ಬೀರು ತರುವವರ ಮನೆಗೆ ನೀರಾ ತರುವಾ!

ಮಂಗಳೂರಿನಲ್ಲಿ ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ಜ್ಯೂಸ್ ತಯಾರಿಕಾ ಘಟಕಾ ಅಸ್ತಿತ್ವಕ್ಕೆ ಬರಲಿದೆ. ನೀರಾ ತಯಾರಿಕೆಗೆ ಬಳಸಲಾಗುವ ತಂತ್ರಜ್ಞಾನವನ್ನು ಸುರಕ್ಷಿತ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್ಆರ್ಎಲ್) ಮತ್ತು ಮೈಸೂರಿನ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಅಭಿವೃದ್ಧಿ (ಸಿಎಫ್ ಟಿಆರ್ಐ) ಪಡೆಸಿದೆ. ಈ ತಂತ್ರಜ್ಞಾನದಿಂದ ದಿನವೊಂದಕ್ಕೆ 1,000 ಲೀಟರ್ ನೀರಾ (ಜ್ಯೂಸ್) ತಯಾರಿಸುವ ಸಾಮರ್ಥ್ಯವಿದೆ ಎಂದು ರಾಜ್ಯ ಕೃಷಿ ನಿರ್ದೇಶಕ ಎನ್ ಜಯರಾಮ್ ಹೇಳುತ್ತಾರೆ.
ನೀರಾಗೆ ಇಲ್ಲ ಅಧಿಕೃತ ಮಾನ್ಯತೆ: ರಾಜ್ಯ ಸರ್ಕಾರ ಅಬಕಾರಿ ಕಾಯ್ದೆಯಲ್ಲಿ ನೀರಾ ಕುರಿತಾದ ತಿದ್ದುಪಡಿ ಇನ್ನೂ ಆಗಿಲ್ಲ. ಕಾಯಿದೆಯಲ್ಲಿ ತಿದ್ದುಪಡಿ ಆದ ನಂತರವಷ್ಟೆ ಇಲಾಖೆ ಘಟಕಕ್ಕಾಗಿ ಟೆಂಡರು ಕರೆಯಲು ಸಾಧ್ಯ. ಸದ್ಯದ ಅಬಕಾರಿ ಕಾಯ್ದೆಯಂತೆ ಹುಳಿ ಬರಿಸಿದ ನೀರಾವನ್ನು ಸಾರಾಯಿ ಎಂದೇ ಪರಿಗಣಿಸಲಾಗಿದೆ. ಜೊತೆಗೆ ಇದನ್ನು ಸಾರ್ವಜನಿಕವಾಗಿ ಮಾರುವಂತಿಲ್ಲ ಎಂದು ಸೂಚಿಸಿದೆ.
ನಾವು ಪ್ರಾರಂಭದಲ್ಲಿ ಮಂಗಳೂರು ಸಮೀಪ 29 ಎಕರೆ ಭೂ ಪ್ರದೇಶದಲ್ಲಿ ಬೆಳೆದಿರುವ 400 ತೆಂಗಿನ ಮರಗಳನ್ನು ನೀರಾಕ್ಕಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದೇವೆ. ಈ ತೆಂಗಿನ ಮರದ ಸುಳಿಯ ಭಾಗದಲ್ಲಿ ಮಾಡಲಾಗುವ ರಂಧ್ರಗಳಿಂದ ಸೂರ್ಯ ಉದಯಿಸುವ ಮುನ್ನ ರಸ ಸುರಿಯುತ್ತದೆ. ಪ್ರತಿಯೊಂದು ಮರದಿಂದ ದಿನವೊಂದಕ್ಕೆ 2 ರಿಂದ 3 ಲೀಟರ್ ನೀರು ಸಂಗ್ರಹಿಸಬಹುದಾಗಿದೆ.
ಇದನ್ನು ಸಂಗ್ರಹಿಸಿ ತಂತ್ರಜ್ಞಾನದ ಮೂಲಕ ಜ್ಯೂಸ್ ತಯಾರಿಸಲಾಗುವುದು. 6 ರಿಂದ 9 ತಿಂಗಳಲ್ಲಿ ಜ್ಯೂಸ್ ಸಿದ್ಧಗೊಳ್ಳುವುದು. ಈ ಜ್ಯೂಸ್ ಸಕ್ಕರೆ ಅಂಶ ರಹಿತವಾದುದು ಮಾತ್ರವಲ್ಲ ದೇಹಕ್ಕೆ ಆರೋಗ್ಯಕರವಾದುದು ಎಂದು ಜಯರಾಮ್ ಹೇಳಿದ್ದಾರೆ.
ನೀರಾ ನೀತಿಗೆ ಒತ್ತಾಯ: ಈ ಮಧ್ಯೆ ರಾಜ್ಯ ರೈತ ಸಂಘ ಕೂಡ "ನೀರಾ ನೀತಿ" ಶೀಘ್ರವಾಗಿ ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಿದೆ. ಸುಮಾರು ಹತ್ತು ವರ್ಷಗಳಿಂದಲೂ ನೀರಾ ನೀತಿಯನ್ನು ಘೋಷಿಸುವಂತೆ ಒತ್ತಾಯಿಸುತ್ತಿದ್ದೇವೆ. ತೆಂಗಿನ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ವಿವಿಧ ರೋಗಗಳಿಂದ ರೈತರು ಕೃಷಿ ಬಗ್ಗೆ ಆಸಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಕಾಡು ಪ್ರಾಣಗಳಿಂದ, ಕೀಟಗಳಿಂದ ತೆಂಗಿನ ಕಾಯಿ ನಷ್ಟವಾದರೂ ನೀರಾ ತೆಗೆಯುವ ಮೂಲಕ ರೈತನಿಗೆ ಲಾಭವಾಗಲಿದೆ' ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಎ ಎಂ ಮಹೇಶ್ ಪ್ರಭು ಹೇಳಿದ್ದಾರೆ. [ರೈತ]












Click it and Unblock the Notifications