ಹೆಸರು ಬೆಳೆಗೆ ಬೆಂಬಲ ಬೆಲೆ ಸಿಗದೆ ಗದಗ ಜಿಲ್ಲೆಯ ರೈತರು ಹೈರಾಣ
ಗದಗ, ಆಗಸ್ಟ್, 17: ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ರೈತರು ಬೆಳೆದ ಹೆಸರು ಬೆಳೆಗಳೆಲ್ಲ ನೀರುಪಾಲಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದ್ದು, ಅನ್ನದಾತ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಆಗಿದೆ. ಅಲ್ಪಸ್ವಲ್ಪ ಹೆಸರು ಬೆಳೆಗಳು ಕೈಗೆ ಸಿಕ್ಕಿದೆ. ಆದರೆ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಸಿಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಕಟಾವಿಗೆ ಬಂದ್ದಿದ್ದ ಹೆಸರು ಬೆಳೆಗಳೆಲ್ಲ ನಿರಂತರ ಮಳೆಯಿಂದಾಗಿ ಸಂಪೂರ್ಣ ಜಲಾವೃತವಾಗಿವೆ. ಕಡಿಮೆ ಪ್ರಮಾಣದಲ್ಲಿ ಬೆಳೆ ರೈತರ ಕೈಸೇರಿದ್ದು, ಕಟಾವಾಗಿ ಮಾರುಕಟ್ಟೆಗೆ ಬಂದಿದೆ. ಆದರೆ ಮಾರುಕಟ್ಟೆಯಲ್ಲಿಯೂ ಸಹ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಆದ್ದರಿಂದ ಹೆಸರು ಬೆಳೆ ಖರೀದಿ ಕೇಂದ್ರ ಆರಂಭಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ.
ಹಳದಿ ಬಣಕ್ಕೆ ತಿರುಗಿದ ಹೆಸರು ಬೆಳೆ; ಹೆಸರು ಬೆಳೆ ಬಹುತೇಕ ಹಳದಿ ರೋಗಕ್ಕೆ ತಿರುಗಿದೆ. ಹೆಸರು ಬಳ್ಳಿಯ ಎಲೆಗಳೆಲ್ಲ ಕಪ್ಪುಗಟ್ಟಿದ್ದು, ಸ್ವಲ್ಪ ಪ್ರಮಾಣದಲ್ಲಿ ಕಾಳುಗಳು ರೈತರ ಕೈ ಸೇರಿವೆ. ಉಳಿದ ಬೆಳೆಯಲ್ಲೇ ಕಾಳು ಮಾಡಿ ರೈತರು ರಾಶಿ ಮಾಡಿಕೊಂಡಿದ್ದಾರೆ. ಗದಗ ಜಿಲ್ಲೆಯಾದ್ಯಂತ ಸದ್ಯ ಇದೇ ದೃಶ್ಯ ಕಂಡು ಬರುತ್ತಿದೆ. ಕೃಷಿ ಕಾಯಕವನ್ನೇ ನಂಬಿ ಜೀವನ ನಡೆಸುತ್ತಿರುವ ರೈತಾಪಿ ವರ್ಗಕ್ಕಂತೂ ಪ್ರಕೃತಿ ವಿಕೋಪ ತುಂಬಾ ಪೆಟ್ಟು ಕೊಟ್ಟಿದೆ. ಮಳೆರಾಯ ರೈತರ ಆಶಾಭಾವನೆಯನ್ನೇ ಕಸಿದುಕೊಂಡಿದ್ದಾನೆ. ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಗದಗ ತಾಲೂಕಿನ ಸಾವಿರಾರು ಎಕರೆಯಲ್ಲಿ ಹೆಸರು ಬೆಳೆ ನಾಶವಾಗಿದ್ದು, ಕಡಿಮೆ ಬೆಳೆಗಳು ಕೈಸೇರಿದೆ ಎಂದು ರೈತರು ಅಸಮಾಧಾನ ಹೊರಹಾಕಿದರು.
ಒಂದು ಲಕ್ಷಕ್ಕೂ ಹೆಚ್ಚು ಹೆಕ್ಟೇರ್ನಲ್ಲಿ ಹೆಸರು ಬೆಳೆ; ಜಿಲ್ಲೆಯಲ್ಲಿ 3.17 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶ ಇದ್ದು, ಒಟ್ಟು 1.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದೆ. ಅಂದಾಜು 79 ಸಾವಿರ ಹೆಕ್ಟೇರ್ನಲ್ಲಿ ಹೆಸರು ಬೆಳೆ ನಾಶವಾಗಿದೆ. ಹೆಸರು ಬೆಳೆಗೆ ಹಳದಿ ರೋಗ ಅಂಟಿಕೊಂಡ ಪರಿಣಾಮ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಹೆಸರಿಗೆ 4,500 ರೂಪಾಯಿಗೆ ಮಾರಾಟ ಆಗುತ್ತಿದೆ. ಸರ್ಕಾರದ ಬೆಂಬಲ ಬೆಲೆ 7,250 ರೂಪಾಯಿ ಇರುವುದರಿಂದ ಆದಷ್ಟು ಬೇಗ ಖರೀದಿ ಕೆಂದ್ರ ತೆರೆಯುವಂತೆ ರೈತರ ಆಗ್ರಹವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಕೇಳಿದರೆ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಆದಷ್ಟು ಬೇಗ ಖರೀದಿ ಕೇಂದ್ರ ಆರಂಭ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಎನ್ನುವ ಮೂಲಕ ರೈತರು ಅಸಮಾಧಾನ ವ್ಯಕ್ತಪಡಿಸಿದರು.