ಲಾಲ್ ಬಾಗ್ ಗೆ ರಾಕ್ ಗಾರ್ಡನ್, ಸಂಗೀತ ಕಾರಂಜಿ

ಬೆಂಗಳೂರು ನಗರವಾಸಿಗಳಿಗೆ ಉತ್ತಮ ಪರಿಸರ ನಿರ್ಮಿಸಿಕೊಡುವ ಉದ್ದೇಶದಿಂದ ಲಾಲ್ಬಾಗ್ ಉದ್ಯಾನದಲ್ಲಿ ತೋಟಗಾರಿಕೆ ಇಲಾಖೆ, ಬಿಡಿಎ ಮತ್ತು ಬಿಬಿಎಂಪಿ ಜಂಟಿಯಾಗಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಲಾಲ್ಬಾಗ್ನ ಸಿದ್ದಾಪುರ ಭಾಗದಲ್ಲಿರುವ ಬೃಹತ್ ಬಂಡೆಯಲ್ಲಿ 30 ಕೋಟಿ ರೂ.ವೆಚ್ಚದಲ್ಲಿ ರಾಕ್ ಗಾರ್ಡನ್ ನಿರ್ಮಿಸಲಾಗುವುದು. ಈ ಯೋಜನೆ ತಮ್ಮ ರಾಜಕೀಯ ಗುರುಗಳಾದ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆಯವರ ಕನಸಿನ ಕೂಸು. ಈ ಮೂಲಕ ಅವರ ಋಣ ತೀರಿಸುವುದಾಗಿ ಹೇಳಿದರು.
ಹೆಗಡೆಯವರ ಅವಧಿಯಲ್ಲೇ ಈ ಯೋಜನೆಯ ಸಮೀಕ್ಷೆ ನಡೆಸಿ ನೀಲನಕ್ಷೆಯನ್ನೂ ಸಿದ್ಧಪಡಿಸಲಾಗಿತ್ತು. ಬೃಹತ್ ಬಂಡೆಯ ಮೇಲೆ ಲಾನ್ ಬೆಳೆಸುವಿಕೆ, ಕಲ್ಲು ಬೆಂಚುಗಳ ನಿರ್ಮಾಣ ಸೇರಿದಂತೆ ಬಂಡೆಯ ಮೇಲೆ ಉತ್ತಮ ವಾತಾವರಣ ಕಲ್ಪಿಸಲಾಗುವುದು. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು. ಲಾಲ್ಬಾಗ್ನ ಕೆರೆ ಬಳಿ ಸುಮಾರು 35 ಕೋಟಿ ರೂ.ವೆಚ್ಚದಲ್ಲಿ ಸಂಗೀತ ಕಾರಂಜಿ ನಿರ್ಮಿಸಲಾಗುವುದು. ಈ ಯೋಜನೆ ಸಂಬಂಧ ಪ್ರಾಥಮಿಕ ಹಂತದ ಚರ್ಚೆ ನಡೆದಿದ್ದು, ತಂತ್ರಜ್ಞರನ್ನು ಇನ್ನೂ ನೇಮಕ ಮಾಡಲಾಗಿಲ್ಲ ಎಂದು ಸಚಿವರು ಹೇಳಿದರು.
ಸುವರ್ಣ ಕರ್ನಾಟಕ ಯೋಜನೆಯ ಅನುದಾನ, ಲಾಲ್ಬಾಗ್ ನರ್ಸರಿಯಿಂದ ಗಳಿಸಿರುವ ಆದಾಯ ಹಾಗೂ ಲಾಲ್ಬಾಗ್ನ ಸ್ವಲ್ಪ ಜಾಗವನ್ನು ಮೆಟ್ರೋ ರೈಲು ಕಾಮಗಾರಿಗೆ ಬಳಸಿಕೊಂಡಿರುವುದರಿಂದ ದೊರೆತಿರುವ ಪರಿಹಾರದ ಹಣದಲ್ಲಿ ಈ ಎರಡೂ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು. ಲಾಲ್ಬಾಗ್ ಕೆರೆಗೆ ಚರಂಡಿ ನೀರು ಸೇರ್ಪಡೆಯಾಗುತ್ತಿದೆ. ಇದನ್ನು ತಡೆಗಟ್ಟಲು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ, ನೀರಿನ ನಿರ್ವಹಣೆ ವಿಚಾರ ಪಾಲಿಕೆಗೆ ಸೇರಿದ್ದು ಎಂದು ತಿಳಿಸಿದರು.
ತರಕಾರಿ ಬೆಲೆ ಹೆಚ್ಚಳ ನಿಯಂತ್ರಣ ಕಷ್ಟ. ಬೆಂಗಳೂರಿಗೆ ಪ್ರತಿ ದಿನ ಒಂದು ಸಾವಿರ ಟನ್ ತರಕಾರಿ ಬೇಕು. ಆದರೆ, ನಮ್ಮಲ್ಲಿರುವ ಹಾಪ್ಕಾಮ್ಸ್ ಮಳಿಗೆಗಳಿಂದ 70ರಿಂದ 140 ಟನ್ ಪೂರೈಸಲು ಮಾತ್ರ ಸಾಧ್ಯ. ನೂರು ಹೊಸ ಮಳಿಗೆ ಆರಂಭಕ್ಕೆ ಜಾಗ ಗುರುತಿಸಿದ್ದು, ಸ್ಥಳ ನೀಡುವಂತೆ ಬಿಬಿಎಂಪಿಗೆ ಮನವಿ ಮಾಡಲಾಗಿದೆ ಎಂದು ವಿವರಿಸಿದರು.











Click it and Unblock the Notifications