ಮುಂಗಾರು ಹಂಗಾಮಿಗೆ ಸಿದ್ಧತೆ; ರೈತರಿಗೆ ಸಲಹೆಗಳು
ಕೊಪ್ಪಳ, ಮೇ 17 : ಮುಂಗಾರು ಆರಂಭವಾಗಲು ಕೆಲವು ದಿನಗಳು ಮಾತ್ರ ಬಾಕಿ ಇದೆ. ಲಾಕ್ ಡೌನ್ ನಡುವೆಯೇ ರೈತರು ಕೃಷಿ ಚಟುವಟಿಕೆ ಆರಂಭಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಮುಂಗಾರು ಹಂಗಾಮು ಆರಂಭವಾಗುತ್ತಿರುವುದರಿಂದ ಕೃಷಿ ಇಲಾಖೆಯು ರೈತರಿಗೆ ಹಲವು ಸಲಹೆಗಳನ್ನು ನೀಡಿದೆ. ಬಿತ್ತನೆ ಬೀಜ ಖರೀದಿ, ಉಳುಮೆ, ಇಳುವರಿ ಪಡೆಯಲು ಸಲಹೆಗಳನ್ನು ಕೊಡಲಾಗಿದೆ. ಇಲಾಖೆಯನ್ನು ರೈತರು ಸಂಪರ್ಕಿಸಬಹುದು ಎಂದು ಸಹ ತಿಳಿಸಲಾಗಿದೆ.
ಇಳಿಜಾರಿಗೆ ಅಡ್ಡಲಾಗಿ ಮಾಗಿ ಉಳುಮೆಯನ್ನು ಮಾಡುವುದರಿಂದ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡಬಹುದು. ಮುಂಗಾರು ಮಳೆಯಾಗುತ್ತಿದಂತೆ ಹರಗಿ ಬಿತ್ತಲು ಸುಲಭವಾಗುತ್ತದೆ ಎಂದು ತಿಳಿಸಲಾಗಿದೆ.
ಇದರಿಂದ ಬಿತ್ತಿದ ಬೀಜಗಳ ಮೊಳಕೆ ಪ್ರಮಾಣ ಹಾಗೂ ಸದೃಢ ಸಸಿಗಳ ಸಂಖ್ಯೆ ಹೆಚ್ಚಾಗಿ ಅಧಿಕ ಇಳುವರಿ ಪಡೆಯುವಲ್ಲಿ ಸಹಕಾರಿಯಾಗುತ್ತದೆ.
ರೈತರು ತಮ್ಮ ಹೊಲದಲ್ಲಿನ ಮಣ್ಣಿನ ಪೋಷಕಾಂಶದ ವಿಶ್ಲೇಷಣೆ ಸಲುವಾಗಿ ಮಣ್ಣಿನ ಮಾದರಿಗಳನ್ನು ತೆಗೆದುಕೊಂಡು ಹತ್ತಿರದ ಕೃಷಿ ವಿಜ್ಞಾನ ಕೇಂದ್ರ ಅಥವಾ ಕೃಷಿ ಇಲಾಖೆಗೆ ಸಲ್ಲಿಸಿ, ಪೋಷಕಾಂಶಗಳ ಸ್ಥಿತಿಗತಿಗಳ ಆಧಾರದ ಮೇಲೆ ಗೊಬ್ಬರಗಳನ್ನು ಬಳಸಬೇಕು ಎಂದು ಕರೆ ನೀಡಲಾಗಿದೆ.

ಗೊಬ್ಬರ ಹಾಕುವ ವಿಧಾನ
ಕೊಟ್ಟಿಗೆ ಅಥವಾ ಕಾಂಪೋಸ್ಟ್ ಗೊಬ್ಬರವನ್ನು ಹಾಕಿ 2-3 ಸಲ ಹರಗಿ ಭೂಮಿಯನ್ನು ಮುಂಗಾರು ಬಿತ್ತನೆಗೆ ಸಿದ್ಧಪಡಿಸಿರಿ. ರೈತರು ಬಿತ್ತನೆಗೆ ಅವಸರ ಮಾಡದೆ, ಚೆನ್ನಾಗಿ ಮಳೆಯಾದ ನಂತರ ಭೂಮಿಯಲ್ಲಿ ಅವಶ್ಯಕ ತೇವಾಂಶ ಇರುವುದನ್ನು ಖಾತರಿಪಡಿಸಿಕೊಂಡು ಬಿತ್ತನೆ ಕಾರ್ಯ ಕೈಗೊಳ್ಳಬೇಕು.

ಬೀಜ ವಿತರಣೆ ಮಾಡಲಾಗುತ್ತದೆ
ಬಿತ್ತನೆ ನಂತರ ಮಳೆಯ ಪ್ರಮಾಣ ಕಡಿಮೆಯಾದರೆ, ಬೆಳೆಯು ಹಾಳಾಗುವ ಸಂಭವವಿದೆ. ಬಿತ್ತನೆಯನ್ನು ಹವಾಮಾನಕ್ಕನುಗುಣವಾಗಿ ಕೈಗೊಳ್ಳಬೇಕು. ಕೃಷಿ ಇಲಾಖೆ ವತಿಯಿಂದ ಮುಂಗಾರು ಹಂಗಾಮಿನಲ್ಲಿ ರಿಯಾಯಿತಿ ದರದಲ್ಲಿ ಪ್ರತಿ ರೈತರಿಗೆ ಒಟ್ಟಾರೆ ಗರಿಷ್ಠ 2 ಹೆಕ್ಟರ್ ಅಥವಾ ಅವರ ವಾಸ್ತವಿಕ ಹಿಡುವಳಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಮಾತ್ರ ರಿಯಾಯಿತಿಯಲ್ಲಿ ಬೀಜ ವಿತರಣೆ ಮಾಡಲಾಗುತ್ತದೆ.

ಬಹುಬೆಳೆ, ಅಂತರ ಬೆಳೆ
ಹವಾಮಾನ ವೈಪರೀತ್ಯದಿಂದಾಗಿ ಬೆಳೆ ನಷ್ಟವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಏಕ ಬೆಳೆ ಪದ್ಧತಿಯನ್ನು ಪ್ರೋತ್ಸಾಹಿಸುವ ಬದಲು ಬಹುಬೆಳೆ, ಅಂತರ ಬೆಳೆ ಹಾಗೂ ಮಿಶ್ರಬೆಳೆ ಪದ್ಧತಿಯನ್ನು ಪ್ರೋತ್ಸಾಹಿಸಲಾಗುತ್ತದೆ. ರೈತರಿಗೆ ಒಂದು ಬೆಳೆಯ ಬಿತ್ತನೆ ಬೀಜವನ್ನು ಗರಿಷ್ಟ 3 ಎಕರೆ ಅಥವಾ ಅವರ ವಾಸ್ತವಿಕ ಹಿಡುವಳಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ ವಿತರಣೆ ಮಾಡಲಾಗುವುದು.

ಮುಂಗಾರು ಮಳೆ
ಈ ಬಾರಿಯ ಮುಂಗಾರು ಜೂನ್ ಮೊದಲ ವಾರದಲ್ಲಿ ಕರ್ನಾಟಕಕ್ಕೆ ಆಗಮಿಸುವ ಸಾಧ್ಯತೆ ಇದೆ. ಜೂನ್ 15ರ ವೇಳೆಗೆ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಭೂಮಿ ಕೃಷಿ ಚಟುವಟಿಕೆಗೆ ಸಿದ್ಧವಾಗುತ್ತದೆ. ವಾಡಿಕೆಯಷ್ಟು ಮಳೆ ಈ ಬಾರಿ ಆಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.












Click it and Unblock the Notifications