ್ದೆ ಕುರಿತಾದ ಕಳವಳನ್ನು ಆಲಿಸಿ ಸಮಸ್ಯೆ ಬಗೆಹರಿಸಬೇಕು' ಎಂದು ಹೇಳಿದ್ದಾರೆ.
#WATCH Water cannon and tear gas shells used to disperse protesting farmers at Shambu border, near Ambala pic.twitter.com/EaqmJLhAZI
— ANI (@ANI) November 27, 2020
ಪಂಜಾಬ್, ಹರಿಯಾಣ, ಮಧ್ಯಪ್ರದೇಶ ಮುಂತಾದ ಕಡೆಗಳಿಂದ ರೈತರು ಸುಮಾರು ಎರಡು ತಿಂಗಳಿಗಾಗುವಷ್ಟು ಆಹಾರ ಮತ್ತು ಅಗತ್ಯ ವಸ್ತುಗಳನ್ನು ಕೊಂಡೊಯ್ಯುತ್ತಿದ್ದಾರೆ. ಬಹುತೇಕ ಗುಂಪುಗಳು ಈಗಾಗಲೇ ದೆಹಲಿ ಪ್ರವೇಶಿಸಿವೆ. ಇನ್ನು ಅನೇಕ ಗುಂಪುಗಳು ವಿವಿಧೆಡೆ ಅಳವಡಿಸಿರುವ ಬ್ಯಾರಿಕೇಡ್ಗಳು, ಮುಳ್ಳುತಂತಿಗಳು, ಮರಳು ತುಂಬಿರುವ ಟ್ರಕ್ಗಳನ್ನು ಕಿತ್ತೊಗೆದು, ರಸ್ತೆಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಕಂದಕಗಳನ್ನು ಹತ್ತಿಳಿದು ಧಾವಿಸುತ್ತಿವೆ.
ದೆಹಲಿ ಪ್ರವೇಶಿಸುವ ರೈತರನ್ನು ಬಂಧಿಸಿಡಲು ಮೈದಾನಗಳನ್ನು ತಾತ್ಕಾಲಿಕ ಕಾರಾಗೃಹಗಳನ್ನಾಗಿ ಪರಿವರ್ತಿಸುವ ಪೊಲೀಸರ ಕೋರಿಕೆಯನ್ನು ಎಎಪಿ ಸರ್ಕಾರ ತಿರಸ್ಕರಿಸಿದೆ.












Click it and Unblock the Notifications