ಈರುಳ್ಳಿ ಬೆಳೆದ ರೈತನ ಕಣ್ಣಲ್ಲೇ ನೀರು; ಕಾರಣ ಏನು?
ಧಾರವಾಡ, ಅಕ್ಟೋಬರ್ 12: ಪ್ರವಾಹ ಜನರ ಬದುಕನ್ನೇ ಮೂರಾಬಟ್ಟೆ ಮಾಡಿದೆ. ಇದಕ್ಕೆ ಉದಾಹರಣೆಯಾಗಿ ಕಾಣುತ್ತಿವೆ ಧಾರವಾಡದ ನವಲಗುಂದ ತಲೂಕಿನ ತಲೆಮೊರಬ ಗ್ರಾಮದ ರೈತರ ಈರುಳ್ಳಿ ಹೊಲಗಳು.
ಒಳ್ಳೆ ಬೆಲೆಯ ನಿರೀಕ್ಷೆಯಲ್ಲಿ ಧಾರವಾಡದ ತಲೆಮೊರಬ ಗ್ರಾಮದಲ್ಲಿ ಈ ಬಾರಿ ರೈತರು ಈರುಳ್ಳಿ ಬೆಳೆದಿದ್ದರು. ಈರುಳ್ಳಿಗೆ ಉತ್ತಮ ಬೆಲೆ ಸಿಗಬಹುದು ಎಂದು ಅಂದಾಜು ಹಾಕಿಕೊಂಡಿದ್ದರು. ಆದರೆ ಆ ಲೆಕ್ಕಾಚಾರವೆಲ್ಲಾ ತಲೆ ಕೆಳಗಾಗಿದೆ. ಈ ಬಾರಿ ಸುರಿದ ಭಾರೀ ಮಳೆಗೆ ಬೆಳೆದ ಈರುಳ್ಳಿ ಹಾನಿಯಾಗಿದೆ.ಪ್ರವಾಹದಲ್ಲಿ ಸಾಕಷ್ಟು ಈರುಳ್ಳಿ ಬೆಳೆ ಕೊಚ್ಚಿ ಹೋಗಿದ್ದು, ಕೆಲವೆಡೆ ತಿರುಗು ರೋಗ ಶುರುವಾಗಿದೆ.

ರೈತರು ಸಾಲಸೋಲ ಮಾಡಿದ ಬೆಳೆದ 13 ಎಕರೆ ಈರುಳ್ಳಿ ಕೈಗೆ ಬರುವ ಹೊತ್ತಿನಲ್ಲಿ ಕೈ ಕೊಟ್ಟಿದೆ. 13 ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಈರುಳ್ಳಿ ಬೆಳೆಗೆ ಪ್ರತಿ ಎಕರೆಗೆ 30 ಸಾವಿರ ರೂಪಾಯಿ ಖರ್ಚು ಮಾಡಲಾಗಿತ್ತು. ಅಲ್ಲದೇ ಈರುಳ್ಳಿಯ ಮೇಲೆ ವಿಮೆಯನ್ನು ಕೂಡ ಕಟ್ಟಲಾಗಿದೆ. ಆದರೆ ಈಗ ಬೆಳೆ ವಿಮೆಯ ಹಣವೂ ಸಿಗುತ್ತಿಲ್ಲ. ಅದರಲ್ಲೂ ಒಂದು ಎಡವಟ್ಟಾಗಿದೆ. ಈರುಳ್ಳಿ ಬೆಳೆಯುವ ಪ್ರದೇಶದಲ್ಲಿ ಮೆಣಸಿನಕಾಯಿಯ ಬೆಳೆ ವಿಮೆ ಕಟ್ಟಿಸಿಕೊಂಡಿದ್ದಾರೆ. ಮೆಣಸಿನಕಾಯಿ ಬೆಳೆಯುವ ಪ್ರದೇಶದಲ್ಲಿ ಈರುಳ್ಳಿ ಬೆಳೆ ವಿಮೆ ಕಟ್ಟಿಸಿಕೊಂಡಿದ್ದು, ಈ ಸಂಗತಿ ರೈತರನ್ನು ಆತಂಕಕ್ಕೆ ತಳ್ಳಿದೆ. ಇಷ್ಟೆಲ್ಲಾ ಕಷ್ಟಗಳ ನಡುವೆ ಗಾಯದ ಮೇಲೆ ಬರೆ ಎಳೆದಂತೆ ಈರುಳ್ಳಿಗೆ ತಿರುಗು ರೋಗ ಕಾಡುತ್ತಿದೆ.
ಪ್ರತಿ ಬಾರಿಯೂ ಒಂದಲ್ಲಾ ಒಂದು ಸಮಸ್ಯೆಯಿಂದ ಜಿಲ್ಲೆಯ ರೈತರು ಬಳಲುತ್ತಲೇ ಇರುತ್ತಾರೆ. ಈರುಳ್ಳಿಗೆ ಒಳ್ಳೆ ದರ ಬಂದಿದೆ ಅನ್ನುವಾಗಲೂ ಮಧ್ಯವರ್ತಿಗಳ ಕಾಟದಿಂದ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಹಲವಾರು ಬಾರಿ ನಿರ್ಮಾಣವಾಗಿದೆ. ಹೀಗಾಗಿ ರೈತರ ಸಂಕಷ್ಟಕ್ಕೆ ಕೂಡಲೇ ಜಿಲ್ಲಾಡಳಿತ ಸ್ಪಂದಿಸಬೇಕು ಅನ್ನುವ ಕೂಗು ಪ್ರತಿ ಬಾರಿಯೂ ಕೇಳಿಬರುತ್ತಲೇ ಇರುತ್ತದೆ. ಆದರೆ ಪರಿಸ್ಥಿತಿ ಕೈಮೀರಿ ಹೋಗುವವರೆಗೂ ಜಿಲ್ಲಾಡಳಿತ ಸುಮ್ಮನೆ ಕುಳಿತುಕೊಂಡು, ಬಳಿಕ ಎಚ್ಚೆತ್ತುಕೊಂಡಂತೆ ಆಟವಾಡುವುದು ಮಾಮೂಲಾಗಿದೆ. ಈ ಬಾರಿಯೂ ಹಾಗೆ ಆಗದಿರಲಿ ಅನ್ನುವುದೇ ಇಲ್ಲಿನ ರೈತರ ಮನವಿ.












Click it and Unblock the Notifications