ಆಗಸ್ಟ್ 30ರ ತನಕ ಮಾತ್ರ ಕೆಆರ್ಎಸ್ನಿಂದ ನೀರು ಬಿಡುಗಡೆ
ಮಂಡ್ಯ, ಆಗಸ್ಟ್ 18 : ಕೆಆರ್ಎಸ್ ಜಲಾಶಯದಿಂದ ಕೃಷಿ ಚಟುವಟಿಕೆಗಳಿಗೆ ಆಗಸ್ಟ್ 30ರ ತನಕ ಮಾತ್ರ ನೀರು ಪೂರೈಸಲಾಗುತ್ತದೆ. ತಮಿಳುನಾಡಿಗೆ ನೀರು ಬಿಡುವ ಬಗ್ಗೆ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ.
ಬುಧವಾರ ಬೆಂಗಳೂರಿನಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಮತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕೃಷ್ಣರಾಜ ಸಾಗರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಆಗಸ್ಟ್ 30ರ ತನಕ ನೀರು ಪೂರೈಕೆ ಮಾಡಲು ತೀರ್ಮಾನ ಕೈಗೊಳ್ಳಲಾಯಿತು.[ಜಲಾಶಯಗಳ ನೀರು ಕುಡಿಯಲು ಮಾತ್ರ, ಕೃಷಿಗಿಲ್ಲ]
ಸಭೆಯಲ್ಲಿ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್ ಅವರು, '40 ವರ್ಷಗಳಲ್ಲಿ ಎಂದೂ ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿರಲಿಲ್ಲ. ರೈತರು ಭತ್ತ ಬೆಳೆದಿದ್ದಾರೆ, ಭತ್ತಕ್ಕೆ 80 ದಿನಗಳಿಗೆ 40 ಟಿಎಂಸಿ ಅಡಿ ನೀರು ಬೇಕಾಗುತ್ತದೆ. ಈಗ ಕೇವಲ 12.5 ಟಿಎಂಸಿ ಅಡಿ ನೀರು ಇದೆ' ಎಂದು ಆತಂಕ ವ್ಯಕ್ತಪಡಿಸಿದರು.[ನಮಗೇ ನೀರಿಲ್ಲ, ಇನ್ನು ತಮಿಳ್ನಾಡಿಗೆ ಎಲ್ಲಿಂದ ಬಿಡೋಣ?]
ಎರಡು ದಿನಗಳ ಹಿಂದೆ ಸಚಿವ ಡಿ.ಕೆ.ಶಿವಕುಮಾರ್ ಅವರು ಕೆಆರ್ಎಸ್ಗೆ ಭೇಟಿ ನೀಡಿ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಕುರಿತು ಪರಿಶೀಲನೆ ನಡೆಸಿದ್ದರು. ಪ್ರಸ್ತುತ ಕೆಆರ್ಎಸ್ನಲ್ಲಿ 97.25 ಅಡಿ ನೀರಿದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿ......

ನೀರು ಬಿಡುಗಡೆ ಸ್ಥಗಿತ
ಆಗಸ್ಟ್ 31 ರಿಂದ ಸೆಪ್ಟೆಂಬರ್ 10ರ ತನಕ ಕೃಷಿ ಚಟುವಟಿಕೆಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗುತ್ತದೆ. ಜಲಾಶಯದ ನೀರಿನ ಪ್ರಮಾಣ ಪರಿಶೀಲಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಸೆಪ್ಟೆಂಬರ್ 10ರಂದು ನೀರಾವರಿ ಸಲಹಾ ಸಮಿತಿ ಸಭೆಯನ್ನು ಮತ್ತೊಮ್ಮೆ ಕರೆಯಲಾಗಿದೆ.

25 ಟಿಎಂಸಿ ನೀರು ಹರಿದು ಬರುವ ನೀರಿಕ್ಷೆ
'ಪ್ರಸ್ತುತ ಕೆಆರ್ಎಸ್ನಲ್ಲಿ 97.25 ಅಡಿ ನೀರಿದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿ. ಈ ವರ್ಷದ ಡಿಸೆಂಬರ್ ಅಂತ್ಯದವರೆಗೆ ಕೆಆರ್ಎಸ್ಗೆ ಇನ್ನು 25 ಟಿಎಂಸಿ ಅಡಿ ನೀರು ಹರಿದು ಬರಬಹುದು' ಎಂದು ನಿರೀಕ್ಷಿಸಲಾಗಿದೆ ಎಂದು ಸಚಿವರು ಹೇಳಿದರು.

ಕೃಷಿಗೆ ನೀರು ಪೂರೈಕೆ ಇಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಈ ವರ್ಷವೂ ರಾಜ್ಯದಲ್ಲಿ ಮಳೆಯ ಕೊರತೆ ಎದುರಾಗಿದೆ. ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಮೀಸಲಿಡಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.

ನೀರು ಬಿಡುವ ಬಗ್ಗೆ ಮಾಹಿತಿ ಇಲ್ಲ
'ಕೆಆರ್ಎಸ್ ಜಲಾಶಯದಿಂದ ಆಗಸ್ಟ್ 30 ರವರೆಗೆ ನೀರು ಬಿಡಲು ನೀರಾವರಿ ಸಲಹಾ ಸಮಿತಿ ಮಾಡಿರುವ ತೀರ್ಮಾನದ ಬಗ್ಗೆ ತಮಗೆ ಮಾಹಿತಿ ಇಲ್ಲ. ತಮಿಳುನಾಡಿಗೆ ನೀರು ಬಿಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿಲ್ಲ' ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.












Click it and Unblock the Notifications