Get Updates
Get notified of breaking news, exclusive insights, and must-see stories!

ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ಗಂಟುರೋಗ ಬಾಧೆ; ಆತಂಕದಲ್ಲಿ ರೇಷ್ಮೆ ಉದ್ಯಮ

ರಾಮನಗರ, ಜೂ. 18: ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ತೀವ್ರ ತರವಾಗಿ ಹರಡುತ್ತಿರುವ ಗಂಟುರೋಗ (Pebrine disease) ಸೋಂಕನ್ನು ತಕ್ಷಣವೇ ನಿಯಂತ್ರಿಸದಿದ್ದರೆ ಇನ್ನೊಂದು ವರ್ಷದೊಳಗೆ ರೇಷ್ಮೆ ಉದ್ಯಮ ಪೂರ್ತಿ ನಶಿಸಿಹೋಗಲಿದೆ ಎಂದು ಭಾರತೀಯ ರೇಷ್ಮೆ ಒಕ್ಕೂಟ (ಸಿಲ್ಕ್ ಅಸೋಸಿಯೇಷನ್ ಇಂಡಿಯಾ- ಎಸ್.ಎ.ಐ.) ಅಧ್ಯಕ್ಷರಾದ ರಾಜ್ಯ ಸರ್ಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ವಿ.ಬಾಲಸುಬ್ರಮಣ್ಯಂ ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತೀಯ ರೇಷ್ಮೆ ಒಕ್ಕೂಟದ ಅಧ್ಯಕ್ಷರಾದ ವಿ.ಬಾಲಸುಬ್ರಹ್ಮಣ್ಯಂ ಹೇಳಿಕೆಗೆ ರೇಷ್ಮೆ ನಾಡು ಖ್ಯಾತಿಯ ರಾಮನಗರ ಜಿಲ್ಲೆಯಲ್ಲಿನ ರೇಷ್ಮೆ ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ. ಈ ವರ್ಷದ ಆರಂಭದಲ್ಲಿ ಮೊದಲಿಗೆ ಕಾಣಿಸಿಕೊಂಡ ತಾಯಿ ಚಿಟ್ಟೆಯಿಂದ ಬರುವ ಈ ಗಂಟುರೋಗವು ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಉಲ್ಬಣಗೊಳ್ಳಲಿದೆ ಎಂದು ರೇಷ್ಮೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಬಿತ್ತನೆ ಪ್ರದೇಶಗಳಲ್ಲಿ ಚಿಟ್ಟೆ ಪರೀಕ್ಷೆ, ಸೋಂಕು ನಿವಾರಣೆ, ಸಾಮೂಹಿಕ ಸೋಂಕು ನಿವಾರಣೆ ಹಾಗೂ ಬಿತ್ತನೆ ಮಾರುಕಟ್ಟೆಯಲ್ಲಿ ನೂಲು ಬಿಚ್ಚಾಣಿಕೆಗೆ ಹೋಗುವ ಗೂಡಿಗೆ ಹಬೆ ನೀಡುವ ಕ್ರಮಗಳನ್ನು ಕೈಗೊಳ್ಳಬೇಕು. ಸೋಂಕಿತ ರೇಷ್ಮೆ ಮೊಟ್ಟೆಗಳನ್ನು ಹಾಗೂ ಹುಳುಗಳನ್ನು ಸುಟ್ಟು ಹಾಕಬೇಕು. ವಿಜ್ಞಾನಿಗಳು ಹಾಗೂ ತಜ್ಞ ಸಿಬ್ಬಂದಿಯನ್ನು ಈ ಕೂಡಲೇ ಗಂಟುರೋಗ ಸೋಂಕಿತ ಪ್ರದೇಶಗಳಿಗೆ ನಿಯೋಜಿಸಿ ಗುಣಮಟ್ಟ ಪರೀಕ್ಷೆ ಮಾಡಿಸಿ ಪೆಬ್ರಿನ್ ರೋಗವನ್ನು ನಿಯಂತ್ರಣಕ್ಕೆ ತರಬೇಕು ಎಂದು ವಿ.ಸುಬ್ರಮಣ್ಯಂ ಸಲಹೆ ನೀಡಿದ್ದಾರೆ.

 ಪೆಬ್ರಿನ್ ರೋಗ ನಿರ್ಲಕ್ಷ್ಯ ಬೇಡ

ಪೆಬ್ರಿನ್ ರೋಗ ನಿರ್ಲಕ್ಷ್ಯ ಬೇಡ

ರಾಜ್ಯದಲ್ಲಿ ಈಗಾಗಲೇ 46 ಬ್ಯಾಚ್‌ಗಳಲ್ಲಿ ಗಂಟು ರೋಗಾಣು ಕಂಡುಬಂದಿದೆ ಎಂಬುದನ್ನು ರೇಷ್ಮೆ ಇಲಾಖೆ ದೃಢಪಡಿಸಿದೆ. ಈ ಪೆಬ್ರಿನ್ ರೋಗಾಣು ಸೋಂಕಿತ ಸಂತತಿಯನ್ನು ಸಂಪೂರ್ಣ ನಾಶಪಡಿಸಬೇಕು, ರೈತರ ರೇಷ್ಮೆ ಹುಳು ಸಾಕಣೆ ಮನೆಗಳಲ್ಲಿ ಸೋಂಕು ನಿವಾರಣೆ ಮಾಡಬೇಕು, ಬಿತ್ತನೆ ಕೋಠಿಯಲ್ಲಿ ಪಿ4, ಪಿ3, ಪಿ2 ಮತ್ತು ಪಿ1 ಹಂತದಲ್ಲಿ ಗಂಟುರೋಗ ಪತ್ತೆಹಚ್ಚಿ ನಿವಾರಣೆ ಮಾಡಬೇಕು. 1991-92ನೇ ಸಾಲಿನಲ್ಲಿ ರಾಜ್ಯದಲ್ಲಿ ಗಂಟುರೋಗ ಉಲ್ಬಣಗೊಂಡಿದ್ದಾಗ ಅನುಸರಿಸಿದ್ದ ಕ್ರಮಗಳನ್ನು ತಕ್ಷಣವೇ ಈಗಲೂ ಕೈಗೊಳ್ಳಬೇಕು. ರೋಗಾಣು ಮೂಲವನ್ನು ತ್ವರಿತವಾಗಿ ಪತ್ತೆಹಚ್ಚಬೇಕು ಎಂದು ಆಗ್ರಹಿಸಿದ್ದಾರೆ.

ರೇಷ್ಮೆ ಇಲಾಖೆಯವರು ಶೇ 1.5 ರಿಂದ ಶೇ 2ರಷ್ಟು ಬಿತ್ತನೆ ಮೊಟ್ಟೆಗಳಿಗೆ ಮಾತ್ರ ಗಂಟುರೋಗ ಸೋಂಕು ತಗುಲಿದೆ ಎಂದು ಹೇಳಿದ್ದಾರೆ. ಆದರೆ ವಾಸ್ತವವಾಗಿ ಶೇ 20 ರಷ್ಟು ರೇಷ್ಮೆ ಮೊಟ್ಟೆಗಳಿಗೆ ಗಂಟು ರೋಗ ತಗುಲಿದೆ. ಈ ಹಂತದಲ್ಲಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪೆಬ್ರಿನ್ ರೋಗವನ್ನು ನಿರ್ಲ್ಯಕ್ಷ ಮಾಡಿದರೆ ರೇಷ್ಮೆ ಉದ್ಯಮ ನಶಿಸಿಹೋಗಲಿದೆ ಎಂದು ಭಾರತೀಯ ರೇಷ್ಮೆ ಒಕ್ಕೂಟದ ಅಧ್ಯಕ್ಷರಾದ ವಿ.ಬಾಲಸುಬ್ರಮಣ್ಯಂ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

 ಚಿಟ್ಟೆ ಪರೀಕ್ಷಕರ ಕೊರತೆಯಿಂದಾಗಿ ರೋಗ ಉಲ್ಬಣ

ಚಿಟ್ಟೆ ಪರೀಕ್ಷಕರ ಕೊರತೆಯಿಂದಾಗಿ ರೋಗ ಉಲ್ಬಣ

ಈ ಹಿಂದೆ, ರೇಷ್ಮೆ ಇಲಾಖೆಯಲ್ಲಿ 6000 ಮಂದಿ ನೌಕರರು ಹಾಗೂ ನುರಿತ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ, ಕೇವಲ 1600 ಮಂದಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿತ್ತನೆ ವಲಯದಲ್ಲಿ 466 ಸಿಬ್ಬಂದಿ ಇರಬೇಕಾಗಿದ್ದು ಕೇವಲ 122 ಮಂದಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚಿಟ್ಟೆ ಪರೀಕ್ಷಕರ ಕೊರತೆಯಿಂದಾಗಿ ಗಂಟುರೋಗ ಉಲ್ಬಣಗೊಂಡಿದೆ.

ಕಳೆದ 20 ವರ್ಷಗಳಿಂದ ರೇಷ್ಮ್ಮೆ ಇಲಾಖೆಯಲ್ಲಿ ನೇಮಕಾತಿ ಮಾಡಿಲ್ಲ. ಹೀಗಾಗಿ, ಚಿಟ್ಟೆ ಪರೀಕ್ಷಕರು ಹಾಗೂ ನುರಿತ ಸಿಬ್ಬಂದಿಯ ಕೊರತೆ ಇದೆ. ಮತ್ತೊಂದೆಡೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಂಶೋಧನಾ ಸಂಸ್ಥೆಗಳಲ್ಲಿ ಬೆರಳೆಣಿಕೆಯಷ್ಟು ವಿಜ್ಞಾನಿಗಳಿದ್ದು, ಅವು ಮುಚ್ಚುವ ಹಂತದಲ್ಲಿವೆ. ಈಗಲಾದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾರ್ಯೋನ್ಮುಖವಾಗಿ ವಿಜ್ಞಾನಿಗಳನ್ನು ಹಾಗೂ ತಜ್ಞರನ್ನು ನೇಮಕ ಮಾಡಿ ರೇಷ್ಮೆ ಉದ್ಯಮವನ್ನು ಉಳಿಸಬೇಕು ಹಾಗೂ ರೇಷ್ಮೆ ಉದ್ಯಮದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ರೇಷ್ಮೆ ಸಂಶೋಧನಾ ಸಂಸ್ಥೆಯನ್ನು ಬಲಪಡಿಸಿ ಸಮರ್ಥ ವಿಜ್ಞಾನಿಗಳನ್ನು ನೇಮಕಾತಿ ಮಾಡಬೇಕು, ಹೊಸ ರೇಷ್ಮೆ ತಳಿಗಳ ಬಿಡುಗಡೆಗೆ ಆದ್ಯತೆ ಕೊಡಬೇಕು ಹಾಗೂ ಭಾರತೀಯ ರೇಷ್ಮೆ ಒಕ್ಕೂಟ ಸಲ್ಲಿಸಿರುವ ಪ್ರಸ್ತಾವದ ಅನುಸಾರ 2000 ಕೋಟಿ ರೂಪಾಯಿಗಳ ವಿಶ್ವಬ್ಯಾಂಕ್ ನೆರವು ಪಡೆದು ರೇಷ್ಮೆ ಉದ್ಯಮದ ಸರ್ವಾಂಗೀಣ ಅಭಿವೃದ್ಧಿಗೆ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

 ಕರ್ನಾಟಕದಲ್ಲಿ ರೇಷ್ಮೆ ಕೃಷಿಗೆ 200 ವರ್ಷಗಳ ಇತಿಹಾಸ

ಕರ್ನಾಟಕದಲ್ಲಿ ರೇಷ್ಮೆ ಕೃಷಿಗೆ 200 ವರ್ಷಗಳ ಇತಿಹಾಸ

ರಾಜ್ಯದಲ್ಲಿ ರೇಷ್ಮೆ ಬೆಳೆಗಾರರಿಂದ ವರ್ಷವೊಂದಕ್ಕೆ 13 ಕೋಟಿಗೂ ಹೆಚ್ಚು ಮೊಟ್ಟೆಗಳಿಗೆ ಬೇಡಿಕೆ ಇದೆ. ಇದರಲ್ಲಿ ನೋಂದಾಯಿತ ಖಾಸಗಿ ಮೊಟ್ಟೆ ತಯಾರಕರು ಶೇ 80ರಷ್ಟನ್ನು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೊಟ್ಟೆ ತಯಾರಿಕಾ ಸಂಸ್ಥೆಗಳು ಶೇ 20ರಷ್ಟು ರೇಷ್ಮೆ ಬಿತ್ತನೆಯನ್ನು ಸರಬರಾಜು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ 15 ಲಕ್ಷ ಜನ ರೇಷ್ಮೆ ಕೃಷಿಯನ್ನು ಅವಲಂಬಿಸಿದ್ದು ವಾರ್ಷಿಕ 30,000 ಕೋಟಿ ರೂಪಾಯಿಯಷ್ಟು ರೇಷ್ಮೆ ವಹಿವಾಟು ನಡೆಯುತ್ತಿದೆ.

ಕರ್ನಾಟಕದಲ್ಲಿ ರೇಷ್ಮೆ ಕೃಷಿಗೆ 200 ವರ್ಷಗಳ ಇತಿಹಾಸವಿದೆ. ರೇಷ್ಮೆ ಉತ್ಪಾದನೆಯಲ್ಲಿ ಚೀನಾ ದೇಶ ಮೊದಲ ಸ್ಥಾನದಲ್ಲಿದ್ದರೆ ಭಾರತ ದೇಶ 2ನೇ ಸ್ಥಾನದಲ್ಲಿದ್ದು, ಇದರಲ್ಲಿ ಕರ್ನಾಟಕದ ಪಾಲು ಶೇ 70ಕ್ಕಿಂತಲೂ ಹೆಚ್ಚಾಗಿದ್ದದ್ದು ಹೆಮ್ಮೆಯ ಸಂಗತಿಯಾಗಿತ್ತು. ಆದರೆ, ಈ ಪ್ರಮಾಣ ಇದೀಗ ಶೇ 50ಕ್ಕಿಂತಲೂ ಕಡಿಮೆ ಆಗಿರುವುದು ನೋವಿನ ಸಂಗತಿಯಾಗಿದೆ ಎಂದು ಬಾಲಸುಬ್ರಮಣ್ಯಂ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

 ಗಂಟು ರೋಗ ನಿಯಂತ್ರಣಕ್ಕೆ ಆಗ್ರಹ

ಗಂಟು ರೋಗ ನಿಯಂತ್ರಣಕ್ಕೆ ಆಗ್ರಹ

ಈಗಾಗಲೇ ಗಂಟುರೋಗ ಸೋಂಕಿನಿಂದ ಇಟಲಿ ಮತ್ತು ಫ್ರಾನ್ಸ್ ದೇಶಗಳಲ್ಲಿ ರೇಷ್ಮೆ ಉದ್ಯಮ ಸರ್ವನಾಶವಾಗಿರುವುದನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರ ರೇಷ್ಮೆ ತಗುಲಿರುವ ಗಂಟು ರೋಗ ನಿಯಂತ್ರಣ ತಕ್ಷಣವೇ ಕ್ರಮ ವಹಿಸಬೇಕು ಎಂದು ಭಾರತೀಯ ರೇಷ್ಮೆ ಒಕ್ಕೂಟದ ಅಧ್ಯಕ್ಷರಾದ ವಿ.ಬಾಲಸುಬ್ರಮಣ್ಯಂ ತೀವ್ರ ಒತ್ತಾಯಿಸಿದ್ದಾರೆ.

ಚೀನಾ ದೇಶದ ರೇಷ್ಮೆ ಉತ್ಪಾದನೆ 2 ವರ್ಷಗಳ ಹಿಂದೆ 1,60,00 ಮೆಟ್ರಿಕ್ ಟನ್‌ಗಳಷ್ಟು ಇದ್ದದ್ದು ಪ್ರಸ್ತುತ ಗಂಟು ರೋಗ ಬಾದೆಯಿಂದ 55,300 ಮೆಟ್ರಿಕ್ ಟನ್‌ಗಳಿಗೆ ಕುಸಿದಿದೆ. ಈ ಪರಿಸ್ಥಿತಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿವೆ.

ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಲ್ಲಿ ಭಾರತ ದೇಶವು ರೇಷ್ಮೆ ಉತ್ಪಾದನೆಯಲ್ಲಿ ಪ್ರಪಂಚದಲ್ಲೇ ಮೊದಲ ಸ್ಥಾನ ಪಡೆಯಲಿದ್ದು, ಆರ್ಥಿಕವಾಗಿ ತೊಂದರೆಯಲ್ಲಿರುವ ರೈತಾಪಿ ವರ್ಗಕ್ಕೆ ಸಹಕಾರಿಯಾಗಲಿದೆ ಹಾಗೂ ವಿದೇಶಿ ಅವಲಂಬನೆಯನ್ನು ತಪ್ಪಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಿಲ್ಕ್ ಅಸೋಸಿಯೇಷನ್ ಆಫ್ ಇಂಡಿಯಾ ರೇಷ್ಮೆ ಸಚಿವ ನಾರಾಯಣಗೌಡರು ಹಾಗೂ ರೇಷ್ಮೆ ಆಯುಕ್ತರಾದ ಸಿಂಧೂ ಬಿ ರೂಪೇಶ್ ಅವರ ಜೊತೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದ್ದು ಗಂಟು ರೋಗ ಹಾವಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮನವಿ ಮಾಡಿರುವುದಾಗಿ ಇದೇ ವೇಳೆ ಬಾಲಸುಬ್ರಹ್ಮಣ್ಯಂ ಅವರು ಹೇಳಿದ್ದಾರೆ.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+