ತೊಗರಿ ಬೆಳೆಗಾರರಿಗೆ ಬಂಪರ್ ಕೊಡುಗೆ: ಪ್ರೋತ್ಸಾಹ ಧನ ಘೋಷಿಸಿದ ಸರ್ಕಾರ
ಬೆಂಗಳೂರು, ಫೆಬ್ರವರಿ 10: ಕರ್ನಾಟಕ ಸರ್ಕಾರ ತೊಗರಿ ಬೇಳೆ ಬೆಳೆಯುವ ರೈತರಿಗೆ ಸಿಹಿಸುದ್ದಿಯನ್ನು ನೀಡಿದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರದ ಪ್ರೋತಾಹ ಧನವನ್ನು ಘೋಷಣೆ ಮಾಡಲಾಗಿದೆ. ಈ ವರ್ಷದ ಜನವರಿಯಲ್ಲಿ ಸಚಿವರು ನೀಡಿದ್ದ ಭರವಸೆಯಂತೆ ಈ ಪ್ರೋತಾಹ ಧನವನ್ನು ಘೋಷಣೆ ಮಾಡಲಾಗಿದೆ. ರೈತರು ಬೆಂಬಲ ಬೆಲೆ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್ಎಕ್ಯೂ ಗುಣಮಟ್ಟದ ತೊಗರಿ ಖರೀದಿಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರದ ಬೆಂಬಲ ಬೆಲೆ ರೂ. 7,550ರ ಜೊತೆಗೆ ರಾಜ್ಯ ಸರ್ಕಾರದ ಪ್ರೋತಾಹ ಧನ ರೂ. 450 ಪ್ರತಿ ಕ್ವಿಂಟಾಲ್ಗೆ ಸೇರಿ ಒಟ್ಟು ರೂ. 8,000 ಪ್ರತಿ ಕ್ವಿಂಟಾಲ್ರಂತೆ ತೊಗರಿ ಖರೀದಿಸಲಾಗುತ್ತದೆ.

ಈ ಕುರಿತು ಜನವರಿಯಲ್ಲಿ ಜವಳಿ, ಕಬ್ಬು ಅಭಿವೃಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಭರವಸೆ ನೀಡಿದ್ದರು. ಈ ಸಂಬಂಧದ ಪ್ರಸ್ತಾವನೆಗೆ ಮುಖ್ಯ ಮಂತ್ರಿಗಳು ಅನುಮೋದನೆ ನೀಡಿದ್ದು, ಆರ್ಥಿಕ ಇಲಾಖೆಯೂ ಸಹಮತಿ ನೀಡಿದೆ. ಈ ಕುರಿತು ಸಂಭದಿಸಿದ ಇಲಾಖೆಗೆ ತಕ್ಷಣದಿಂದ ಅನುಷ್ಠಾನಗೊಳಿಸಲು ಸೂಕ್ತ ನಿರ್ದೇಶನ ನೀಡಲಾಗಿದೆ.
ರಾಜ್ಯದ ಪ್ರಮುಖ ತೊಗರಿ ಬೆಳೆಯುವ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ವಿಜಯಪುರ, ಕೊಪ್ಪಳ, ಬಳ್ಳಾರಿ, ವಿಜಯನಗರ, ಬಾಗಲಕೋಟೆ, ಬೆಳಗಾವಿ, ಚಿತ್ರದುರ್ಗ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಅಂದಾಜು 330 ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.
ರೈತರು ತಮ್ಮ ಹತ್ತಿರದ ಪಿಎಸಿಎಸ್, ಎಫ್ಪಿಒ, ಟಿಎಪಿಸಿಎಂಎಸ್ಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಂಡು ಬೆಂಬಲ ಬೆಲೆ ಯೋಜನೆಯ ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹಧನದ ಸುದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೋಸ್ಟ್ ಹಾಕಿದ್ದಾರೆ. 'ಪ್ರತಿ ಕ್ವಿಂಟಾಲ್ ತೊಗರಿಗೆ ರೂ. 7,550 ಕನಿಷ್ಠ ಬೆಂಬಲ ಬೆಲೆಯ ಜೊತೆಗೆ ರಾಜ್ಯ ಸರ್ಕಾರದಿಂದ ರೂ. 450 ಪ್ರೋತ್ಸಾಹಧನ ಘೋಷಣೆ ಮಾಡಲಾಗಿದೆ. ಈಗಾಗಲೇ ಆರ್ಥಿಕ ಇಲಾಖೆಯ ಅನುಮೋದನೆ ಕೂಡ ದೊರೆತಿದ್ದು ನಾಡಿನ ತೊಗರಿ ಬೆಳೆಗಾರರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. ರಾಜ್ಯದ ರೈತರ ಜೊತೆ ನಮ್ಮ ಸರ್ಕಾರ ಸದಾಕಾಲ ಇರಲಿದೆ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ' ಎಂದು ಹೇಳಿದ್ದಾರೆ.
ತೊಗರಿ ಬೆಳೆಯ ಇಳುವರಿ ಹೆಚ್ಚಿಸಲು ಕೃಷಿ ಇಲಾಖೆ ರೈತರಿಗೆ ಕಾಲಕಾಲಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆಗಳನ್ನು ನೀಡುತ್ತದೆ. ತೊಗರಿ ಬೆಳೆಯಲ್ಲಿ ಹೆಚ್ಚಾಗಿ ಕಬ್ಬಿಣಾಂಶ, ಪ್ರೋಟೀನ್ ಅಂಶ, ನಾರಿನಂಶ ಮತ್ತು ಇತರೆ ಅವಶ್ಯಕ ಪೋಷಕಾಂಶಗಳು ಇರುತ್ತವೆ. ಈ ಎಲ್ಲಾ ಪೋಷಕಾಂಶಗಳು ಆರೋಗ್ಯಕ್ಕೆ ಉತ್ತಮವಾಗಿರುವ ಕಾರಣ ರೈತರು ತೊಗರಿ ಬೆಳೆಯ ಇಳುವರಿಯನ್ನು ಹೆಚ್ಚಿಸುವುದು ಅತಿ ಅವಶ್ಯಕವಾಗಿರುತ್ತದೆ.
ರೈತರ ಜಮೀನಿನಲ್ಲಿ ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಇಳುವರಿಯೂ ಪ್ರತಿ ಹೇಕ್ಟರ್ಗೆ ಕೇವಲ 4.55 ಕ್ವಿಂಟಲ್ ಇದ್ದು, ಈ ಇಳುವರಿಯನ್ನು 8 ರಿಂದ 10ಕ್ವಿಂಟಲ್ಗೆ ಹೆಚ್ಚಿಸಲು ರೈತರು ಸುಧಾರಿತ ಬೇಸಾಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.
ಬೇಸಿಗೆ ಸಮಯದಲ್ಲಿ ಮಾಗಿ ಉಳುಮೆ ಮಾಡಬೇಕು. ಸುಧಾರಿತ, ರೋಗನಿರೋಧಕ ಮತ್ತು ಗುಣಮಟ್ಟದ ಬಿತ್ತನೆ ಬೀಜಗಳನ್ನು ಬೆಳೆಯಬೇಕು. ಬಿತ್ತನೆ ಮಾಡುವಾಗ ಶೀಲಿಂಧ್ರನಾಶಕ ಹಾಗೂ ಜೈವಿಕ ಗೊಬ್ಬರಗಳಾದ ಟ್ರೈಕೋಡರ್ಮಾ, ಪಿ.ಎಸ್.ಬಿ ಮತ್ತು ರೈಜೋಬಿಯಂಗಳಿಂದ ಬೀಜೋಪಚಾರ ಮಾಡಬೇಕು ಎಂದು ಸೂಚಿಸಲಾಗಿದೆ. ಸುಧಾರಿತ ಬೇಸಾಯ ಕ್ರಮಗಳ ಪ್ರಕಾರ ರಸಗೊಬ್ಬರಗಳನ್ನು ಬಳಸಿ. ಮಳೆ ಕೊರತೆಯಾದಗ ಎಡೆಕುಂಟೆ ಮೂಲಕ ತೇವಾಂಶ ಕಾಪಾಡುವುದು ಮತ್ತು ಸಂದಿಗ್ದ ಹಂತಗಳಲ್ಲಿ ನೀರು ಹಾಯಿಸಬೇಕು ಎಂದು ತಿಳಿಸಲಾಗಿದೆ.
ಬೇವಿನ ಬೀಜದ ಕಷಾಯ ಸಿಂಪರಣೆ ಮಾಡಿ ಕೀಟ ಹತೋಟಿಯನ್ನು ಮಾಡಿಕೊಳ್ಳಿ. ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ರೋಗ ಅಥವಾ ಕೀಟದ ಹತೋಟಿ ಕ್ರಮಕ್ಕಾಗಿ ಸೂಕ್ತ ಔಷಧಿಗಳನ್ನು ಪಡೆಯಿರಿ. ತೊಗರಿ ಬೆಳೆಯ ಬೆಳವಣೆಗೆ ಹಂತದಲ್ಲಿ (ಬೆಳೆ ಹಂತ 55 ರಿಂದ 65 ದಿನಗಳು) ತಪ್ಪದೇ ಕುಡಿ ಚಿವುಟಬೇಕು. ಈ ರೀತಿ ಮಾಡುವುದರಿಂದ ತೊಗರಿ ಬೆಳೆಯಲ್ಲಿ ಕಾಳು ಕಟ್ಟುವುದು ಹೆಚ್ಚಾಗಿ ಇಳುವರಿಯಲ್ಲಿ ಸರಾಸರಿ ಶೇ.15 ರಿಂದ 30ರಷ್ಟು ಹೆಚ್ಚಾಗುತ್ತದೆ ಎಂದು ರೈತರಿಗೆ ಮಾಹಿತಿ ನೀಡಲಾಗಿದೆ.












Click it and Unblock the Notifications