ಕರ್ನಾಟಕಕ್ಕೂ ದಾಳಿ ಇಟ್ಟವಾ ಮಿಡತೆಗಳು? ಕೊಡಗಿನ ಕಾಫಿ ತೋಟವೊಂದರಲ್ಲಿ ಮಿಡತೆ ದಂಡು ಪ್ರತ್ಯಕ್ಷ
ಮಡಿಕೇರಿ, ಮೇ 30: ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕಂಡುಬಂದಿರುವ ಡೆಸರ್ಟ್ ಲೋಕಸ್ಟ್ ರಕ್ಕಸ ಮಿಡತೆಗಳ ಹಾವಳಿಯಿಂದ ಆ ಭಾಗದ ಕೃಷಿಕರು ಕಂಗಾಲಾಗಿದ್ದರೆ, ದಕ್ಷಿಣ ಭಾರತದಲ್ಲಿರುವ, ಕರ್ನಾಟಕದ ಕಾಶ್ಮೀರ ಎಂದೇ ಹೆಸರಾಗಿರುವ ಕೊಡಗಿನ ಕಾಫಿ ತೋಟದಲ್ಲೂ ನೂರಾರು ಮಿಡತೆಗಳ ಹಿಂಡು ಕಂಡು ಬಂದಿರುವುದು ಬೆಳೆಗಾರ ವರ್ಗದಲ್ಲಿ ಭೀತಿ ಸೃಷ್ಟಿಸಿದೆ.
ಸೋಮವಾರಪೇಟೆ ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗನಳ್ಳಿ ಗ್ರಾಮದ ಕಾಫಿ ತೋಟವೊಂದರಲ್ಲಿ ಮಿಡತೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ತೋಟದ ಮಾಲೀಕರಲ್ಲಿ ಆತಂಕ ಹೆಚ್ಚಿಸಿದೆ. ಹಸಿರು ಕಾಫಿ ಎಲೆಗಳ ಮೇಲೆ ಗುಂಪು ಗುಂಪಾಗಿ ಕಂಡುಬರುತ್ತಿರುವ ಮಿಡತೆಗಳು, ಹಚ್ಚಹಸಿರಿನ ಕಾಫಿ ಎಲೆಗಳನ್ನು ತಿನ್ನುತ್ತಿವೆ. ಮಿಡತೆಗಳು ಕುಳಿತ ಜಾಗದಲ್ಲಿ ಎಲೆಗಳು ಕಣ್ಮರೆಯಾಗುತ್ತಿದ್ದು, ಇವುಗಳ ಸಂತತಿ ಹೆಚ್ಚಿದರೆ ಭವಿಷ್ಯದಲ್ಲಿ ಹೆಚ್ಚಿನ ಅಪಾಯ ಕಟ್ಟಿಟ್ಟ ಬುತ್ತಿ ಎಂದೇ ವಿಶ್ಲೇಷಿಸ ಲಾಗುತ್ತಿದೆ.
ಮಿಡತೆ ದಾಳಿ ತಡೆಗೆ ರೈತರಿಗೆ ಕೃಷಿ ಇಲಾಖೆ ಸಲಹೆಗಳು
7 ರಾಜ್ಯಗಳಲ್ಲಿ ಹಾವಳಿ ಇಟ್ಟಿರುವ ಮಿಡತೆಗಳು
ಈಗಾಗಲೇ ನೆರೆಯ ಪಾಕಿಸ್ತಾನದಿಂದ ಬಂದಿರುವ ಮರುಭೂಮಿ ರಕ್ಕಸ ಮಿಡತೆಗಳು ಉತ್ತರ ಭಾರತದ ಒಂದೊಂದೇ ರಾಜ್ಯಗಳಿಗೆ ತಮ್ಮ ಸಾಮ್ರಾಜ್ಯ ವಿಸ್ತರಿಸುತ್ತಿವೆ. ಈಗಾಗಲೇ 7 ರಾಜ್ಯಗಳಲ್ಲಿ ತನ್ನ ಹಾವಳಿ ಪ್ರಾರಂಭಿಸಿರುವ ಮಿಡತೆಗಳು, ಒಂದು ಅಂದಾಜಿನ ಪ್ರಕಾರ 20 ಜಿಲ್ಲೆಗಳ 303 ಪ್ರದೇಶಗಳಲ್ಲಿನ 47 ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿನ ಬೆಳೆಗಳಿಗೆ ಮುತ್ತಿಗೆ ಹಾಕಿವೆ. ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಹರಿಯಾಣ ರಾಜ್ಯಗಳಲ್ಲಿ ಕಂಡುಬಂದ ಮಿಡತೆಗಳು ಗುರುವಾರ ಉತ್ತರಪ್ರದೇಶ ಮತ್ತು ಪಂಜಾಬ್ ಗಡಿಯಲ್ಲೂ ಕಂಡುಬಂದಿವೆ ಎಂದು ವರದಿಗಳು ತಿಳಿಸಿದ್ದು, ಆಯಾ ರಾಜ್ಯಗಳಲ್ಲಿ ಮಿಡತೆಗಳಿಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳಲಾಗುತ್ತಿದೆ.
ಕೃಷಿ ಕ್ಷೇತ್ರದ ಮೇಲೆ ಭಾರೀ ಹೊಡೆತ
ಈ ಮರುಭೂಮಿ ಮಿಡತೆಗಳು ತಮ್ಮ ಗಾತ್ರದಷ್ಟೇ ಆಹಾರವನ್ನು ಸೇವಿಸುತ್ತವೆ ಎಂಬ ಅಂಶವನ್ನು ಕೀಟತಜ್ಞರು ಹೊರಹಾಕಿದ್ದು, ಇವುಗಳು ಲಕ್ಷಾಂತರ ಸಂಖ್ಯೆಯಲ್ಲಿ ಒಂದೆಡೆಯಿಂದ ಮತ್ತೊಂದೆಡೆಗೆ ಬೀಡುಬಿಡುತ್ತವೆ. ಇವುಗಳು ಲಗ್ಗೆಯಿಡುವ ಪ್ರದೇಶದಲ್ಲಿ ಹಸಿರೆಲೆಗಳು ನಾಶವಾಗಲಿದ್ದು, ಕೃಷಿ ಕ್ಷೇತ್ರದ ಮೇಲೆ ಭಾರೀ ಹೊಡೆತ ನೀಡುತ್ತವೆ. ಅಂತಿಮವಾಗಿ ಇದು ಮನುಷ್ಯರ ಆಹಾರಕ್ಕೂ ಕುತ್ತು ತರುತ್ತವೆ. ಈಗಾಗಲೇ ದೇಶದ ಉತ್ತರ ರಾಜ್ಯಗಳಲ್ಲಿ ಕಂಡುಬಂದಿರುವ ಡೆಸರ್ಟ ಲೋಕಸ್ಟ್ ಮಿಡತೆಗಳು ಕರ್ನಾಟಕದ ಉತ್ತರ ಗಡಿಭಾಗಕ್ಕೂ ಆಗಮಿಸುವ ಆತಂಕವಿದ್ದು, ಕೃಷಿ ಇಲಾಖೆ ಇವುಗಳಿಗೆ ಕಡಿವಾಣ ಹಾಕಲು ಅಗತ್ಯ ಕ್ರಮಗಳ ಸಿದ್ಧತೆಯಲ್ಲಿದೆ. ಒಟ್ಟಾರೆ ಈ ದೈತ್ಯ ಮಿಡತೆಗಳ ದಂಡು ಕೊಡಗಿಗೆ ಕಾಲಿಟ್ಟರೆ ಹಸಿರಿನ ಪ್ರದೇಶಕ್ಕೆ ಕುತ್ತು ಬರಬಹುದು ಎಂದು ಸಂಶಯಿಸಲಾಗಿದೆ.
ಕೋಲಾರಕ್ಕೂ ಬಂದ ಮಿಡತೆ ಸೈನ್ಯ: ರೈತರಲ್ಲಿ ಆತಂಕ
ಸೋಮವಾರಪೇಟೆ ಕಾಫಿ ತೋಟದಲ್ಲಿ ಮಿಡತೆಗಳ ದಂಡು
ಸೋಮವಾರಪೇಟೆ ಸಮೀಪದ ಸಿಂಗನಳ್ಳಿ ಗ್ರಾಮದ ರವೀಂದ್ರ ಅವರ ಕಾಫಿ ತೋಟದಲ್ಲಿ ಕಂಡುಬಂದ ಮಿಡತೆಗಳು ಉತ್ತರ ಭಾರತದಲ್ಲಿ ಹಾವಳಿ ಎಬ್ಬಿಸುತ್ತಿರುವ ದೈತ್ಯ ಡೆಸರ್ಟ ಲೋಕಸ್ಟ್ ಮಿಡತೆಗಳಾ? ಎಂಬ ಅನುಮಾನ ಮೂಡುವಂತಾಗಿದೆ. ನೂರಾರು ಮಿಡತೆಗಳು ಗುಂಪುಗುಂಪಾಗಿ ಕಾಫಿ ತೋಟದಲ್ಲಿ ಕಂಡುಬಂದಿದ್ದು, ತೋಟದ ಮಾಲೀಕ ರವೀಂದ್ರ ಅವರಲ್ಲಿ ಆತಂಕ ಸೃಷ್ಟಿಸಿದೆ. ಎಲೆಗಳ ಮೇಲೆ ಕುಳಿತ ಮಿಡತೆಗಳು ಹಸಿರಿನ ಎಲೆಗಳನ್ನು ತಿನ್ನುತ್ತಿವೆ. ಇದೀಗ ಕಾಫಿ ತೋಟ ಹಚ್ಚಹಸಿರಿನಿಂದ ಕೂಡಿದ್ದು, ಮಿಡತೆಗಳು ಅಷ್ಟು ಸುಲಭವಾಗಿ ಕಣ್ಣಿಗೆ ಕಾಣಿಸುತ್ತಿಲ್ಲ. ತೋಟದಲ್ಲಿ ಎಷ್ಟು ಮಿಡತೆಗಳಿರಬಹುದು ಎಂಬ ಅಂದಾಜೂ ಸಿಗುತ್ತಿಲ್ಲ. ಇದರೊಂದಿಗೆ ಈ ಮಿಡತೆಗಳು ರವೀಂದ್ರ ಅವರ ತೋಟದಲ್ಲಿ ಮಾತ್ರವಿದೆಯಾ, ಸುತ್ತಮುತ್ತಲ ತೋಟಗಳಲ್ಲೂ ಬೀಡುಬಿಟ್ಟಿವೆಯಾ? ಎಂಬ ಬಗ್ಗೆಯೂ ಸ್ಪಷ್ಟತೆಯಿಲ್ಲವಾಗಿದೆ.
"ಇವು ಮರುಭೂಮಿ ಮಿಡತೆಗಳಲ್ಲ"
ತಮ್ಮ ತೋಟದಲ್ಲಿ ಹೀಗೆ ನೂರಾರು ಮಿಡತೆಗಳು ಕಂಡುಬಂದ ಹಿನ್ನೆಲೆ ರವೀಂದ್ರ ಅವರು ಅವುಗಳ ಮೇಲೆ ನಿನ್ನೆ ಕೀಟನಾಶಕ ಸಿಂಪಡಿಸಿದ್ದು, ಇಂದು ಮಿಡತೆಗಳು ಕಣ್ಮರೆಯಾಗಿವೆ. ಸಿಂಗನಳ್ಳಿಯಲ್ಲಿ ಕಂಡುಬಂದ ಮಿಡತೆಗಳ ಗುಂಪು ಡೆಸರ್ಟ ಲೋಕಸ್ಟ್ ರಕ್ಕಸ ಮಿಡತೆಗಳ ಗುಂಪಲ್ಲ. ಇವುಗಳು ಸಾಧಾರಣ ತಳಿಯ ಮಿಡತೆಗಳಾಗಿದ್ದು, ಇವುಗಳಿಂದ ಕೃಷಿಗೆ ಹೆಚ್ಚಿನ ಹಾನಿಯಿಲ್ಲ ಎಂದು ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರುಳೀಧರ್ ತಿಳಿಸಿದ್ದಾರೆ.