ರೈತರು ತಂದ ಊಟ ಸೇವಿಸಿದ ಕೇಂದ್ರ ಸಚಿವರು
ನವದೆಹಲಿ, ಡಿಸೆಂಬರ್ 30: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ಚರ್ಚೆ ನಡೆಯುತ್ತಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ಮಾತುಕತೆ ಸಾಗುತ್ತಿದ್ದು, ಹಿಂದಿನಂತೆಯೇ ರೈತರು ಈ ಸಭೆಗೂ ತಮ್ಮ ಊಟವನ್ನು ತಾವೇ ತರಿಸಿದ್ದರು.
ಆದರೆ ಈ ಬಾರಿ ರೈತರೊಂದಿಗೆ ಕೇಂದ್ರ ಸಚಿವರೇ ಊಟ ಮಾಡಿದ್ದು ವಿಶೇಷವಾಗಿತ್ತು. ಕಳೆದ ಬಾರಿಯ ಮಾತುಕತೆ ಸಂದರ್ಭ ಸರ್ಕಾರವು ರೈತರಿಗೂ ಊಟದ ವ್ಯವಸ್ಥೆ ಮಾಡಿದ್ದು, "ನಮ್ಮ ಊಟವನ್ನು ನಾವು ತಂದುಕೊಂಡಿದ್ದೇವೆ ಸ್ವಾಮಿ, ನೀವು ಕೊಡುವುದು ಬೇಡ" ಎಂದು ರೈತರು ತಿರಸ್ಕರಿಸಿದ್ದರು. ದೆಹಲಿಯ ಗಡಿ ಪ್ರದೇಶಗಳ ಪ್ರತಿಭಟನಾ ಸ್ಥಳಗಳಲ್ಲಿ ತಾವೇ ತಯಾರಿಸಿದ ಊಟವನ್ನು ಸಭೆಗೆ ತಂದು ತಿಂದಿದ್ದರು. ಸರ್ಕಾರದ ಯಾವುದೇ ಸವಲತ್ತು ನಮಗೆ ಬೇಡ ಎಂದು ಸ್ವಾಭಿಮಾನ ಮೆರೆದಿದ್ದರು.
ಪ್ರತಿ ಮಾತುಕತೆಯಲ್ಲಿಯೂ ಕೇಂದ್ರ ಸಚಿವರಿಗೆ ಒಂದು ಕಡೆ ಊಟದ ವ್ಯವಸ್ಥೆಯಿದ್ದರೆ, ಇನ್ನೊಂದೆಡೆ ರೈತರು ತಾವು ತಂದ ಊಟವನ್ನು ಮಾಡುತ್ತಿದ್ದರು. ಆದರೆ ಬುಧವಾರ ಕೇಂದ್ರ ಸಚಿವರಾದ ಪಿಯೂಶ್ ಗೋಯಲ್ ಹಾಗೂ ನರೇಂದ್ರ ಸಿಂಗ್ ತೋಮರ್ ಮಧ್ಯಾಹ್ನ ರೈತ ಮುಖಂಡರೊಂದಿಗೆ ಊಟಕ್ಕೆ ಹೊರಟರು. ಈ ಬಾರಿ ಪ್ರತ್ಯೇಕವಾಗಿ ಊಟ ಮಾಡದೇ ರೈತರು ತಂದ ಆಹಾರವನ್ನೇ ಸೇವಿಸಿದರು. ರೈತ ಮುಖಂಡರು ಸಚಿವರಿಗೆ ಊಟ ಬಡಿಸಿದರು.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗೆ ಸಂಬಂಧಿಸಿದಂತೆ ರೈತರ ಹೋರಾಟವನ್ನು ಕೊನೆಗಾಣಿಸುವ ಸಂಬಂಧ ಬುಧವಾರ ಆರನೇ ಸುತ್ತಿನ ಮಾತುಕತೆ ನಡೆಯುತ್ತಿದೆ. ರೈತರು ಕೃಷಿ ಕಾಯ್ದೆ ರದ್ದತಿಗೆ ಬೇಡಿಕೆ ಇಟ್ಟಿದ್ದಾರೆ.












Click it and Unblock the Notifications