ಅನ್ನದಾತನ ಅನ್ನ ಕಿತ್ತುಕೊಂಡ ಮಳೆ; ಚಿತ್ರದುರ್ಗ ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್ಗೂ ಹೆಚ್ಚು ಬೆಳೆ ಹಾನಿ
ಚಿತ್ರದುರ್ಗ, ನವೆಂಬರ್ 25: ಆರಂಭದಲ್ಲಿ ಬಿತ್ತನೆ ಮಾಡಿ ಮಳೆ ಯಾವಾಗ ಬರುತ್ತದೆ ಎಂದು ಕಾದು ಕುಳಿತಿದ್ದ ಅನ್ನದಾತನಿಗೆ ಅಕಾಲಿಕ ಮಳೆಯಿಂದ ನಷ್ಟ ಉಂಟಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಅನ್ನದಾತ ಅಕ್ಷರಶಃ ಕಂಗಾಲಾಗಿ ಹೋಗಿದ್ದಾನೆ.
ಕೈಗೆ ಬಂದ ತುತ್ತು ಬಾಯಿಗೆ ಬರದಂತೆ, ಮಳೆಯಿಂದಾಗಿ ಬೆಳೆದ ಬೆಳೆಯಲ್ಲಾ ನೀರು ಪಾಲಾಗಿ ರೈತನ ಕನಸು ಭಗ್ನಗೊಂಡಿದೆ. ಜಿಲ್ಲೆಯಲ್ಲಿ ಬರೋಬ್ಬರಿ 1 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳು ನಾಶವಾಗಿದ್ದು, 120ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಯಾಗಿದೆ. ಜೊತೆಗೆ ಜೀವ ಹಾನಿಯೂ ಆಗಿದೆ.
ಕಳೆದ ಒಂದು ವಾರದ ಹಿಂದೆ ನಿರಂತರವಾಗಿ ಸುರಿದ ಮಳೆಯ ಆರ್ಭಟಕ್ಕೆ ರೈತರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮನೆ ಗೋಡೆ ಕುಸಿದು ಆರು ಜನರು ಜೀವ ಕಳೆದುಕೊಂಡರೆ, 37 ಜಾನುವಾರುಗಳು ಸಹ ಸಾವನ್ನಪ್ಪಿವೆ.

ಶೇಕಡ 33ರಷ್ಟು ಬೆಳೆ ಹಾನಿ
ಇನ್ನು 2 ಎಕರೆಗಿಂತ ಕಡಿಮೆ ಇರುವ ರೈತರ ಸುಮಾರು 76,818 ಹೆಕ್ಟೇರ್ ಪ್ರದೇಶದಲ್ಲಿ ಶೇಕಡ 33ರಷ್ಟು ಬೆಳೆ ಹಾನಿಯಾಗಿದೆ. ಹಾನಿಗೊಳಗಾದ ಬೆಳೆಗಳ ಬಗ್ಗೆ ಕೃಷಿ, ಕಂದಾಯ, ತೋಟಗಾರಿಕೆ ಅಧಿಕಾರಿಗಳು ಜಂಟಿಯಾಗಿ ಸರ್ವೇ ಮಾಡಲಾಗಿದ್ದು, ಎರಡು ಹೆಕ್ಟೇರ್ ಇರುವ ರೈತರ ಸರ್ವೇ ಮಾಡಲಾಗಿದೆ.
ಹಾನಿಗೊಳಗಾದ ಬೆಳೆ ಪರಿಹಾರಕ್ಕಾಗಿ 51.94 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಎರಡು ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವ ರೈತರ 16 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದ್ದು, ಅಂದಾಜು 9.66 ಕೋಟಿ ಪ್ರಸ್ತಾವನೆಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ.

ಚಳ್ಳಕೆರೆ 41,396 ಹೆಕ್ಟೇರ್ ಕೃಷಿ ಬೆಳೆ ಹಾನಿ
ಚಿತ್ರದುರ್ಗ 6,390, ಹಿರಿಯೂರು 18,339, ಚಳ್ಳಕೆರೆ 41,396, ಮೊಳಕಾಲ್ಮೂರು 13,664, ಹೊಳಲ್ಕೆರೆ 4,201 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. ತೋಟಗಾರಿಕೆ ಬೆಳೆಗಳಾದ ಈರುಳ್ಳಿ 75, ಒಣಮೆಣಸಿನಕಾಯಿ 165, ಟೊಮೆಟೊ 44, ಒಟ್ಟು 346 ಹೆಕ್ಟೇರ್ ಪ್ರದೇಶದಲ್ಲಿ ನಾಶವಾಗಿದೆ.
ಶೇಂಗಾ 64,839, ಕಡಲೆ 7,014, ಮೆಕ್ಕೆಜೋಳ 6,271, ರಾಗಿ 23,358, ಒಟ್ಟು 1,02,731 ಹೆಕ್ಟೇರ್ಗಳಲ್ಲಿ ಹಾನಿಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 201, ಹಿರಿಯೂರು 325, ಚಳ್ಳಕೆರೆ 295, ಹೊಳಲ್ಕೆರೆ 120, ಮೊಳಕಾಲ್ಮೂರು 99, ಹೊಸದುರ್ಗ 1, ಚಿತ್ರದುರ್ಗ 1, ಒಟ್ಟು 1209 ಮನೆಗಳು ಭಾಗಶಃ ಹಾನಿಯಾಗಿವೆ.

ಕಾರೋಬಯ್ಯನಹಟ್ಟಿ ಗ್ರಾಮದಲ್ಲಿ ಮೂವರು ಮೃತ
ಹಿರಿಯೂರು ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ಓರ್ವ ಮಹಿಳೆ ಹಾಗೂ ಕಾರೋಬಯ್ಯನಹಟ್ಟಿ ಗ್ರಾಮದಲ್ಲಿ ಮೂವರು ಮೃತಪಟ್ಟಿದ್ದಾರೆ. ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಇಬ್ಬರು ಮನೆ ಗೋಡೆ ಕುಸಿದು ಮರಣ ಹೊಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಆರು ಜನ ಮನೆ ಗೋಡೆ ಕುಸಿದು ಜೀವ ಕಳೆದುಕೊಂಡಿದ್ದಾರೆ. ಮೃತರಿಗೆ ಸರ್ಕಾರದಿಂದ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಇತಿಹಾಸದಲ್ಲೇ ರೈತರು ಅತಿವೃಷ್ಟಿ ಕಂಡದ್ದೆ ಇದೇ ಬಾರಿ ಎನ್ನಲಾಗಿದೆ. ಭಾರೀ ಮಳೆಯಿಂದಾಗಿ ವಾರ್ಷಿಕ ವಾಣಿಜ್ಯ ಶೇಂಗಾ ಬೆಳೆಯೂ ಹೊಲದಲ್ಲಿ ಕೊಳೆಯುತ್ತಿದೆ. ಇನ್ನು ಕಟಾವು ಮಾಡದೇ ಇರುವ ಗಿಡದಲ್ಲಿ ಶೇಂಗಾ ಕಾಯಿಗಳು ಮೊಳಕೆಯೊಡೆಯುತ್ತಿವೆ.

ಮಳೆಯಿಂದ ರೈತನಿಗೆ ಬರಸಿಡಿಲು
ಬಂದ ಅಲ್ಪಸ್ವಲ್ಪ ಬೆಳೆಯು ಕೈಗೆ ಸಿಗುವ ಸಮಯದಲ್ಲಿ ರೈತರಿಗೆ ನಿರಂತರವಾಗಿ ಸುರಿದ ಮಳೆಯಿಂದ ರೈತನಿಗೆ ಬರಸಿಡಿಲು ಬಡಿದಂತಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಶೇಂಗಾ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ರೈತರ ಬವಣೆ ಹೇಳತೀರದಾಗಿದೆ.
ಮಳೆಯಿಂದಾಗಿ ಬಯಲು ಸೀಮೆಯ ಬಡವರ ಬಾದಾಮಿ (ಶೇಂಗಾ) ರೈತನನ್ನು ಸಾಲದ ಸುಳಿಗೆ ಸಿಲುಕಿಸಿದ್ದು, ಅಕಾಲಿಕವಾಗಿ ಸುರಿದ ವರುಣ ಇನ್ನಿಲ್ಲದ ಅವಾಂತರ ಸೃಷ್ಟಿಸಿದೆ. ಸರ್ಕಾರವು ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಬೇಕು. ಅಲ್ಲದೇ ಫಸಲ್ ಭೀಮಾ ಯೋಜನೆ ಜೊತೆಗೆ ಅರ್ಹ ಫಲಾನುಭವಿಗಳಿಗೆ ಬೆಳೆ ವಿಮೆ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.












Click it and Unblock the Notifications