ರೈತರಿಗೆ ಸಿಹಿ ಸುದ್ದಿ: ರೈತರಿಗೆ ಕಬ್ಬಿನ ಉಪ ಉತ್ಪನ್ನ ಲಾಭಾಂಶ ವಿತರಣೆ ಸರ್ಕಾರ ನಿರ್ಧಾರ
ಬೆಂಗಳೂರು, ಡಿಸೆಂಬರ್ 06: ಕಬ್ಬಿನ ಉಪ ಉತ್ಪನ್ನ ಎಥೆನಾಲ್ ಮೇಲಿನ ಲಾಭಾಂಶವನ್ನು ರೈತರಿಗೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ ಕಬ್ಬು ಬೆಳೆಗಾರರಿಗೆ 204.47 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದು, ರೈತರಿಗೆ ಸಿಹಿ ಸುದ್ದಿ ಲಭಿಸಿದೆ.
ಸೋಮವಾರ ವಿಕಾಸಸೌಧದಲ್ಲಿ ನಡೆದ ಕಬ್ಬು ನಿಯಂತ್ರಣ ಮಂಡಳಿ ಸಭೆ ನಡೆಯಿತು. ಸಭೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ರಾಜ್ಯ ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಕಬ್ಬು ಬೆಳೆಗಾರರಿಗೆ 204.47 ಕೋಟಿ ರೂ. ಬಂಪರ್ ಘೋಷಿಸಿರುವುದಾಗಿ ಹೇಳಿದರು.
ಹನಗೋಡು ಹೋಬಳಿಯಲ್ಲಿ ಹುಲಿಯ ಕಾಟ: ಆತಂಕದಲ್ಲಿ ರೈತ ವರ್ಗ
ಇದುವರೆಗೆ ಸಕ್ಕರೆಯ ಉಪ ಉತ್ಪನ್ನಗಳ ಮೇಲೆ ಲಾಭಾಂಶ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಕಬ್ಬಿನ ಉಪ ಉತ್ಪನ್ನದ ಮೇಲೆ ರೈತರಿಗೆ ಲಾಭಾಂಶ ನೀಡಲು ಕಬ್ಬು ನಿಯಂತ್ರಣ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಕಬ್ಬಿನ ಉಪ ಉತ್ಪನ್ನಗಳ ಲಾಭ ರೈತರಿಗೇ ನೀಡಬೇಕು ಎಂದು ಅನೇಕ ದಿನಗಳಿಂದ ಕರ್ನಾಟಕದ ರೈತರು ವಿವಿಧ ಜಿಲ್ಲೆಗಳಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದರು. ಅದರಂತೆ, ಮೊದಲ ಹಂತದಲ್ಲಿ ಕಬ್ಬಿನ ಉಪ ಉತ್ಪನ್ನ ಎಥೆನಾಲ್ ಮೇಲೆ ಬಂದ ಲಾಭವನ್ನು ರೈತರಿಗೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಎಫ್ಆರ್ಪಿ ದರದ ಪಾವತಿ ಬಳಿಕ ಹೆಚ್ಚುವರಿಯಾಗಿ ಪ್ರತಿ ಟನ್ಗೆ 50 ರೂ, ಕಬ್ಬು ಬೆಳೆಗಾರರಿಗೆ 204.47 ಕೋಟಿ ರೂ. ನೀಡಲಾಗುತ್ತಿದೆ. ರಾಜ್ಯ ಸರ್ಕಾರದ ನಿರ್ಣಯದ ಕುರಿತು ತಕ್ಷಣ ಆದೇಶ ಹೊರಡಿಸುವಂತೆ ಕಬ್ಬು ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಉಪವಾಸ ಸತ್ಯಾಗ್ರಹ ವಾಪಸ್
ಸಭೆ ನಂತರ ಹೊರ ಬಂದ ಅಧಿಕೃತ ಸಂದೇಶದ ಬೆನ್ನಲ್ಲೇ ರೈತ ಸಂಘವು ಉಪವಾಸ ಸತ್ಯಾಗ್ರಹ ಹಿಂಪಡೆದಿದೆ. ಸಕ್ಕರೆ ಸಚಿವರು ಕಬ್ಬಿನ ಉಪ ಉತ್ಪನ್ನಗಳ ಲಾಭ ರೈತರಿಗೆ ನೀಡುವುದಾಗಿ ಹೇಳಿದ್ದಾರೆ. ಆದರೆ ಅಷ್ಟು ಹಣ ಹಣವು ತೃಪ್ತಿ ತಂದಿಲ್ಲ.ಹೀಗಾಗಿ ನಾವು ಉಪವಾಸ ಸತ್ಯಾಗ್ರಹ ಹಿಂಪಡೆದಿದ್ದು, ಅಹೋರಾತ್ರಿ ಧರಣಿ ಮುಂದುವರೆಸಲಿದ್ದೇವೆ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.
ಕಬ್ಬಿನ ಉಪಉತ್ಪನ್ನಗಳ ಲಾಭದ ಹಂಚಿಕೆಯನ್ನು ಪರಿಶೀಲಿಸಲು ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸಿದೆ. ಇತ್ತ ಬೆಳೆಗಳಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಸದಸ್ಯರು ತಿಂಗಳುಗಳಿಂದ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ.