ಮಳೆ ಆರಂಭ; ಕುಸಿತ ಕಂಡ ಟೊಮೆಟೋ ಬೆಲೆ, ರೈತ ಕಂಗಾಲು
ಬೆಂಗಳೂರು, ಜುಲೈ 04; ನೈಋತ್ಯ ಮುಂಗಾರು ಅಬ್ಬರ ವಿವಿಧ ಜಿಲ್ಲೆಗಳಲ್ಲಿ ಆರಂಭವಾಗಿದೆ. ತರಕಾರಿಗಳ ಬೆಲೆಗಳಲ್ಲಿ ಏರಿಳಿತ ಆರಂಭವಾಗಿದೆ. 100 ರೂ. ಗಡಿ ದಾಟಿದ್ದ ಟೊಮೆಟೋ ಬೆಲೆ ಈಗ ಕೆ. ಜಿ. 10 ರಿಂದ 20 ರೂ. ತಲುಪಿದ್ದು, ರೈತ ಕಂಗಾಲಾಗಿದ್ದಾನೆ.
ಗಗನಕ್ಕೇರಿದ್ದ ಟೊಮೆಟೋ ಬೆಲೆ ಕಳೆದ ಒಂದು ವಾರದಿಂದ ಇಳಿಕೆ ಕಾಣಲು ಆರಂಭವಾಗಿತ್ತು. ಈಗ ಅದು ಭಾರೀ ಕುಸಿತ ಕಂಡಿದೆ. ದರ ಇಳಿಕೆಯಿಂದ ಜನರಿಗೆ ಅನುಕೂಲವಾದರೆ ರೈತರಿಗೆ ನಷ್ಟ ಉಂಟಾಗುತ್ತಿದೆ.
ಮುಂಗಾರು ಪೂರ್ವ ಅವಧಿಯಲ್ಲಿ ಸುರಿದ ಮಳೆ ಬೆಳೆ ನಷ್ಟಕ್ಕೆ ಕಾರಣವಾಗಿತ್ತು. ಇದರಿಂದಾಗಿ ಮಾರುಕಟ್ಟೆಗೆ ಟೊಮೆಟೋ ಬಾರದ ಹಿನ್ನಲೆ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಟೊಮೆಟೋ ಬೆಲೆ 100ರ ಗಡಿ ದಾಟಿತ್ತು.

ಈಗ ರೈತರು ಭಾರೀ ಪ್ರಮಾಣದಲ್ಲಿ ಟೊಮೆಟೋ ಬೆಳೆದಿದ್ದಾರೆ. ಮಾರುಕಟ್ಟೆಗೆ ಹೆಚ್ಚಿನ ಬೆಳೆ ಬರುತ್ತಿದೆ. ಆದರೆ ಬೆಲೆ ಕಡಿಮೆ ಆಗಿರುವುದು ರೈತರು ನಷ್ಟ ಅನುಭವಿಸುವಂತೆ ಮಾಡಿದೆ. ಮಳೆರಾಯ ಅಬ್ಬರಿಸುತ್ತಿರುವುದರಿಂದ ಬೆಲೆ ಇನ್ನೂ ಕಡಿಮೆಯಾಗಲಿದೆ ಎಂಬ ಆತಂಕ ರೈತರದ್ದು.
"ಹೊರ ರಾಜ್ಯಗಳು ಮತ್ತು ಹೊರ ಜಿಲ್ಲೆಗಳಿಂದ ಟೊಮೆಟೋ ಮಾರುಕಟ್ಟೆಗೆ ಬರುತ್ತಿದೆ. ಆದ್ದರಿಂದ ಬೆಲೆ ಇಳಿಕೆಯಾಗುತ್ತಿದೆ" ಎಂದು ತ್ಯಾಗರಾಜನಗರದ ತರಕಾರಿ ವ್ಯಾಪಾರಿ ಸತೀಶ್ ಅಭಿಪ್ರಾಯಪಟ್ಟಿದ್ದಾರೆ.

"ಕೋಲಾರದಲ್ಲಿ ಹೆಚ್ಚಾಗಿ ಟೊಮೆಟೋ ಬೆಳೆಯುತ್ತಾರೆ. ಮೇ ತಿಂಗಳಿನಿಂದ ಆಗಸ್ಟ್ ತನಕ ಅದು ಬೆಂಗಳೂರು ಮಾರುಕಟ್ಟೆಗೆ ಹೆಚ್ಚಾಗಿ ಬರುತ್ತದೆ. ಆದರೆ ಈ ಬಾರಿ ಬೇರೆ ಜಿಲ್ಲೆ ಮತ್ತು ಅಕ್ಕ-ಪಕ್ಕದ ರಾಜ್ಯಗಳ ಬೆಳೆ ಸಹ ಮಾರುಕಟ್ಟೆಗೆ ಬಂದಿದೆ. ಆದ್ದರಿಂದ ದರ ಇಳಿಕೆಯಾಗಿದೆ" ಎಂದು ಸತೀಶ್ ವಿಶ್ಲೇಷಿಸಿದರು.
ಏಪ್ರಿಲ್, ಮೇ ತಿಂಗಳಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಭೂಮಿ ಹದವಾಗಿದ್ದು, ರೈತರು ಟೊಮೆಟೋ ಬೆಳೆದಿದ್ದರು. ಕರ್ನಾಟಕ ಮಾತ್ರವಲ್ಲ ಆಂಧ್ರ ಪ್ರದೇಶ, ತೆಲಂಗಾಣದಲ್ಲಿಯೂ ಹೆಚ್ಚಿನ ಬೆಳೆ ಇದೆ. ಇದರಿಂದಾಗಿ ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ಟೊಮೆಟೋ ಬರುತ್ತಿದೆ ಎಂದು ಅಂದಾಜಿಸಲಾಗಿದೆ.
ರೈತರು ಕಂಗಾಲು; ಒಂದು ಕಡೆ ಭಾರೀ ಪ್ರಮಾಣದಲ್ಲಿನ ಬೆಳೆ, ಮತ್ತೊಂದು ಕಡೆ ಮಳೆ, ಮಗದೊಂದು ಕಡೆ ಆಷಾಢ ಮಾಸದ ಹಿನ್ನಲೆ ಒಂದು ತಿಂಗಳು ಶುಭ ಸಮಾರಂಭಗಳು ಕಡಿಮೆ. ಇದರಿಂದಾಗಿ ಟೊಮೆಟೋ ಬೆಲೆ ಸದ್ಯಕ್ಕೆ ಏರಿಕೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ.
ಕರ್ನಾಟಕ ಮಾತ್ರವಲ್ಲ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಹೊಸ ಟೊಮೆಟೋ ಮಾರುಕಟ್ಟೆಗೆ ಬರಲು ಆರಂಭಿಸಿದ್ದು ಬೆಲೆ ಇಳಿಕೆ ಕಾಣುತ್ತಿದೆ. ಎರಡು ವಾರಗಳ ಹಿಂದೆ ಕೆ. ಜಿ. ಗೆ 60-70 ರೂ. ಇದ್ದ ಬೆಲೆ ಬಳಿಕ 30-40 ರೂ.ಗೆ ಕುಸಿದಿತ್ತು. ಈಗ ಅದು 10-20 ರೂ.ಗೆ ಬಂದಿದ್ದು, ಚಿಂತೆಗೆ ಕಾರಣವಾಗಿದೆ.












Click it and Unblock the Notifications