ಅನಾನಸ್ ಬೆಳೆಯುವ ರೈತರು ಗಮನಿಸಲೇಬೇಕಾದ ಅಂಶಗಳು...
ಒಂದೇ ರೀತಿಯ ಬೆಳೆಯನ್ನು ಬೆಳೆದು ಅದರಿಂದ ಜೀವನ ಸಾಗಿಸುವುದು ಇತ್ತೀಚಿನ ದಿನಗಳಲ್ಲಿ ಕೃಷಿಕನಿಗೆ ಸಾಧ್ಯವಾಗದ ಮಾತು. ಹಾಗಾಗಿ ಕೃಷಿಕರು ಮಿಶ್ರ ಬೆಳೆ ಬೆಳೆಯುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ. ಇರುವ ಜಾಗದಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವುದರಿಂದ ಯಾವುದಾದರೊಂದು ಬೆಳೆಯಿಂದಾದರೂ ಒಂದಷ್ಟು ಆದಾಯವನ್ನು ಪಡೆಯಬಹುದು ಎಂಬ ಆಲೋಚನೆ ಕೃಷಿಕರದ್ದು.
ಕೊಡಗಿನಂತಹ ಪ್ರದೇಶದಲ್ಲಿ ಕಾಫಿ, ಕರಿಮೆಣಸು, ಏಲಕ್ಕಿಯನ್ನೇ ನಂಬಿಕೊಂಡು ಬೆಳೆಗಾರರು ಬಂದಿದ್ದಾರೆ. ಆದರೆ ಕೆಲವೊಮ್ಮೆ ಹವಾಮಾನದ ವೈಪರೀತ್ಯ, ಬೆಲೆ ಕುಸಿತ ಹೀಗೆ ವಿವಿಧ ಕಾರಣಗಳಿಂದ ಸಂಕಷ್ಟ ಅನುಭವಿಸಿದ ಉದಾಹರಣೆಗಳು ಸಾಕಷ್ಟಿವೆ. ಹೀಗಾಗಿ ಜಿಲ್ಲೆಯಲ್ಲಿ ಹಲವು ಬೆಳೆಗಾರರು ಪರ್ಯಾಯ ಬೆಳೆಯತ್ತ ಚಿತ್ತ ಹರಿಸಿದ್ದಾರೆ. ಬಾಳೆ, ಶುಂಠಿ ಜತೆಗೆ ಇದೀಗ ಅನಾನಸ್ ಅನ್ನು ಬೆಳೆಯುತ್ತಿರುವುದು ಕಂಡುಬರುತ್ತಿದೆ. ಅನಾಸನ್ ಬೆಳೆಯುವವರು ಗಮನಿಸಬೇಕಾದ ಕೆಲವು ಅಂಶಗಳು ಇಲ್ಲಿವೆ...

ಎಲ್ಲ ಕಾಲದಲ್ಲೂ ಬೇಡಿಕೆ ಇದ್ದೇ ಇರುತ್ತದೆ
ಅನಾನಸ್ ಬೆಳೆ ಕೊಡಗಿನವರಿಗೆ ಹೊಸತಲ್ಲ. ಸಾಮಾನ್ಯವಾಗಿ ಎಲ್ಲರ ತೋಟದಲ್ಲಿಯೂ ಇದಕ್ಕೆ ಸ್ಥಾನವಿದೆ. ತಮ್ಮ ಉಪಯೋಗಕ್ಕಾಗಿ ಮಾತ್ರ ಬೆಳೆಸುತ್ತಿದ್ದರಾದರೂ ಇದೀಗ ಕೆಲವರು ಆರ್ಥಿಕ ದೃಷ್ಟಿಯಿಂದ ಬೆಳೆಯುತ್ತಿರುವುದು ಕಂಡು ಬಂದಿದೆ.
ಅನಾನಸ್ ಪಾನೀಯ, ವಿವಿಧ ತಿನಿಸುಗಳಲ್ಲಿ ಉಪಯೋಗವಾಗುವುದರಿಂದ ಇದಕ್ಕೆ ಬೇಡಿಕೆ ಇದ್ದೇ ಇದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ನಿರ್ದಿಷ್ಟವಾಗಿಲ್ಲವಾದರೂ, ಬೆಳೆಗಾರರಿಗೆ ತೊಂದರೆಯಾಗದು ಎಂಬುವುದು ಇದನ್ನು ಬೆಳೆದವರ ಅಭಿಪ್ರಾಯ. ಅನಾನಸ್ ಹಣ್ಣಿನಲ್ಲಿ ದೇಹಕ್ಕೆ ಬೇಕಾದ ಅನ್ನಾಂಗಗಳು, ಲವಣಗಳಿದ್ದು, ರೋಗ ನಿರೋಧಕ ಶಕ್ತಿ ಸಹ ಇದೆ. ಇದು ಉಷ್ಣವಲಯದ ಹಣ್ಣಾಗಿದ್ದು, ಜೇಡಿ ಮಣ್ಣು ಹಾಗೂ ಜೌಗು ಮಣ್ಣನ್ನು ಹೊರತುಪಡಿಸಿದರೆ, ಇತರೆ ಎಲ್ಲ ಮಣ್ಣಿನಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ. ಸಮಶೀತೋಷ್ಣ ವಾತಾವರಣ ಅಥವಾ ಸಾಮಾನ್ಯವಾಗಿ 40 ರಿಂದ 60 ಸೆಂ. ಮೀ ಮಳೆ ಬೀಳುವ ಪ್ರದೇಶಗಳಲ್ಲಿ ಇದನ್ನು ಬೆಳೆಯಬಹುದಾಗಿದೆ.

ಅನಾನಸ್ ಕೃಷಿ ಮಾಡುವುದು ಹೇಗೆ?
ಅನಾನಸ್ ನಲ್ಲಿ ಮುಖ್ಯವಾಗಿ ಕ್ಯೂ ಮತ್ತು 'ಕ್ವೀನ್' ಕ್ಯೂ ಜಾತಿಗೆ ಸೇರಿದ ಎರಡು ಪ್ರಮುಖವಾದವು. ಈ ಗಿಡಗಳಲ್ಲಿ ಮುಳ್ಳುಗಳಿರುವುದಿಲ್ಲ, ಅಲ್ಲದೆ ಹಣ್ಣುಗಳ ಗಾತ್ರ ಹಿರಿದಾಗಿರುತ್ತದೆ. ಸಾಮಾನ್ಯವಾಗಿ ಒಂದೂವರೆ ಕಿ.ಗ್ರಾಂ. ನಿಂದ ಮೂರು ಕಿ.ಗ್ರಾಂ ತನಕವೂ ತೂಗುತ್ತವೆ. ಕ್ವೀನ್ಸ್ ತಳಿಗಳು ರುಚಿಯಾಗಿದ್ದು, ಹಣ್ಣುಗಳ ಗಾತ್ರ ಚಿಕ್ಕದಾಗಿರುತ್ತವೆ. ಇದು ಅರ್ಧ ಕಿ.ಗ್ರಾಂ ನಿಂದ ಒಂದೂವರೆ ಕಿ.ಗ್ರಾಂ. ತನಕ ತೂಗುತ್ತದೆ.
ಅನಾನಸ್ ಸಸ್ಯಾಭಿವೃದ್ಧಿಯನ್ನು ಅನಾನಸ್ ಗಿಡದಲ್ಲಿ ಹುಟ್ಟುವ ಕಂದುಗಳಿಂದ, ಹಣ್ಣಿನ ಕೆಳಭಾಗದಲ್ಲಿರುವ ಚಿಗುರು (ಸ್ಲಿಪ್ಸ್) ಹಣ್ಣಿನ ಮೇಲ್ಭಾಗದಲ್ಲಿರುವ ಚಿಗುರು (ಕ್ರೌನ್ಸ್) ಗಳಿಂದ ಮಾಡಬಹುದಾಗಿದೆ. ಕಂದುಗಳು ಮತ್ತು ಸ್ಲಿಪ್ಸ್ ಗಳನ್ನು ನಾಟಿಗೆ ಉಪಯೋಗಿಸುವುದರಿಂದ ಗಿಡಗಳು ಹುಲುಸಾಗಿ ಬೆಳೆಯುವುದಲ್ಲದೆ ಬಹುಬೇಗ ಫಸಲನ್ನು ಸಹ ನೀಡುತ್ತವೆ.

ಅನಾನಸ್ ಬೆಳೆಯುವಾಗ ಗಮನಿಸಬೇಕಾದ ಅಂಶಗಳು
ತೋಟಗಾರಿಕಾ ಇಲಾಖೆಯ ಪ್ರಕಾರ, ಅನಾನಸ್ ಕೃಷಿ ಮಾಡುವುದಾದರೆ ಕೃಷಿ ಮಾಡಲು ಉದ್ದೇಶಿಸಿದ ಸ್ಥಳವನ್ನು ಚೆನ್ನಾಗಿ ಉಳುಮೆ ಮಾಡಿ ಇಲ್ಲಿರುವ ಕಳೆ, ಕಸ, ಮುಂತಾದವುಗಳನ್ನು ತೆಗೆದು ಸ್ವಚ್ಛಗೊಳಿಸಬೇಕು. ಆನಂತರ ಸುಮಾರು ಎರಡು ಅಡಿ ಅಂತರದಲ್ಲಿ ಮುಕ್ಕಾಲು ಅಡಿ ಆಳ, ಎರಡು ಅಡಿ ಅಗಲದ ಚರಂಡಿ ತೆಗೆದು ಅದನ್ನು ಕೊಟ್ಟಿಗೆ ಗೊಬ್ಬರ ಹಾಗೂ ರಂಜಕ ಯುಕ್ತ ಗೊಬ್ಬರವನ್ನು ಬೆರೆಸಿ ಮುಚ್ಚಿ ನಂತರ ಚರಂಡಿಯಲ್ಲಿ ಒಂದು ಅಡಿ ಅಂತರದಲ್ಲಿ ಎರಡು ಸಸಿಗಳನ್ನು ನೆಡಬೇಕಾಗುತ್ತದೆ. ಹೀಗೆ ನೆಡುವಾಗ ಸಸಿಯ ಸುಳಿಗೆ ಮಣ್ಣು ಬೀಳದಂತೆ ಎಚ್ಚರ ವಹಿಸುವುದು ಒಳ್ಳೆಯದು. ಸಸಿಯನ್ನು ನೆಟ್ಟ ನಂತರ ಮಳೆ ಬೀಳುತ್ತಿದ್ದರೆ ನೀರು ಹಾಯಿಸುವ ಅಗತ್ಯವಿರುವುದಿಲ್ಲವಾದರೂ ಮಳೆಯಿರದಿದ್ದ ಸಂದರ್ಭವಾದರೆ ನೀರು ಹಾಯಿಸುವುದು ಅತ್ಯಗತ್ಯ.

ಗಿಡಗಳನ್ನು ಜತನದಿಂದ ನೋಡಿಕೊಳ್ಳಬೇಕು
ಒಂದು ಎಕರೆ ಪ್ರದೇಶಕ್ಕೆ ಸುಮಾರು 12 ಟನ್ ಕೊಟ್ಟಿಗೆ ಗೊಬ್ಬರ, 140 ಕಿ.ಗ್ರಾಂ. ಸಾರಜನಕ, 700 ಕಿ.ಗ್ರಾಂ. ಅಮೋನಿಯಂ ಸಲ್ಫೇಟ್, 52 ಕಿ.ಗ್ರಾಂ ರಂಜಕ ಅಥವಾ 325 ಕಿ.ಗ್ರಾಂ. ಫಾಸ್ಪೇಟ್, 175 ಕಿ.ಗ್ರಾಂ ಪೋಟ್ಯಾಷ್ ಬೇಕಾಗುತ್ತದೆ. ಅನಾನಸ್ ಸಸಿಯನ್ನು ನೆಟ್ಟ ನಂತರ ಕಾಲಕ್ಕೆ ಸರಿಯಾಗಿ ಗೊಬ್ಬರ ಹಾಕುವುದು, ಕಳೆ ತೆಗೆಯುವುದು, ಮಣ್ಣು ಸೇರಿಸುವುದು ಮುಂತಾದವುಗಳನ್ನು ತಪ್ಪದೆ ಮಾಡಬೇಕು. ಸಸಿ ನೆಟ್ಟ ಮೂರು ತಿಂಗಳ ನಂತರ ಮೂರು ತಿಂಗಳ ಅಂತರದಲ್ಲಿ ವರ್ಷಕ್ಕೆ ನಾಲ್ಕು ಬಾರಿ ಸಾರಜನಕ ಮತ್ತು ಪೋಟ್ಯಾಷ್ ಗೊಬ್ಬರ ಹಾಕಬೇಕು.

ನೀರು ಹಾಯಿಸುವುದರ ಮೇಲೆ ಗಮನವಿರಲಿ
ಬೇಸಿಗೆಯಲ್ಲಿ ಮಣ್ಣಿನ ತೇವ ನೋಡಿಕೊಂಡು ನೀರು ಹಾಯಿಸಬೇಕಾಗುತ್ತದೆ. ಅನಾನಸ್ ಗಿಡವು 13-14 ತಿಂಗಳ ಬೆಳವಣಿಗೆಯಲ್ಲಿದ್ದಾಗ ನ್ಯಾಪ್ತಲಿನ್ ಅಸಿಟಿಕ್ ಆಮ್ಲವನ್ನು ಶೇಕಡ ಎರಡರ ಯೂರಿಯಾದೊಂದಿಗೆ ಅಥವಾ ಇಂಥೋಪಾಸ್ ಮಾತ್ರ 100 ಪಿ.ಪಿ ಎಂ. ಅಥವಾ 25 ಪಿ.ಪಿ.ಎಂ ಇಂಥೋಪಾಸ್ ಅನ್ನು ಶೇಕಡ 0.04 ಸೋಡಿಯಂ ಕಾರ್ಬೋನೆಟ್ ಮಿಶ್ರಣದೊಂದಿಗೆ ನೀರಿನಲ್ಲಿ ಬೆರೆಸಿ ಗಿಡದ ಸುತ್ತ ಸುಮಾರು 50 ಮಿ.ಲೀನಂತೆ ಹಾಕಬೇಕು. ಹೀಗೆ ಮಾಡಿದ ನಲವತ್ತು, ನಲವತ್ತೈದು ದಿನಗಳಲ್ಲಿ ಗಿಡವು ಹೂ ಬಿಡಲಾರಂಭಿಸುತ್ತದೆ, ಈ ಸಂದರ್ಭ 200 ಪಿ.ಪಿ.ಎಂ.ಎನ್.ಎ ಯನ್ನು ಕಾಯಿಕಟ್ಟಿದ ಮೂರು ತಿಂಗಳಲ್ಲಿ ನೀಡಬೇಕು. ಇದರಿಂದ ಹಣ್ಣಿನ ಗಾತ್ರ ಹೆಚ್ಚಾಗಲು ಸಾಧ್ಯವಾಗುತ್ತದೆ.

ಬಾಧಿಸುವ ರೋಗಗಳತ್ತ ಎಚ್ಚರಿಕೆ ಅಗತ್ಯ
ಅನಾನಸ್ ಗಿಡಕ್ಕೆ ಕೆಲವು ರೋಗಗಳು ಬಾಧಿಸುತ್ತಿದ್ದು, ಅವುಗಳಲ್ಲಿ ಎಲೆ ಸೊರಗು ರೋಗ ಹಾಗೂ ಕಾಂಡ ಕೊಳೆರೋಗ ಮುಖ್ಯವಾಗಿದೆ. ಸಸಿ ನೆಡುವ ಮೊದಲು ಸಸಿಗಳನ್ನು ಕೀಟನಾಶಕಗಳಿಂದ ತೊಯ್ದು ನೆಡುವುದು ಒಳ್ಳೆಯದು. ಇದರಿಂದ ರೋಗ ತಡೆಗಟ್ಟಲು ಸಾಧ್ಯವಾಗುತ್ತದೆ. ಎಲೆ ಸೊರಗು ರೋಗ ಬಂದರೆ ಗಿಡದ ತಳಭಾಗದ ರೋಗಬಾಧಿತ ಎಲೆ (ಗರಿ)ಗಳನ್ನು ಕತ್ತರಿಸಿ ತೆಗೆಯಬೇಕು. 20 ಕಿ.ಗ್ರಾಂ. ಡೈಪೋಲಿಟಾನ್ ಅಥವಾ 23 ಗ್ರಾಂ ಜೈನೆಬ್ ಗಳನ್ನು 10 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ತಿಗಣೆಗಳ ಬಾಧೆ ಕಂಡು ಬಂದಲ್ಲಿ ಒಂದು ಎಕರೆ ಪ್ರದೇಶಕ್ಕೆ 7 ಕಿ.ಗ್ರಾಂನಷ್ಟು ಪೋರೇಟ್ ಹರಳುಗಳನ್ನು ಹಾಕಬೇಕು.

ಬೆಳೆಗಾರರಿಗೆ ಮಾರುಕಟ್ಟೆಯದ್ದೇ ಸಮಸ್ಯೆ
ಕಾಫಿ, ಏಲಕ್ಕಿ, ಕರಿಮೆಣಸು ಹೊರತುಪಡಿಸಿದರೆ ಉಳಿದ ಬೆಳೆಗಳಿಗೆ ಕೊಡಗಿನಲ್ಲಿ ಮಾರುಕಟ್ಟೆಯ ಕೊರತೆ ಎದ್ದು ಕಾಣುತ್ತಿದೆ. ಕೆಲವೊಮ್ಮೆ ಬೆಳೆದರೂ ಅದನ್ನು ಸ್ಥಳೀಯವಾಗಿ ಖರೀದಿಸುವವರಿಲ್ಲದೆ, ಸೂಕ್ತ ಬೆಲೆ ಸಿಗದೆ ಬೆಳೆಗಾರ ಆಸಕ್ತಿ ಕಳೆದುಕೊಂಡ ಅನುಭವವೇ ಹೆಚ್ಚು. ಅನಾನಸ್ ಬೆಳೆ ಕೂಡ ಇದಕ್ಕೆ ಭಿನ್ನವಾಗಿಲ್ಲ. ಬೇಸಿಗೆಯ ದಿನದಲ್ಲಿ ಕೊಡಗಿನಲ್ಲಿ ಬೇಡಿಕೆ ಕಂಡು ಬಂದರೂ ಉಳಿದ ದಿನಗಳಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಬೇರೆಡೆಗೆ ಕೊಂಡೊಯ್ದರೆ ಮಾರುವ ಮೂಲಕ ಮಾರುಕಟ್ಟೆಯನ್ನು ಸೃಷ್ಟಿಸುವ ಜಾಣ್ಮೆ ಬೇಕಾಗುತ್ತದೆ.












Click it and Unblock the Notifications