ನೀರು ಬಿಟ್ಟ ಸರ್ಕಾರ: ರೊಚ್ಚಿಗೆದ್ದ ರೈತರಿಂದ ಕಾಡಾ ಕಚೇರಿ ಧ್ವಂಸ
ಮೈಸೂರು, ಸೆಪ್ಟೆಂಬರ್. 22: ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಟ್ಟಿರುವ ರಾಜ್ಯ ಸರ್ಕಾರದ ವಿರುದ್ಧ ರೈತರು ರೊಚ್ಚಿಗೆದ್ದಿದ್ದಾರೆ. ಮಂಗಳವಾರ ಬೆಳಗ್ಗೆ ಮೈಸೂರಿನ ಕಾಡಾ(ಕಮಾಂಡ್ ಏರಿಯಾ ಡೆವಲಪ್ ಮೆಂಟ್ ಅಥಾರಿಟಿ) ಕಚೇರಿಗೆ ಮುತ್ತಿಗೆ ಹಾಕಿ, ಪೀಠೋಪಕರಣಗಳನ್ನು ಧ್ವಂಸ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಸೋಮವಾರ ಕಬಿನಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಡಲಾಗಿತ್ತು. ಇದನ್ನು ವಿರೋಧಿಸಿದ ರೈತ ಸಂಘದ ಕಾರ್ಯಕರ್ತರು ಮೈಸೂರಿನ ಕಾಡಾ ಕಚೇರಿಯ ಮುಖ್ಯದ್ವಾರ ಹಾಗೂ ಪೀಠೋಪಕರಣಗಳನ್ನು ಪುಡಿ ಪುಡಿ ಮಾಡಿ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.[ಮೈಸೂರು ದಸರಾ ಉದ್ಘಾಟನೆ ಮಾಡುವುದಿಲ್ಲ : ಕಡಿದಾಳ್ ಶಾಮಣ್ಣ]

ಕಚೇರಿ ಹೊರಗೆ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಕಚೇರಿಗೆ ಮುತ್ತಿಗೆ ಹಾಕಿದ ರೈತರು ಕಚೇರಿಯ ಕಬ್ಬಿಣದ ಬಾಗಿಲು ಮುರಿದು ಒಳನುಗ್ಗಲು ಯತ್ನಿಸಿದರು.
ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಪೊಲೀಸರು ನಿಯಂತ್ರಣಕ್ಕೆ ತಂದರು. ರಾಜ್ಯ ಸರ್ಕಾರ ರೈತರ ಹಿತ ಬಲಿ ಕೊಟ್ಟು ನೀರು ಹೊರಕ್ಕೆ ಬಿಡುತ್ತದೆ. ನಮ್ಮ ರೈತರಿಗೆ ನೀರಿಲ್ಲ. ಕದ್ದು ಮುಚ್ಚಿ ನೀರು ಬಿಡುವ ಕೆಲಸವನ್ನು ಸರ್ಕಾರ ಕೈ ಬಿಡದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರ ಮಾಡಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.[ಎತ್ತಿನ ಹೊಳೆ ಯೋಜನೆ : ಜನಪ್ರತಿನಿಧಿಗಳಿಗೆ 10 ಪ್ರಶ್ನೆಗಳು]
ಸದ್ಯ ಕಬಿನಿ ಜಲಾಶಯದಲ್ಲಿ 2274 ಅಡಿ ನೀರು ಸಂಗ್ರಹಣೆ ಇದೆ. ಜಲಾಶಯ 2284 ಅಡಿ ಸಾಮರ್ಥ್ಯ ಹೊಂದಿದ್ದು ಮಳೆ ಇಲ್ಲದ ಕಾರಣ ಇನ್ನು ಒಳಹರಿವು ಹೆಚ್ಚಾಗುವ ಯಾವ ಲಕ್ಷಣವಿಲ್ಲ.
ರಾಜ್ಯದಲ್ಲಿ ತೀವ್ರ ಬರಗಾಲವಿದೆ, ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.
ಕಾಡಾ ಎಂದರೇನು?
ಕಮಾಂಡ್ ಏರಿಯಾ ಡೆವಲಪ್ ಮೆಂಟ್ ಅಥಾರಿಟಿ ಎಂದು ಕರೆಸಿಕೊಳ್ಳುವ ಕಾಡಾದ ಮುಖ್ಯ ಉದ್ದೇಶ ಸರ್ಕಾರಗಳ ನೀರಾವರಿ ಯೋಜನೆಗಳನ್ನು ಕ್ಷಿಪ್ರವಾಗಿ ಅನುಷ್ಠಾನ ಮಾಡುವುದು. ಈ ಮೂಲಕ ಕೃಷಿ ಉತ್ಪನ್ನಗಳಲ್ಲಿ ಏರಿಕೆ ಮತ್ತು ಇಳುವರಿ ಪಡೆಯಲು ಉತ್ತೇಜಿಸುವುದು. ಒಣ ಭೂಮಿ ಪ್ರದೇಶವನ್ನು ಕಡಿಮೆ ಮಾಡಿ ನೀರಾವರಿ ಭೂಮಿಯನ್ನು ಹೆಚ್ಚಳ ಮಾಡುವ ಉದ್ದೇಶ ಹೊಂದಿರುವ ಕಾಡಾ ಕಚೇರಿಗಳು ರಾಜ್ಯದ ಅನೇಕ ಕಡೆ ಇವೆ.











Click it and Unblock the Notifications