ಮುಂಗಾರು ಹಂಗಾಮು; ಬೆಳೆ ಅಂದಾಜು ಸಮೀಕ್ಷೆ ಹೇಗೆ ನಡೆಯುತ್ತದೆ?
ಬೆಂಗಳೂರು, ಆಗಸ್ಟ್ 06; ಈ ಬಾರಿ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ನೈಋತ್ಯ ಮುಂಗಾರು ಮಳೆ ಸರಿಯಾಗಿ ಸುರಿದಿಲ್ಲ. ಕೃಷಿ ಚಟುವಟಿಕೆಗಳೆಲ್ಲ ಏರುಪೇರಾಗಿವೆ. ಆದರೆ ಕೆಲವು ರೈತರು ಬಿತ್ತನೆ ಕಾರ್ಯವನ್ನು ಕೈಗೊಂಡಿದ್ದಾರೆ. ಕೃಷಿ ಇಲಾಖೆ, ಸಂಖ್ಯಿಕ ಇಲಾಖೆಯ ಸಹಯೋಗದಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಅಂದಾಜು ಸಮೀಕ್ಷೆ ನಡೆಸಲಿದೆ.
ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ಮುಂಗಾರು ಹಂಗಾಮಿನ ಬೆಳೆ ಅಂದಾಜು ಸಮೀಕ್ಷೆ ಹೇಗೆ ನಡೆಸಬೇಕು? ಎಂದು ತರಬೇತಿ ಕಾರ್ಯಗಾರ ನಡೆಸಲಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿಯೂ ಈ ಕುರಿತು ಮೇಲ್ವಿಚಾರಕರು, ಮೂಲ ಕಾರ್ಯಕರ್ತರ ತರಬೇತಿ ಕಾರ್ಯಾಗಾರವು ನಡೆಯಿತು. ಸಮೀಕ್ಷೆ ಹೇಗೆ ನಡೆಸಬೇಕು? ಎಂದು ಮಾಹಿತಿ ನೀಡಲಾಯಿತು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಮಾತನಾಡಿ, "ಬೆಳೆ ಸಮೀಕ್ಷೆ ಕಾರ್ಯವನ್ನು ಸಿ.ಸಿ.ಇ ನಿಯಮದ ಪ್ರಕಾರ ಕೈಗೊಳ್ಳಬೇಕು. ಸ್ವತಃ ಮೂಲ ಕಾರ್ಯಕರ್ತರೇ ಹೋಗಿ ಸಮೀಕ್ಷೆಯನ್ನು ಮಾಡಬೇಕು. ಕಾರ್ಯಕರ್ತರು, ರೈತರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಕಟಾವು ದಿನಾಂಕವನ್ನು ಖಚಿತಪಡಿಸಿಕೊಂಡು ಕಟಾವಿನ ದಿನದಂದು ಅವರ ಸಮಕ್ಷಮದಲ್ಲಿ ಬೆಳೆ ಕಟಾವು ಕೈಗೊಳ್ಳಬೇಕು" ಎಂದರು.
ಹೇಗೆ ನಡೆಯಲಿದೆ ಸಮೀಕ್ಷೆ?; "ಯಾವುದೇ ಸಂದರ್ಭದಲ್ಲಿಯೂ ಕಟಾವು ಪ್ರಯೋಗಗಳು ವ್ಯರ್ಥವಾಗದಂತೆ ನೋಡಿಕೊಳ್ಳಿ. ಮೇಲ್ವಿಚಾರಣಾಧಿಕಾರಿ ಎಂದು ನೇಮಕ ಮಾಡಲಾಗಿರುವ ವಿವಿಧ ಇಲಾಖೆಯ ಅಧಿಕಾರಿಗಳು ಕಟಾವಿನ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಾಗಬೇಕು" ಎಂದು ರಾಹುಲ್ ರತ್ನಂ ಪಾಂಡೆ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಮಾತನಾಡಿ, "ಬೆಳೆ ಅಂದಾಜು ಸಮೀಕ್ಷಾ ಕಾರ್ಯಕ್ಕೆ ಕಂದಾಯ, ಕೃಷಿ, ತೋಟಗಾರಿಕೆ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮೂಲಕಾರ್ಯಕರ್ತರಾಗಿರುತ್ತಾರೆ. ಲಭ್ಯವಿರುವ ಇಲಾಖಾವಾರು ಅಧಿಕಾರಿಗಳ ಮಾಹಿತಿಯನ್ನಾಧರಿಸಿ ಪ್ರಯೋಗಗಳನ್ನು ಹಂಚಿಕೆ ಮಾಡಲಾಗಿರುತ್ತದೆ" ಎಂದರು.
"ಮೂಲ ಕಾಯಕರ್ತರು ವರ್ಗಾವಣೆಯಾದಲ್ಲಿ ಅವರಿಗೆ ಹಂಚಿಕೆಯಾದ ಪ್ರಯೋಗಗಳ ಮಾಹಿತಿಯನ್ನು ಮತ್ತೊಬ್ಬರಿಗೆ ವಹಿಸಿ, ಮೊಬೈಲ್ ಅನ್ನು ಹಸ್ತಾಂತರಿಸಬೇಕು. ಒಟ್ಟಾರೆಯಾಗಿ ಯಾವುದೇ ಕಾರಣಕ್ಕೂ ಬೆಳೆ ಇದ್ದುಕೊಂಡು ಬೆಳೆ ಸಮೀಕ್ಷೆಯನ್ನು ನಷ್ಠಗೊಳಿಸುವಂತಿಲ್ಲ" ಎಂದು ಹೇಳಿದರು.
"ಪ್ರತಿ ವಾರಕ್ಕೊಮ್ಮೆ ಬೆಳೆ ಅಂದಾಜು ಸಮೀಕ್ಷೆಯ ಪ್ರಗತಿಯನ್ನು ಆಯಾ ತಾಲೂಕು ತಹಶೀಲ್ದಾರ್ ಎಲ್ಲಾ ಕೃಷಿ, ತೋಟಗಾರಿಕೆ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ಸಭೆ ನಡೆಸಿ, ಮೂಲ ಕಾರ್ಯಕರ್ತರಿಗೆ ನಿರ್ದೇಶನವನ್ನು ನೀಡಬೇಕು. ಯೋಜನಾ ಪಟ್ಟಿಯನ್ನು ನೀಡಲಾದ ಬೆಳೆಗಳ ಸಮೀಕ್ಷೆಯನ್ನು ಮಾತ್ರ ಮಾಡಿ. ಯಾವುದೇ ಕಾರಣಕ್ಕೂ ಬೆಳೆ ಬದಲಾವಣೆಯನ್ನು ಮಾಡಬಾರದು" ಎಂದು ಸೂಚಿಸಿದರು.
"ಸಮೀಕ್ಷೆ ಕೈಗೊಳ್ಳುವ ಸರ್ವೆ ನಂಬರ್ನಲ್ಲಿ ಕಡ್ಡಾಯವಾಗಿ ನೀರಾವರಿ ಇದ್ದರೆ ನೀರಾವರಿ ಎಂದು ಮತ್ತು ಮಳೆ ಆಶ್ರಿತ ಬೆಳೆ ಇದ್ದರೆ ಮಳೆ ಆಶ್ರಿತ ಬೆಳೆ ಎಂದು ನಮೂದು ಮಾಡಬೇಕು. ಹೋಬಳಿವಾರು ಮತ್ತು ಗ್ರಾಮ ಪಂಚಾಯತಿವಾರು ವಿಮಾ ಘಟಕದಲ್ಲಿ ಕೈಗೊಳ್ಳಬಹುದಾದ ವಿವಿಧ ಬೆಳೆಗಳ ಬೆಳೆ ಅಂದಾಜು ಸಮೀಕ್ಷೆಯ ಯೋಜನಾ ಪಟ್ಟಯನ್ನು ತಯಾರಿಸಿ ತಂತ್ರಾಂಶದ ಮೂಲಕ ಬಿಡುಗಡೆ ಮಾಡಲಾಗಿದೆ" ಎಂದು ತಿಳಿಸಿದರು.
ವಿವಿಧ ಇಲಾಖೆಗಳ ಮೂಲ ಕಾರ್ಯಕರ್ತರು, ತಮ್ಮ ಮೊಬೈಲ್ ಅಪ್ಲಿಕೇಶನ್ ಮೂಲಕ ಹಂಚಿಕೆ ಮಾಡಲಾದ ಪ್ರಯೋಗಗಳ ಮಾಹಿತಿಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ತಮಗೆ ಹಂಚಿಕೆಯಾದ ಗ್ರಾಮಗಳ, ಬೆಳೆಗಳ ಮತ್ತು ಸರ್ವೆ ನಂಬರ್ಗಳ ಮಾಹಿತಿ ಪಡೆದುಕೊಂಡು ಸ್ವತಃ ಕ್ಷೇತ್ರಕ್ಕೆ ಭೇಟಿ ನೀಡಿ, ನಮೂನೆ 1 ಕ್ರಮಬದ್ಧವಾಗಿ ಭರ್ತಿಮಾಡಿ, ಅಪ್ಲೋರ್ ಮಾಡುವುದು ಕಡ್ಡಾಯವಾಗಿದೆ.
ಪ್ರತಿ ಪ್ರಯೋಗಕ್ಕೆ ಮೂಲ ಸರ್ವೆ ನಂಬರ್ ಸೇರಿದಂತೆ ಹೆಚ್ಚುವರಿಯಾಗಿ ಅದಕ್ಕೆ 4 ಸರ್ವೆ ನಂಬರ್ಗಳ ಮಾಹಿತಿಯನ್ನು ಅಪ್ಲೋಡ್ ಮಾಡಬೇಕು. ಆಯ್ಕೆಯಾದ ಸರ್ವೆ ನಂಬರ್ನ ರೈತರ ಜೊತೆ ಸತತವಾಗಿ ಸಂಪರ್ಕವಿರಿಸಿ, ಕಟಾವಿನ ದಿನದಂದು ಅವರ ಸಮಕ್ಷದಲ್ಲಿ ಬೆಳೆಕಟಾವುಗಳನ್ನು ಕೈಗೊಳ್ಳಬೇಕು. ಕಟಾವಿನ ಸಮಯದಲ್ಲಿ ವಿವಿಧ ಹಂತಗಳ ಛಾಯಾಚಿತ್ರವನ್ನು ಮತ್ತು ವಿಡಿಯೋವನ್ನು ಮಾಡುವುದು ಕಡ್ಡಾಯವಾಗಿದೆ.












Click it and Unblock the Notifications