ಪ್ರತಿಭಟನೆ ಜಾಗದಿಂದ ಜಗ್ಗುವ ಮಾತೇ ಇಲ್ಲ; ಪಟ್ಟುಬಿಡದ ರೈತರು
ನವದೆಹಲಿ, ಡಿಸೆಂಬರ್ 24: ಕೇಂದ್ರ ಸರ್ಕಾರ ತನ್ನ ಕಾಯ್ದೆಗಳ ಕುರಿತು ಹೊಸ ಕಾಯಸೂಚಿಗಳನ್ನು ರೂಪಿಸುವವರೆಗೂ ನಾವು ಮಾತುಕತೆಗೆ ಮುಂದಾಗುವುದಿಲ್ಲ ಎಂದು ಪ್ರತಿಭಟನಾನಿರತ ರೈತರು ತಿಳಿಸಿದ್ದು, ಪ್ರತಿಭಟನೆಯ ಬಿಕ್ಕಟ್ಟನ್ನು ಕೊನೆಗೊಳಿಸುವ ಸವಾಲು ಸರ್ಕಾರಕ್ಕೆ ಇನ್ನಷ್ಟು ಕಠಿಣವಾಗಿದೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಗಳಲ್ಲಿ ರೈತರು ಕೈಗೊಂಡಿರುವ ಪ್ರತಿಭಟನೆ ಗುರುವಾರ 29ನೇ ದಿನಕ್ಕೆ ಕಾಲಿಟ್ಟಿದೆ. ನ. 26ರಿಂದಲೂ ಪ್ರತಿಭಟನೆ ನಡೆಯುತ್ತಿದ್ದು, ಕೃಷಿ ಕಾಯ್ದೆಗಳ ರದ್ದತಿಗೆ ರೈತರು ಪಟ್ಟು ಹಿಡಿದಿದ್ದಾರೆ.
"ಇಡೀ ದೇಶಕ್ಕೆ ಅನ್ನ ನೀಡುವ ರೈತರನ್ನೇ ಉಪವಾಸಗೆಡವಿದ್ದೀರಲ್ಲಾ..."
ಸುಮಾರು ನೂರು ಮಂದಿ ರೈತರ ಬೃಹತ್ ಸಭೆ ಬುಧವಾರ ನಡೆದಿದ್ದು, ತಮ್ಮ ಬೇಡಿಕೆ ಈಡೇರುವವರೆಗೂ ತಾವು ಪ್ರತಿಭಟನೆ ಸ್ಥಳದಿಂದ ಜಗ್ಗುವ ಮಾತೇ ಇಲ್ಲ ಎಂದಿದ್ದಾರೆ.
ಭಾನುವಾರವಷ್ಟೇ, ಕೃಷಿ ಕಾಯ್ದೆ ತಿದ್ದುಪಡಿ ಕುರಿತಂತೆ ಚರ್ಚಿಸಲು ದಿನಾಂಕ ನಿಗದಿಪಡಿಸುವಂತೆ ಕೇಂದ್ರ ಸರ್ಕಾರ ರೈತ ಸಂಘಗಳಿಗೆ ಪತ್ರ ಬರೆದಿತ್ತು. ಮಂಗಳವಾರ ಹಿರಿಯ ರೈತ ಮುಖಂಡರು ಪತ್ರಕ್ಕೆ ಉತ್ತರಿಸಿದ್ದು, ಮಾತುಕತೆ ಕುರಿತು ಇನ್ನೂ ನಿರ್ಧರಿಸಲಾಗಿಲ್ಲ. ಕನಿಷ್ಠ ಬೆಂಬಲ ಬೆಲೆಯನ್ನು ಮುಂದುವರೆಸುವ ಸರ್ಕಾರದ ಭರವಸೆಗಿಂತ ಬೆಲೆ ಖಾತರಿ ಮುಖ್ಯ ಎಂದಿದ್ದಾರೆ.
"ಮೈ ಥರಗುಟ್ಟಿಸುವ ಚಳಿಯಲ್ಲಿ ಸಾವಿರಾರು ರೈತರು ಮಲಗುವುದು ಸರ್ಕಾರ ಅತಿ ಕಾಳಜಿ ವಹಿಸಬೇಕಾದ ವಿಷಯವಾಗಿದೆ. ಹೀಗಾಗಿ ರೈತ ಸಂಘಗಳು ಮಾತುಕತೆಗೆ ಮುಂದೆ ಬರಬೇಕು" ಎಂದು ಬುಧವಾರ ಕೃಷಿ ಸಚಿವ ನರೇಂದ್ರ ತೋಮರ್ ತಿಳಿಸಿದ್ದರು.
ಈ ಕಾಯ್ದೆಗಳ ಪ್ರಯೋಜನಗಳ ಕುರಿತು ವಿವರಿಸಲು ಕೃಷಿ ಸಚಿವರು ಪ್ರಯತ್ನಿಸುತ್ತಿದ್ದು, ರೈತರು ಮಾತ್ರ, ಈ ಕಾಯ್ದೆ ರದ್ದುಗೊಳಿಸುವವರೆಗೂ ಮಾತುಕತೆ ನಡೆಯುವುದರಲ್ಲಿ ಪ್ರಯೋಜನವಿಲ್ಲ ಎಂದಿದ್ದಾರೆ.
ಸರ್ಕಾರ, ಕಾಯ್ದೆಯ ಪ್ರಸ್ತಾವ ಹಾಗೂ ರೈತರಿಗೆ ನೀಡಿರುವ ರಿಯಾಯಿತಿಗಳ ಕುರಿತ ಮಾತುಕತೆಗೆ ಆಹ್ವಾನಿಸಿ ರೈತರಿಗೆ ಡಿ.9ರಂದು ಕಳುಹಿಸಿರುವ ಪತ್ರಕ್ಕೆ ಪ್ರತಿಕ್ರಿಯಿಸಿ, ರೈತ ಸಂಘಗಳು ಮಾತುಕತೆಗೆ ಬರಲು ಸಿದ್ಧ. ಆದರೆ ಸರ್ಕಾರ ಅದೇ ಹಳೇ ಪ್ರಸ್ತಾವನೆಯೊಂದಿಗೆ ಬಂದರೆ ಪ್ರಯೋಜನವಿಲ್ಲ ಎಂದು ಹಿರಿಯ ಮುಖಂಡ ದರ್ಶನ್ ಪಾಲ್ ತಿಳಿಸಿದ್ದಾರೆ.