ಸಕ್ಕರೆ ಪ್ರಾಬ್ಲಂ ಬಗೆಹರಿಸಿದ ಸಿದ್ದು ಸರ್ಕಾರ
ಬೆಳಗಾವಿ, ನ.27: ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆಗೆ ಒತ್ತಾಯಿಸಿ ಬೆಳಗಾವಿಯ ಸುವರ್ಣ ಸೌಧದ ಮುಂದೆ ನಡೆಯುತ್ತಿರುವ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ರೈತನ ಆತ್ಮಹತ್ಯೆಯಿಂದ ಆಕ್ರೋಶಗೊಂಡಿರುವ ಕಬ್ಬು ಬೆಳೆಗಾರರು ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು ಎಂದು ಸರ್ಕಾರಕ್ಕೆ ಡೆಡ್ ಲೈನ್ ನೀಡಿದ್ದರು. ಕೊನೆಗೂ ಸಿದ್ದರಾಮಯ್ಯ ಅವರ ಸರ್ಕಾರ ಸಕ್ಕರೆ ಸಮಸ್ಯೆಗೆ ಪರಿಹಾರ ಘೋಷಿಸಿದೆ.
ಕಬ್ಬು ಬೆಳೆಗಾರರ ಪ್ರತಿಭಟನೆ ಕುರಿತು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆದಿತ್ತು. ವಿರೋಧ ಪಕ್ಷಗಳು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರವೇ ಒಂದು ಟನ್ ಕಬ್ಬಿಗೆ ಕನಿಷ್ಠ 100 ರು ಹೆಚ್ಚಿಸಬೇಕು ಎಂದು ಶಾಸಕರು ಆಗ್ರಹಪಡಿಸಿದ್ದರು. [ಪ್ರತಿಪಕ್ಷ ನಾಯಕರ ಪ್ರತಿಕ್ರಿಯೆ]
ಶಾಸಕಾಂಗ ಸಭೆಯ ಒಮ್ಮತದ ನಿರ್ಧಾರ ಹಾಗೂ ರೈತನ ಆತ್ಮಹತ್ಯೆ ನೋವು, ಪ್ರತಿಭಟನೆಯ ಕಾವು ಅನುಭವಿಸಿದ ನಂತರ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸದನದಲ್ಲಿ ಬೆಲೆ ಹೆಚ್ಚಳದ ಬಗ್ಗೆ ಪ್ರಕಟಿಸಿದರು. [ಕೀಟನಾಶಕ ಸೇವಿಸಿ ರೈತನ ಆತ್ಮಹತ್ಯೆ]

ಈ ಹಿಂದೆ ನಿಗದಿಯಾದಂತೆ ಪ್ರತಿ ಟನ್ ಕಬ್ಬಿಗೆ ಸರ್ಕಾರ 2,500 ರು ಬೆಲೆ ಘೋಷಿಸಿದ್ದು, ಹೆಚ್ಚುವರಿ 150 ರು ಸಬ್ಸಿಡಿ ರು ಬುಧವಾರ ಘೋಷಿಸಲಾಗಿದೆ. ರಾಜ್ಯ ಸರ್ಕಾರ ರೈತರ ಸಮಾಧಿ ಮೇಲೆ ಅಡಳಿತ ನಡೆಸುತ್ತಿದ್ದು, 'ಈ ಸರ್ಕಾರಕ್ಕೆ ಉಳಿಗಾಲವಿಲ್ಲ. ಕೂಡಲೇ ರಾಜ್ಯ ಸರ್ಕಾರ ತನ್ನ ಮೊಂಡುತನ ಬಿಟ್ಟು, ರೈತರ ಪರವಾಗಿ ನಿಲ್ಲಬೇಕು. ಸರ್ಕಾರದಲ್ಲಿ ಹಣದ ಕೊರತೆ ಏನು ಇಲ್ಲ. ಹೀಗಾಗಿ ಕಬ್ಬು ಬೆಳೆಗೆ 1 ಸಾವಿರು ರುಪಾಯಿಗಳ ಬೆಂಬಲ ಬೆಲೆ ನೀಡಬೇಕು' ಎಂದು ವಿವ್ಧ ರೈತ ಮುಖಂಡರು ಆಗ್ರಹಿಸಿದ್ದಾರೆ.
ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದು, ಸಬ್ಸಿಡಿ ನೀಡುವುದು ಅಥವಾ ಉತ್ಪನ್ನಗಳನ್ನು ಖರೀದಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಭಾರತದ ಆಹಾರ ನಿಗಮದ ನಿಯಮಕ್ಕನುಸಾರ ಸರ್ಕಾರಗಳು ರೈತರಿಗೆ ಕನಿಷ್ಠ ಬೆಂಬಲ ನೀಡಿ ಪ್ರೋತ್ಸಾಹಿಸಬೇಕಾಗುತ್ತದೆ. ಕರ್ನಾಟಕದಲ್ಲಿ ಬೆಲೆ ನಿಗದಿ ಪಡಿಸುವ ನಿಗಮ ಇನ್ನೂ ಸ್ಥಾಪನೆಯಾಗಿಲ್ಲ. ಮುಂದಿನ ವರ್ಷ ಜನವರಿ-ಫೆಬ್ರವರಿ ತಿಂಗಳಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ಪ್ರತಿ ಟನ್ ಕಬ್ಬಿಗೆ 3,500 ರು. ಬೆಂಬಲ ಬೆಲೆ ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಪ್ರತಿ ಟನ್ ಕಬ್ಬಿಗೆ 2,800 ರು ಖರೀದಿ ದರ ನಿಗದಿಪಡಿಸುವಂತೆ ಸಕ್ಕರೆ ಖಾತೆ ಸಚಿವ ಪ್ರಕಾಶ್ ಹುಕ್ಕೇರಿ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ, ಶಾಸಕಾಂಗ ಸಭೆಯಲ್ಲಿ ಪ್ರಸ್ತಾವನೆ ತಳ್ಳಿ ಹಾಕಲಾಯಿತು. 2,500 ರು.ಕನಿಷ್ಠ ಬೆಂಬಲ ಬೆಲೆ ನೀಡುವ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
ಕಬ್ಬು ಬೆಳೆಯಲು ಹೂಡುವ ಬಂಡವಾಳಕ್ಕೂ ಕಬ್ಬಿಗೆ ನಿಗದಿ ಮಾಡಿರುವ ದರಕ್ಕೂ ಅಂತರವಿದೆ. ಇದರಿಂದ ರೈತರಿಗೆ ಲಾಭಕ್ಕಿಂತ ನಷ್ಟವೇ ಅಧಿಕವಾಗಲಿದೆ ಎಂದು ರೈತರ ವಾದ. ನೆರೆ ಮಹಾರಾಷ್ಟ್ರರಾಜ್ಯದಲ್ಲಿ ಪ್ರತಿ ಟನ್ ಕಬ್ಬಿಗೆ 3500 ರು ನೀಡಲಾಗುತ್ತಿದೆ.ಇಳುವರಿ ಆಧಾರದಲ್ಲಿ ಪಂಜಾಬ್ ನಲ್ಲಿ 3500 ರೂ., ಹರ್ಯಾಣದಲ್ಲಿ 3000 ರೂ. ವನ್ನು ನಿಗದಿ ಮಾಡಲಾಗಿದೆ ಎಂದು ಇಲ್ಲಿ ಸ್ಮರಿಸಬಹುದು.












Click it and Unblock the Notifications