ಕಲಬುರಗಿ : ಗುಲಾಬಿ ಬೆಳೆದ ರೈತರ ಮೊಗದಲ್ಲಿ ಮುಗುಳು ನಗೆ
ಕಲಬುರಗಿ, ಸೆಪ್ಟೆಂಬರ್ 27 : 'ನಮ್ಮ ಜಮೀನಿನಲ್ಲಿ ಮೊದಲು ವರ್ಷಕ್ಕೆ 2-3 ಚೀಲ ಕಾಳು ಬರುತ್ತಿತ್ತು. 4-5ಸಾವಿರ ಸಿಗುತಿತ್ತು. ದೇವರಂಥ ಅಧಿಕಾರಿಗಳು ನಮಗೆ ಸಿಕ್ಕಿದ್ದಾರೆ, ಅವರು ಸರ್ಕಾರದ ಯೋಜನೆ ಬಗ್ಗೆ ತಿಳಿಸಿದರು. ಈಗ ತಿಂಗಳಿಗೆ 30 ಸಾವಿರ ರೂಪಾಯಿ ಕೈಗೆ ಬರುತ್ತಿದೆ' ಎಂದು ಓಕಳಿ ಗ್ರಾಮದ ರೈತ ಶಿವರಾಜ ಮುಗಳಿ ಸಂತಸ ಹಂಚಿಕೊಂಡರು.
ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ ಕೃಷಿಭಾಗ್ಯ
ಕಲಬುರಗಿ ಜಿಲ್ಲೆಯ ಓಕಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 'ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ' ಯೋಜನೆಯಡಿ ಓಕಳಿ ಸಮಿತಿಗೆ ಒಳಪಟ್ಟಿರುವ ಸುಮಾರು 900 ಹೆಕ್ಟರ್ ಪ್ರದೇಶದ ಪೈಕಿ 100 ಹೆಕ್ಟೇರ್ ಪ್ರದೇಶವನ್ನು ಕೃಷಿ ಇಲಾಖೆಯಿಂದ ತೋಟಗಾರಿಕೆಗೆ ಒಳಪಡಿಸಲಾಗಿದೆ.
ಕೊಪ್ಪಳ : ಪಶುಭಾಗ್ಯ ಯೋಜನೆಯಿಂದ ನೆಮ್ಮದಿ ಕಂಡ ಕುಟುಂಬ
ಈ ಪ್ರದೇಶಗಳಲ್ಲಿ ಗುಲಾಬಿ, ಸುಗಂಧರಾಜ, ಸೀಬೆ, ಮಾವು, ನಿಂಬೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ರೈತರಿಗೆ ಈ ಬೆಳೆಗಳನ್ನು ಬೆಳೆಯಲು ಸೂಕ್ತ ಮಾರ್ಗದರ್ಶನ ಮತ್ತು ಮಾಹಿತಿಯನ್ನು ಕೃಷಿ ಇಲಾಖೆಯಿಂದ ಕಾಲ-ಕಾಲಕ್ಕೆ ಒದಗಿಸಲಾಗುತ್ತಿದೆ.
ಉದ್ಯೋಗ ಖಾತ್ರಿ ಯೋಜನೆಯ ಯಶಸ್ಸಿನ ಕಥೆ
ಈ ಯೋಜನೆಯಡಿ 20 ರೈತರ 5 ಎಕರೆ ಪ್ರದೇಶದಲ್ಲಿ ಸುಗಂಧರಾಜ, 22 ರೈತರ 20 ಎಕರೆ ಪ್ರದೇಶದಲ್ಲಿ ಗುಲಾಬಿ, 23 ರೈತರು ಮಾವು, 18 ರೈತರು ಪೇರಲ ಹಾಗೂ ನಿಂಬೆ ಬೆಳೆಯುತ್ತಿದ್ದಾರೆ. 2 ರೈತರಿಗೆ 500 ನೇರಳೆ ಸಸಿಗಳನ್ನು ನೀಡಿ ಅವರ ಹೊಲಗಳಲ್ಲಿ ಫಲ ಮತ್ತು ಪುಷ್ಪ ಕೃಷಿಗೆ ಉತ್ತೇಜನ ನೀಡಲಾಗಿದೆ. (ಚಿತ್ರ ಮಾಹಿತಿ : ಕಲಬುರಗಿ ವಾರ್ತೆ)
ಗುಲಾಬಿ ಕೃಷಿಯಿಂದ ಮೊಗದಲ್ಲಿ ಸಂತಸ
ಬಸವರಾಜ ಮಾಲಿ ಪಾಟೀಲ ಎಂಬುವವರು ಗುಲಾಬಿ ಹೂವಿನ ಕೃಷಿ ಕೈಗೊಂಡಿದ್ದಾರೆ. ಸರ್ಕಾರದ ಯೋಜನೆಯ ಸಹಾಯ ಪಡೆದು, ತಮ್ಮ ಕೈಯಿಂದ 8000 ರೂ. ಖರ್ಚು ಮಾಡಿ 30 ಗುಂಟೆ ಪ್ರದೇಶದಲ್ಲಿ ಬಟನ್, ತಾಜಮಹಲ ಹಾಗೂ ರೆಡ್ ರೂಬಿ ತಳಿಯ ಗುಲಾಬಿ ಬೆಳೆದಿದ್ದಾರೆ.
150 ರೂ. ದರವಿದೆ
ಸದ್ಯ, 45 ದಿನದ ಗುಲಾಬಿ ಬೆಳೆಯನ್ನು ಕಟಾವು ಮಾಡಲಾಗುತ್ತಿದೆ. ಎರಡು ದಿನಗಳಿಗೊಮ್ಮೆ 5 ಕೆ.ಜಿ. ಹೂವು ದೊರೆಯುತ್ತಿದ್ದು, ಕಮಲಾಪುರ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 150 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಗುಲಾಬಿ ಹೂವಿನ ಗಿಡಗಳು ದೊಡ್ಡವಾದರೆ ಪ್ರತಿ ದಿನ ಸುಮಾರು 40-50 ಕೆ.ಜಿ. ಹೂವು ಕಟಾವಿಗೆ ಬರುತ್ತದೆ.
ಸುಗಂಧರಾಜದಿಂದ ಜೇಬು ತುಂಬಿತು
ರೈತ ಶರಣಪ್ಪ ಕಲ್ಲಪ್ಪ ಮಿರಗಕಲ್ ಅವರು ಒಟ್ಟು 6 ಎಕರೆ ಜಮೀನಿನ ಪೈಕಿ 1.5 ಎಕರೆ ಜಮೀನಿನಲ್ಲಿ ಸುಗಂಧರಾಜ ಪುಷ್ಪ ಬೆಳೆದಿದ್ದಾರೆ. ಈ ಪೈಕಿ ಒಂದು ವರ್ಷದಿಂದ 30 ಗುಂಟೆ ಪ್ರದೇಶದಲ್ಲಿ ಸುಗಂಧರಾಜ ಪುಷ್ಪ ಕಟಾವು ಮಾಡಲಾಗುತ್ತಿದ್ದು, ಪ್ರತಿ ದಿನ ಸುಮಾರು 12 ಕೆಜಿ ಹೂವು ದೊರೆಯುತ್ತದೆ. ಇದರಿಂದ ಎಲ್ಲಾ ಖರ್ಚು ಕಳೆದು ಪ್ರತಿ ದಿನ 1000 ರೂ ನಿವ್ವಳ ಲಾಭ ಸಿಗುತ್ತಿದೆ.
34 ಸಾವಿರ ರೂ. ಆದಾಯ
'ಕೃಷಿ ಇಲಾಖೆಯಿಂದ 10 ಸಾವಿರ ಸುಗಂಧರಾಜ ಗಡ್ಡೆಗಳನ್ನು ಉಚಿತವಾಗಿ ನೀಡಲಾಗಿದೆ. ಸುಗಂಧರಾಜ ಕೃಷಿಯಿಂದ ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ತಿಂಗಳಿಗೆ ಸುಮಾರು 34,000 ರೂ.ಗಳ ಆದಾಯ ಪಡೆಯುತ್ತಿದ್ದೇನೆ' ಎಂದು ಶರಣಪ್ಪ ಕಲ್ಲಪ್ಪ ಮಿರಗಕಲ್ ತಿಳಿಸಿದರು.
ಕೃಷಿ ಇಲಾಖೆಯ ಸಹಾಯ
'ಕೃಷಿ ಇಲಾಖೆಯಿಂದ ರೈತರಿಗೆ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಿಂದ ಒಳ್ಳೆಯ ಗುಣಮಟ್ಟದ ಸುಗಂಧರಾಜ, ಗುಲಾಬಿ ಹೂವಿನ ಸಸಿಗಳನ್ನು ಉಚಿತವಾಗಿ ನೀಡಿ ತಾಂತ್ರಿಕ ಸಹಾಯ ನೀಡಲಾಗುತ್ತಿದೆ' ಎಂದು ಕೃಷಿ ಇಲಾಖೆ ಉಪನಿರ್ದೇಶಕ ಸಮದ ಪಟೇಲ ಹೇಳಿದರು.
ಆರ್ಥಿಕ ಸ್ಥಿತಿ ಸುಧಾರಿಸಿದೆ
'ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಪ್ರಯೋಜನ ಪಡೆದು ಫಲ-ಪುಷ್ಪ ಕೃಷಿ ಕೈಗೊಂಡಿರುವ ಈ ಭಾಗದ ರೈತರು ಪ್ರತಿವರ್ಷ ಸುಮಾರು 3 ಲಕ್ಷ ರೂ.ಗಳ ಆದಾಯ ಪಡೆಯುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿ ಸುಧಾರಿಸಿರುವುದರಿಂದ ಅವರು ಸಂತೋಷವಾಗಿದ್ದಾರೆ' ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಬ್ಸಿಬಾರಾಣಿ ಕೋರ್ಲಪಾಟಿ ತಿಳಿಸಿದರು.