ಶಿವಮೊಗ್ಗದಲ್ಲಿಂದು ರೈತ ಮಹಾ ಪಂಚಾಯತ್: ಕರ್ನಾಟಕದಲ್ಲಿ ಟಿಕಾಯತ್
ಶಿವಮೊಗ್ಗ, ಮಾರ್ಚ್ 20: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಶಿವಮೊಗ್ಗದಲ್ಲಿ ಶನಿವಾರ (ಮಾ.20)ರಂದು ರೈತ ಮಹಾ ಪಂಚಾಯತ್ ನಡೆಯಲಿದೆ.
ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆ ಉತ್ತರ ಭಾರತಕ್ಕೆ ಅದರಲ್ಲೂ ಹರಿಯಾಣ, ಪಂಜಾಬ್ ರಾಜ್ಯಕ್ಕೆ ಸೀಮಿತವಾಗಿದ್ದ ರೈತ ಪ್ರತಿಭಟನೆ ಈಗ ದಕ್ಷಿಣ ಭಾರತಕ್ಕೂ ವಿಸ್ತರಣೆಯಾಗುತ್ತಿದೆ. ವಿಶೇಷವಾಗಿ ಹೋರಾಟಗಳ ತವರೂರು ಎಂದೇ ಪ್ರಸಿದ್ಧವಾಗಿರುವ ಕರ್ನಾಟಕದ ಶಿವಮೊಗ್ಗದಿಂದ ರೈತ ಹೋರಾಟ ಆರಂಭವಾಗುತ್ತಿದೆ.
ಸಂದರ್ಶನ: ಸಂಯುಕ್ತ ಹೋರಾಟ-ನಿರ್ದಿಷ್ಟ ಗುರಿ ಸಾಧನೆಗೆ ವಿಷಯಾಧಾರಿತ ಮೈತ್ರಿ: ಬಡಗಲಪುರ ನಾಗೇಂದ್ರ
ದೆಹಲಿಯ ರೈತ ಹೋರಾಟಕ್ಕೆ ಬೆಂಬಲವಾಗಿ ಕರ್ನಾಟಕ ರಾಜ್ಯದಲ್ಲೂ ಕಿಸಾನ್ ಮಹಾ ಪಂಚಾಯತ್ ಹಾಗೂ ರೈತ ಜಾಥಾಗಳು ಆಯೋಜನೆಗೊಂಡಿದ್ದು, ಶನಿವಾರದ ರೈತ ಮಹಾ ಪಂಚಾಯತ್ ನಲ್ಲಿ ಪಾಲ್ಗೊಳ್ಳಲು ರೈತ ಸಂಘಟನೆಯ ರಾಷ್ಟ್ರೀಯ ನಾಯಕರು ಶಿವಮೊಗ್ಗದತ್ತ ಪಯಣ ಬೆಳೆಸಿದ್ದಾರೆ.
ರೈತ ಮುಖಂಡರಾದ ರಾಕೇಶ್ ಟಿಕಾಯತ್, ಅಂತಾರಾಷ್ಟ್ರೀಯ ರೈತ ಸಮನ್ವಯ ಸಮಿತಿ ಸಂಚಾಲಕ ಯುದ್ಧವೀರ ಸಿಂಗ್, ಬಡಗಲಪುರ ನಾಗೇಂದ್ರ, ಚುಕ್ಕಿ ನಂಜುಂಡಸ್ವಾಮಿ, ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ರಾಜ್ಯದ ಹಲವು ರೈತ ಮುಖಂಡರು ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳುತ್ತಿದ್ದಾರೆ.
ರೈತ ಮುಖಂಡರ ಆತ್ಮಾವಲೋಕನಕ್ಕೆ ಸಕಾಲ…
ಮಾರ್ಚ್ 20ರ ಸಂಜೆ 5 ಗಂಟೆಗೆ ಶಿವಮೊಗ್ಗದಲ್ಲಿ ನಡೆಯುವ ಕಿಸಾನ್ ಮಹಾ ಪಂಚಾಯತ್ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ರೈತ ರಾಕೇಶ್ ಟಿಕಾಯತ್ ಅವರು ರೈತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕೇಂದ್ರ ಸರ್ಕಾರದ ಕೃಷಿ ಕಾನೂನುಗಳಿಂದಾಗುವ ಸಮಸ್ಯೆಗಳನ್ನು ತಿಳಿಸಲಿದ್ದು, ಕೃಷಿ ಕಾನೂನುಗಳ ವಿರುದ್ಧ ರೈತರು ಒಗ್ಗೂಡಲು ಕರೆ ನೀಡಲಿದ್ದಾರೆ.
ಕಿಸಾನ್ ಮಹಾ ಪಂಚಾಯತ್ ಮಾ.20 ರಂದು ಶಿವಮೊಗ್ಗ, ಮಾ.21 ರಂದು ಹಾವೇರಿಯಲ್ಲಿ ನಡೆಯಲಿದ್ದು, ಮಾ.22 ರಂದು ಬೆಂಗಳೂರಿನಲ್ಲಿ ವಿಧಾನಸೌಧ ಚಲೋ ಏರ್ಪಾಡಾಗಿದೆ.
ಈ ಕಾರ್ಯಕ್ರಮಗಳಲ್ಲಿ ದಿಲ್ಲಿಯಿಂದ ರೈತ ಮುಖಂಡರಾದ ರಾಕೇಶ್ ಟಿಕಾಯತ್, ಅಂತಾರಾಷ್ಟ್ರೀಯ ರೈತ ಸಮನ್ವಯ ಸಮಿತಿ ಸಂಚಾಲಕ ಯುದ್ಧವೀರ ಸಿಂಗ್ ಭಾಗವಹಿಸಲಿದ್ದಾರೆ. ಇವರೊಂದಿಗೆ ಕಿಸಾನ್ ಮೋರ್ಚಾದ ದರ್ಶನ್ ಪಾಲ್ ಕೂಡಾ ಜೊತೆಯಾಗಲಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ವಿವಿಧ ದಿಕ್ಕುಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ.
ಮಹಾ ಪಂಚಾಯತ್ನ ಲಾಂಛನವನ್ನು ಹಿರಿಯ ರೈತ ಮುಖಂಡ ಕಡಿದಾಳು ಶಾಮಣ್ಣ ಅವರು ಶಿವಮೊಗ್ಗದಲ್ಲಿ ಬಿಡುಗಡೆ ಮಾಡಿದ್ದರು. ಮೂರು ಕಾಯ್ದೆಗಳು ಜಾರಿಯಾದರೆ ಜನರು ಅನ್ನ ಇಲ್ಲದೆ ಸಾಯುವಂತಾಗುತ್ತದೆ. ಹಾಗಾಗಿ ಎಲ್ಲಾ ಸಮುದಾಯದ ಮಠಗಳು, ಸ್ವಾಮೀಜಿಗಳು, ಜನಪರ ಇರುವವರು ಹೋರಾಟಕ್ಕೆ ಬೆಂಬಲ ನೀಡಬೇಕು. ಈ ಚಳವಳಿಯಲ್ಲಿ ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ. ರಾಕೇಶ್ ಟಿಕಾಯತ್, ಯದುವೀರ್ ಸಿಂಗ್, ಡಾ. ದರ್ಶನ್ ಪಾಲ್, ಜಗಮೋಹನ್ ಸಿಂಗ್ ಸೇರಿದಂತೆ ಹಲವರು ಮಹಾ ಪಂಚಾಯತ್ನಲ್ಲಿ ಭಾಗವಹಿಸಲಿದ್ದಾರೆ" ಎಂದು ಕಡಿದಾಳು ಶಾಮಣ್ಣ ತಿಳಿಸಿದರು.