ಇನ್ನೊಂದು ಡಿಡಿಎಲ್ಆರ್ ಕಚೇರಿ ತೆರೆದು ಪುಣ್ಯ ಕಟ್ಕೊಳಿ: ಸರ್ಕಾರಕ್ಕೆ ರಾಯಚೂರು ಜಿಲ್ಲೆ ರೈತರ ಒತ್ತಾಯ
ರಾಯಚೂರು, ಜುಲೈ, 18: ನಗರದಲ್ಲಿ ಒಂದೇ ಭೂಮಾಪನ ಶಾಖೆ ಇರುವ ಕಾರಣ ಜಮೀನು ಸರ್ವೆ, ತಿದ್ದುಪಡಿ , ಪೋಡಿ , ಭೂ ನೋಂದಣಿ ಕಾರ್ಯಗಳಿಗೆ ತೀವ್ರ ತೊಂದರೆಯಾಗಿದೆ. ಆದ್ದರಿಂದ ಜಿಲ್ಲೆಗೆ ಇನ್ನೊಂದು ಡಿಡಿಎಲ್ಆರ್ ಕಚೇರಿಯನ್ನು ಪ್ರಮುಖ ತಾಲೂಕು ಕೇಂದ್ರವೊಂದರಲ್ಲಿ ಸ್ಥಾಪನೆ ಮಾಡಬೇಕೆಂದು ಇಲ್ಲಿನ ಸ್ಥಳೀಯರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಏಳು ತಾಲೂಕುಗಳಿದ್ದು, ರೈತರ ಸಂಖ್ಯೆ, ಭೂ ವಿಸ್ತೀರ್ಣ ಹೆಚ್ಚಿದೆ. ಜಮೀನಿನ ಸಮಸ್ಯೆಗಳ ಪರಿಹಾರಕ್ಕೆ ಎರಡು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಸ್ಥಾಪಿಸಲು ಬಹಳ ವರ್ಷಗಳಿಂದ ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಆದರೆ ಸರ್ಕಾರ ಕ್ರಮ ಕೈಗೊಳ್ಳದೇ ಇರುವುದರಿಂದ ತೀವ್ರ ಸಮಸ್ಯೆ ತಲೆದೋರಿದೆ.

ಜಿಲ್ಲೆಯ ಏಳು ತಾಲೂಕುಗಳ ರೈತರು, ಸಾರ್ವಜನಿಕರು 11 ಇ ನಕ್ಷೆ, ತತ್ಕಾಲ್ ಪೋಡಿ, ಹದ್ದು ಬಸ್ತು, ಇ ಸ್ವತ್ತು, ಅಳತೆ ಕಾರ್ಯಗಳಿಗೆ ನಿತ್ಯವೂ ನಗರದ ಸರ್ವೇ ಕಚೇರಿಗೆ ಬರುತ್ತಿದ್ದಾರೆ. ಒಂದೇ ದಿನಕ್ಕೆ ಸಮಸ್ಯೆ ಪರಿಹಾರವಾಗುತ್ತಿಲ್ಲ. ನಾನಾ ಸಮಸ್ಯೆಗಳ ಪರಿಹಾರಕ್ಕೆ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕ ಪಾವತಿಸಿದ್ದಾರೆ. ಆದರೂ ಅಳತೆ ಕಾರ್ಯ ಬಾಕಿ ಉಳಿದಿದೆ. ನಿಗದಿತ ಸಮಯದಲ್ಲಿ 11 ಇ ನಕ್ಷೆಗಾಗಿ ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ರಯ, ವಿಕ್ರಯ ನಡೆಯದೇ ಇಕ್ಕಟ್ಟಿಗೆ ಸಿಲುಕಿರುವುದೂ ಕಂಡುಬಂದಿದೆ.
ರೈತರು ತತ್ಕಾಲ್ ಪೋಡಿಗಾಗಿ ಅರ್ಜಿ ಶುಲ್ಕ ಪಾವತಿಸಿದ 30 ದಿನದೊಳಗೆ ಪ್ರತ್ಯೇಕ ಆರ್ಟಿಸಿ ಸಿಗಬೇಕಾಗಿದೆ. ಆದರೂ ಸಕಾಲದಲ್ಲಿ ಕೆಲಸಗಳು ನಡೆಯುತ್ತಿಲ್ಲ. ರಾಯಚೂರು, ಲಿಂಗಸೂಗೂರುನಿಲ್ಲಿ ಕಂದಾಯ ಇಲಾಖೆಯ ಎರಡು ಸಹಾಯಕ ಆಯುಕ್ತರ ಕಚೇರಿಗಳಿವೆ. ಆದರೆ ರೈತರ ಜಮೀನಿನ ಇ ಸ್ವತ್ತು, ಅಳತೆ ಕಾರ್ಯಗಳು ನಡೆಯುತ್ತಿಲ್ಲ. ರಾಯಚೂರಿನ ಡಿಡಿಎಲ್ಆರ್ ಕಚೇರಿಗೆ ಆಗಮಿಸಲು ರೈತರಿಗೆ ಒಂದು ದಿನದ ಸಮಯ ಹಾಳಾಗಲಿದೆ.
ಸುಮಾರು 120 ಕಿ.ಮೀ. ದೂರದಿಂದ ನಗರ ಕಚೇರಿಗೆ ಬರಲು ತೀವ್ರ ಸಮಸ್ಯೆಯಾಗಲಿದೆ. ಆದ್ದರಿಂದ ಸರ್ಕಾರ ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸಿಂಧನೂರು ಅಥವಾ ಪ್ರಮುಖ ತಾಲೂಕು ಕೇಂದ್ರದಲ್ಲಿ ಮತ್ತೊ ಡಿಡಿಎಲ್ಆರ್ ಕೇಂದ್ರ ಸ್ಥಾಪಿಸಬೇಕಿದೆ. ಜಿಲ್ಲೆಯಲ್ಲಿ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಹುದ್ದೆಗಳು 5 ಹಾಗೂ ಉಪ ನಿರ್ದೇಶಕರ ಹುದ್ದೆ ಒಂದಿದೆ. ಇದರಲ್ಲಿ ಇಬ್ಬರು ಮಾತ್ರ ಸಹಾಯಕ ನಿರ್ದೇಶಕರಿದ್ದು, ಇನ್ನೂ ಮೂರು ಹುದ್ದೆಗಳು ಪ್ರಭಾರಿ ಉಸ್ತುವಾರಿಯಲ್ಲಿದೆ. ಹೀಗಾಗಿ ರೈತರ ಕೆಲಸಗಳನ್ನು ಶೀಘ್ರದಲ್ಲೇ ನೆರವೇರಿಸಲಾಗುತ್ತಿಲ್ಲ.
ಆದ್ದರಿಂದ ರೈತರು ಸರ್ವೇ ಕಚೇರಿಗೆ ನಿತ್ಯವೂ ಅಲೆಯುವುದು ತಪ್ಪಿಲ್ಲ. ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಕಚೇರಿಗೆ ತಿರುಗಾಡದೆ ಶ್ರೀಮಂತ ರೈತರು ತಮ್ಮ ಜಮೀನಿನ ಸರ್ವೇ, ತಿದ್ದುಪಡಿ, ಪೋಡಿ, ಭೂ ನೋಂದಣಿ ಮಾಡಿಸಲು ಏಜೆಂಟರ್ಗಳಿಗೆ ಹಣ ನೀಡಿ ಕೆಲಸ ಮಾಡಿಕೊಳ್ಳುವ ಸ್ಥಿತಿ ಎದುರಾಗಿದೆ. ಸರ್ಕಾರ ಕೂಡಲೇ ಡಿಡಿಎಲ್ಆರ್ ಕಚೇರಿ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕಿದೆ ಎಂಬುದು ಇಲ್ಲಿನ ಜನರ ಆಗ್ರಹವಾಗಿದೆ.
ಜಿಲ್ಲೆಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ರೈತರಿಗೆ ಸಂಬಂಧಿಸಿದ 500ಕ್ಕೂ ಹೆಚ್ಚು ಅರ್ಜಿ ಸಲ್ಲಿಸಿದ್ದು, ಈ ಪೈಕಿ ಬೆರಳಣಿಕೆಯ ಅರ್ಜಿಗಳು ಇತ್ಯರ್ಥವಾಗಿವೆ. ಇನ್ನು ಶೇಕಡಾ 50ರಷ್ಟು ಅರ್ಜಿಗಳು ಇತ್ಯರ್ಥವಾಗದೇ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ರೈತರ ಅರ್ಜಿಗಳು ಸಮರ್ಪಕ ವಿಲೇವಾರಿಯಾಗದೇ ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗಿದೆ.
ಜಿಲ್ಲೆಯ ಗಡಿ ಭಾಗದಿಂದ ಬರುವ ರೈತರಿಗೆ ನಗರಕ್ಕೆ ಬರಲು ತೀವ್ರ ಸಮಸ್ಯೆಯಾಗಿದೆ. ಹೀಗಾಗಿ ಕೆಲ ವರ್ಷಗಳ ಹಿಂದೆಯೇ ಜಿಲ್ಲೆಯಲ್ಲಿ ಎರಡು ಭೂ ಮಾಪನ ಶಾಖೆಗಳನ್ನು ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರಾಯಚೂರು ಶಾಖೆಯ ಡಿಡಿಎಲ್ಆರ್ ರೇಷ್ಮಾ ಪಾಟೀಲ್ ಹೇಳಿದರು.












Click it and Unblock the Notifications