ಸಾಲಮನ್ನಾಕ್ಕಾಗಿ ಸಿಎಂ ನಿಧಿಗೆ 1.05 ಲಕ್ಷ ನೀಡಿದ ಮಂಡ್ಯ ಜಿಪಂ ಅಧ್ಯಕ್ಷೆ
ಮಂಡ್ಯ, ಜೂನ್ 3: ಮಂಡ್ಯದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಾಗರತ್ನ ಸ್ವಾಮಿ ತಮಗೆ ಸರ್ಕಾರದಿಂದ ನೀಡಿರುವ ಗೌರವಧನ ಹಾಗೂ ಪ್ರಯಾಣ ಭತ್ಯೆಯನ್ನು ಮುಖ್ಯಮಂತ್ರಿಗಳ ನಿಧಿಗೆ ನೀಡುವುದಾಗಿ ಘೋಷಿಸಿದ್ದಾರೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಘೋಷಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ 1.05 ಲಕ್ಷ ರೂ.ಗಳನ್ನು ದಾನ ನೀಡುವುದಾಗಿ ಅವರು ಹೇಳಿದ್ದಾರೆ.
'ಮುಖ್ಯಮಂತ್ರಿಗಳ ಪರಿಹಾರ ನಿಧಿ'ಗೆ ಹೆಸರು ನಮೂದಿಸಿದ ಚೆಕ್ನ್ನು ತೋರಿಸಿದ ಅವರು ಇದನ್ನು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ನೀಡುವುದಾಗಿ ಹೇಳಿದ್ದಾರೆ. 2016ರ ಮೇ ತಿಂಗಳಿನಿಂದ ಈವರೆಗೆ ಸರ್ಕಾರ ನೀಡಿರುವ ಗೌರವಧನ ಹಾಗೂ ಪ್ರಯಾಣ ಭತ್ಯೆಯನ್ನು ಅವರು ಕೊಡುಗೆಯಾಗಿ ನೀಡುತ್ತಿದ್ದಾರೆ.
"ಈಗಾಗಲೇ ಜಿಲ್ಲೆಯಲ್ಲಿ ಸಾಲ ಬಾಧೆ ತಾಳಲಾರದೆ ರಾಜ್ಯದಲ್ಲಿ ನೂರಾರು ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ನೆರವಿಗೆ ವಿಧಾನಸಭೆ ಚುನಾವಣೆಗೂ ಮುನ್ನ ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಂತೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ. ಅವರಿಗೆ ಬೆಂಬಲ ಸೂಚಿಸಲು ಗೌರವಧನ ನೀಡುತ್ತಿದ್ದೇನೆ," ಎಂಬುದಾಗಿ ನಾಗರತ್ನ ಸ್ವಾಮಿ ಹೇಳಿದ್ದಾರೆ.

ಈ ಹಿಂದೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರದ ಕೊಪ್ಪದಲ್ಲಿ ನಡೆದ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಕಾರ್ಯಕರ್ತರು ಹಾಕಿದ್ದ ಹಾರವನ್ನು ನಾಗರತ್ನ ಅವರ ಪತಿ ಸ್ವಾಮಿ 6 ಲಕ್ಷ ರೂ.ಗೆ ಹರಾಜಿ ನಲ್ಲಿ ಖರೀದಿಸಿ, ಹಣವನ್ನು ಚುನಾವಣಾ ಖರ್ಚಿಗಾಗಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.












Click it and Unblock the Notifications