ತನ್ನ ಅಂತ್ಯಕ್ರಿಯೆಗೆ ಸಿಎಂ ಅನ್ನು ಆಹ್ವಾನಿಸಿ ಮಂಡ್ಯ ರೈತ ಆತ್ಮಹತ್ಯೆ
ಮಂಡ್ಯ, ಜೂನ್ 17: ತನ್ನ ಶವಸಂಸ್ಕಾರಕ್ಕೆ ಸಿಎಂ ಕುಮಾರಸ್ವಾಮಿ ಅವರನ್ನು ಆಹ್ವಾನಿಸಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡು ಪ್ರಾಣ ತ್ಯಜಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
'ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನನ್ನ ಶವಸಂಸ್ಕಾರಕ್ಕೆ ಬರಬೇಕು, ನಮ್ಮ ಹೋಬಳಿ ಭಾಗದ ಕೆರೆ ತುಂಬಿಸಬೇಕು' ಎಂದು ಹೇಳಿ ಅನ್ನು ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡು ರೈತ ಎ.ಎನ್.ಸುರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕು ಸಂಚೇಬಾಲಹಳ್ಳಿ ಹೋಬಳಿ, ಅಘಲಯ ಗ್ರಾಮದ ರೈತ ಎ.ಎನ್.ಸುರೇಶ್ ಅವರು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೆ.ಆರ್.ಪೇಟೆ ತಾಲ್ಲೂಕು ತೀವ್ರ ಬರಗಾಲದಿಂದ ತತ್ತರಿಸಿದೆ, ನಮ್ಮ ಭಾಗದ ಕೆರೆಗಳೆಲ್ಲಾ ಒಣಗಿ ಹೋಗಿವೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೆರೆಗಳಿಗೆ ನೀರು ಹರಿಸಬೇಕು, ಮೈತ್ರಿ ಸರ್ಕಾರದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಬೇಕು, ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ನಾರಾಯಣಗೌಡ ಅವರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ರೈತ ಎ.ಎನ್.ಸುರೇಶ್ ವಿಡಿಯೋದಲ್ಲಿ ಸಂದೇಶ ನೀಡಿದ್ದಾರೆ.
45 ವರ್ಷದ ಎ.ಎನ್.ಸುರೇಶ್ ಅವರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಶವಸಂಸ್ಕಾರವೂ ಮಾಡಿ ಆಗಿದೆ. ಆದರೆ ಆ ನಂತರ ಅವರ ಮೊಬೈಲ್ನಲ್ಲಿ ವಿಡಿಯೋ ದೊರೆತಿದೆ. ಈಗ ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಡಿಯೋದಲ್ಲಿ ಯಡಿಯೂರಪ್ಪ ಅವರಿಗೂ ಸಂದೇಶ ನೀಡಿರುವ ಸುರೇಶ್, ಯಡಿಯೂರಪ್ಪ ಅವರು ಸರ್ಕಾರವನ್ನು ಬೀಳಿಸುವ ಪ್ರಯತ್ನ ಮಾಡಬಾರದು, ಅದೃಷ್ಟ ಇದ್ದರೆ ನೀವೂ ಮುಖ್ಯಮಂತ್ರಿ ಆಗುತ್ತೀರಿ, ಆದರೆ ಈಗ ಸರ್ಕಾರ ಬೀಳಿಸುವ ಪ್ರಯತ್ನ ಮಾಡಬೇಡಿ, ಕುಮಾರಸ್ವಾಮಿ ಅವರನ್ನು ಕೆಲಸ ಮಾಡಲು ಬಿಡಿ ಎಂದು ಹೇಳಿದ್ದಾರೆ.












Click it and Unblock the Notifications