ರೈತ ಚಳವಳಿಯನ್ನು ರೈತ ಮುಖಂಡರೇ ಮುಂದುವರೆಸಲಿ; ಸಾಮಾಜಿಕ ಹೋರಾಟಗಾರರು ಕೊಂಚ ದೂರ ನಿಲ್ಲಿ…

ಹಿನ್ನೆಲೆ

ಕಳೆದ ಮೂರು ದಶಕದಿಂದ ಅಂತಾರಾಷ್ಟ್ರೀಯ ಖ್ಯಾತಿಯ ಆಹಾರ ಮತ್ತು ಕೃಷಿ ನೀತಿಗಳ ತಜ್ಞ, ಬರಹಗಾರ, ಹಿರಿಯ ಪತ್ರಕರ್ತ, ಆರ್ಥಿಕ ತಜ್ಞ, ಸ್ವತಃ ಕೃಷಿ ವಿಜ್ಞಾನಿಯೂ ಆಗಿರುವ ಡಾ. ದೇವಿಂದರ್ ಶರ್ಮಾ ಅವರು ದೇಶದುದ್ದಗಲಕ್ಕೂ ಸಂಚರಿಸಿ ಕೃಷಿ ಬಿಕ್ಕಟ್ಟುಗಳ ಬಗ್ಗೆ ಅಂಕಿ ಅಂಶಗಳ ಸಮೇತ ಸ್ಪಷ್ಟ ನೋಟವನ್ನು ತಮ್ಮ ಬರಹಗಳಲ್ಲಿ ಭಾಷಣಗಳಲ್ಲಿ ನೀಡುತ್ತಲೇ ಬಂದಿದ್ದಾರೆ.

ಹಿಂದೆ ಶರ್ಮಾರ ಆಯ್ದ ಲೇಖನಗಳನ್ನು ನಾನು ಕನ್ನಡಕ್ಕೆ ಅನುವಾಧಿಸಿ "ನೆಲದ ಸತ್ಯ" ಹೆಸರಿನ ಪುಸ್ತಕ ಬಿಡುಗಡೆ ಮಾಡಿದ್ದೆ. ಪುಸ್ತಕಕ್ಕೆ ಮುನ್ನುಡಿ ಬರೆದಿದ್ದ ಕನ್ನಡದ ಖ್ಯಾತ ಪತ್ರಕರ್ತ ಪರಿಸರ ತಜ್ಞರಾದ ನಾಗೇಶ ಹೆಗಡೆ ಹೀಗೆ ಬರೆಯುತ್ತಾರೆ.

"ಶರ್ಮಾ, ನಮಗೆ ಸುಲಭಕ್ಕೆ ಲಭ್ಯವಿಲ್ಲದ ಅಂಕಿ-ಸಂಖ್ಯೆಗಳ ಮೂಲಕ ಕೃಷಿ ಬಿಕ್ಕಟ್ಟನ್ನು ಎತ್ತಿ ತೋರಿಸುತ್ತಾರೆ. ಅವರ ಆಯ್ದ ಬರಹಗಳನ್ನು ಕನ್ನಡ ಓದುಗರಿಗೂ ತಲುಪಿಸುತ್ತಿರುವ ಕೆ.ಎನ್ ನಾಗೇಶ್ ಅವನ್ನೆಲ್ಲಾ ಸಂಕಲನದ ರೂಪದಲ್ಲಿ ಹೊರತರುತ್ತಿದ್ದಾರೆ. ಅದು ಕನ್ನಡದ ಭಾಗ್ಯವೆನ್ನಬೇಕು. ಶರ್ಮಾ ಕರ್ನಾಟಕದ ರೈತರ ಬಹಳಷ್ಟು ಹೋರಾಟಗಳಿಗೆ ತಮ್ಮ ಬೌದ್ಧಿಕ ಕೊಡುಗೆಗಳನ್ನು ನೀಡುತ್ತಲೇ ಬಂದಿದ್ದಾರೆ"

ನನಗೆ ನೆನಪಿರುವಂತೆ ಕೇಂದ್ರದಲ್ಲಿ ವಾಜಪೇಯಿ ಸರ್ಕಾರವಿದ್ದಾಗಿನಿಂದ (ಅದಕ್ಕೂ ಹಿಂದಿನಿಂದ ಇದ್ದಲ್ಲಿ ನನ್ನ ನೆನಪಿನಲ್ಲಿಲ್ಲ) ಪ್ರತಿ ಬಾರಿ ಕೇಂದ್ರ ಬಜೆಟ್ ಸಂದರ್ಭದಲ್ಲಿ ಸರ್ಕಾರವೂ ಸೇರಿದಂತೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳು ಶರ್ಮಾರನ್ನು ಸಂಪರ್ಕಿಸದೇ ಇರುತ್ತಿರಲಿಲ್ಲ. ಅದು ಈಗಲೂ ಮುಂದುವರೆದಿದೆ.

ಶರ್ಮಾರನ್ನು ಉಪಹಾರಕ್ಕೆ ಆಹ್ವಾನವಿತ್ತಿದ್ದರು

ಶರ್ಮಾರನ್ನು ಉಪಹಾರಕ್ಕೆ ಆಹ್ವಾನವಿತ್ತಿದ್ದರು

ಇನ್ನೂ ಒಂದು ವಿಷಯ ನಿಮಗೆ ತಿಳಿದಿರಲಿ. ಶರ್ಮಾ ಅವರು ಸುಮಾರು ಐವತ್ತಕ್ಕೂ ಹೆಚ್ಚು ದೇಶಗಳ ವಿವಿಗಳಲ್ಲಿ ಕೃಷಿ ಬಗೆಗೆ ಉಪನ್ಯಾಸ ನೀಡಿದವರು. ಒಮ್ಮೆ ಯಾವುದೋ ಕಾರ್ಮಕ್ರಮಕ್ಕೆಂದು ಬ್ರಿಟನ್‌ಗೆ ಹೋಗಿದ್ದಾಗ ಶರ್ಮಾರ ಮಾತುಗಳು ಅಲ್ಲಿನ ಪತ್ರಿಕೆಗಳಲ್ಲಿ ಸುದ್ದಿಯಾಗಿದ್ದನ್ನು ಗಮನಿಸಿದ ಅಲ್ಲಿನ ಪ್ರಧಾನಿ ಟೋನಿ ಬ್ಲೇರ್, ಶರ್ಮಾರನ್ನು ಉಪಹಾರಕ್ಕೆ ಆಹ್ವಾನವಿತ್ತಿದ್ದರು. ಸುಮಾರು ಒಂದು ತಾಸು ಇಡೀ ಜಗತ್ತಿನ ಕೃಷಿಯ ಬಗ್ಗೆ ಶರ್ಮಾ ಅವರು ನೀಡಿದ ಮಾಹಿತಿ ಅಂಕಿ ಅಂಶಗಳಿಂದ ಹೊಸ ಹೊಳಹು ಕಂಡಂತಾದ ಟೋನಿ ಬ್ಲೇರ್ ನೀವು ನನಗೆ ಹೊಸ ನೋಟವನ್ನು ಕೊಟ್ಟಿರಿ ಎಂಬುದಾಗಿ ಹೇಳಿ ಅಭಿನಂದಿಸಿ ಬೀಳ್ಕೊಟ್ಟಿದ್ದರು.

ಇಷ್ಟೇ ಅಲ್ಲದೆ ನಮ್ಮದೇ ನೆಲದ ಎಚ್.ಡಿ ದೇವೇಗೌಡರು ಪ್ರಧಾನಿ ಆಗಿದ್ದಷ್ಟು ದಿವಸ ಪಾರ್ಲಿಮೆಂಟ್‌ನಲ್ಲಿ ಕೃಷಿ ವಿಷಯ ಬರುವಾಗ ಹಿಂದಿನ ದಿನವೇ ಒಮ್ಮೆ ಶರ್ಮಾರೊಂದಿಗೆ ಚರ್ಚಿಸಿ ಹೋಗುತ್ತಿದ್ದದ್ದು ರೂಢಿಯಲ್ಲಿತ್ತು. ಅದೆಲ್ಲಾ ಸರಿ, ಈಗೇಕೆ ಶರ್ಮಾರ ಪ್ರವರ ಅಂದುಕೊಳ್ಳುವವರು ಕೊಂಚ ಸಮಾಧಾನದಿಂದಿರಿ, ವಿಷಯ ಇದೆ.

ದೇಶ ಭಾಷೆ ಗಡಿ ದಾಟಿದ ಚಳುವಳಿಗಳು

ದೇಶ ಭಾಷೆ ಗಡಿ ದಾಟಿದ ಚಳುವಳಿಗಳು

1995ರ ನಂತರ ಚಳವಳಿಗಳು ದೇಶ ಭಾಷೆ ಗಡಿ ಮೀರಿದ ವ್ಯಾಪ್ತಿಯನ್ನು ಪಡೆದುಕೊಂಡ ಕಾಲ. ಅದಕ್ಕೆ ತಕ್ಕುದಾಗಿ ಎಂಡಿಎನ್, ಟಿಕಾಯತ್ ಮುಂತಾದವರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸಂಘಟನೆಗಳ ಭಾಗವಾಗಿ ಚಳುವಳಿ ಮುನ್ನಡೆಸುತ್ತಿರುತ್ತಾರೆ. ಹಲವು ಸಂಘಟನೆಗಳು ಸೇರಿಕೊಂಡಾಗ ನಾಯಕತ್ವದ ತಕರಾರುಗಳ ನಡುವೆಯೇ ಎಂಡಿಎನ್ ಅವರ ವಿದ್ವತ್ತಿನ ಕಾರಣಕ್ಕೆ ಅವರನ್ನು ಎಲ್ಲರೂ ಒಪ್ಪಿಕೊಂಡಿದ್ದದ್ದು ಸತ್ಯ. ಆದರೂ ಅನೇಕರಿಗೆ ಅವರನ್ನು ಮೀರುವ-ಮೀರಿಸುವಾಸೆ.

ರಾಷ್ಟ್ರಮಟ್ಟದ ವೇದಿಕೆ ಮಾಡಲು ಯೋಚನೆ

ರಾಷ್ಟ್ರಮಟ್ಟದ ವೇದಿಕೆ ಮಾಡಲು ಯೋಚನೆ

ಇವೆಲ್ಲವನ್ನೂ ಗಮನಿಸಿದ್ದ ಪ್ರೊ.ಎಂಡಿಎನ್, ಒಮ್ಮೆ ದೇವಿಂದರ್ ಶರ್ಮಾ ಅವರಿಗೆ "ನಿಮ್ಮಂಥವರು ಎಲ್ಲಾ ರೈತ ಸಂಘಟನೆಗಳನ್ನು ಒಂದು ವೇದಿಕೆಯಡಿ ತರುವ ಕೆಲಸ ಮಾಡಬೇಕು. ನೀವು ತಟಸ್ಥರು. ಯಾವ ಸಂಘಟನೆಯ ಭಾಗವೂ ಅಲ್ಲ" ಎಂದು ಹೇಳಿದ್ದರಂತೆ. ಆ ಬಗ್ಗೆ ಈಗ ಆರು ವರ್ಷಗಳ ಹಿಂದೆ ದೇವಿಂದರ್ ಶರ್ಮಾ ನನ್ನ ಬಳಿ ಮಾತನಾಡಿದ್ದರು. ದಕ್ಷಿಣದ ರಾಜ್ಯಗಳ ರೈತ ಸಂಘಗಳನ್ನು ಸಂಪರ್ಕಿಸುವ ಮತ್ತು ಅವರಿಗೆ ರಾಷ್ಟ್ರಮಟ್ಟದ ವೇದಿಕೆ ಮಾಡಲು ಯೋಚಿಸಿರುವ ವಿಷಯ ತಿಳಿಸಿ ಮನವೊಲಿಸುವ ಕೆಲಸ ನನ್ನ ಮೇಲಿತ್ತು.

ಚಳವಳಿಗೆ ಬೌದ್ಧಿಕ ಕೊಡುಗೆ ನೀಡುತ್ತಿದ್ದ ದೇವಿಂದರ್ ಶರ್ಮಾ

ಚಳವಳಿಗೆ ಬೌದ್ಧಿಕ ಕೊಡುಗೆ ನೀಡುತ್ತಿದ್ದ ದೇವಿಂದರ್ ಶರ್ಮಾ

ನಾನು ಆ ಕೆಲಸ ಮಾಡಿದೆ. ಮೊದಲನೆಯ ಸಮಾವೇಶ ಚಂಡೀಗಡದಲ್ಲಿ "ಕಿಸಾನ್ ಏಕ್ತಾ" ಹೆಸರಿನಲ್ಲಿ ನೆರವೇರಿತು. ರೈತ ಮುಖಂಡರುಗಳ ಜೊತೆ ನಾನೂ ಹೋಗಿದ್ದೆ. ನಂತರ ಎರಡನೆಯ ಸಮಾವೇಶ ಬೆಂಗಳೂರಿನಲ್ಲಿ. ಮೂರನೆಯದು ಶಿಮ್ಲಾದಲ್ಲಿ ನಡೆಯಿತು. ಈ ಮೂರೂ ಸಮಾವೇಶಗಳಲ್ಲಿ ನಾನು ಭಾಗವಹಿಸಿದ್ದೆ. ಅಷ್ಟರಲ್ಲಾಗಲೇ ಚಳವಳಿಗೆ ಬೌದ್ಧಿಕ ಕೊಡುಗೆ ನೀಡುತ್ತಿದ್ದ ದೇವಿಂದರ್ ಶರ್ಮಾ ಅವರು ಮುನ್ನೆಲೆಗೆ ಬರುತ್ತಿದ್ದಾರೆ ಎಂಬ ಅನುಮಾನ ಕೆಲವು ರಾಜ್ಯದ ರೈತ ಚಳವಳಿಗಳ ಮುಖಂಡರಿಗೆ ಬಂದಾಗಿತ್ತು. ಆ ಮುಖಂಡರೇ ಕಿಸಾನ್ ಏಕ್ತಾ ವೇದಿಕೆ ಮುಂದೆ ಹೋಗಲು ತೊಡರುಗಾಲಾದರು. ವೇದಿಕೆ ಮುರಿದು ಬಿತ್ತು.

ಎಡವಟ್ಟಿನಿಂದ ಕಲಿಯಬಹುದಾದ ಪಾಠ

ಎಡವಟ್ಟಿನಿಂದ ಕಲಿಯಬಹುದಾದ ಪಾಠ

ಶರ್ಮಾ ಅವರು ಇಡೀ ಸಭೆಗಳನ್ನು ಮಾಡರೇಟ್ ಮಾಡುತ್ತಿದ್ದರು. ಮುಂದಾಳತ್ವ ವಹಿಸಿಕೊಂಡು ಅವರು ಮಾಡಬೇಕಾದ್ದೇನೂ ಇರಲಿಲ್ಲ. ಅವರಿಗದು ಬೇಕಾಗಿಯೂ ಇರಲಿಲ್ಲ. ಪ್ರತಿ ಬಾರಿ ಯಾವುದೇ ತೀರ್ಮಾನಗಳು ಕೈಗೊಳ್ಳಬೇಕಾದರೂ "ನೀವು ರೈತ ಮುಖಂಡರು, ಚಳವಳಿಯವರು ತೀರ್ಮಾನ ಮಾಡಬೇಕು" ನಾನಿಲ್ಲಿ ಒಂದಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಿದ್ದರೂ, ಮಧ್ಯಪ್ರದೇಶದ ಒಬ್ಬ ಪ್ರಮುಖ ರೈತ ಮುಖಂಡ, ರಾಜಾಸ್ಥಾನದ ಮತ್ತು ಪಂಜಾಬ್‌ನ ಇಬ್ಬರು ಪ್ರಮುಖರು ತಕರಾರು ತೆಗೆದು "ಕಿಸಾನ್ ಏಕ್ತಾ" ರಾಷ್ಟ್ರೀಯ ಸಂಘಟನೆ ಮುಂದುವರೆಸಲು ತೊಡಕುಂಟು ಮಾಡಿದರು.

ಇದರಿಂದ ಕರ್ನಾಟಕದ ರೈತ ಮುಖಂಡರು ಏನು ಕಲಿಯಬೇಕು ?

ಇದರಿಂದ ಕರ್ನಾಟಕದ ರೈತ ಮುಖಂಡರು ಏನು ಕಲಿಯಬೇಕು ?

ಇದರಿಂದ ಕರ್ನಾಟಕದ ರೈತ ಮುಖಂಡರೂ ಕಲಿಯಬೇಕಿರುವ ಪಾಠವಿದೆ. ಕೃಷಿ ಆರ್ಥಿಕತೆಯ ಬಗ್ಗೆ ಅಧ್ಯಯನ ಮಾಡಿರುವವರು. ಹತ್ತಾರು ಭಾಷಣಗಳು, ಲೇಖನಗಳು, ಸಂಶೋಧನಾ ಪ್ರಭಂದಗಳನ್ನು ಅಧ್ಯಯನ ಮಾಡಿ ಒಂದಿಷ್ಟು ಅಂಕಿ ಸಂಖ್ಯೆಗಳನ್ನು ಕಲೆಹಾಕಿ ಪ್ರೆಸೆಂಟ್ ಮಾಡಬಲ್ಲ ಸ್ಕಿಲ್ ಇರುವವರು ಮತ್ತು ಚಳವಳಿಗಳಿಗೆ ಬೌದ್ಧಿಕ ಕೊಡುಗೆ ಕೊಡುವವರನ್ನು ವೇದಿಕೆಗಳಿಂದ ಈಗಲೇ ಕೊಂಚ ದೂರ ನಿಲ್ಲಿಸಿ. ಮುಂದೊಂದು ದಿನ ಅವರು ನಿಮ್ಮನ್ನು ದಾಟಿ ಹೋಗುತ್ತಿದ್ದಾರೆ ಎಂದೆನಿಸಿ (ಅವರಿಗೆ ಆ ಉದ್ದೇಶ ಇದೆಯೋ ಇಲ್ಲವೋ ನಮಗ್ಯಾರಿಗೂ ಈ ಕ್ಷಣದಲ್ಲಿ ಗೊತ್ತಿಲ್ಲ) ಅವರನ್ನು ಅವಮಾನಿಸಿ ತಿಪ್ಪೆಗೆ ಎಸೆಯುವ ಬದಲು, ಈಗಲೇ ಹೆಚ್ಚು ಅಂಟಿಸಿಕೊಳ್ಳದೆ ಇರುವುದು ಜಾಣತನ. ಆ ಬಗ್ಗೆ ಯೋಚಿಸಿ. ರೈತ ಸಂಘ, ರೈತ ಚಳುವಳಿ, ರೈತ ಮುಖಂಡರುಗಳ ಮಾರ್ಗದರ್ಶನದಲ್ಲಿರಬೇಕೇ ಹೊರತು ಚಳವಳಿಗಳಿಗೆ ಒಂದಿಷ್ಟು ಬೌದ್ಧಿಕ ನೆರವು ನೀಡುವ ಸಂಪನ್ಮೂಲ ವ್ಯಕ್ತಿಗಳ ಅಂಕೆಗೆ ಹೋಗಬಾರದು. ಅವರೆಲ್ಲರಿಗೂ ಅವರ ಮಿತಿಗಳನ್ನು ಮನವರಿಕೆ ಮಾಡಿಕೊಟ್ಟು ನಿಮ್ಮ ಚಳುವಳಿಯನ್ನು ನೀವೇ ಮುಂದೆ ಒಯ್ಯಿರಿ. ಹೊಸ ಪೀಳಿಗೆಯ ಸಾವಿರ ಸಾವಿರ ಸಂಪನ್ಮೂಲ ವ್ಯಕ್ತಿಗಳು ನಿಮ್ಮೆ ನೆರವಿಗೆ ನಿಲ್ಲುವ ಕಾಲ ದೂರವಿಲ್ಲ.

ರೈತ ಚಳವಳಿಗಳ ಸಂಪನ್ಮೂಲ ವ್ಯಕ್ತಿಗಳಿಗೆ ಕಿವಿಮಾತು

ರೈತ ಚಳವಳಿಗಳ ಸಂಪನ್ಮೂಲ ವ್ಯಕ್ತಿಗಳಿಗೆ ಕಿವಿಮಾತು

ದೇಶದ ರೈತ ಚಳುವಳಿಗಳನ್ನು ರಾಷ್ಟ್ರ ಮಟ್ಟದಲ್ಲಿ ಒಂದು ವೇದಿಕೆಯಡಿ ಮುಂದೆ ತೆಗೆದುಕೊಂಡು ಹೋಗಲು ಯತ್ನಿಸಿ ಕಹಿ ಅನುಭವಿಸಿರುವ ಶರ್ಮಾರ ಉದಾಹರಣೆಯನ್ನೊಮ್ಮೆ ಗಮನಿಸಿ. ಅವರ ಭಾಷಣ, ಲೇಖನಗಳು, ಚರ್ಚೆಗಳು ರೈತ ಚಳುವಳಿಗಳಿಗೆ ಬಹಳ ಪ್ರಯೋಜನಕ್ಕೆ ಬಂದಿರುವುದಂತೂ ಸತ್ಯ. ಆದಾಗ್ಯೂ ಅವರೇ ಮುಂದಾಳತ್ವ ವಹಿಸಿಕೊಳ್ಳಲು ಹೋದಾಗ ಅದು ಕಾರ್ಯಸಾಧುವಾಗಲಿಲ್ಲ. ಅವರ ಉದಾಹರಣೆಯನ್ನು ಕರ್ನಾಟಕಕ್ಕೂ ಅನ್ವಹಯಿಸಿಕೊಂಡು ಯೋಚಿಸಿ, ಮುಂದಿನ ನಿಮ್ಮ ನಡೆಯ ಬಗ್ಗೆ ತೀರ್ಮಾನಿಸಿಕೊಳ್ಳಿ.

ರೈತ ಚಳವಳಿಗೆ ಜಯವಾಗಲಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+