ಈ ಜಲಾಶಯಕ್ಕೆ ನೀರು ಹರಿಸಲು ಹಿಂದೇಟು, ಶಾಸಕರ ವಿರುದ್ಧ ರೊಚ್ಚಿಗೆದ್ದ ರಾಯಚೂರು ಜಿಲ್ಲೆ ರೈತರು
ರಾಯಚೂರು, ಅಕ್ಟೋಬರ್, 21: ಜಿಲ್ಲೆಯಲ್ಲಿ ಆವರಿಸಿರುವ ಬರ ನಿವಾರಣೆಗೆ ಕಾಲುವೆ ಮೂಲಕ ಎನ್.ಗಣೇಕಲ್ ಜಲಾಶಯಕ್ಕೆ ನೀರು ಹರಿಸಲು ಶಾಸಕರು ನಿರಾಸಕ್ತಿ ವಹಿಸಿದ್ದರಿಂದ ಬರಿದಾಗುತ್ತಿದೆ. ಹೀಗಾಗಿ, ಕುಡಿವ ನೀರು ಮತ್ತು ಕೃಷಿ ಚಟುವಟಿಕೆಗೆ ತೊಂದರೆಯಾಗಿದ್ದು, ರೈತರು, ಸಾರ್ವಜನಿಕರ ಬದುಕು ಅಡಕತ್ತರಿಗೆ ಸಿಲುಕಿದೆ.
ದೇವದುರ್ಗ ತಾಲೂಕಿನ ಎನ್.ಗಣೇಕಲ್ ಜಲಾಶಯ ಸಾಕಷ್ಟು ಹೆಕ್ಟೇರ್ ಭೂಮಿಗೆ ನೀರುಣಿಸುತ್ತಿತ್ತು, ಕುಡಿಯುವ ನೀರಿಗೂ ಆಸರೆಯಾಗಿತ್ತು. ಕಾಲುವೆ ಮೂಲಕ ನೀರು ತುಂಬಿಸದೇ ಇರುವುದರಿಂದ ಜಲಾಶಯದ ಒಡಲು ಖಾಲಿಯಾಗುತ್ತಿದೆ. ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆ ಭಾಗದ ರೈತರ ಬೆಳೆ, ಜನ ಜಾನುವಾರುಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ. ಜಲಾಶಯ ತುಂಬಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಲೋಚನೆ ಮಾಡದೇ ಬಿಸಿಲಿಗೆ ಹಾವಿಯಾಗಿ ಅಳಿದುಳಿದ ನೀರು ಬರಿದಾಗುತ್ತಿದೆ.

ಬೇಸಿಗೆ ಆರಂಭಕ್ಕೂ ಮುನ್ನವೇ ರಾಯಚೂರು ನಗರ ಸೇರಿದಂತೆ ದೇವದುರ್ಗ, ಸಿರವಾರ ತಾಲೂಕಿನ ರೈತರು ಪರದಾಡುವಂತಾಗಿದೆ. ಎನ್. ಗಣೇಕಲ್ ಜಲಾಶಯ ವ್ಯಾಪ್ತಿಯ ರಾಯಚೂರು ನಗರಸಭೆಯ 10ಕ್ಕೂ ಹೆಚ್ಚು ವಾರ್ಡ್ಗಳು, ಸಿರವಾರ ತಾಲೂಕಿನ ಕಲ್ಲೂರು, ಸೀತಾನಗರ ಕ್ಯಾಂಪ್, ಹೊಕ್ರಾಣಿ ಸೇರಿ ಇತರ ಕ್ಯಾಂಪ್ಗಳು, ಮಾನ್ವಿ ತಾಲೂಕಿನ ಕುರ್ಡಿ ಸೇರಿದಂತೆ ಕೆಲ ಆಂಧ್ರ ಕ್ಯಾಂಪ್ ಹಾಗೂ ಗ್ರಾಮೀಣ ಪ್ರದೇಶದ 20ಕ್ಕೂ ಹೆಚ್ಚು ಗ್ರಾಮಗಳ ಕುಡಿಯುವ ನೀರು ಮತ್ತು ಬೆಳೆಗೆ ನೀರುಣಿಸಲು ಗಣೇಕಲ್ ಬಳಿ ನಿರ್ಮಿಸಿದ್ದ ಕೆರೆ ನೀರಿಲ್ಲದೆ ತಳ ಕಚ್ಚಿದೆ.
ಮಳೆಯ ಅಭಾವದಿಂದ ನಲುಗಿದ್ದ ರೈತರಿಗೆ ತುಂಗಭದ್ರಾ ಜಲಾಶಯದಿಂದ ಹರಿಸಿದ ನೀರು ಸರಿಯಾಗಿ ಕೆಳಭಾಗಕ್ಕೆ ಜಲಾಶಯ ವ್ಯಾಪ್ತಿಗೆ ತರಲು ಜಿಲ್ಲಾಡಳಿತ, ನೀರಾವರಿ ಇಲಾಖೆ, ಮಾನ್ವಿ, ದೇವದುರ್ಗ, ರಾಯಚೂರು, ರಾಯಚೂರು ಗ್ರಾಮೀಣ ಶಾಸಕರ ನಿರ್ಲಕ್ಷ್ಯದಿಂದ ವಿಫಲವಾಗಿದೆ. ಕಾಲುವೆ ಮೂಲಕ ಜಲಾಶಯಕ್ಕೆ ನೀರು ತರದೇ ಇರುವುದರಿಂದ ಆಕ್ರೋಶ ವ್ಯಕ್ತವಾಗಿದೆ.
ಜಿಲ್ಲೆಯ ಕೆಳ ಭಾಗದ ರೈತರ ಜೀವಾಳವಾಗಿದ್ದ ಗಣೇಕಲ್ ಬಳಿಯ 1,600 ಎಕರೆ ಪ್ರದೇಶದ ಜಲಾಶಯದಲ್ಲಿ 33 ಅಡಿ ನೀರು ಸಂಗ್ರಹ ಇರಬೇಕಿತ್ತು. ಆದರೆ ಈಗ 1.5 ಅಡಿ ಮಾತ್ರ ನೀರಿದ್ದು, ಕೆರೆಯಿಂದ ಕಾಲುವೆಗೆ ಹರಿಸಲು ಇರುವ ಗೇಟು ಎತ್ತಿದರೂ ನೀರು ಹೊರಗೆ ಬರುವುದಿಲ್ಲ. ನೀರಿನ ಮಟ್ಟ ದಿನೇದಿನೆ ಕುಸಿಯುತ್ತಿರುವುದರಿಂದ ಮುಂದಿನ ವರ್ಷ ಪೂರ್ತಿ ಕುಡಿಯುವ ನೀರಿಗೆ ಸಮಸ್ಯೆ ಆಗಲಿದೆ.
ಸದ್ಯ ಮೆಣಸಿನಕಾಯಿ ಬೆಳೆದ ರೈತರಿಗೆ ತುರ್ತು ನೀರಿನ ಅವಶ್ಯಕತೆ ಇದೆ. ಬೆಳೆದು ನಿಂತಿರುವ ಭತ್ತ, ಹತ್ತಿಗೂ ನೀರಿನ ಆವಶ್ಯಕತೆ ಇದೆ. ಅಲ್ಲದೆ, ಹಿಂಗಾರು ಕಡಲೆ, ಹೈಬ್ರಿಡ್ ಜೋಳ ಬಿತ್ತನೆಗೂ ನೀರು ಬೇಕಿದೆ. ಈಗ ಜಲಾಶಯಲ್ಲಿ ಸಂಗ್ರಹ ಇರುವ ನೀರು ಯಾವುದಕ್ಕೂ ಸಾಲುವುದಿಲ್ಲ. ಆದರೆ ಪ್ರಸ್ತುತ 3.5 ಆಡಿಯೂ ನೀರಿಲ್ಲವಾಗಿದ್ದು, ಕಾಲುವೆ ಮೂಲಕ ಗಣೇಕಲ್ ಜಲಾಶಯಕ್ಕೆ ನೀರು ಹರಿಸಲು ಸಂಬಂಧಪಟ್ಟವರು ಚಿಂತನೆ ನಡೆಸಬೇಕಿದೆ.
ಕಾಲುವೆ ಮೂಲಕ ಜಲಾಶಯಕ್ಕೆ ನೀರು ಭರ್ತಿ ಮಾಡಲು ಸಚಿವ ಎನ್.ಎಸ್.ಬೋಸರಾಜು ಅವರು ವಿಭಾಗೀಯ ಆಯುಕ್ತರಿಗೆ ಪತ್ರ ಬರೆದರೂ ಕ್ರಮವಾಗಿಲ್ಲ. ರಾಯಚೂರಿನ ಕೆಳಭಾಗಕ್ಕೆ ನೀರು ತಲುಪಿಸಲು ಗ್ರಾಮೀಣ ಶಾಸಕ ಸಭೆ ಮಾಡಿದ್ದಾರೆ. ಆದರೆ, ಎಲ್ಲಿಂದ ನೀರು ತರಬೇಕು ಎಂಬ ಬಗ್ಗೆ ಚಿಂತನೆ ನಡೆದಿಲ್ಲ. ಸಚಿವರು, ಶಾಸಕರು ಅಧಿಕಾರಿಗಳ ಮೇಲೆ ಒತ್ತಡ ಹೇರಬೇಕು ಎಂಬುದು ರೈತರ ಒತ್ತಾಸೆಯಾಗಿದೆ.
ಎನ್.ಗಣೇಕಲ್ ಜಲಾಶಯಕ್ಕೆ ನೀರು ಹರಿಸಲು ನಿರಂತರವಾಗಿ ನಾನೇ ಖುದ್ದು ಭೇಟಿ ನೀಡಿರುವೆ. ಬುಧವಾರ ಬೆಳಗ್ಗೆ 1.5 ಅಡಿ ನೀರಿತ್ತು. ಕೂಡಲೇ ಶಾಸಕರ ಜೊತೆಗೂಡಿ ನೀರಾವರಿ ಅಧಿಕಾರಿಗಳ ಮೂಲಕ ಗಣೇಕಲ್ ಜಲಾಶಯಕ್ಕೆ ನೀರು ಹರಿಸಿದ್ದು ಇಂದು 3.5 ಅಡಿ ನೀರು ಶೇಖರಣೆಯಾಗಿದೆ. ನಾಳೆ ಬೆಳಗ್ಗೆ 4 ಅಡಿ ನೀರು ಶೇಖರಣೆಯಾಗಲಿದೆ. ಅಕ್ರಮ ನೀರಾವರಿಗೆ ನೀರು ಬಳಸದಂತೆ ಎಚ್ಚರ ವಹಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹೇಳಿದರು.












Click it and Unblock the Notifications