ಕಿಸಾನ್ ಕೇರ್ ಸೆಂಟರ್ ಉದ್ಘಾಟಿಸಿ ಜೇನು ಸವಿದ ಸಚಿವ!
ಕೊಪ್ಪಳ, ನವೆಂಬರ್ 02; ಕೊಪ್ಪಳ ಕೇಂದ್ರ ಬಸ್ ನಿಲ್ದಾಣದ ಹತ್ತಿರದ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಕಿಸಾನ್ ಕೇರ್ ಸೆಂಟರ್ ಉದ್ಘಾಟಿಸಿದರು.
ಕೊಪ್ಪಳ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವು ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದ, ತೋಟಗಾರಿಕಾ ಇಲಾಖಾ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಪರಿಕರಗಳ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು.
ಮಂಗಳವಾರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್ ತೋಟಗಾರಿಕಾ ಇಲಾಖೆಯ ಆವರಣಕ್ಕೆ ಆಗಮಿಸಿದರು.
ಸಚಿವರು ತೋಟಗಾರಿಕಾ ಇಲಾಖಾ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಪರಿಕರಗಳನ್ನು ಕುತೂಹಲದಿಂದ ವೀಕ್ಷಿಸಿದರು. ಶೇಂಗಾ, ಕಡಲೆ ಸೇರಿದಂತೆ ವಿವಿಧ ದ್ವಿದಳ ಧಾನ್ಯಗಳ ಬಗ್ಗೆ ರೈತರಿಂದ ಮಾಹಿತಿ ಪಡೆದರು.
ಸಿರಿಧಾನ್ಯಗಳಾದ ಊದಲು, ಸಾಮೆ, ನೆವಣೆ ಮತ್ತು ಸಜ್ಜೆ ಪ್ಯಾಕ್ಗಳನ್ನು ನೋಡಿ, ಅವುಗಳಿಂದ ತಯಾರಿಸಿದ ಶುದ್ಧ ಎಣ್ಣೆಯ ಬಾಟಲಿಯೊಂದನ್ನು ಸಚಿವರು ಖುದ್ದು ಖರೀದಿಸಿದರು.
ಸಚಿವರು, ಪೇರಲ ಮತ್ತು ಡ್ರ್ಯಾಗನ್ ಫ್ರೂಟ್ ವೀಕ್ಷಿಸಿದರು, ಅವುಗಳ ರುಚಿ ಸವಿದರು. ಜೇನು ಸಾಕಣೆ ವೃತ್ತಿಯಲ್ಲಿರುವ ಇಂದರಗಿಯ ನಿಂಗಪ್ಪ ಅವರೊಂದಿಗೆ ಸಂವಾದ ನಡೆಸಿದರು. ಜೇನು ಕೃಷಿಯ ಬಗ್ಗೆ ಚರ್ಚಿಸಿದರು. ಜೇನು ಹುಳುಗಳೇ ಪೂರ್ಣ ಮುತ್ತಿದ್ದ ಜೇನು ಹುಟ್ಟನ್ನು ಕೈಯಲ್ಲಿ ಹಿಡಿದರು.
ಜೇನು ಸಾಕಣೆಯ ಬಗ್ಗೆ ತಮಗೆ ತುಂಬಾ ಆಸಕ್ತಿ ಇದ್ದು, ಮಾರ್ಗದರ್ಶನ ಮಾಡಿರಿ ಎಂದು ಇದೆ ವೇಳೆ ಸಚಿವರು ನಿಂಗಪ್ಪಗೆ ತಿಳಿಸಿದರು. ನಿಂಗಪ್ಪ ಅವರು ನೀಡಿದ ಜೇನು ತುಪ್ಪ ಸವಿದರು.
ಕಿಸಾನ್ ಕೇರ್ ಸೆಂಟರ್; ಸಚಿವರು ತೋಟಗಾರಿಕಾ ರೈತ ಸಲಹಾ ಕೇಂದ್ರ ಕಿಸಾನ್ ಕೇರ್ ಸೆಂಟರ್ ಉದ್ಘಾಟಿಸಿದರು. ಎರೆಹುಳ ಗೊಬ್ಬರ ತಯಾರಿಯ ಬಗ್ಗೆ ಖುದ್ದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣ ಸಿ. ಉಕ್ಕುಂದ ಸಚಿವರಿಗೆ ಮಾಹಿತಿ ನೀಡಿದರು. ಕೊಪ್ಪಳದ ಮಾವು, ಕೊಪ್ಪಳದ ಪೇರಲ, ಕೊಪ್ಪಳದ ವೀಳ್ಯದೆಲೆ ಸೇರಿದಂತೆ ಇತರ ಉತ್ಪನ್ನಗಳ ಬಗ್ಗೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.
ಸಚಿವ ಆನಂದ್ ಸಿಂಗ್ ಜೊತೆ ಸಂಸದ ಕರಡಿ ಸಂಗಣ್ಣ, ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ್, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಫೌಜಿಯಾ ತರನ್ನುಮ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಶಿವಣ್ಣ ಮೂಲಿಮನಿ, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ. ಕಡಿ, ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ಮುನಿರಾಬಾದ್ನ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಿವಪುತ್ರ ಶಂಭು, ಮುನಿರಾಬಾದ್ ತೋಟಗಾರಿಕಾ ತರಬೇತಿ ಕೇಂದ್ರದ ಮುಖ್ಯಸ್ಥರಾದ ಜಯಶ್ರೀ ಮುಂತಾದವರು ಇದ್ದರು.