ರೈತರ ಪ್ರತಿಭಟನಾ ಸ್ಥಳದಲ್ಲಿ ಸಿಕ್ಕಿಬಿದ್ದ ಮುಸುಕುಧಾರಿ ಯುವಕ: ಬಂಧನದ ಬಳಿಕ ಯೂಟರ್ನ್
ನವದೆಹಲಿ, ಜನವರಿ 23: ಸಿಂಘು ಗಡಿಯಲ್ಲಿ ಪ್ರತಿಭಟನಾ ಸ್ಥಳದಲ್ಲಿ ಸಿಕ್ಕಿಬಿದ್ದ ಮುಸುಕುಧಾರಿ ವ್ಯಕ್ತಿ ಯೂಟರ್ನ್ ಹೊಡೆದಿದ್ದು, ತಾನು ರೈತರು ಸಿದ್ಧಪಡಿಸಿದ್ದ ಕಥೆಯನ್ನು ಮಾಧ್ಯಮದ ಮುಂದೆ ಹೇಳಿದ್ದಾಗಿ ತಿಳಿಸಿದ್ದಾನೆ. ರೈತ ಮುಖಂಡರ ಮೇಲೆ ಗುಂಡು ಹಾರಿಸಲು ಆತ ಅಲ್ಲಿಗೆ ಬಂದಿದ್ದ ಎಂದು ಆರೋಪಿಸಲಾಗಿತ್ತು.
ಶುಕ್ರವಾರ ರಾತ್ರಿ ಸೋನೆಪತ್ ಪೊಲೀಸರು ಆತನನ್ನು ಬಂಧಿಸಿದ ಘಟನೆಯ ವಿಡಿಯೋ ವೈರಲ್ ಆಗಿತ್ತು. ಇದಕ್ಕೂ ಮುನ್ನ ಮಾಧ್ಯಮದ ಮುಂದೆ ಹಾಜರಾಗಿದ್ದ ಆತ, ತಾನು ರೈತರ ಹತ್ಯೆಗೆ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದ. ಆದರೆ ಈಗ ಆತನ ಹೊಸ ವಿಡಿಯೋ ಹರಿದಾಡುತ್ತಿದ್ದು, ರೈತರು ತನಗೆ ಹೆದರಿಸಿ ಬರೆದುಕೊಟ್ಟಿದ್ದನ್ನು ಮಾಧ್ಯಮದ ಎದುರು ಹೇಳಿದ್ದಾಗ ಅದರಲ್ಲಿ ತಿಳಿಸಿದ್ದಾನೆ. ಈ ವಿಡಿಯೋದ ಸತ್ಯಾಸತ್ಯತೆಯನ್ನು ಪೊಲೀಸರು ಖಚಿತಪಡಿಸಿಲ್ಲ.
ಗಣರಾಜ್ಯ ದಿನದಂದು ರೈತರು ನಡೆಸಲು ಯೋಜಿಸಿರುವ ಟ್ರ್ಯಾಕ್ಟರ್ ಜಾಥಾದಲ್ಲಿ ನಾಲ್ವರು ರೈತ ಮುಖಂಡರ ಮೇಲೆ ಗುಂಡಿನ ದಾಳಿ ನಡೆಸುವ ಸಲುವಾಗಿ ಮುಸುಕುಧಾರಿ ವ್ಯಕ್ತಿ ಸಂಚು ರೂಪಿಸಿದ್ದ ಎಂದು ಸಿಂಘು ಗಡಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರೈತರು ಆರೋಪಿಸಿದ್ದಾರೆ. ಆತ ಮಾಧ್ಯಮದೊಂದಿಗೆ ಕೂಡ ಮಾತನಾಡಿದ್ದು, ಟ್ರ್ಯಾಕ್ಟರ್ ಜಾಥಾವನ್ನು ಹಾಳುಗೆಡವಲು ಪೊಲೀಸ್ ಅಧಿಕಾರಿಗಳೇ ತನ್ನನ್ನು ಅಲ್ಲಿಗೆ ಕಳುಹಿಸಿದ್ದರು ಎಂದು ಹೇಳಿದ್ದ.

ಬಂಧಿತನನ್ನು ಯೋಗೇಶ್ ಎಂದು ಗುರುತಿಸಲಾಗಿದೆ. ಪ್ರತಿಭಟನಾಕಾರರು ತನ್ನನ್ನು ಥಳಿಸಿ ಬೆದರಿಕೆ ಹಾಕಿದ್ದರು. ತನ್ನೊಂದಿಗೆ ಇನ್ನೂ ಮೂವರನ್ನು ಹಿಡಿದಿದ್ದ ಅವರು, ಹೊಡೆದು ಸಾಯಿಸುವುದಾಗಿ ಹೆದರಿಸಿದ್ದರು. ಬಳಿಕ ತನ್ನನ್ನು ಪೊಲೀಸರಿಗೆ ಒಪ್ಪಿಸುವಂತೆ ಕೋರಿದ್ದಾಗಿ ಯೋಗೇಶ್ ಹೇಳಿಕೊಂಡಿದ್ದಾನೆ.
ಇಷ್ಟಾದರೂ ರೈತರು ತನ್ನನ್ನು ಕೊಲ್ಲುವುದಾಗಿ ಬೆದರಿಸಿದ್ದರು. ಬಳಿಕ ಮಾಧ್ಯಮದ ಮುಂದೆ ಹಾಜರಾಗಿ ತಾವು ಬರೆದುಕೊಟ್ಟಿದ್ದನ್ನು ಹೇಳುವಂತೆ ಸೂಚಿಸಿದ್ದರು. ತನ್ನ ಜೀವ ಉಳಿಸಿಕೊಳ್ಳಲು ಮಾಧ್ಯಮದ ಮುಂದೆ ತಾನು ರೈತರ ಹತ್ಯೆಗೆ ಸಂಚು ರೂಪಿಸಿದ್ದಾಗಿ ಕಥೆ ಕಟ್ಟಿದ್ದೆ. ಉತ್ತರ ಪ್ರದೇಶದಿಂದ ಬಂದಿರುವ ಮತ್ತೊಬ್ಬ ಹುಡುಗನನ್ನು ರೈತರು ಇನ್ನೂ ತಮ್ಮ ವಶದಲ್ಲಿಯೇ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾನೆ.
ಜನವರಿ 20ರಂದು ಕೆಲಸಕ್ಕಾಗಿಮನೆಯಿಂದ ಹೊರಗೆ ಹೋಗಿದ್ದ ಮಗ, ಬೇಗನೆ ಮರಳುವುದಾಗಿ ಹೇಳಿದ್ದ. ಆದರೆ ಅದರ ಬದಲು ಪೊಲೀಸರಿಂದ ಕರೆ ಬಂದಿತ್ತು ಎಂದು ಯೋಗೇಶ್ ತಾಯಿ ಹೇಳಿದ್ದಾರೆ. 21 ವರ್ಷದ ಯೋಗೇಶ್ ಇನ್ನೂ ಪೊಲೀಸ್ ವಶದಲ್ಲಿದ್ದು, ಆತ ವಿಚಾರಣೆ ಮುಂದುವರಿದಿದೆ.












Click it and Unblock the Notifications